Homeಮುಖಪುಟ180 ಪದಗಳಲ್ಲಿ; ಎಎಪಿ ಪೊರಕೆ ಮತ್ತು ಡಿಎಸ್ಎಸ್ ‘ಪಿಕಾಸಿ&ಪೊರಕೆ’-ಬೇಸ್ತು ಬೀಳಿಸಿದ ಮಸಾಲೆ ದೋಸೆ ಹೋಟೆಲ್- ವಿಶ್ವ...

180 ಪದಗಳಲ್ಲಿ; ಎಎಪಿ ಪೊರಕೆ ಮತ್ತು ಡಿಎಸ್ಎಸ್ ‘ಪಿಕಾಸಿ&ಪೊರಕೆ’-ಬೇಸ್ತು ಬೀಳಿಸಿದ ಮಸಾಲೆ ದೋಸೆ ಹೋಟೆಲ್- ವಿಶ್ವ ಪುಸ್ತಕ ದಿನ ಮತ್ತು ಅಂಬೇಡ್ಕರ್

- Advertisement -
- Advertisement -

ಎಎಪಿಗಿಂತಲೂ ಮೊದಲು ಪೊರಕೆ ಹಿಡಿದಿದ್ದ ಸಂಘಟನೆ ಕರ್ನಾಟಕದ್ದು

ಪಂಜಾಬಿನಲ್ಲಿ ಅಧಿಕಾರ ಹಿಡಿದ ಮೇಲೆ ಎಎಪಿ ಪಕ್ಷದ ಉತ್ಸಾಹ ಹಲವು ಪಟ್ಟು ಹೆಚ್ಚಿದೆ. ಇನ್ನೂ ಹಲವು ರಾಜ್ಯಗಳಲ್ಲಿ ತಮ್ಮ ನೆಲೆಯನ್ನು ವಿಸ್ತರಿಸುವ ತವಕದಲ್ಲಿದೆ ಆಪ್ ಪಕ್ಷ. ಕಳೆದ ಗುರುವಾರ ಕರ್ನಾಟಕ ರಾಜ್ಯ ರೈತ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರೈತರ ಬೃಹತ್ ಸಮಾವೇಶ ನಡೆಸಿ ಆಪ್ ಪಕ್ಷ ಸೇರಿದರು. ಚುನಾವಣೆಯಲ್ಲಿ ರೈತ ಸಂಘದ ತಮ್ಮ ಬಣ ಎಎಪಿಯನ್ನು ಬೆಂಬಲಿಸುವುದಾಗಿ ಘೋಶಿಸಿದರು. ಅದಕ್ಕೂ ಮೊದಲು ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಎಪಿ ಸೇರಿದ್ದು ಸುದ್ದಿಯಾಗಿತ್ತು. ಒಂದು ಕಾಲಕ್ಕೆ ಪೊರಕೆಯ ಚಿಹ್ನೆಯನ್ನು ಇಟ್ಟುಕೊಂಡು ‘ಕ್ಲೀನ್’ ಎಂದು ಬಿಂಬಿಸಿಕೊಳ್ಳುತ್ತಿದ್ದ ಆಪ್ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾಗುತ್ತಿರುವ ಅಭ್ಯರ್ಥಿಗಳನ್ನು ನೋಡಿದರೆ ತಮ್ಮ ಸದಸ್ಯರು ‘ಭ್ರಷ್ಟಾಚಾರದಿಂದ ದೂರ’ ಎಂಬ ಪ್ರತಿಪಾದನೆಯಿಂದ ಆಪ್ ವೇಗವಾಗಿ ದೂರ ಸರಿಯುತ್ತಿರುವಂತೆ ಕಾಣುತ್ತಿದೆ. ಅಲ್ಲದೆ, ರೈತರ ವಿಷಯವಾಗಿ ಯಾವ ಮಹತ್ವವಾದ ಕೆಲಸವನ್ನೂ ಮಾಡದ ಆಪ್ ಪಕ್ಷಕ್ಕೆ ರೈತ ಸಂಘದ ಒಂದು ಬಣ ರಾಜಕೀಯ ಬೆಂಬಲ ಘೋಷಿಸಿರುವುದು ‘ಭಲಾರೆ ವಿಚಿತ್ರ’ ಅನ್ನುವಂತಿದೆ.

ಆಪ್ ಪಕ್ಷ ಪೊರಕೆ ಬಳಸಿ ಈ ದೇಶವನ್ನು ಸ್ವಚ್ಚ ಮಾಡಿತೋ ಅಥವಾ ಪ್ರಚಾರ ಪಡೆಯಿತೋ, ಆದರೆ ನಿಜಕ್ಕೂ ಈ ದೇಶದ ವ್ಯವಸ್ಥೆಯನ್ನು ಸ್ವಚ್ಚ ಮಾಡುವ ಇರಾದೆಯೊಂದಿಗೆ 1974-75ರಲ್ಲಿ ಹುಟ್ಟಿದ್ದ ದಲಿತ ಸಂಘರ್ಷ ಸಮಿತಿ ತನ್ನ ಚಿಹ್ನೆಯಲ್ಲಿ ಪೊರಕೆಯನ್ನು ಹೊಂದಿತ್ತು. ಬರೀ ಪೊರಕೆಯಷ್ಟೇ ಅಲ್ಲ, ಅದರ ಜೊತೆಗೆ ಪಿಕಾಸಿಯೂ ಆ ಚಿಹ್ನೆಯ ಭಾಗವಾಗಿತ್ತು. ಈ ದೇಶದ ಜಡ್ಡುಗಟ್ಟಿದ ವ್ಯವಸ್ಥೆಯನ್ನು ಪಿಕಾಸಿ ಮೂಲಕ ಅಗೆದು, ಬುಡಮೇಲು ಮಾಡಿ, ಬರಲಿನಲ್ಲಿ ಕಸವನ್ನು ಗುಡಿಸುವ ಇರಾದೆಯೊಂದಿಗೆ, ಹಲವು ದೌರ್ಜನ್ಯಗಳ ವಿರುದ್ಧ ಹೋರಾಡಿ ಕರ್ನಾಟಕದ ವಿವೇಕಕ್ಕೆ ಕಾರಣವಾದ ಸಂಘಟನೆ ಡಿಎಸ್‌ಎಸ್. ಆದರೆ ಇಂದು ರೈತ ಸಂಘ ಹತ್ತು ಹಲವು ಹೋಳುಗಳಾಗಿರುವಂತೆ ಡಿಎಸ್‌ಎಸ್ ಕೂಡ ನೂರಾರು ಹೋಳುಗಳಾಗಿದೆ. ಇತ್ತೀಚೆಗೆ ದಾವಣಗೆರೆಯಲ್ಲಿ ದಲಿತ ಮುಖಂಡ ಗುರುಮೂರ್ತಿಯವರು ಡಿಎಸ್‌ಎಸ್‌ನ ಒಂದು ಅಚ್ಚುಕಟ್ಟಾದ ಸಮಾವೇಶ ಮಾಡಿದ್ದರು. ಅದೇ ರೀತಿ ಡಿಎಸ್‌ಎಸ್‌ ಭಾಗವಾಗಿದ್ದ ದಲೇಕಯಿಸಂಗೆ ಮರುಜೀವ ನೀಡಲು ಕೋಟಗಾನಳ್ಳಿ ರಾಮಯ್ಯನವರ ನೇತೃತ್ವದಲ್ಲಿ ಹಲವು ಯುವ ಸಂಘಟಕರ ಜೊತೆಗೆ ಏಪ್ರಿಲ್ 14, ಅಂಬೇಡ್ಕರ್ ಜಯಂತಿಯಂದು ಕೋಲಾರದಲ್ಲಿ ಸಭೆಯೊಂದು ನೆರವೇರಿತು. ಒಟ್ಟಿನಲ್ಲಿ ಈ ನೆಲದ ನಿಜದನಿಯ ಈ ಸಂಘಟನೆಗಳು ಮರು ಜೀವ ಪಡೆದು ಹೊಸ ರೂಪದಲ್ಲಿ ಒಗ್ಗಟ್ಟಾಗಿ, ಕರ್ನಾಟಕದ ಅಂತಃಸತ್ವವನ್ನು ಕಾಪಾಡುವತ್ತ ಮುನ್ನಡೆಯಬೇಕು ಎಂಬ ನಿರೀಕ್ಷೆ ಎಲ್ಲರಿಗೂ ಹೆಚ್ಚಿದೆ.

ಮಸಾಲೆ ದೋಸೆ ತಂದಿಟ್ಟ ಪೇಚು; ಗಂಭೀರ ಪತ್ರಿಕೆಗಳೂ ಎಡವಿದ್ದೇಕೆ?  

ಗಾಂಧಿ ಬಜಾರ್‌ನಲ್ಲಿರುವ ವಿದ್ಯಾರ್ಥಿ ಭವನ ಎಂಬ ದೋಸೆ ಹೋಟೇಲ್‌ನ ಟ್ವಿಟ್ಟರ್ ಹ್ಯಾಂಡಲ್ ಇತ್ತೀಚೆಗೆ ಒಂದು ಪೋಸ್ಟರ್ ಹಂಚಿಕೊಂಡಿದ್ದು ಹಲವರ ಉತ್ಸಾಹಕ್ಕೆ ಕಾರಣವಾಯಿತು. ವಿದ್ಯಾರ್ಥಿ ಭವನ ಮಲ್ಲೇಶ್ವರಂನಲ್ಲಿ ಎಂಬ ಆ ಪೋಸ್ಟರ್ ಹೆಚ್ಚೇನು ಸುಳಿವು ಕೊಡದ ಕಾರಣಕ್ಕೆ, ಅದರ ಸುತ್ತ ಸಂಭ್ರಮದ ಚರ್ಚೆಗಳಿಂದ ಹಿಡಿದು, ಮೊಟ್ಟೆ-ಕೀಮಾ ದೋಸೆ ಮಾಡಿ ಎಂದು ಹಾಸ್ಯ ಮಾಡುವವರೆಗೆ ಒಂದಷ್ಟು ಜನ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದರು. ಇದು ಸಹಜವಾಗಿ ಹಲವು ಮಾಧ್ಯಮಗಳನ್ನು ಈ ಚರ್ಚೆಯತ್ತ ಸೆಳೆದಿದೆ. ನ್ಯೂಸ್‌18 ಇತ್ಯಾದಿ ಡಿಜಿಟಲ್ ಸುದ್ದಿ ಮಾಧ್ಯಮಗಳು ಆ ಪೋಸ್ಟರ್ ಅನ್ನೇ ನಂಬಿ ವಿದ್ಯಾರ್ಥಿ ಭವನ ಮಲ್ಲೇಶ್ವರಂನಲ್ಲಿ ಹೊಸ ಘಟಕವನ್ನು ತೆರೆದೇಬಿಡುತ್ತದೆ ಎಂದು ಬರೆದುಬಿಟ್ಟರು. ಇರಲಿ, ಈ ಮಾಧ್ಯಮಗಳಿಂದ ಅಂತಹ ದೊಡ್ಡ ಮಟ್ಟದ ನಿರೀಕ್ಷೆಯೇನೂ ಇರಲಾರದು. ಆದರೆ ‘ದ ಹಿಂದೂ’, ‘ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’, ‘ದ ನ್ಯೂಸ್‌ಮಿನಿಟ್’ ನಂತಹ ನಂಬಿಕಸ್ಥ ಮಾಧ್ಯಮಗಳೂ ಕೂಡ ಬೇಸ್ತುಬಿದ್ದದ್ದು ಪತ್ರಿಕೋದ್ಯಮ ಎಷ್ಟು ತ್ರಾಸದ ಕೆಲಸ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿತ್ತು. (ವಿದ್ಯಾರ್ಥಿ ಭವನದ ಬಗ್ಗೆ ಒಂದು ನಾಟಕ ಮಲ್ಲೇಶ್ವರಂನಲ್ಲಿ ನಡೆಯುವುದರ ಬಗೆಗಿನ ಪ್ರಚಾರದ ಪೋಸ್ಟರ್ ಅದಾಗಿತ್ತು).

ಮೇಲಿನ ಇಂಗ್ಲಿಷ್ ಮಾಧ್ಯಮಗಳು ವೃತ್ತಿಪರ ಮತ್ತು ಫ್ಯಾಕ್ಟ್‌‌ಗಳನ್ನು ಅನೇಕ ಬಾರಿ ಪರಿಶೀಲಿಸಿ ವರದಿ ಮಾಡುವುದಕ್ಕೆ ಹೆಸರುವಾಸಿ. ಅವುಗಳಲ್ಲಿ ಎರಡು ಮಾಧ್ಯಮಗಳು ವಿದ್ಯಾರ್ಥಿ ಭವನದ ಮಾಲೀಕರನ್ನು ಸಂಪರ್ಕಿಸಿದ್ದರೂ, ಮೋಸ ಹೋಗಿದ್ದಾರೆ. ಆ ಮಾಲೀಕ ಮಾಹಿತಿಯನ್ನು ಧೃಢೀಕರಿಸದೇ ಹೋದರೂ ಅತಿ ಉತ್ಸಾಹ ತಪ್ಪು ವರದಿಗೆ ಎಡೆಮಾಡಿಕೊಟ್ಟಿದೆ. ಇದು ನಂಬಿಕೆಗೆ ಅರ್ಹವಲ್ಲದ ಯುಗ. ಒಬ್ಬ ವ್ಯಕ್ತಿ ದೊಡ್ಡ ಮಾಧ್ಯಮ ಸಂಸ್ಥೆಗಳೇ ದಾರಿತಪ್ಪುವಂತೆ ಮಾಡಬಹುದಾದರೆ, ಅತಿ ದೊಡ್ಡ ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳೊಂದಿಗೆ ಕೆಲಸ ಮಾಡುತ್ತಿರುವ ಸಂಘ ಪರಿವಾರ ಐಟಿ ಸೆಲ್ ಎಂತಹ ‘ನಕಲಿ ಸುದ್ದಿಗಳ’ ಜಾಲವನ್ನು ಸೃಷ್ಟಿಮಾಡಿರಬಹುದು ಎಂಬುದನ್ನು ಊಹಿಸಿಕೊಳ್ಳಲು ಕಷ್ಟವೇನಿಲ್ಲ.

ಜೊತೆಗೆ, ದೋಸೆ ಇಡ್ಲಿ ಹೋಟೆಲ್ಲುಗಳಷ್ಟೇ ಅಲ್ಲದೆ, ಅತ್ಯುತ್ತಮ ಮಾಂಸಾಹಾರ ಹೋಟೆಲ್‌ಗಳಿಗೆ ಹೊಕ್ಕಿ ತಿಂಡಿ-ಊಟಗಳನ್ನು ಸವಿಯುವ ಬಗ್ಗೆಯೂ ತುಸು ಅಭಿರುಚಿ ಬೆಳೆಸಿಕೊಂಡರೆ, ಯಾವುದೋ ಒಂದು ದೋಸೆ ಹೋಟೆಲ್ ಬಗ್ಗೆ ಸಿಕ್ಕಾಪಟ್ಟೆ ಎಕ್ಸೈಟ್ ಆಗುವುದನ್ನು ತಡೆಯಬಹುದೇನೋ! ಆದರೆ ಇಂದು ಪತ್ರಿಕೋದ್ಯಮದಲ್ಲಿ ಒಂದೇ ಸಮುದಾಯದ ಹೆಚ್ಚು ಜನ ಅಧಿಕಾರದ ಸ್ಥಾನಗಳಲ್ಲಿ ಕುಳಿತಿರುವುದು ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂಬ ಆರೋಪವೂ ಇದೆ. ಇದರ ಬಗ್ಗೆ ಒಂದಷ್ಟು ಅಧ್ಯಯನಗಳಾಗಿ ಪ್ರಾತಿನಿಧ್ಯ ಸರಿಪಡಿಸುವತ್ತ ಎಲ್ಲಾ ಮಾಧ್ಯಮಗಳು ಮುಂದಾಗಬೇಕಿದೆ.

ವಿಶ್ವ ಪುಸ್ತಕ ದಿನ ಮತ್ತು ಅಂಬೇಡ್ಕರ್

ಏಪ್ರಿಲ್ 23ಅನ್ನು ವಿಶ್ವ ಪುಸ್ತಕ ಮತ್ತು ಕಾಪಿರೈಟ್ ದಿನವಾಗಿ ಆಚರಿಸಲಾಗುತ್ತದೆ. ಮನುಕುಲದಲ್ಲಿ ಬಹಳ ವಿಶಿಷ್ಟವಾದ ಅನ್ವೇಷಣೆ ಪುಸ್ತಕ. ಬರೆವಣಿಗೆ ಪುಸ್ತಕಗಳಿಗೂ ಹಿಂದಿನದ್ದಾದರೂ, ಬರೆವಣಿಗೆಗೆ ಒಂದು ಮಹತ್ವದ ರೂಪ ಕೊಟ್ಟ ಪುಸ್ತಕ ಹಲವು ಬದಲಾವಣೆಗಳನ್ನು ಕಂಡಿದೆ. ಇ-ಪುಸ್ತಕ, ಆಡಿಯೋ ಪುಸ್ತಕಗಳು ಇಂದು ಜನಪ್ರಿಯವಾಗಿದ್ದರೂ, ಒಬ್ಬರು ತಮ್ಮ ಚಿಂತನೆಗಳನ್ನು ಮತ್ತೊಬ್ಬರಿಗೆ ದಾಟಿಸುವುದಕ್ಕೆ ಪುಸ್ತಕವೇ ಬಹಳ ಪರಿಣಾಮಕಾರಿ ಮಾರ್ಗವಾಗಿ ಉಳಿದಿದೆ.

ಅಂಬೇಡ್ಕರ್ ಬದುಕಿದ್ದ ಕಾಲಕ್ಕೆ ತಮ್ಮ ವೈಯಕ್ತಿಕ ಗ್ರಂಥಾಲಯದಲ್ಲಿ ಸುಮಾರು 50 ಸಾವಿರ ಪುಸ್ತಕಗಳನ್ನು ಹೊಂದಿದ್ದರು ಎಂದು ಬರೆಯುತ್ತಾರೆ ನಾನಕ್ ಚಂದ್ ರತ್ತು. ಆ ಕಾಲದ ವೈಯಕ್ತಿಕ ಗ್ರಂಥಾಲಯಗಳಲ್ಲಿ ಅಂಬೇಡ್ಕರ್ ಅವರದ್ದೇ ದೊಡ್ಡದಿದ್ದಿರಬಹುದು. ಅಂಬೇಡ್ಕರ್ ಅವರು ಸ್ವತಃ ಹಲವು ಪುಸ್ತಕಗಳನ್ನು ಬರೆದ ಮೇಲೆ, ಎಷ್ಟೋ ಬಾರಿ ಅವುಗಳಿಂದ ಬಂದ ಸಂಪೂರ್ಣ ರಾಯಲ್ಟಿ ಹಣವನ್ನು ಪುಸ್ತಕಗಳನ್ನು ಕೊಳ್ಳಲು ಹಾಕುತ್ತಿದ್ದರಂತೆ.

‘ಹಿಸ್ ಪರ್ಸನಲ್ ಲೈಬ್ರರಿ’ ಎಂಬ ಪ್ರಬಂಧದಲ್ಲಿ ರತ್ತು ಹೀಗೆ ಬರೆಯುತ್ತಾರೆ: “1924 ರಿಂದ 1934ರವರೆಗೆ ಅವರ ಗ್ರಂಥಾಲಯ ಭಾರತದಲ್ಲೆ ಅತಿ ದೊಡ್ಡ ಗ್ರಂಥಾಲಯಗಳಲ್ಲಿ ಒಂದಾಗಿ ಬೆಳೆದಿತ್ತು. ಅಷ್ಟಕ್ಕೂ ತೃಪ್ತಿಯಾಗದೆ ಅವರು ತಮ್ಮ ಬಿಡುವಿನ ಸಮಯವನ್ನು ನಗರದ ಹಳೆಯ ಪುಸ್ತಕದ ಅಂಗಡಿಗಳನ್ನೂ ಸೇರಿದಂತೆ ಗಂಟೆಗಳ ಕಾಲ ಪುಸ್ತಕ ಹುಡುಕುವುದರಲ್ಲಿ ನಿರತರಾಗಿರುತ್ತಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ & ಪೊಲಿಟಿಕಲ್ ಸೈನ್ಸಸ್‌ನಲ್ಲಿ ಇದ್ದಾಗ ಅವರ ಹಣದ ಬಹುಭಾಗ ಹಳೆಯ ಪುಸ್ತಕಗಳನ್ನು ಕೊಳ್ಳಲೇ ವ್ಯಯವಾಗುತ್ತಿತ್ತು”.

ಹೀಗೆ ಪುಸ್ತಕ ಪ್ರೇಮಿಯಾಗಿದ್ದ ಅಂಬೇಡ್ಕರ್ ಮುಂದೆ ಈ ದೇಶಕ್ಕೆ ಸಂವಿಧಾನ ಪುಸ್ತಕವನ್ನು ಕೊಡುಗೆ ನೀಡಿ ಈ ದೇಶದ ಇತಿಹಾಸವನ್ನು ಬದಲಿಸಿದವರು. ಆದರ ಬಾಬಾಸಾಹೇಬರ ಪುಸ್ತಕಗಳು ಭಾರತೀಯ ಭಾಷೆಗಳಲ್ಲಿ ಸಿಗುವುದಕ್ಕೆ ಎಷ್ಟೋ ವರ್ಷಗಳು ಕಾಯಬೇಕಾಯಿತು. ಇಂದಿಗೂ ಅವರ ಬರಹ ಮತ್ತು ಭಾಷಣಗಳ ಕನ್ನಡ ಅನುವಾದಗಳು ಮರುಮುದ್ರಣ ಕಾಣದೆ ಹೋಗಿದೆ. ಭಾರತವಾಸಿಗಳಿಗೆ ವಿವೇಕದ ಮೂಲವಾಗಿರುವ ಅಂಬೇಡ್ಕರ್ ಬರಹ ಮತ್ತು ಭಾಷಣಗಳು ಮತ್ತೆ ಎಲ್ಲರಿಗೂ ಸುಲಭಕ್ಕೆ ಸಿಗುವಂತಾಗಲಿ.

  • ಗುರುಪ್ರಸಾದ್ ಡಿ ಎನ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...