ದೆಹಲಿಯಲ್ಲಿ ಕೃಷಿ ಕಾನೂನುಗಳ ವಿರುದ್ದ ರೈತರ ಪ್ರತಿಭಟನೆ ಮುಂದುವರೆಯುತ್ತಿರುವ ಮಧ್ಯೆಯೆ ಕೇಂದ್ರ ಸರ್ಕಾರ ತಾನು ಪರಿಚಯಿಸಿದ ಹೊಸ ಕಾನೂನಿನ ಸಮರ್ಥನೆಗೆ ಇಳಿದಿದ್ದು, ದೇಶದಾದ್ಯಂತ ಕಾನೂನುಗಳ ಪರ ಬೃಹತ್ ಪ್ರಚಾರಾಂದೋಲನದ ಅಭಿಯಾನ ಯೋಜಿಸಿದೆ. ಮುಂದಿನ ಕೆಲವು ದಿನಗಳಲ್ಲಿ ಬಿಜೆಪಿಯು ದೇಶಾದ್ಯಂತ 100 ಪತ್ರಿಕಾಗೋಷ್ಟಿಗಳು ಮತ್ತು 700 ರೈತರ ಸಭೆಗಳನ್ನು ಯೋಜಿಸಲಾಗಿದೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.
ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಅದಕ್ಕೆ ಬೆಂಬಲ ಹರಿದುಬರುತ್ತಿದೆ. ಅದೇ ರೀತಿಯಲ್ಲಿ ಕೇಂದ್ರ ಸರ್ಕಾರದ ಮೇಲೆ ಟೀಕೆಗಳು ವ್ಯಕ್ತವಾಗುತ್ತಿವೆ. ಹಾಗಾಗಿ ಕೇಂದ್ರ ಸರ್ಕಾರ ತನ್ನ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳಲು ಆಡಳಿತ ಯಂತ್ರಾಗವನ್ನೇ ಕಣಕ್ಕಿಳಿಸುವ ಯೋಜನೆಯಲ್ಲಿದೆ.
ಅಭಿಯಾನದ ಸಂವಹನದಲ್ಲಿ ಕ್ಯಾಬಿನೆಟ್ ಮಂತ್ರಿಗಳು ಪಾಲ್ಗೊಳ್ಳಲಿದ್ದು, ಕೃಷಿ ಕಾನೂನುಗಳ ಬಗ್ಗೆ ರೈತರು ಎತ್ತುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಈ ಸಮಯದಲ್ಲಿ ತಿಳಿಸಲಾಗುತ್ತದೆ, ಜೊತೆಗೆ ಕೃಷಿ ಕಾನೂನುಗಳ ಬಗ್ಗೆ ಜನರು ಹೊಂದಿರುವ ಪ್ರಶ್ನೆಗಳು ಮತ್ತು ಕಳವಳಗಳನ್ನು ಬಿಜೆಪಿ ಪರಿಹರಿಸಲಿದೆ ಎನ್ನಲಾಗಿದೆ.
ಇದನ್ನೂ ಓದಿ: ರೈತರಿಗೆ ಬೆಂಬಲ: ‘#WeUnitedForFarmers’ ಟ್ರೆಂಡಿಂಗ್ – ಪ್ರತಿತಂತ್ರ ಹೂಡುತ್ತಿರುವ ಬಿಜೆಪಿ!
ಈ ನಡುವೆ ರೈತ ಸಂಘಟನೆ ಕಾನೂನಿನ ವಿರುದ್ದ ಸುಪ್ರೀಂಕೋರ್ಟ್ ಕದ ತಟ್ಟಿದೆ. ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರದ ಹೊಸ ಪ್ರಸ್ತಾಪವನ್ನು ರೈತ ಮುಖಂಡರು “ಹೊಸದೇನೂ ಇಲ್ಲ” ಎಂದು ತಿರಸ್ಕರಿಸಿದ್ದರು. ಕೃಷಿಯನ್ನು ಕಾರ್ಪೊರೇಟ್ ಉದ್ದಿಮೆಗಳನ್ನಾಗಿಸುವ ಈ ಕಾನೂನುಗಳ ವಿರುದ್ದ ತಮ್ಮ ಪ್ರತಿಭಟನೆ ಮುಂದುವರೆಸಲಿದ್ದೇವೆ ಎಂದು ಹೇಳಿದ್ದಾರೆ.
ಕಳೆದ 16 ದಿನಗಳಿಂದ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಆಂದೋಲನ ನಡೆಸುತ್ತಿರುವ ರೈತರು ಡಿಸೆಂಬರ್ 14 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದು, ಡಿಸೆಂಬರ್ 12 ರೊಳಗೆ ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಭಟನೆ ಪ್ರಾರಂಭವಾದಾಗಿನಿಂದ ಇದುವರೆಗೂ ಕನಿಷ್ಠ ಐದು ಸಾವುಗಳು ವರದಿಯಾಗಿವೆ ಎಂದು ಎನ್ಡಿಟಿವಿ ಹೇಳಿದೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರೈತ ಸಂಘಟನೆ