ಎಲ್ಲಾ ಕೆಲಸಗಳೂ ಆನ್ಲೈನ್ನಲ್ಲೇ ನಡೆಯುತ್ತಿರುವ ಇಂಥಾ ಸಂದರ್ಭದಲ್ಲಿ ಹೆರಿಗೆಯು ಸಹ ಆನ್ಲೈನ್ ಸಹಾಯದಲ್ಲೇ ನಡೆದ ಅಪರೂಪದ ಪ್ರಕರಣ ಹಾವೇರಿಯಲ್ಲಿ ವರದಿಯಾಗಿದೆ.
ಕಳೆದ ಭಾನುವಾರ ವಾಸವಿ ಫಟ್ಟೆಪುರ ಎಂಬ ಮಹಿಳೆಗೆ ನಿಗದಿತ ದಿನಾಂಕಕ್ಕೆ ಮೊದಲೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರ ಪತಿ ರಾಘವೇಂದ್ರ ವಾಹನ ತರಲು ಹೋದವನು ಬರುವುದಕ್ಕೆ ತಡವಾಗಿದೆ. ಅಂದು ವಾರಾಂತ್ಯ ಲಾಕ್ ಡೌನ್ ಇದ್ದಿದ್ದರಿಂದ ಯಾವುದೇ ಖಾಸಗೀ ವಾಹನಗಳು ಸಿಗಲಿಲ್ಲ. ನಂತರ ಮನೆಯಲ್ಲಿದ್ದವರು ಸಹಾಯಕ್ಕಾಗಿ ನೆರೆಯವರನ್ನು ಕೂಗಿದ್ದಾರೆ. ಆದರೆ ಅವರು ಬರುವುದರೊಳಗಾಗಿ ಮನೆಯಲ್ಲಿಯೇ ಹೆರಿಗೆ ಆಗಿತ್ತು ಎಂದು ನೆರೆಮನೆಯ ಮಧುಲಿಕಾ ದೇಸಾಯಿ ನಾನುಗೌರಿಗೆ ತಿಳಿಸಿದರು.
ನಂತರ ಅವರ ಪತಿ ಆಂಬುಲೆನ್ಸ್ ಗೆ ಕರೆ ಮಾಡಿದಾಗ, ಕೊರೊನಾ ಕರ್ತವ್ಯದಲ್ಲಿರುವುದಾಗಿಯೂ, ಬರುವುದಕ್ಕೆ 30-40 ನಿಮಿಷ ಆಗುತ್ತದೆ ಎಂದು ಮಧುಲಿಕಾ ಹೇಳಿದರು.
‘ನಾನು ಬಂದು ನೋಡಿದಾಗ ತಾಯಿ ಮತ್ತು ಮಗು ನೆಲದ ಮೇಲೆ ಮಲಗಿದ್ದರು. ನನಗೆ ಏನು ಮಾಡಬೆಕೆಂದು ತೋಚಲಿಲ್ಲ. ಮಗು ಮತ್ತು ತಾಯಿಯ ಜೀವ ಕಾಪಾಡಬೇಕಾಗಿದ್ದರಿಂದ, ನಮ್ಮದೇ ಬೀದಿಯ ಪ್ರಿಯಾಂಕ ಎನ್ನುವ ವೈದ್ಯೆಯೊಬ್ಬರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದುದು ನೆನಪಿಗೆ ಬಂದು ತಕ್ಷಣ ಅವರಿಗೆ ವೀಡಿಯೋ ಕರೆ ಮಾಡಿ ಪರಿಸ್ಥಿತಿ ತಿಳಿಸಲಾಯಿತು’ ಎಂದು ಮಧುಲಿಕಾ ಹೇಳಿದರು.
ಡಾ. ಪ್ರಿಯಾಂಕ ಮಂತಗಿ ಆಗತಾನೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು. ವಿಷಯ ತಿಳಿದ ತಕ್ಷಣ ‘ಹೆದರಬೇಡಿ. ಈಗಾಗಲೇ ಹೆರಿಗೆ ಆಗಿರುವುದರಿಂದ ಹೆಚ್ಚು ತಡಮಾಡದೇ ಹೊಕ್ಕುಳಬಳ್ಳಿ ಕತ್ತರಿಸಿ. ಎರಡೂ ಬದಿಯಲ್ಲಿ ಸ್ವಲ್ಪ ಜಾಗ ಬಿಟ್ಟು ಕತ್ತರಿಸಿದಾಗ ಹೆಚ್ಚು ರಕ್ತಸ್ರಾವವಾಗದಂತೆ ಎರಡು ಕಡೆ ಕಟ್ಟಬೇಕು. ನಂತರ ಮಧ್ಯದಲ್ಲಿ ಕತ್ತರಿಸ ಬೇಕು. ಇಲ್ಲದಿದ್ದರೆ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ’ ಎಂದು ವೈದ್ಯರು ವೀಡಿಯೋ ಕರೆಯಲ್ಲಿಯೇ ಮಾರ್ಗದರ್ಶನ ಮಾಡಿದ್ದಾರೆ.
ಮಧುಲಿಕಾ ವೈದ್ಯರ ನಿರ್ದೇಶನದ ಮೇರೆಗೆ, ವಿಜಯಲಕ್ಷ್ಮಿ ಜೋಶಿ, ಮಾಧುರಿ ಕಾಮನಹಳ್ಳಿ, ಮುಕ್ತಾ ಕಾಮನಹಳ್ಳಿ ಮತ್ತು ಶಿವಲೀಲಾ ಪಟ್ಟಾರ್ ಅವರ ಸಹಾಯದೊಂದಿಗೆ ಗ್ಲೌಸ್ ಮತ್ತು ಮಾಸ್ಕ್ ಹಾಕಿಕೊಂಡು, ಹೊಸದಾದ ಬ್ಲೇಡ್ ನಿಂದ ಹೊಕ್ಕುಳಬಳ್ಳಿ ಕತ್ತರಿಸಿ, ಮಗು ಮತ್ತು ತಾಯಿಯನ್ನು ರಕ್ಷಿಸಿದ್ದಾರೆ.
ನಂತರ ಮಗುವನ್ನು ಸ್ವಚ್ಚಗೊಳಿಸಿ, ಬೆಚ್ಚಗಿನ ಬಟ್ಟೆಯಲ್ಲಿ ಹೊದಿಸಿ, ತಾಯಿಗೆ ಹಾಲುಣಿಸಲು ಹೇಳಿದರು. ಅಷ್ಟರಲ್ಲಿ ಸ್ಥಳಕ್ಕೆ ಆಂಬುಲೆನ್ಸ್ ಬಂದಿತ್ತು.
ಈಗ ವಾಸವಿಯವರ ತವರೂರಾದ ನವಲಗುಂದದಲ್ಲಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮಹತ್ವದ ಕೆಲಸ ಮಾಡಿದ್ದಕ್ಕಾಗಿ ವೈದ್ಯರು ಮತ್ತು ನೆರಯವರಾದ ಮಧುಲಿಕಾ ದೇಸಾಯಿಯವರು ಅಭಿನಂದನೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ರಫೇಲ್ ಒಂದು ಗೇಮ್ ಚೇಂಜರ್, ಚೀನಾದ ಜೆ20 ಇದಕ್ಕೆ ಸಮವಲ್ಲ: ಮಾಜಿ ವಾಯುದಳ ಮುಖ್ಯಸ್ಥ