Homeಡೇಟಾ ಖೋಲಿಭಾರತದಾಗ ಬರೇ 40,000 ವೆಂಟಿಲೇಟರ ಅವ. ಅಂದ್ರ ಕೊರೊನಾ ಬಂದ್ರ ಅಷ್ಟು ಜನ ಮಾತ್ರ ಉಳಿತಾರ?

ಭಾರತದಾಗ ಬರೇ 40,000 ವೆಂಟಿಲೇಟರ ಅವ. ಅಂದ್ರ ಕೊರೊನಾ ಬಂದ್ರ ಅಷ್ಟು ಜನ ಮಾತ್ರ ಉಳಿತಾರ?

ಮತ್ತ ಈಗ ನಮ್ಮ ಎದುರಿಗೆ ಇರೋ ಬಕಾಸುರನ್ನ ನಾವು ಸೋಲಿಸಲಿಕ್ಕೆ ಸಾಧ್ಯ ಇಲ್ಲ. ಅವನಿಗೆ ದಿನಾ ಒಂದು ಬಲಿ ಕೊಟ್ಟು ನಾವು ಸಾದು ಮಾಡಿ ಇಟಗೋಬೇಕು ಅಂತ ಅಂದು ಕೊಂಡಿದ್ದರು. ಅವರು ಕಷ್ಟ ಇರೋ ಪರಿಹಾರಗಳನ್ನು ಗಣನೆಗೆ ತೊಗೋಳಿಲ್ಲ. ಸರಳ ಹಾದಿ ಹಿಡದರು.

- Advertisement -
- Advertisement -

ಕೈಲೆ ಆಗಲಾರದಾಗ ಕಥಿ ಹೇಳಿದರೂ ಅನ್ನೋ ಹಂಗ ನಮ್ಮ ಜಾವಡೇಕರ ಅಣ್ಣಾರು ಠೀವಿ ಮ್ಯಾಲೆ ರಾಮಾಯಣ- ಮಹಾಭಾರತ, ಶಕ್ತಿಮಾನು- ವ್ಯೋಮಕೇಶ ಬಕ್ಷಿ ತೋರಸಾಕ ಹತ್ಯಾರು. ಯಾರೂ ಎಲ್ಯೂ ಹೊರಗ ಹೋಗಬ್ಯಾಡ್ರಿ, ಸುಮ್ಮನೆ ಒಂದ ಕಡೆ ಕುತಗೊಂಡು ನೋಡರಿ ಅಂತ ಹೇಳ್ಯಾರು. ಆ ರಾಮಾಯಣದಾಗ ಒಂದು ಕಥಿ ಬರತದ. ಲಕ್ಷ್ಮಣನ ಮ್ಯಾಲೆ ರಾವಣನ ಮಗಾ ಮೇಘನಾಥ ಶಿವನ ಪ್ರಸಾದವಾದ ಪಾಶುಪತ ಅಸ್ತ್ರವನ್ನು ಬಿಡತಾನ. ಅಲ್ಲಿ ತನಕಾ ಎಲ್ಲಾ ಅಸ್ತ್ರಗಳನ್ನ ಎದುರಿಸಿದ ಲಕ್ಷ್ಮಣ ಪಾಶುಪತಕ್ಕ ಮಾತ್ರ ವಿರೋಧ ಮಾಡೋದಿಲ್ಲ. ಅದಕ್ಕ ಶಿರಸಾವಹಿಸಿ ನಮಸ್ಕಾರ ಮಾಡತಾನ. ಅದು ಅವನ ಸುತ್ತ ಹಾಸಿ ಹೋಗಿ ಬಿಡತದ.

ಅವನಿಗೆ ಏನೂ ತೊಂದರೆ ಆಗಂಗಿಲ್ಲ.

ಈ ದುರಿತ ಕಾಲದಾಗ ತ್ರೇತಾಯುಗದ ನೆನಪು ಯಾಕ ಆತಪಾ ಅಂದರ ಈ ಕೊರೊನಾಸುರನ ವಿರುದ್ಧ ನಾವು ಇಟ್ಟಿರೋ ಎಲ್ಲಾ ಹೆಜ್ಜೆಗಳಿಗಿಂತ ಮೀರಿದ್ದು ಒಂದು ಹೆಜ್ಜೆ ಐತಿ. ಅದು ʻಹಿಂಡು ನಿರೋಧʼ. ಈಗಿನ ಕೆಲವು ವಿಜ್ಞಾನಿಗಳು ʻಹೆರ್ಡ ಇಮ್ಯುನಿಟಿʼ ಅಥವಾ ʻಹಿಂಡು ನಿರೋಧʼವೇ ಕೊರೋನಾ ಹೋರಾಟದ ಸುಲಭ ಉಪಾಯ ಅಂತ ಹೇಳಿಕೊಂಡು ಓಡಾಡಲಿಕ್ಕೆ ಹತ್ಯಾರ. ಏನು ಇದು ಹಿಂಡು ನಿರೋಧ?

ಈ ಥಿಯರಿ ಪ್ರಕಾರ ಒಂದು ದೇಶದ 10 ರಿಂದ 40 ಶೇಕಡಾ ಜನರಿಗೆ ಒಂದು ರೋಗದ ಸೋಂಕು ತಗಲಿದರ, ಅವರೂ ಸೇರಿದಂಗ ಇಡೀ ದೇಶ ಗುಣ ಆಗತದ. ಈ ಪ್ರಕ್ರಿಯಾದಾಗ ಕೆಲವರು ಸಾಯಬಹುದು. ಅವರನ್ನ ಕೆರೆಗೆ ಹಾರಕ್ಕ ನಾವು ಬಲಿ ಕೊಟ್ಟ ಸಣ್ಣ ಸೊಸೆ ಅಂತ ತಿಳಕೊಂಡು ಸುಮ್ಮನೇ ಇರಬೇಕು. ಅದನ್ನ ಬಿಟ್ಟು ಈ ಪೀಡೆಗೆ ಬ್ಯಾರೆ ಔಷಧ ಇಲ್ಲ, ಅಂತ ಅವರ ವಾದ.

ಹಂಗ ನೋಡಿದರ ಯಾವುದೇ ವೈರಸ್ಸಿಗೆ ಔಷಧ ಅನ್ನೋದು ಇಲ್ಲ. ವರ್ಷದಾಗ ಮೂರು ಸಲಾ ಬರೋ ನೆಗಡಿಗೂ ಇಲ್ಲ, ಹಣೆಬರಾ ಕೆಟ್ಟಾಗ ಬರೋ ಕರೋನಾಕ್ಕೂ ಇಲ್ಲ.

ಅದರ ವಿರುದ್ಧ ಔಷಧ ಮಾಡಲಿಕ್ಕೆ ಯಾಕ ಬರಂಗಿಲ್ಲ ಅಂದರ ಅದು ತನ್ನ ರೂಪ ತಾನು ಹಗಲೆಲ್ಲಾ ಬದಲಿ ಮಾಡಿಕೋತದ. ಟ್ರಾನ್ಸ್ ಫಾರ್ಮರ್ ಪಿಕ್ಚರನ್ಯಾಗ ಕಾರು ಹೋಗಿ ರೋಬೋಟ್ ಆದಂಗ. ಒಂದು ರೂಪಕ್ಕ ಔಷಧ ಕಂಡು ಹಿಡದರ ಅದು ಬ್ಯಾರೆ ರೂಪ ಧರಿಸಿ ಔಷಧವನ್ನ ನಿರುಪಯೋಗಿ ಮಾಡಿ ಬಿಡತದ.

ಆದರ ವೈರಸ್ಸಿಗೆ ಒಂದು ವರ್ಷದ ನಿರೋಧಕ ಶಕ್ತಿ ಕೊಡೋ ಹಂತಾ ಲಸಿಕೆ ತಯಾರಿಸಬಹುದು. ಲಸಿಕೆ ಅಂದರ ಅದೇ ವೈರಸ್ಸಿನ ನಿರುಪದ್ರವಿ ರೂಪ. ಎಲ್ಲಾರಿಗೂ ಸಣ್ಣ ಪ್ರಮಾಣದಾಗ ಅದೇ ವೈರಸ್ಸಿನ ನಿರುಪದ್ರವಿ ರೂಪವನ್ನು ಕೊಟ್ಟರ ಅವರ ದೇಹ ಅದರ ವಿರುದ್ಧ ನಿರೋಧಕ ಶಕ್ತಿ ಬೆಳಿಸಿಗೋತದ. ಢಿಪ್ತೀರಿಯಾದಂತ ಲಸಿಕೆಯಿಂದ ರೋಗಕ್ಕ ಜೀವನ ಪೂರ್ತಿ ನಿರೋಧಕ ಶಕ್ತಿ ಬರತದ. ವೈರಸ್ಸಿನ ಲಸಿಕೆಗಳಿಂದ ಒಂದು ವರ್ಷ- ಎರಡು ವರ್ಷದ ವರೆಗೆ ನಿರೋಧಕ ಶಕ್ತಿ ಬರತದ.

ಹಿಂಡು ನಿರೋಧದಾಗ ಏನು ಆಗತದ ಅಂದರ ಒಬ್ಬ ಮನುಷ್ಯನ ದೇಹದಿಂದ ಹೊರಗ ಬಂದ ವೈರಸ್ಸು ಇನ್ನೊಬ್ಬನ ದೇಹದಾಗ ಹೋಗತದ. ಹಂಗ ಆಗೋವಾಗ ಮೊದಲಿನವನ ದೇಹದ ಜೊತೆ ಜಗಳ ಆಡಿ, ತನ್ನ ಶಕ್ತಿ ಕಳಕೊಂಡು ದುರ್ಬಲ ಆಗಿರತದ. ಹಂಗ ಒಬ್ಬರಿಂದ ಒಬ್ಬರಿಗೆ ಹೋಗಿ ಹೋಗಿ ಕಡೀಕೆ ಅದು ನಮ್ಮ ದೇಹದಾಗ ಇದ್ದರೂ ಸಹ ನಮಗ ಏನೂ ಮಾಡಲಾರದ ಹಂಗ ಆಗಿ ಬಿಡತದ. ಆಗ ಅದಕ್ಕ ಯಾವ ಲಸಿಕೆನೂ ಬ್ಯಾಡ. ಇಡೀ ಸಮಾಜ ಅದರ ವಿರುದ್ಧ ಸ್ವಾಭಾವಿಕ ನಿರೋಧಕ ಶಕ್ತಿ ಬೆಳಿಸಕೊತದ.

ಇಂಥಾ ಪ್ರಯೋಗ ಈಗಾಗಲೇ ನಡದು ಬಿಟ್ಟಾವು . ಇಂಗ್ಲಂಡದಾಗ ರೋಗ ಹರಡಿದರ ಚಿಂತಿಲ್ಲ. ಹಬ್ಬಿದವರಿಗೆಲ್ಲ ಔಷಧಿ ಸಿಗಬೇಕು, ಸಿಗೋಹಂಗ ನಾವು ಮಾಡತೇವಿ ಅಂತ ಅವರು ಅಂತಾರು. ಕೇವಲ ಮುಂಜಾಗೃತೆ ಕ್ರಮ ಕೈಕೊಳ್ಳಲಿಕ್ಕೆ ಹತ್ಯಾರು.

ನೆದರಲ್ಯಾಂಡ್ಸದವರು ʻಬಾರದು ಬಪ್ಪುದು, ಬಪ್ಪುದು ತಪ್ಪುದುʼ ಅಂತ ಸುಮ್ಮನಿದ್ದು ಬಿಟ್ಟಾರ. ಎಷ್ಟು ಜನಾ ರೋಗಿಗಳಾದರೂ ಸರಿ ನಮ್ಮಲ್ಲೆ ಆಸ್ಪತ್ರೆ ಅದಾವು. ವೆಂಟಿಲೇಟರ ಅದಾವು. ನಾವು ಯಾರನ್ನೂ ಸಾಯಲಿಕ್ಕೆ ಬಿಡಂಗಿಲ್ಲ ಅಂತ ಹೇಳಿ ಸುಮ್ಮನೇ ಇದ್ದು ಬಿಟ್ಟಾರ.

ಆದರ ಭಾರತ ಹಿಂಗ ಮಾಡಲಿಕ್ಕೆ ಸಾಧ್ಯ ಅದ ಏನು? ನಮ್ಮ ಆರೋಗ್ಯ ವ್ಯವಸ್ಥೆ ಎಲ್ಲಾರನ್ನೂ ಕಾಳಜಿ ಮಾಡುವಂಥಾದ್ದು ಅದ ಏನು? ಒಂದು ನೂರಾ ಮೂವತ್ತು ಕೋಟಿ ಜನಸಂಖ್ಯೆಯ ಈ ದೇಶದಾಗ ಬರೇ 40,000 ವೆಂಟಿಲೇಟರ ಅವ ಅಂತ. ಮಹಾಮಹಿಮರ ಮೇಕಿನ್ ಇಂಡಿಯಾ ಆಗಲಿ, ಆಮದು – ರಫ್ತು ನೀತಿ ಆಗಲಿ ಅದನ್ನು ಹೆಚ್ಚು ಮಾಡಲಿಕ್ಕೆ ಆಗಿಲ್ಲ. ದೇಶದ ನಲವತ್ತು ಶೇಕಡಾ ಜನ ಅಂದರ ಸುಮಾರು 50 ಕೋಟಿ ಜನರಿಗೆ ಈ ರೋಗ ಬಂತಂತಂದರ ಏನು ಆಗಬಹುದು. ಈಗಿನ ಲೆಕ್ಕದಾಗ 100 ಜನರಿಗೆ ರೋಗ ಬಂದರ ಐದು ಜನ ಸಾಯತಾರ. ಆ ಲೆಕ್ಕದಾಗ ಸುಮಾರು 2.5 ಕೋಟಿ ಜನ ಸಾಯಬೇಕು. ಅದರಾಗ ಬರೇ 40,000 ಮಂದಿನ್ನ ನಾವು ಉಳಿಸಿಕೊಳ್ಳಬಹುದು. ಅದರಾಗ 25,000 ಶಾಸಕರು, ಅವರ ಕುಟುಂಬದವರು, 800 ಸಂಸತ್ತು ಸದಸ್ಯರು ಹಾಗೂ ಕುಟುಂಬದವರು, 6,000 ಐಎಎಸ್ಸು ಅಧಿಕಾರಿಗಳು ಹಾಗೂ ಅವರ ಸ್ಟೆನೋ- ಡ್ರೈವರುಗಳು ಇತ್ಯಾದಿಗಳನ್ನು ಬಿಟ್ಟರ ಉಳಿದವರಿಗೆ ಚಾನ್ಸು ಸಿಗಲಿಕ್ಕೆ ಇಲ್ಲ.

ಹಿಂಡು ನಿರೋಧದ ಹೆಸರಿನ್ಯಾಗ ನಾವು 2 ಕೋಟಿ, 40 ಲಕ್ಷ, 96 ಸಾವಿರ ಜನರನ್ನು ಕಳದು ಕೊಳ್ಳಲಿಕ್ಕೆ ತಯಾರಿದ್ದೇವೇನು? ಈ ಪ್ರಶ್ನೆ ಸರಳ, ಉತ್ತರ ಕಠಿಣ.

ರಾಮಾಯಣದಿಂದ ಶುರು ಮಾಡಿದ ಕಥಿ ಮಹಾಭಾರತದಿಂದ ಮುಗಸೋಣು. ಭಾರತದ ಅತಿ ಜನಪ್ರಿಯ ಅಡ್ಡಕತಿಯೊಳಗ ಒಂದು ಬಕಾಸುರನ ಕಥಿ. ಇದರಿಂದ ಕನ್ನಡ ಹಾಗೂ ಇತರ ಭಾಷಾದಾಗ ಗಾದಿ ಮಾತು ಶುರು ಆದವು. ಬಕಾಸುರನ ಗತೆ ತಿನ್ನೊದು, ಬಕಾಸುರನ ಹೊಟ್ಟಿಗೆ ಅರ್ಧಾ ರುಪಾಯಿ ಮಜ್ಜಿಗಿ, ಬಕಾಸುರನ ಹಸಿವು, ಇತ್ಯಾದಿ.

ಇದರಾಗ ಊರ ಹೊರಗಿನ ರಾಕ್ಷಸ ಬಂದು ಎಲ್ಲಾರನೂ ಒಂದ ಕಾಲಕ್ಕೆ ನಾಶ ಮಾಡಬಾರದು ಅಂತ ಹೇಳಿ ಅಲ್ಲಿನ ಜನ ಅವನ ಸಂಗ್ತೆ ಒಂದು ಒಪ್ಪಂದ ಮಾಡಿಕೊಂಡಿದ್ದರು. ಅದೇನಪಾ ಅಂದರ ದಿನಾ ಒಬ್ಬ ಮನುಷಾನ್ನ, ಒಂದು ಬಂಡಿ ಅನ್ನದ ಜೊತೆ ಆ ರಾಕ್ಷಸನಿಗೆ ತಿನ್ನಲಿಕ್ಕೆ ಕಳಸೋದು. ಅವಾ ಒಂದು ವರ್ಷದಾಗ 365 ಜನರನ್ನ ತಿನಕೊಂಡು ಸುಮ್ಮನೇ ಇದ್ದ. ಆ ಊರಿನ ಕಡೆ ವಾಕಿಂಗ್ ಬರಲಿಲ್ಲ. ಕಡೀಕೆ ಒಂದು ದಿವಸ ಕುಂತಿ ಹಾಗೂ ಅಕಿ ಮಕ್ಕಳು ಆ ಊರಿಗೆ ಅಜ್ಞಾತವಾಸಕ್ಕ ಬಂದರು. ಆ ಕಥೀ ಕೇಳಿದರು. ತಾಯಿಗೆ ತಕ್ಕ ಮಗ ಭೀಮ ಗಿನೀ ಪಿಗ್ ಆಗಲಿಕ್ಕೆ ಒಪ್ಪಿದ. ಬಕಾಸುರನ ಕಥಿ ಮುಗಸಿದ.

ಮೂಲ ಭಾರತದಾಗ ಇದು ಬರೇ ಒಂದು ಪುಟದಷ್ಟು ಸಣ್ಣ ಕಥಿ. ಆದರ ಅದರಾಗ ಭಾಳ ದೊಡ್ಡ ದೊಡ್ಡ ಪಾಠ ಅದಾವು. ಬಕಾಸುರನಿಗೆ ಎಲ್ಲಾರನ್ನೂ ಒಂದೇ ಕಾಲಕ್ಕ ನಾಶ ಮಾಡಲಿಕ್ಕೆ ಬರತಿತ್ತೋ ಇಲ್ಲೋ, ಆದರ ಜನಾ ಹಂಗ ತಿಳಕೊಂಡಿದ್ದರು. ಇನ್ನು ತಮ್ಮ ಊರಾಗ ಇರೋ ಕೆಲವರನ್ನು ಕೊಂದು ಉಳಿದವರು ಬದಕೋದು ಎನು ತಪ್ಪಲ್ಲ ಅಂತ ಅವರು ನಂಬಿದ್ದರು. ಅದರ ಬಗ್ಗೆ ಅವರಿಗೆ ನೈತಿಕ ಹಿಂಜರಿಕೆ ಇರಲಿಲ್ಲ. ಮೊನ್ನೆ ನಮ್ಮ ಬಿಳೇಮನಿ ಟ್ರಂಪಣ್ಣನವರ್ ಅವರು ಇಂಥಾದ ಮಾತು ಆಡ್ಯಾರ. ಕೆಲವು ಜನ ಸಾಯಬಹುದು, ಆದರ ವಿಶ್ವದ ಆರ್ಥಿಕ ಸ್ಥಿತಿ ಅಮೇರಿಕದ ಮ್ಯಾಲೆ ನಿಂತದ. ನಮ್ಮ ವ್ಯವಸ್ಥೆ ಕುಸಿದು ಬಿದ್ದರ ಇಡೀ ಜಗತ್ತು ಕುಸಿತದ, ಇತ್ಯಾದಿ, ಇತ್ಯಾದಿ.

ಮತ್ತ ಈಗ ನಮ್ಮ ಎದುರಿಗೆ ಇರೋ ಬಕಾಸುರನ್ನ ನಾವು ಸೋಲಿಸಲಿಕ್ಕೆ ಸಾಧ್ಯ ಇಲ್ಲ. ಅವನಿಗೆ ದಿನಾ ಒಂದು ಬಲಿ ಕೊಟ್ಟು ನಾವು ಸಾದು ಮಾಡಿ ಇಟಗೋಬೇಕು ಅಂತ ಅಂದು ಕೊಂಡಿದ್ದರು. ಅವರು ಕಷ್ಟ ಇರೋ ಪರಿಹಾರಗಳನ್ನು ಗಣನೆಗೆ ತೊಗೋಳಿಲ್ಲ. ಸರಳ ಹಾದಿ ಹಿಡದರು. ಇವತ್ತಿನ ನಮ್ಮ ದೇಶದ ಹಾಗೂ ಇತರ ದೇಶದ ನಾಯಕರು ಭಾಳ ಜನ ಹಿಂದ ಇದ್ದಾರ. ಅವರಿಗೆ ಸುಲಭವಾದ ಪರಿಹಾರ ಕಾಣತಾವ ಹೊರತು ಕಷ್ಟದ್ದವು ಕಾಣಂಗಿಲ್ಲ.

ಇವುಕುರ ಜೊತೆಗೆ ಚಾಣಕ್ಯ ಅಂತ ಇನ್ನೊಂದು ಸೀರಯಲ್ಲು ಬರತಿತ್ತು. ಅದರಾಗ ಒಂದು ಮಂತ್ರ ಇತ್ತು. ಸರ್ವೇ ಭವಂತು ಸುಖಿನಹ – ಸರ್ವೇ ಸಂತು ನಿರಾಮಯ ಅಂತ. ಅಂದರ ಸರ್ವೇ ಇಲಾಖೆ ಅವರು ಸುಖವಾಗಿರಲಿ, ನಿರೋಗಿಯಾಗಿರಲಿ ಅಂತ ಅಲ್ಲ. ಎಲ್ಲರೂ ಸುಖವಾಗಿರಲಿ, ಎಲ್ಲರೂ ನಿರೋಗಿಯಾಗಿರಲಿ ಅಂತ.

ನಮ್ಮ ಅಜ್ಜಾ- ಅಜ್ಜಿ ಕಡೆ ಕೇಳಿದ ಕಥಿ ನಾವು ಮರತಿರಬಹುದು. ಕನಿಷ್ಟ ಈಗ ಡೀಡೀ ಡಿಕ್ಕಿನ ಮಹಾಭಾರತ-ರಾಮಾಯಣ ನೋಡಿ ಚಾಣಕ್ಯನೂ ನೆನಪಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ದೆಹಲಿ ಮರಕಜ ಬಗ್ಗೆ ಬರಿರಿ. ಆವಾಗ ನಿಮ್ಮ ಪತ್ರಿಕೆ ನಿಸ್ಸಂದೇಹವಾಗಿ ಜಾತಾತಿತ ಪತ್ರಿಕೆ.

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...