Homeಮುಖಪುಟನಟಿ ರಮ್ಯಾ, ನಟ ಕಿರಣ್ ಶ್ರೀನಿವಾಸ್ ಸೇರಿ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು: ನಟ ಚೇತನ್

ನಟಿ ರಮ್ಯಾ, ನಟ ಕಿರಣ್ ಶ್ರೀನಿವಾಸ್ ಸೇರಿ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು: ನಟ ಚೇತನ್

ಪೊಲಿಸರು ನನ್ನ ಫೋನ್ ತೆಗೆದುಕೊಂಡ 12 ದಿನ ಆದರೂ ಫೋನ್ ವಾಪಸ್ ಕೊಟ್ಟಿಲ್ಲ. ನಾನು ಸಾಮಾಜಿಕ ಜಾಲತಾಣಗಳನ್ನು ಬಳಸಲು ಆಗುತ್ತಿಲ್ಲ.

- Advertisement -
- Advertisement -

ಸಿನಿಮಾ ರಂಗದ ಯಾರೂ ಮಾತನಾಡದಿದ್ದಾಗ ಅನ್ಯಾಯದ ವಿರುದ್ಧ ದನಿಯೆತ್ತಿದ ನಟಿ ರಮ್ಯಾ, ವಿಡಿಯೊ ಮಾಡಿದ ನಟ ಕಿರಣ್ ಶ್ರೀನಿವಾಸ್ ಸೇರಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ನಟ ಚೇತನ್ ತಿಳಿಸಿದ್ದಾರೆ.

ಜೈಲಿನಿಂದ ಜಾಮೀನನ ಮೇಲೆ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಅವರು, “ಒಂದು ಟ್ವೀಟ್ ಕಾರಣಕ್ಕೆ ನನ್ನನ್ನು ಸುಮಾರು ಒಂದು ವಾರಗಳ ಕಾಲ ಜೈಲಿನಲ್ಲಿಟ್ಟಿದ್ದರು. ಆ ಟ್ವೀಟ್‌ನಲ್ಲಿ ಯಾರನ್ನೂ ಅವಹೇಳನ ಮಾಡಿರಲಿಲ್ಲ, ಅದರಲ್ಲಿ ಅವಾಚ್ಯ ಶಬ್ದ ಇರಲಿಲ್ಲ, ಯಾರನ್ನೂ ಪ್ರಚೋದಿಸಿರಲಿಲ್ಲ. ಆದರೂ ಆ ಒಂದು ಟ್ವೀಟ್‌ ಇಟ್ಟುಕೊಂಡು ಕೋಮು ಪ್ರಚೋದನೆ ಮಾಡಿದ್ದೇನೆ ಎಂದು ಆರೋಪ ಹೊರಿಸಿ 504,  505(2) ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದರು” ಎಂದಿದ್ದಾರೆ.

ಕಾಣದ ಕೈಗಳು ಬಂಧನದ ಹಿಂದಿವೆ. ಅಕ್ರಮವಾಗಿ ನನ್ನನ್ನು ಬಂಧಿಸಿ 8-10 ಗಂಟೆಗಳ ಕಾಲ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದರು. ಯಾವ ಕೇಸ್, ಯಾರು ದೂರುದಾರರು ಎಂದು ಸಾಕಷ್ಟು ಕೇಳಿದರೂ ನನಗೆ ಮಾಹಿತಿ ಕೊಟ್ಟಿರಲಿಲ್ಲ. ದೂರು ಕೊಟ್ಟವರು ರವಿ ಎಂಬ ವ್ಯಕ್ತಿ ಮಾತ್ರವಿಲ್ಲ ಹಲವರಿದ್ದಾರೆ ಎಂಬುದು ಗೊತ್ತಾಯಿತು. ಈ ಪ್ರಕರಣದಲ್ಲಿ ಇನ್ಸ್ ಪೆಕ್ಟರ್ ರವಿ ಕೂಡ ಬಲಿಪಶು ಎಂದು ಅವರು ತಿಳಿಸಿದ್ದಾರೆ.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಯಾರೂ ಕೂಡ ಪ್ರಶ್ನಾತೀತರಲ್ಲ. ಪ್ರಶ್ನೆ ಮಾಡುವುದು ನಮ್ಮ ಹಕ್ಕು ಮಾತ್ರವಲ್ಲ ಕರ್ತವ್ಯ ಕೂಡ. ಈ ಬಂಧನದಿಂದ ನನಗೆ ಬೇಸರವಾಗಿಲ್ಲ, ಬದಲಿಗೆ ಹೋರಾಟ ಮಾರ್ಗದಲ್ಲಿ ಮತ್ತಷ್ಟು ವಿಶ್ವಾಸ ಬಂದಿದೆ. ನಮ್ಮ ವಿಚಾರದಲ್ಲಿ ಸ್ಪಷ್ಟತೆ, ಅಪಾರ ಶಕ್ತಿ ಮತ್ತು ಗಟ್ಟಿತನ ಇದೆ. ಹಾಗಾಗಿ ನಮ್ಮ ಸತ್ಯ ಕಂಡರೆ ಅವರಿಗೆ ಭಯ. ಅದಕ್ಕೆ ನನ್ನನ್ನು ಬಂಧಿಸಿದ್ದು ಎಂದು ಚೇತನ್ ಹೇಳಿದರು.

ಪುರು‍ಷಪ್ರಧಾನ ವ್ಯವಸ್ಥೆಯಿಂದ ಮಹಿಳೆಯರಿಗೆ ಆಗಿರುವ ಅನ್ಯಾಯ, ಶೂದ್ರರಿಗೆ ಆಗಿರುವ ಅನ್ಯಾಯ, ಬಂಡವಾಳಶಾಹಿಯಿಂದ ಬಡಜನರಿಗೆ ಆಗಿರುವ ಅನ್ಯಾಯ ಮತ್ತು ಕೋಮುವಾದ, ಅತಿ ಬ್ರಾಹ್ಮಣ್ಯ ಬಂದಿರುವುದರಿಂದ ಅಲ್ಪಸಂಖ್ಯಾತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮುಂದುವರೆಸೋಣ. ಯಾವುದೇ ಕಾರಣಕ್ಕೆ ಕುಗ್ಗುವುದು ಬೇಡ ಎಂದರು.

ಜೈಲಿನಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತರರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಥಾಪಿತ ಶಕ್ತಿಗಳು ಅವರನ್ನು ಗುರಿ ಮಾಡಿದ್ದಾರೆ. ಅವರಿಗೆ ವಕೀಲರು ಸಿಗುತ್ತಿಲ್ಲ. ನಾನು ಶ್ರೀಮಂತ ಕುಟುಂಬದಿಂದ, ಪ್ರಭಾವಿ ಜಾತಿಯಿಂದ ಮತ್ತು ಚಿತ್ರರಂಗದಿಂದ ಬಂದಿದ್ದೇನೆ. ನನ್ನ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದರೆ ಇನ್ನು ಜನಸಾಮಾನ್ಯರನ್ನು ಈ ವ್ಯವಸ್ಥೆ ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳಬಹುದು ಯೋಚಿಸಿ ಎಂದು ಚೇತನ್ ಹೇಳಿದರು.

ನಾನು ಜೈಲಿನಲ್ಲಿ ಅಂಬೇಡ್ಕರ್‌ರವರ ಅನಿಲೇಶನ್ ಆಫ್ ಕಾಸ್ಟ್ ಮತ್ತು ಹು ಆರ್ ಶೂದ್ರಾಶ್ ಎಂಬ ಕೃತಿಗಳನ್ನು ಓದಿದೆ. ವಕೀಲ ಜಗದೀಶ್‌ರವರನ್ನು ಭೇಟಿ ಮಾಡಿದೆ. ಜಗದೀಶ್ ರವರು ಕುಗ್ಗಿಲ್ಲ.. ಅವರ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದೇನೆ.

ಪೆರಿಯಾರ್‌ರವರನ್ನು 80 ಬಾರಿ ಜೈಲಿಗೆ ಹಾಕಲಾಗಿತ್ತು. ಜೈಲು ಎಂದರೆ ನನಗೆ ಭಯವಿಲ್ಲ. ನಾನು ಸತ್ಯಕ್ಕಾಗಿ ಮತ್ತೆ ಜೈಲಿಗೆ ಹೋಗಲು ಸಿದ್ದನಿದ್ದೇನೆ. ನಾವು ಯಾವುದೇ ಜಾತಿ, ಮತ, ಭಾಷೆಯ ವಿರುದ್ಧ ಇಲ್ಲ. ನಾವು ಅಸಮಾನತೆಯ ವಿರುದ್ಧ ಇದ್ದೇವೆ. ಬ್ರಾಹ್ಮಣ್ಯ ಎನ್ನುವುದು ಒಂದು ಮನಸ್ಥಿತಿ. ಎಲ್ಲಾ ಬ್ರಾಹ್ಮಣ್ಯರು ಸವಲತ್ತು ಪಡೆದಿರಬಹುದು. ಆದರೆ ಎಲ್ಲರೂ ಬ್ರಾಹ್ಮಣ್ಯ ಅನುಸರಿಸುವುದಿಲ್ಲ. ಅವರು ಹುಟ್ಟಿನಿಂದಲೇ ಸವಲತ್ತು ಪಡೆದಿರುವುದು ನಿಜ. ಆದರೆ ಮುಂದಕ್ಕೆ ನಾನು ಸಮಾಜಕ್ಕೆ ಜಾಸ್ತಿ ಕೊಡಬೇಕು, ಇಷ್ಟು ವಂಚಿತರಾದವರು ಜಾಸ್ತಿ ಪಡೆಯಬೇಕು. ಹಾಗಾಗಿ ನಮ್ಮ ಹೋರಾಟ ಬ್ರಾಹ್ಮಣ್ಯದ ವಿರುದ್ಧವಿರುತ್ತದೆ ಎಂದರು.

ಒಂದು ಟ್ವೀಟ್ ಗಾಗಿ ನನ್ನನ್ನು ಉದ್ದೇಶಪೂರ್ವಕವಾಗಿ ಬಂಧಿಸಿದ್ದೀರಿ. ಆದರೆ ಕೋಟ್ಯಾಂತರ ಜನ ಟ್ವೀಟ್ ಮಾಡಿದರೆ ಅವರನ್ನು ಜೈಲಿಗೆ ಹಾಕುತ್ತೀರಾ? ಭ್ರಷ್ಟಾಚಾರಿಗಳು, ಕ್ರಿಮಿನಲ್‌ಗಳು ವಿಧಾನಸೌಧದಲ್ಲಿದ್ದಾರೆ. ಅವರನ್ನು ಮುಟ್ಟುವ ಧೈರ್ಯ ಇಲ್ಲ. ನಮ್ಮನ್ನು ಮಾತ್ರ ಬಂಧಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫೆಬ್ರವರಿ 19 ರಂದು ನಾವು ಬೆಂಗಳೂರಿನಲ್ಲಿ ನೀಲಿ ಸಾಗರ ನಿರ್ಮಿಸಿದ್ದೇವೆ. ಹಾಗಾಗಿ ಪ್ರಭುತ್ವ ಹೆದರಿದೆ. ಆ ಹೋರಾಟವನ್ನು ಮುಖ್ಯವಾಹಿನಿ ಮಾಧ್ಯಮಗಳು ಪ್ರಸಾರ ಮಾಡಲಿಲ್ಲ. ಹಾಗಾಗಿ ನಾವು ಸೋಷಿಯಲ್ ಮೀಡಿಯಾ ಮಾತ್ರವಲ್ಲದೆ ಪರ್ಯಾಯ ಮಾಧ್ಯಮ ಕಟ್ಟೋಣ ಎಂದರು.

ಪೊಲಿಸರು ನನ್ನ ಫೋನ್ ತೆಗೆದುಕೊಂಡ 12 ದಿನ ಆದರೂ ಫೋನ್ ವಾಪಸ್ ಕೊಟ್ಟಿಲ್ಲ. ನಾನು ಸಾಮಾಜಿಕ ಜಾಲತಾಣಗಳನ್ನು ಬಳಸಲು ಆಗುತ್ತಿಲ್ಲ. ಬೇರೆಯವರ ಫೋನ್‌ನಲ್ಲಿ ಲಾಗಿನ್ ಆಗಿದ್ದೇನೆ ಎಂದರು.

ಶಾಂತಪ್ಪ ಎಂಬ ಗಾಯಕರು ಡಯಾಲಿಸಿಸ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸುಳ್ಳು ಪ್ರಕರಣದಲ್ಲಿ ಅವರನ್ನು ಸಿಕ್ಕಿಸಲಾಗಿದೆ. 10 ವರ್ಷದಿಂದ ಅವರು ಜೈಲಿನಲ್ಲಿದ್ದಾರೆ. ಒಳ್ಳೆಯ ಗಾಯಕರಾದ ಅವರನ್ನು ಹೊರಗೆ ತರಲು ಪ್ರಯತ್ನ ಮಾಡುತ್ತೇನೆ. ಈ ಕುರಿತು ಹಂಸಲೇಖ ಸರ್ ಜೊತೆ ಮಾತಾಡುತ್ತೇನೆ ಎಂದರು.

ಅವರ ಫೇಸ್‌ಬುಲ್ ಲೈವ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ನಾಗರಾಜ್‌ ಮಂಜುಳೆಯ ‘ಝುಂಡ್‌’: ಕ್ರೀಡಾ ಜಗತ್ತಿನ ‘ಅಸ್ಪೃಶ್ಯ ಭಾರತ ದರ್ಶನ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read