Homeಮುಖಪುಟಸಮಸ್ಯೆಗಳ ಬಲೆಯಲ್ಲಿ ಭಾರತ ವಿಲವಿಲ!

ಸಮಸ್ಯೆಗಳ ಬಲೆಯಲ್ಲಿ ಭಾರತ ವಿಲವಿಲ!

- Advertisement -
- Advertisement -

ಕಂದಾಯ ಸಚಿವ ಅಶೋಕ್ ಅವರು “ಭಾರತ ‘ಜ್ಞಾನ’ದ ಮೂಲಕ ವಿಶ್ವಗುರುವಾಗುವತ್ತ ದಾಪುಗಾಲಿಟ್ಟಿದೆ” ಎಂದು ಪಿ.ಇ.ಎಸ್ ವಿ.ವಿ.ಯಲ್ಲಿ ಇತ್ತೀಚೆಗೆ ಜರುಗಿದ ವಿಜ್ಞಾನ ಮೇಳದಲ್ಲಿ ಹೇಳಿದ್ದರು. ಹಾಗೆಯೇ, “ಭಾರತ ಅಮೆರಿಕಕ್ಕೆ ಸಹವರ್ತಿ ದೇಶವಲ್ಲ; ಭಾರತ ಒಂದು ಬೃಹತ್‌ಶಕ್ತಿ” ಎಂದು ಅಮೆರಿಕ ಶ್ವೇತಭವನದ ಏಷ್ಯಾದ ಸಮನ್ವಯಕಾರ ಕರ್ಟ್ ಕ್ಯಾಂಪ್‌ಬೆಲ್ ಸಭೆಯೊಂದರಲ್ಲಿ ಹೇಳಿದ್ದರು. ಸೂಪರ್ ಪವರ್ ವಿಷಯ ಅತ್ತಿರಲಿ, ಒಂದು ಶತಮಾನಕ್ಕೂ ಹೆಚ್ಚು ಕಾಲ ಬ್ರಿಟಿಷರ ವಿರುದ್ಧ ಹೋರಾಡಿ ವಿಮೋಚನೆಗೊಂಡ ನಮ್ಮ ದೇಶ 75 ವರ್ಷಗಳಿಂದ ಶಾಂತಿ-ಸಮೃದ್ಧಿಯ ನೆಲೆಯಾಗಿ ಪರಿವರ್ತನೆಗೊಳ್ಳಲು ಸಾಧ್ಯವಾಗಿದೆಯೇ? 75 ವರ್ಷಗಳನ್ನು ಸುಳ್ಳಿನ ಪರದೆಯಲ್ಲಿ ಕಳೆದಿದ್ದೇವೆಯೇ? ಹೌದು ಅಥವಾ ಇಲ್ಲವೆಂಬ ಹಲವು ಉತ್ತರಗಳು ಲಭ್ಯವಾಗಬಹುದು. ಆದರೆ ವೈಫಲ್ಯದ ಹೆಜ್ಜೆಗಳನ್ನು ಶೋಧಿಸಿ, ಪರಿವರ್ತನೆಯತ್ತ ಕೊಂಡೊಯ್ಯಬೇಕೆಂದು ಹೇಳುವ ಪ್ರಯತ್ನ ಇದಾಗಿದೆ.

ಎಲ್ಲಿ ಶ್ಲಾಘನೆ ಇರುತ್ತದೆಯೋ ಅಲ್ಲಿ ಟೀಕೆಗಳು ಸಹ ಇರುತ್ತವೆ. ನಮ್ಮ ದೇಶ ದಾಸ್ಯದಿಂದ ಬಿಡುಗಡೆಗೊಂಡಾಗ ಬಡತನದ ಹೊರೆ ಶೇ.80ರಷ್ಟಿತ್ತು. 1956ರಲ್ಲಿ ಯೋಜನಾ ಆಯೋಗದ ಪ್ರೊ. ಬಿ.ಎಸ್. ಮಿನ್ಹಾಸ್ ಅವರು ಶೇ.65ರಷ್ಟು ಭಾರತೀಯರು ಬಡವರೆಂದು ಹೇಳಿದ್ದರು. 2017ರಲ್ಲಿ ಬಡತನದ ರೇಖೆಗಿಂತ ಕೆಳಗಿದ್ದವರು 269 ಮಿಲಿಯನ್ ಜನ.

ಇವತ್ತಿಗೂ ದೇಶದ ಸುಮಾರು 280 ಮಿಲಿಯನ್; ಅಂದರೆ ಶೇ.20ರಷ್ಟು ಜನ ‘ಬಡತನ’ದ ಬೇಗೆಯಲ್ಲಿಯೇ ಬೇಯುತ್ತಿದ್ದಾರೆ. ಬಡತನ ಶೇ.9ಕ್ಕೆ ಇಳಿದಿದೆ ಎನ್ನಲಾಗುತ್ತಿದೆ. ಆದರೆ, ಈ ಅಧಿಕೃತ ಸಂಖ್ಯೆಗಿಂತಲೂ ಹೆಚ್ಚು ಜನ ಬಡತನದಲ್ಲಿ ವಾಸಿಸುತ್ತಿದ್ದಾರೆ. ಶೇ.68.8ರಷ್ಟು ಜನ ದಿನಕ್ಕೆ 2 ಡಾಲರ್‌ಗಿಂತ ಕಡಿಮೆ ಆದಾಯ ಹೊಂದಿದ್ದಾರೆ. ಶೇ.30ಕ್ಕಿಂತ ಹೆಚ್ಚು ಜನ 1.25 ಡಾಲರ್‌ಗಿಂತ ಕಡಿಮೆ ಆದಾಯ ಹೊಂದಿರುವುದರಿಂದ ಇವರನ್ನು ಕಡುಬಡವರೆಂದು ವರ್ಗೀಕರಿಸಲಾಗಿದೆ. ಸುಮಾರು 800 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಡವರೆಂದು ಪರಿಗಣಿಸಲಾಗಿದೆ. ಜಾಗತಿಕ ಬಡತನ ಸೂಚ್ಯಂಕ 2022ರ ಪ್ರಕಾರ 107 ದೇಶಗಳಲ್ಲಿ ನಾವು 62ನೇ ಸ್ಥಾನದಲ್ಲಿದ್ದೇವೆ.

ಇರಲಿ, ನಮ್ಮದು ವಿಶ್ವದಲ್ಲಿ 5ನೇ ಅತಿದೊಡ್ಡ ಆರ್ಥಿಕತೆ. ಇದನ್ನು ನಾಮಮಾತ್ರದ ನಿವ್ವಳ ದೇಶಿಯ ಉತ್ಪನ್ನದಲ್ಲಿ ಅಳೆಯಲಾಗುತ್ತಿದೆ. ಹಾಗೆಯೇ ಕೊಳ್ಳುವ ಶಕ್ತಿಯ ಸಮಾನತೆಯಲ್ಲಿ 3ನೇ ಸ್ಥಾನದಲ್ಲಿದ್ದೇವೆ. ಸ್ವಾತಂತ್ರ್ಯದ ಸಮಯದಲ್ಲಿ ನಮ್ಮ ದೇಶದ ನಿವ್ವಳ ದೇಶಿಯ ಉತ್ಪನ್ನ ಶೇ.3ರಷ್ಟಿತ್ತು. ಅಂದರೆ 2.7 ಲಕ್ಷ ಕೋಟಿಯಷ್ಟಿತ್ತು. 2021ರಲ್ಲಿ ಜಗತ್ತಿನ ನಿವ್ವಳ ದೇಶಿಯ ಉತ್ಪನ್ನದಲ್ಲಿ ಶೇ.9.5ರಷ್ಟನ್ನು ನಮ್ಮ ದೇಶ ಹೊಂದಿದೆ. ಅಂದರೆ 3.53 ಶತಕೋಟಿ ಡಾಲರ್ ಅಥವಾ 285 ಲಕ್ಷ ಕೋಟಿಯಷ್ಟಿದೆ. ನಮ್ಮ ದೇಶ ಪ್ರಸ್ತುತ ವಿಶ್ವದ ನಿವ್ವಳ ದೇಶಿಯ ಉತ್ಪನ್ನದ ಬೆಳವಣಿಗೆಗೆ ಶೇ.17ರಷ್ಟು ಆರ್ಥಿಕ ಕೊಡುಗೆ ನೀಡುತ್ತಿದೆ.

ಆದರೆ, ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನ ಹತ್ತಿಸಿದ ಪ್ರಕರಣದಲ್ಲಿ ಮೃತರಾದ ನಾಲ್ವರು ರೈತರ ಕುಟುಂಬದ ಸದಸ್ಯರಿಗೆ ಇನ್ನೂ 10 ಲಕ್ಷಗಳ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವ ಭರವಸೆ ಕಾಗದದ ಮೇಲಷ್ಟೆ ಉಳಿದಿರುವುದು ಆಶ್ಚರ್ಯ ಮೂಡಿಸುತ್ತದೆ.

ಇವತ್ತಿನ ಆರ್ಥಿಕ ಬೆಳವಣಿಗೆಯಿಂದಾಗಿ ಆಟೋ ಚಾಲಕರು, ಮನೆಗೆಲಸದವರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರ ಮಾಡುವವರು, ಮನೆ ಕಾಯುವವರ ಬದುಕೇನೂ ಅಂದುಕೊಂಡಷ್ಟು ಬದಲಾಗಿಲ್ಲ. ಇವರುಗಳಿಂದಿಗೂ ‘ಬಡತನದ ಬಲೆ’ಯಲ್ಲಿ ಸಿಲುಕಿಕೊಂಡಿದ್ದಾರೆ.

ಇನ್ನೂ ಜಾಗತಿಕ ಅಸಮಾನತೆ ವರದಿಯಲ್ಲಿ ನಮ್ಮ ದೇಶ ಅತ್ಯಂತ ಅಸಮಾನತೆಯುಳ್ಳ ದೇಶಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಮೇಲಿನ ಶೇ.10 ಮತ್ತು ಕೆಳಗಿನ ಶೇ.50ರ ಆದಾಯದ ಅಂತರದ ನಡುವಿನ ಅನುಪಾತ ಶೇ.22ರಷ್ಟಿದೆ.

ಇದನ್ನೂ ಓದಿ: ಇನ್ನೆಂದೂ ಆಗಿರದಷ್ಟು ಬಡತನ ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳ: ಅಧ್ಯಯನ

ನಾವು ದಾಸ್ಯದಿಂದ ಹೊರಬರುವಾಗ ನಮ್ಮ ದೇಶದ ಒಟ್ಟು ಜನಸಂಖ್ಯೆ 340 ಮಿಲಿಯನ್. 2022ರ ಮಾರ್ಚ್ ವೇಳೆಗೆ ನಮ್ಮ ಜನಸಂಖ್ಯೆ 1,417 ಮಿಲಿಯನ್‌ಗೆ ಮುಟ್ಟಿದೆ. 2023ರಲ್ಲಿ ನೆರೆಯ ಚೀನಾವನ್ನು ಹಿಂದಿಕ್ಕುವ ಲಕ್ಷಣಗಳಿವೆ. ಆದರೂ ಸದ್ಯಕ್ಕೆ ಚೀನಾ ನಂತರ ಅತಿಹೆಚ್ಚು ಜನಸಂಖ್ಯೆ ಹೊತ್ತಿರುವ ದೇಶ ನಮ್ಮದಾಗಿದೆ. ವಿಶ್ವಸಂಸ್ಥೆಯ 2022ರ ವರದಿಯ ಪ್ರಕಾರ ಚೀನಾದ ಜನಸಂಖ್ಯೆ 1,426 ಮಿಲಿಯನ್‌ನಷ್ಟಿದೆ. ಭಾರತದ ಜನಸಂಖ್ಯೆ 2021ರ ಅಂಕಿ-ಅಂಶಕ್ಕಿಂತ 2022ರಲ್ಲಿ ಶೇ.0.68ರಷ್ಟು ಹೆಚ್ಚಾಗುವ ನಿರೀಕ್ಷೆ ಇಡಲಾಗಿದೆ. ಜನಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಲೇ ಇದೆ. ಇದರೊಂದಿಗೆ ಪ್ರತಿದಿನ, ಪ್ರತಿವರ್ಷ ‘ಆಹಾರದ ಬೇಡಿಕೆ’ ಹೆಚ್ಚುತ್ತಲೇ ಇದೆ. ಹಾಗೆಯೇ ಉದ್ಯೋಗ ಅರಸುವ ಯುವಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.

1947ರಲ್ಲಿ ನಮ್ಮ ದೇಶ ಸ್ವತಂತ್ರಗೊಂಡಾಗ ಮತ್ತು ಜನಸಂಖ್ಯೆ 340 ಮಿಲಿಯನ್ ಇದ್ದಾಗ ಜೀವಿತಾವಧಿ ಸರಾಸರಿ 32 ವರ್ಷಗಳಷ್ಟಿತ್ತು. ಇದೀಗ ಜೀವಿತಾವಧಿ 70 ವರ್ಷಗಳಿಗೆ ಮುಟ್ಟಿದೆ. ಆಹಾರ-ಧಾನ್ಯಗಳ ವಿಚಾರದಲ್ಲೂ ಬಹುಮಟ್ಟಿಗೆ ‘ಸ್ವಾವಲಂಬನೆ’ಯನ್ನು ಕಾಪಾಡಿಕೊಂಡು ಬಂದಿದ್ದೇವೆ. 1947ರಲ್ಲಿ ನಮ್ಮ ದೇಶ 50 ಮಿಲಿಯನ್ ಟನ್ ಆಹಾರ ಉತ್ಪಾದಿಸುತ್ತಿತ್ತು. ಆದರೀಗ, 5 ಪಟ್ಟು ಹೆಚ್ಚು ಆಹಾರ ಉತ್ಪಾದಿಸುತ್ತಿದೆ. 1950 ಮತ್ತು 1960ರ ದಶಕದಲ್ಲಿ ಭಾರತ ಆಹಾರಕ್ಕಾಗಿ ಅಂತಾರಾಷ್ಟ್ರೀಯ ನೆರವು ಪಡೆಯುತ್ತಿತ್ತು. ಇವತ್ತು ನಾವೀಗ ಆಹಾರ ಧಾನ್ಯಗಳ ನಿವ್ವಳ ರಫ್ತುದಾರರಾಗಿದ್ದೇವೆ.

ಹಸಿರು ಕ್ರಾಂತಿಯ ನಂತರ 1960ರ ದಶಕದಲ್ಲಿ ಸುಗ್ಗಿಯನ್ನು ಕಾಣಲಾಗಿತ್ತು. ಫಸಲಿನ ಹೆಚ್ಚಳದಿಂದ ‘ಹಸಿವಿನ ಸಮಸ್ಯೆ’ ನೀಗಿತೆಂದು ಭಾವಿಸಲಾಗಿತ್ತು. ಆದರೆ ಲಕ್ಷಾಂತರ ಸಂಖ್ಯೆಯಲ್ಲಿ ಹಸಿದ ಜನರ ಏರಿಕೆ ಮತ್ತು ಆಹಾರ ಧಾನ್ಯಗಳ ತುರ್ತು ಸಂಗ್ರಹಗಳ ಮಧ್ಯೆ ಅಸಮತೋಲನ ಸೃಷ್ಟಿಯಾಗಿದ್ದರಿಂದ ‘ನೀತಿ ನಿರೂಪಣೆ’ಯಲ್ಲಿ ಎಡವಲಾಗಿದೆ.

1950ರಲ್ಲಿ ದೇಶದ ಒಟ್ಟು ಆಹಾರ ಉತ್ಪಾದನೆ 54.92 ಮಿಲಿಯನ್ ಟನ್‌ಗಳಷ್ಟಿತ್ತು. ಕಳೆದ ವರ್ಷದ ಪಿ.ಐ.ಬಿ.ಯ ಮಾಹಿತಿಯ ಪ್ರಕಾರ ದೇಶದ ಆಹಾರ ಉತ್ಪಾದನೆ 314.52 ಮಿಲಿಯನ್ ಟನ್‌ಗಳಷ್ಟಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. 2021-22ರಲ್ಲಿ ದೇಶದ ಆಹಾರ ಉತ್ಪಾದನೆ 23.80 ಮಿಲಿಯನ್ ಟನ್‌ಗಳಷ್ಟು ಹೆಚ್ಚಾಗಿದೆ. ಇದು ಕಳೆದ 5 ವರ್ಷಗಳು ಅಂದರೆ 2016-17ರಿಂದ 2022-21ರ ಸರಾಸರಿ ಉತ್ಪಾದನೆಗಿಂತ ಹೆಚ್ಚಾಗಿದೆ. ಇಂತಹ ಆಹಾರ ಉತ್ಪಾದನೆಯಲ್ಲಿ ಅಕ್ಕಿ-ಬೇಳೆ-ಜೋಳ-ಎಣ್ಣೆಕಾಳು-ಸಾಸಿವೆ-ಕಬ್ಬು ಸೇರಿವೆ. ನಿಜಕ್ಕೂ ಇದೊಂದು ಪ್ರಮುಖ ಸಾಧನೆ ಎನ್ನಬಹುದು.

ದೇಶದ ಆರ್ಥಿಕ ಬೆಳವಣಿಗೆ ಸೂಚ್ಯಂಕಗಳು ಏಣಿಯ ಮೇಲೆ ವೇಗವಾಗಿ ಏರಿರಬಹುದು. ಆದರೆ ‘ಸಾಮಾಜಿಕ ಜೀವನ ಸೂಚಕಗಳ ಪ್ರಮಾಣ’ದಲ್ಲಿ ಹಿಂದೆ ಬಿದ್ದಿದ್ದೇವೆ. ಹಲವು ದೇಶಗಳೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಆರ್ಥಿಕ ಬೆಳವಣಿಗೆಯಲ್ಲಿ ನಾವು ಮುಂದೆ ಇದ್ದಂತೆ ಕಂಡರೂ, ಬಡತನ ಮತ್ತು ತಾರತಮ್ಯದೊಂದಿಗೆ ಬಡಿದಾಟ ಮಾಡಲೇಬೇಕಿದೆ. 19ನೇ ಶತಮಾನದಲ್ಲಿ ಎದುರಿಸುತ್ತಿದ್ದ ಹಸಿವಿನ ಸಮಸ್ಯೆ, ಭ್ರಷ್ಟಾಚಾರದ ಸಮಸ್ಯೆ, ಅನಕ್ಷರತೆಯ ಸಮಸ್ಯೆ, ಶೌಚಾಲಯದ ಸಮಸ್ಯೆ ಇಂದಿಗೂ ಇದೆ. ಇದರೊಂದಿಗೆಯೇ ಬಾಹ್ಯಾಕಾಶ ಸಂಶೋಧನೆಯಲ್ಲೂ ತೊಡಗಿಸಿಕೊಂಡಿದ್ದೇವೆ.

‘ಜಾಗತಿಕ ಹಸಿವಿನ ಸೂಚ್ಯಂಕ’ ನಾಲ್ಕು ಸೂಚಕಗಳನ್ನು ಬಳಸಿಕೊಂಡು ದೇಶವನ್ನು ಕಾಡುತ್ತಿರುವ ‘ಹಸಿವು ಮತ್ತು ಅಪೌಷ್ಟಿಕತೆ’ಯನ್ನು ಅಳೆಯುತ್ತದೆ. ಅವು ಅಪೌಷ್ಟಿಕತೆ, ಮಕ್ಕಳ ತೂಕದ ಕ್ಷೀಣತೆ (ವಯಸ್ಸಿಗೆ ತಕ್ಕಂತೆ ದಪ್ಪ ಇಲ್ಲದಿರುವಿಕೆ), ಮಕ್ಕಳ ಕುಂಠಿತ ಬೆಳವಣಿಗೆ (ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವಿಕೆ) ಮತ್ತು ಮಕ್ಕಳ ಮರಣ ಪ್ರಮಾಣ (5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ) ನಾಲ್ಕು ಸೂಚಕಗಳಾಗಿವೆ.

ಇವು ನಾಲ್ಕು ಸೂಚಕಗಳ ಆಧಾರದ ಮೇಲೆ ಜಾಗತಿಕ ಹಸಿವು ಸೂಚ್ಯಂಕ 100 ಪಾಯಿಂಟ್‌ಗಳ ಸ್ಕೇಲ್‌ನಲ್ಲಿ ಹಸಿವನ್ನು ನಿರ್ಧರಿಸುತ್ತದೆ. ಶೂನ್ಯವಿದ್ದಲ್ಲಿ ಹಸಿವಿನ ಸಂಕಟ ಇರುವುದಿಲ್ಲ. 100ರ ಅಂಕ ಹದಗೆಟ್ಟ ಪರಿಸ್ಥಿತಿಯನ್ನು ಅನಾವರಣಗೊಳಿಸುತ್ತದೆ. 2020ರಲ್ಲಿ ನಾವು 94ನೇ ಸ್ಥಾನದಲ್ಲಿದ್ದೆವು. ಶೇ.38.8ರಷ್ಟು ಅಂಕ ಕೊಡಲಾಗಿತ್ತು. ಇದೇ ಭೀತಿ ಹುಟ್ಟಿಸಿತ್ತು. 2021ರಲ್ಲಿ 116 ದೇಶಗಳ ಪಟ್ಟಿಯಲ್ಲಿ ನಮ್ಮದು 101ನೇ ಸ್ಥಾನ; ಶೇ.27.5ಕ್ಕೆ ಇಳಿಯುವ ಮೂಲಕ ‘ಗಂಭೀರ’ವಾದ ಸ್ಥಾನ ಅಲಂಕರಿಸಿದ್ದೇವೆ.

1947ರಲ್ಲಿ ಕೃಷಿಯು ದೇಶದ ನಿವ್ವಳ ದೇಶಿಯ ಉತ್ಪನ್ನದಲ್ಲಿ ಶೇ.54ರಷ್ಟಿತ್ತು. 2020ರಲ್ಲಿ ಇದು ಶೇ.13ಕ್ಕೆ ತಲುಪಿದೆ. ಸ್ವಾತಂತ್ರ್ಯ ಗಳಿಸಿದ ಹೊತ್ತಿನಲ್ಲಿ ನಮ್ಮ ದೇಶದ ಶೇ.60ರಷ್ಟು ಜನ ಜೀವನೋಪಾಯಕ್ಕೆ ಕೃಷಿಯನ್ನು ಅವಲಂಬಿಸಿದರು. 2020ರಲ್ಲಿ ಇದು ಶೇ.52ಕ್ಕೆ ತಲುಪಿತು.

ಇದನ್ನೂ ಓದಿ: ಸಾಧ್ವಿಯ ಬಾಯಲ್ಲಿ ಹಿಂಸೆಯ ಮಾತು!

ಸಾಕ್ಷರತೆಯ ಮಟ್ಟ ಶೇ.74ರಷ್ಟಾಗಿದೆ. 1.34 ಬಿಲಿಯನ್‌ನಲ್ಲಿ ಸುಮಾರು 1 ಬಿಲಿಯನ್ ಜನ ಅಕ್ಷರಸ್ಥರಾಗಿದ್ದಾರೆ. ಇವನ್ನು ಕಂಡಾಗ ನಮ್ಮದು ದೊಡ್ಡ ಸಾಧನೆಯಾಗಿ ಕಾಣುತ್ತದೆ. 1949ರಲ್ಲಿ ಚೀನಾದ ಜನಸಂಖ್ಯೆ 540 ಮಿಲಿಯನ್‌ನಷ್ಟಿತ್ತು. ಸಾಕ್ಷರತೆಯ ದರ ಶೇ.20ರಷ್ಟಿತ್ತು. ಅಂದರೆ 104 ಮಿಲಿಯನ್ ಜನ ಅಕ್ಷರಸ್ಥರಾಗಿದ್ದರು. 2020ರಲ್ಲಿ ಇದೇ ಚೀನಾದ ಜನಸಂಖ್ಯೆ ಕೂಡ 1.34 ಶತಕೋಟಿಯಷ್ಟಿದೆ. ಸಾಕ್ಷರತೆಯ ದರ ಶೇಕಡ 85ರಷ್ಟಿತ್ತು. ಅಂದರೆ 1.14 ಶತಕೋಟಿ ಜನ ಅಕ್ಷರಸ್ಥರಾಗಿದ್ದಾರೆ.

ಉತ್ಪಾದನಾ ವಲಯ ‘ದೇಶಿಯ ಉತ್ಪನ್ನ’ಕ್ಕೆ ನೀಡುತ್ತಿರುವ ಪಾಲು ಶೇ.15ರಿಂದ 16ರಷ್ಟು ಮಾತ್ರ. ಉದ್ಯೋಗದ ಬೆಳವಣಿಗೆ ಸಾಕಷ್ಟು ಪ್ರಮಾಣದಲ್ಲಿ ಆಗದಿರುವುದರಿಂದ ‘ಕಾರ್ಮಿಕ ವರ್ಗ’ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ನಿರುದ್ಯೋಗದ ಬೆಳವಣಿಗೆ ವೇಗವಾಗಿ ಓಡುತ್ತಿದೆ. ಅಂದಾಜು 1.4 ಮಿಲಿಯನ್ ಜನರಿಗೆ ಉದ್ಯೋಗ ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ. ಈ ಮಟ್ಟದ ನಿರುದ್ಯೋಗ ಕಳೆದ 45 ವರ್ಷಗಳಲ್ಲಿ ಇರಲಿಲ್ಲ. ನಿರುದ್ಯೋಗದ ದರ ಶೇ.6.2ರಷ್ಟಿದೆ; ದುಡಿಯುವ ಶೇ.80ರಷ್ಟು ಜನ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಇವರು ಸಾಮರ್ಥ್ಯಕ್ಕೆ ತಕ್ಕಂತೆ ಅಂದರೆ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗವನ್ನು ಪಡೆಯಲು ಆಗಿರುವುದಿಲ್ಲ. ಇದಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳಲ್ಲಿ ‘ಕೌಶಲ್ಯ ವಿಕಾಸ ಯೋಜನೆ’, ‘ನರೇಗಾ ಯೋಜನೆ’, ‘ಗರೀಭ್ ಕಲ್ಯಾಣ ಯೋಜನೆ’ಗಳು ಪ್ರಮುಖವಾಗಿವೆ. ಸಾಂಕ್ರಾಮಿಕ ಸಂದರ್ಭದಲ್ಲಿ ಇವು ಜನರ ಕೈಹಿಡಿಯಿತು.

ಇಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸದಿದ್ದಲ್ಲಿ ಲೇಖನ ಅಪೂರ್ಣಗೊಳ್ಳುತ್ತದೆ. ಲಂಚ ಕೊಡುವವನು ಮತ್ತು ಲಂಚ ಪಡೆಯುವವನು ಒಗ್ಗೂಡುವುದರಿಂದ ‘ಸಮಾಜ’ ಬಲಿಪಶುವಾಗುತ್ತದೆ ಎಂಬುದನ್ನು ಮರೆಯಬಾರದು. ‘ಭ್ರಷ್ಟಾಚಾರ’ದ ಹರಡುವಿಕೆಯಿಂದ ಅಭಿವೃದ್ಧಿಗೆ ಅಡಚಣೆಯಾಗಿದೆ.

ಇತ್ತೀಚೆಗೆ ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರು, ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಕುಮಾರ್ ಕೆ.ಎಚ್ ಅವರು ಯೋಜನೆಗಳು ಭ್ರಷ್ಟರ ಪಾಲಾಗುತ್ತಿವೆ. ಪ್ರಾಮಾಣಿಕ ಸಂಘಗಳಿಗೆ 2 ಲಕ್ಷ ಧನ ಸಹಾಯ ನೀಡಲಾಗುತ್ತಿದೆ. ಕೆಲವು ಬಾರಿ ವ್ಯಕ್ತಿಗತವಾಗಿ ಮತ್ತು ಮಠ ಮಾನ್ಯಗಳಿಗೆ ಕೋಟ್ಯಂತರ ರೂಪಾಯಿ ನೀಡಲಾಗುತ್ತಿದೆ. ಕಲಾವಿದರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲವೆಂದು ದೂರಿದ್ದರು.

ನಮ್ಮಲ್ಲಿ ಭ್ರಷ್ಟಾಚಾರ ಜೀವನದ ಭಾಗವಾಗಿ ಹೋಗಿಬಿಟ್ಟಿದೆ. ‘ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ’ವನ್ನು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಬಿಡುಗಡೆಗೊಳಿಸಿದೆ. ಇದಕ್ಕಾಗಿ 180 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಅಧ್ಯಯನ ಮಾಡಿ, ಸೊನ್ನೆಯಿಂದ 100ರ ಪ್ರಮಾಣವನ್ನು ಬಳಸಿದೆ. ಇಲ್ಲಿ ಸೊನ್ನೆ ಹೆಚ್ಚು ಭ್ರಷ್ಟವಾಗಿದೆ; 100 ಅತ್ಯಂತ ಸ್ವಚ್ಛವಾಗಿದೆ.

2021ರಲ್ಲಿ ‘ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ’ ನಮ್ಮ ದೇಶಕ್ಕೆ 40 ಅಂಕಗಳ ಪ್ರಶಸ್ತಿಯನ್ನು ನೀಡಿದೆ. ಜೊತೆಗೆ 180 ದೇಶಗಳ ಪಟ್ಟಿಯಲ್ಲಿ 85ನೇ ಸ್ಥಾನವನ್ನು ನೀಡಿದೆ. 2000ನೇ ಇಸವಿಯಲ್ಲಿ 86ನೇ ಸ್ಥಾನ, 2019ರಲ್ಲಿ 80ನೇ ಸ್ಥಾನ ಪಡೆಯಲಾಗಿತ್ತು.

ಇನ್ನೂ ಸೋಜಿಗ ಎಂದರೆ, ನಮ್ಮ ದೇಶದಿಂದ ವಿದೇಶಕ್ಕೆ ತೆರಳುವವರ ಸಂಖ್ಯೆ ದೊಡ್ಡದಿದೆ. ಹೀಗೆ ಹೋಗಿ ದುಡಿಯುವವರೇ ವಿದೇಶಿ ವಿನಿಮಯ ವಾರ್ಷಿಕ ಆದಾಯದ ಮೂಲವಾಗಿದ್ದಾರೆ. 2021ರಲ್ಲಿ ವಿದೇಶಿ ಮೊಬಲಗು ರವಾನೆ ಮೊತ್ತದಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ಇದು ಅಮೆರಿಕನ್ ಡಾಲರ್‌ನಲ್ಲಿ 89 ಬಿಲಿಯನ್‌ನಷ್ಟಾಗುತ್ತದೆ. 1947ರಲ್ಲಿ ಅಮೆರಿಕದ 1 ಡಾಲರ್‌ಗೆ 3.30ರಷ್ಟಿತ್ತು. 1980ರವರೆಗೆ 1 ಡಾಲರ್‌ಗೆ 7.86 ರೂ.ಗಳಷ್ಟಿತ್ತು. 2021ರ ಆಗಸ್ಟ್‌ನಲ್ಲಿ 1 ಡಾಲರ್‌ಗೆ ರೂ. 74ರಷ್ಟಾಯಿತು. 2022ರ ಜುಲೈನಲ್ಲಿ 1 ಡಾಲರ್‌ಗೆ 80 ರೂಪಾಯಿ ಆಯಿತು. ಇದೀಗ 1 ಡಾಲರ್‌ಗೆ 82.39ರಷ್ಟಿದೆ.

ಜನಸಂಖ್ಯೆಯ ಬೆಳವಣಿಗೆ, ನಿರುದ್ಯೋಗ ಹೆಚ್ಚಳ, ಆಮದು ಹೆಚ್ಚಳ, ವ್ಯಾಪಾರದ ಕೊರತೆ, ನಿಧಾನಗತಿಯ ಉತ್ಪಾದನೆ, ದೇಶಿಯ ಹಣದುಬ್ಬರ, ಪರೋಕ್ಷ ತೆರಿಗೆಯ ಹೆಚ್ಚಿನ ದರಗಳು, ಕ್ಷೀಣಿಸುತ್ತಿರುವ ರೂಪಾಯಿ ಮೌಲ್ಯ ದೇಶದ ಅಭಿವೃದ್ಧಿಯನ್ನು ಕಾಡುತ್ತಿರುವ ಸವಾಲಿನ ಕ್ಷೇತ್ರಗಳಾಗಿವೆ. ವಿದ್ಯುತ್ ಉತ್ಪಾದನೆ ಮತ್ತು ವಿತರಣೆ, ನಗರೀಕರಣ, ವಸತಿ ಮತ್ತು ಗ್ರಾಮೀಣಾಭಿವೃದ್ಧಿಯನ್ನು ಉತ್ತಮಪಡಿಸುವತ್ತ ಸರ್ಕಾರಗಳು ಗಮನಕೊಟ್ಟಿರುವುದನ್ನು ಮರೆಯಲಾಗದು.

ಕೇಂದ್ರ ವಿದ್ಯುತ್ ಸಚಿವಾಲಯದ ಪ್ರಕಾರ 1950ರಲ್ಲಿ 3061 ಹಳ್ಳಿಗಳು ಮಾತ್ರ ವಿದ್ಯುತ್ ಸಂಪರ್ಕ ಹೊಂದಿದ್ದವು. 2018ರಲ್ಲಿ 5 ಲಕ್ಷ 97 ಸಾವಿರದ 464 ಹಳ್ಳಿಗಳು ಬೆಳಕಿನ ಭಾಗ್ಯ ಕಂಡಿವೆ ಎಂದು ಘೋಷಿಸಲಾಗಿದೆ. ಆದರೂ, ಲಕ್ಷಾಂತರ ಜನ ವಿದ್ಯುತ್ ಇಲ್ಲದೆಯೇ ಬದುಕುತ್ತಿದ್ದಾರೆ. ಅದರಲ್ಲೂ ವೋಲ್ಟೇಜಿನ ಸಮಸ್ಯೆ ಮತ್ತು ಸತತ ಟ್ರಿಪ್ ಆಗುವುದರಿಂದ ಗ್ರಾಮೀಣ ಪ್ರದೇಶದ ಜನರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇದರೊಂದಿಗೆ ಬಡತನ, ಅಜ್ಞಾನ, ಮೂಢನಂಬಿಕೆ, ರೋಗ ಮತ್ತು ಅಸಮಾನತೆ ತೊಡೆದು ಹಾಕಲು ಗಂಭೀರ ಪ್ರಯತ್ನ ಮಾಡಬೇಕಿದೆ. ಇಲ್ಲದಿದ್ದಲ್ಲಿ ಸಮಸ್ಯೆಗಳ ಬಲೆಯಲ್ಲಿಯೇ ನಾವುಗಳು ಜೀವಿಸಬೇಕಾಗುತ್ತದೆ.

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ ಪುಸ್ತಕಗಳು ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...

ಕಾಂಗ್ರೆಸ್ ಜೊತೆ ವಿಲೀನ? ಅದೆಲ್ಲ ಬರೀ ಸುಳ್ಳು ಎಂದ ಟಿಎಂಸಿ

ಕಾಂಗ್ರೆಸ್ ಪಕ್ಷದೊಂದಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿಲೀನವಾಗಬಹುದು ಎಂಬ ವರದಿಗಳನ್ನು ಟಿಎಂಸಿ ಉನ್ನತ ಮೂಲಗಳು ಬುಧವಾರ (ಇಂದು) ಸಂಪೂರ್ಣವಾಗಿ ತಳ್ಳಿಹಾಕಿವೆ. "ನಮ್ಮ ಪಕ್ಷಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಮತ್ತು ವಿಲೀನಕ್ಕೆ...

ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಬಿಜೆಪಿಯ ಸೀಟ್ ಚೋರಿ?

ರಾಜ್ಯಸಭಾ ಚುನಾವಣೆಗೆ ಮಧ್ಯಪ್ರದೇಶದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿರುವುದು ದೇಶದಲ್ಲಿ ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಬುಧವಾರ (ಜೂ. 10)...

ಒಳಮೀಸಲಾತಿ ನಾಡು ಕಂಡ ಸುದೀರ್ಘ ಹೋರಾಟದ ಕಥೆ

ಇದು ಬೆವರು ನಿಟ್ಟುಸಿರುಗಳ ಚಳವಳಿ. ತಮ್ಮ ಅನ್ನದ ಬಟ್ಟಲಿಗಾಗಿ ದಶಕಗಳ ಕಾಲ ಹಸಿವು, ಬಾಯಾರಿಕೆ, ನಿದ್ರೆ ಎಲ್ಲವನ್ನೂ ಬಿಟ್ಟು ನಡೆಸಿದ ಅಭೂತಪೂರ್ವ ಚಳವಳಿ. ರಾಜಕೀಯ ಚಕ್ರವ್ಯೂಹಗಳನ್ನು ಬೇಧಿಸಿ, ಸಾಂವಿಧಾನಿಕ ಹಕ್ಕನ್ನು ತಮ್ಮದಾಗಿಸಿಕೊಂಡ ಚಳವಳಿ....

‘ಗೋಮಾಂಸ’ ತಂದ ನೆಪ: ಅಸ್ಸಾಂನಲ್ಲಿ ಐವರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಕ್ರಮ; ಸುಳ್ಳು ಪ್ರಕರಣದಡಿ ಒಂಟಿ ತಾಯಿ ಮತ್ತು ಅಪ್ರಾಪ್ತ ಮಗನ ಬಂಧನ

ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಹೆಸರಿನಲ್ಲಿ ಶಾಲಾ ಆವರಣಗಳೂ ಸಹ ಕೋಮು ರಾಜಕಾರಣದ ಪ್ರಯೋಗಶಾಲೆಗಳಾಗುತ್ತಿರುವುದಕ್ಕೆ ಅಸ್ಸಾಂನಿಂದ ಮತ್ತೊಂದು ಆಘಾತಕಾರಿ ಘಟನೆ ವರದಿಯಾಗಿದೆ. ಅಸ್ಸಾಂನ ಗೋಲ್‌ಪಾರ ಜಿಲ್ಲೆಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯೊಂದರಲ್ಲಿ ಮುಸ್ಲಿಂ...

ಪ್ರಧಾನಿ ನರೇಂದ್ರ ಮೋದಿಯ 12 ವರ್ಷದ ಸಾಧನೆ ಏನು? ಅವರು ಮುರಿದ ದಾಖಲೆಯಾದರೂ ಯಾವುದು?

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014ರಿಂದ ಸತತ 12ವರ್ಷಗಳು (4,399 ದಿನಗಳು) ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ...

ಉತ್ತರಾಖಂಡ: ಮೇಲ್ಜಾತಿ ಯುವತಿ ಜೊತೆ ಸ್ನೇಹ ಬೆಳೆಸಿದ 18 ವರ್ಷದ ದಲಿತ ಯುವಕನ ಹತ್ಯೆ, ಸ್ನೇಹಿತನ ಮೇಲೂ ಮಾರಣಾಂತಿಕ ಹಲ್ಲೆ 

ದೇಶದಲ್ಲಿ ಜಾತಿ ವ್ಯವಸ್ಥೆಯ ಕರಾಳ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ಉತ್ತರಾಖಂಡದ ನ್ಯೂ ತೆಹ್ರಿ ಜಿಲ್ಲೆಯ ಪ್ರತಾಪ್ ನಗರ ಬ್ಲಾಕ್ ವ್ಯಾಪ್ತಿಯಲ್ಲಿ ಮೇಲ್ಜಾತಿಯ ಅಪ್ರಾಪ್ತ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ 18 ವರ್ಷದ ದಲಿತ ಹದಿಹರೆಯದ...