ಖ್ಯಾತ ನ್ಯಾಯಮೂರ್ತಿಗಳಾದ ಮುರಳೀಧರ್ರವರನ್ನು ಬಿಜೆಪಿ ಬೆಂಬಲಿಗರಾದ ಗುರುಸ್ವಾಮಿ ಮತ್ತು ವಿವೇಕ್ ಅಗ್ನಿಹೋತ್ರಿಯವರು ದೇಶದ್ರೋಹಿಗಳ ಪರ ಇರುವವರು ಎಂದೆಲ್ಲಾ ಕರೆದು ಅವಮಾನ ಮಾಡಿದ್ದರು. ಆದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಏಕೆ ಪರಿಗಣಿಸಿಲ್ಲ ಎಂದು ಚಿಂತಕ ಶಿವಸುಂದರ್ ಪ್ರಶ್ನಿಸಿದ್ದಾರೆ.
ದೆಹಲಿ ಚುನಾವಣೆಯ ಸಂದರ್ಭದಲ್ಲಿ ಮತ್ತು ದೆಹಲಿ ಕೋಮುಗಲಭೆಗಳಲ್ಲಿ ಹಲವು ಬಿಜೆಪಿ ಮುಖಂಡರು ಬಹಿರಂಗವಾಗಿ ಕೋಮು ಪ್ರಚೋದಿತ ಹೇಳಿಕೆ ನೀಡಿದ್ದರು. ಆ ನಂತರ ಬಿಜೆಪಿಯ ನಾಯಕರ ಮೇಲೆ FIR ಹಾಕಲು ಕೂಡ ದೆಹಲಿ ಪೋಲೀಸರು ನಿರಾಕರಿಸಿದ್ದರು. ಆಗ ದೆಹಲಿ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಕೂಡಲೇ ಅವರ ಮೇಲೆ FIR ದಾಖಲಿಸಬೇಕೆಂದು ಆದೇಶಿಸಿದ್ದು ನ್ಯಾಯಮೂರ್ತಿ ಮುರಳೀಧರ್. ಆ ಅಪರಾಧಕ್ಕಾಗಿ ಮೋದಿ ಸರ್ಕಾರದ “ಸಲಹೆ ಮೇರೆಗೆ” ಅವರನ್ನು ರಾತ್ರೋರಾತ್ರಿ ಪಂಜಾಬ್-ಹರ್ಯಾಣ ಹೈಕೋರ್ಟಿಗೆ ವರ್ಗಾವಣೆ ಮಾಡಲಾಯಿತು ಎಂದು ಶಿವಸುಂದರ್ ತಿಳಿಸಿದ್ದಾರೆ.
ನ್ಯಾಯಮೂರ್ತಿ ಮುರಳೀಧರ್ ಕಾಂಗ್ರೆಸ್ ಒಲವಿದ್ದವರೇನಲ್ಲ. ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಗೆ ಕಠಿಣ ಶಿಕ್ಷೆಯನ್ನು ವಿಧಿಸಿದ್ದು ಕೂಡ ಇದೇ ನ್ಯಾಯಮೂರ್ತಿಗಳೇ… ತೃತೀಯ ಲಿಂಗಿಗಳ ಹಕ್ಕುಗಳನ್ನು ಎತ್ತಿಹಿಡಿದವರು ಹಾಗು ಮುಖ್ಯ ನ್ಯಾಯಮೂರ್ತಿಗಳ ಕಚೇರಿಯು RTI ಅಡಿ ತರಬೇಕೆಂದು ಆದೇಶಿಸಿದವರು, ಪಂಜಾಬ್ ಹೈಕೋರ್ಟಿನಲ್ಲಿ ವಕೀಲರು ತಮ್ಮನ್ನು “ಮೈ ಲಾರ್ಡ್” ಎಂದು ಸಂಬೋಧಿಸಬಾರದೆಂದು ವಿನಂತಿ ಮಾಡಿ ನ್ಯಾಯಾಂಗದಲ್ಲಿ ಮುಂದುವರೆದಿದ್ದ ವಸಾಹತುಶಾಹಿ ಪರಂಪರೆಯನ್ನು ನಿಲ್ಲಿಸಿದವರು….ಇದೇ ನ್ಯಾಯಮೂರ್ತಿಗಳೇ ಎಂದು ಶಿವಸುಂದರ್ ತಿಳಿಸಿದ್ದಾರೆ.
ಇಂಥಾ ನ್ಯಾಯನಿಷ್ಠುರ ನ್ಯಾಯಮೂರ್ತಿಯ ಮೇಲೆ- ಸಂಘಪರಿವಾರದ ಥಿಂಕ್ ಟ್ಯಾಂಕ್ನ ಸದಸ್ಯ ಹಾಗು “ತುಘಲಕ್ ” ಪತ್ರಿಕೆ ಸಂಪಾದಕ ಹಾಗು ಮೋದಿ ಸರ್ಕಾರ ಬಂದಮೇಲೆ RBI ನ ನಿರ್ದೇಶಕನಾಗಿಯೂ ನೇಮಕವಾಗಿರುವ- ಗುರುಸ್ವಾಮಿಯವರು ನ್ಯಾಯಮೂರ್ತಿ ಮುರಳೀಧರ ಅವರು “ದೇಶದ್ರೋಹಿ ಶಕ್ತಿಗಳ ಪರವಾಗಿರುವವರು” ಎಂಬರ್ಥದ ಟ್ವೀಟ್ ಮಾಡಿದ್ದರು.
ಗುರುಸ್ವಾಮಿ ಮಾತ್ರವಲ್ಲದೆ , “ಅರ್ಬನ್ ಸಂಘಿ” ಹಾಗೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಯಂತವರು ನೇರವಾಗಿ ನ್ಯಾಯಮೂರ್ತಿ ಅವರ ಮುರಳೀಧರ್ ಅವರ ಚಾರಿತ್ರ್ಯ ಹನನ ಮಾಡಲು ತೊಡಗಿದ್ದರು. ಆದರೆ ಸುಪ್ರೀಂ ಕೋರ್ಟ್ ಆಗಲಿ, ದೆಹಲಿ ಹೈಕೋರ್ಟು ಆಗಲಿ, ಪ್ರಶಾಂತ್ ಭೂಷಣ್ ಪ್ರಕರಣದಲ್ಲಿ ಮಾಡಿದಂತೆ ಗುರುಸ್ವಾಮಿಯ ವಿರುದ್ಧ ಸ್ವಯಂ ಪ್ರೇರಿತ ದೂರನ್ನೇನೂ ದಾಖಲಿಸಿಕೊಳ್ಳಲಿಲ್ಲ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಬದಲಿಗೆ ರಾಜಶೇಖರ ರಾವ್ ಎಂಬ ವಕೀಲರು ಹೈಕೋರ್ಟಿನಲ್ಲಿ ಈ ಬಗ್ಗೆ ದೂರು ದಾಖಲಿಸಿದ ನಂತರ ಗುರುಸ್ವಾಮಿಯವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಯಿತು. ಗುರುಸ್ವಾಮಿಯವರು ಆ ನೋಟೀಸನ್ನು ಹಾಗೂ “ನ್ಯಾಯಾಂಗ ನಿಂದನೆ” ಯನ್ನು ಶಿಕ್ಷಿಸುವ ಕ್ರಮವನ್ನು ಕೂಡ ಕೂಡ ಗೇಲಿ ಮಾಡುತ್ತಾ ಮತ್ತೊಂದು ಟ್ವೀಟ್ ಮಾಡಿದರು. ಇಷ್ಟಾದರೂ, ಒಂದು ವರ್ಷಗಳ ಕಾಲ ದೆಹಲಿ ಹೈಕೋರ್ಟು ಯಾವ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಶಿವಸುಂದರ್ ತಿಳಿಸಿದ್ದಾರೆ.
ಒಂದು ವರ್ಷದ ನಂತರ ಗುರುಸ್ವಾಮಿಯವರು ತನ್ನ ಟ್ವೀಟಿನ ಬಗ್ಗೆ ಯಾವ ಪಶ್ಚಾತ್ತಾಪವನ್ನು ವ್ಯಕ್ತಪಡಿಸಡಿದ್ದರೂ… ಕೇವಲ ಟ್ವೀಟನ್ನು ವಾಪಸ್ ತೆಗೆದುಕೊಳ್ಳಬೇಕೆಂಬ ಏಕೈಕ ಷರತ್ತಿನ ಮೇಲೆ ಅವರ ಮೇಲಿನ ನ್ಯಾಯಾಂಗ ನಿಂದನೆಯ ಕೇಸನ್ನು ಹೈಕೋರ್ಟ್ ರದ್ದುಮಾಡಿತು! ಇನ್ನು ವಿವೇಕ್ ಅಗ್ನಿಹೋತ್ರಿ ಇನ್ನಿತರರ ಮೇಲೆ ತಾನೇ ಕೊಟ್ಟ ನೋಟೀಸು ಏನಾಯಿತೆಂದು ವಿಚಾರಿಸಲು ಸಹ ನ್ಯಾಯಾಲಯ ಇನ್ನೂ ಮನಸ್ಸು ಮಾಡಿಲ್ಲ ಎಂದು ಶಿವಸುಂದರ್ ತಿಳಿಸಿದ್ದಾರೆ.
ಏಕೆಂದರೆ ಗುರುಮೂರ್ತಿ ಹಾಗು ವಿವೇಕ್ ಅಗ್ನಿಹೋತ್ರಿ ಸಂಘಪರಿವಾರದ ಕಣ್ಮಣಿಗಳು… ಆದರೆ, ಪ್ರಶಾಂತ್ ಭೂಷಣ್ ಮೋದಿ ಸರ್ಕಾರಕ್ಕೆ ಹಾಗು ಸಂಘಪರಿವಾರಕ್ಕೆ ಮಗ್ಗಲ ಮುಳ್ಳು.. ಆದ್ದರಿಂದ ಒಂದು ಕಣ್ಣಿಗೆ ಸುಪ್ರೀಂ ಬೆಣ್ಣೆ …ಒಂದು ಕಣ್ಣಿಗೆ ಸುಪ್ರೀಂ ಸುಣ್ಣ .. ಇದು ಸರಿಯೇ, ಯುವರ್ ಆನರ್? ಜಸ್ಟ್ ಆಸ್ಕಿಂಗ್ ಎಂದು ಶಿವಸುಂದರ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ; ಕ್ಷಮೆಯಾಚಿಸುವುದಿಲ್ಲ, ಖುಷಿಯಿಂದ ಶಿಕ್ಷೆ ಸ್ವೀಕರಿಸುತ್ತೇನೆ: ಪ್ರಶಾಂತ್ ಭೂಷಣ್