ಕಳೆದ ಜೂನ್ನಲ್ಲಿ ನಡೆದಿದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕನ ಹತ್ಯೆಯಲ್ಲಿ ಭಾರತಕ್ಕೆ ಸಂಬಂಧವಿದೆ ಎಂದು ಆರೋಪಿಸಿ ಕೆನಡಾವು ಭಾರತೀಯ ಅಧಿಕಾರಿಯನ್ನು ದೇಶ ತೊರೆಯಲು ಸೂಚಿಸಿದ ಬೆನ್ನಲ್ಲೇ ಕೆನಡಾದ ರಾಜತಾಂತ್ರಿಕ ಅಧಿಕಾರಿಯನ್ನು ಭಾರತವು ಉಚ್ಛಾಟನೆ ಮಾಡಿದೆ.
ಕೆನಡಾದ ರಾಜತಾಂತ್ರಿಕ ಅಧಿಕಾರಿಗೆ ದೇಶ ತೊರೆಯಲು ಐದು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಭಾರತ ಮಂಗಳವಾರ ಹೇಳಿದೆ. ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಿಕೊಂಡು ಉಚ್ಛಾಟಣೆ ನಿರ್ಧಾರದ ಬಗ್ಗೆ ತಿಳಿಸಲಾಗಿದೆ.
ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ಭಾರತ ತಿರಸ್ಕರಿಸಿದೆ ಮತ್ತು ಇದನ್ನು ಅಸಂಬದ್ಧ ಎಂದು ಹೇಳಿದೆ.
ಭಾರತವು ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿದ್ದ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತೀಯ ಏಜೆಂಟ್ಗಳಿಗೆ ಸಂಬಂಧವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಗಳನ್ನು ಮಾಡಿದ್ದರು.
ಇದರ ಬೆನ್ನಲ್ಲೇ ಭಾರತದಲ್ಲಿನ ಕೆನಡಾದ ಹೈ ಕಮಿಷನರ್ ಕ್ಯಾಮರೂನ್ ಮ್ಯಾಕೆ ಅವರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಲಾಗಿದೆ ಮತ್ತು ಅವರು ಸಭೆಯ ನಂತರ ವಿದೇಶಾಂಗ ಸಚಿವಾಲಯದಿಂದ ಹೊರಹೋಗುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.
ವೀಡಿಯೊದಲ್ಲಿ, ಮ್ಯಾಕೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು ಕಂಡು ಬಂದಿದೆ. ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಅವರನ್ನು ಇಂದು ಸಚಿವಾಲಯಕ್ಕೆ ಕರೆಸಲಾಯಿತು ಮತ್ತು ಉಚ್ಛಾಟನೆ ಮಾಡುವ ಭಾರತ ಸರ್ಕಾರದ ನಿರ್ಧಾರದ ಬಗ್ಗೆ ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಭಾರತವು ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿತ್ತು ಎಂಬುವುದು ಉಲ್ಲೇಖನೀಯ. ಈ ಮಧ್ಯೆ ಜೂನ್ 18 ರಂದು, ವ್ಯಾಂಕೋವರ್ನ ಉಪನಗರವಾದ ಸರ್ರೆಯ ಗುರುದ್ವಾರದ ಬಳಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಇದನ್ನು ಓದಿ: ಚೈತ್ರಾ ಕುಂದಾಪುರ ಗ್ಯಾಂಗ್ನ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನ