ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ, ನಾಡಗೀತೆಯ ತಿರುಚಿ ಬರೆದವರ ವಿರುದ್ಧ ಸರ್ಕಾರ ತಡಮಾಡದೆ ಕ್ರಮಕೈಗೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಆಗ್ರಹಿಸಿದೆ.
ಕಸಾಪ ಅಧ್ಯಕ್ಷರಾದ ಡಾ.ಮಹೇಶ ಜೋಶಿ ಅವರು ಪತ್ರ ಬರೆದಿದ್ದು, “ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳ ಬಗ್ಗೆ ಹಾಗೂ ನಾಡಗೀತೆಯನ್ನು ತಿರುಚಿ ಬರೆದಿರುವ ಕುರಿತು ದಿನಪತ್ರಿಕೆಗಳಲ್ಲಿ ಓದುವ, ಹೀನಾಯ ಸ್ಥಿತಿ ತಲುಪಿರುವುದಕ್ಕೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅತ್ಯಂತ ಖೇದ ಹಾಗೂ ಬೇಸರದ ಸಂಗತಿಯಾಗಿದೆ” ಎಂದು ವಿಷಾದಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಸಾಪ ಅಧ್ಯಕ್ಷರಾದ ಮಹೇಶ ಜೋಶಿ ಅವರ ಪತ್ರದ ಪೂರ್ಣ ಪಠ್ಯ ಇಲ್ಲಿದೆ:
ಜಗದ ಕವಿ, ಯುಗದ ಕವಿ, ನಾಡು ಕಂಡ ಅಪ್ರತಿಮ ಮಹಾಕವಿ, ದಾರ್ಶನಿಕ, ರಸಋಷಿ ಕುವೆಂಪು ಅವರಿಗೆ ಅತ್ಯಂತ ಗೌರವ ಸಲ್ಲಿಸುವ ಸಂಸ್ಥೆ ಕರ್ನಾಟಕದಲ್ಲಿ ಯಾವುದಾದರೂ ಇದೇ ಅಂದರೆ, ಅದು ಕನ್ನಡ ಸಾಹಿತ್ಯ ಪರಿಷತ್ತು. ಕುವೆಂಪು ವಿರಚಿತ “ಜಯಭಾರತ ಜನನಿಯ ತನುಜಾತೆ” ಗೀತೆಯನ್ನು “ನಾಡಗೀತೆ” ಮಾಡಬೇಕೆಂದು ಮೊದಲ ಅಳವಡಿಸಿಕೊಂಡಿದ್ದು ಸಾಹಿತ್ಯ ಪರಿಷತ್ತು. 1971ರಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಮ್ಮತಿ ಪಡೆದು ಪರಿಷತ್ತು ನಾಡಗೀತೆಯನ್ನು ತನ್ನ ಎಲ್ಲ ಕಾರ್ಯಕ್ರಮಗಳಲ್ಲೂ ಹಾಡಿಸಲಾಗುತ್ತಿತ್ತು.
ಇದನ್ನೂ ಓದಿರಿ: ಸಮಾಜ ವಿಜ್ಞಾನ: ‘ಅಂಬೇಡ್ಕರ್’ ಪಠ್ಯದಲ್ಲಿ ಕತ್ತರಿ ಪ್ರಯೋಗ ಮಾಡಿದ ‘ಚಕ್ರತೀರ್ಥ’ ಸಮಿತಿ
ಈ ಮೂಲಗೀತೆ 1924ರಲ್ಲಿ ರಚನೆಯಾಗಿ, ಇಂದಿಗೆ 98 ವರ್ಷವಾಯಿತು. ಎರಡು ಸಲ ಪರಿಷ್ಕರಣೆಗೊಂಡು ಮೈಸೂರಿನ ಸಂಪದಭ್ಯುದಯ ಪತ್ರಿಕೆಯಲ್ಲಿ ಪ್ರಕಟವಾಯಿತು. ಅನಂತರ ಮತ್ತೆ ಪರಿಷ್ಕರಣೆಗೊಂಡು ಕುವೆಂಪು ಅವರ ಕೊಳಲು ಕವನ ಸಂಕಲನದಲ್ಲಿ ಪ್ರಕಟವಾಯಿತು. ಇದು ಭಾರತದ ಅಖಂಡತೆಯನ್ನೂ, ಭಾವೈಕ್ಯತೆಯನ್ನೂ ಎತ್ತಿ ಹಿಡಿಯುವ ಗೀತೆ. ಭಾರತಾಂತರ್ಗತ ಕರ್ನಾಟಕ, ಕರ್ನಾಟಕಾಂತರ್ಗತ ಭಾರತ ಎಂಬುದನ್ನು ಆವೇಶವಿಲ್ಲದೆ, ಘೋಷಣೆಗಳಿಲ್ಲದೆ ಸಾರುವ ಭಾವನಾತ್ಮಕ ಗೀತೆಯಿದು. ಇಂತಹ ಅಪರೂಪದ ಗೀತೆಯನ್ನು ಪರಿಷತ್ತು ನಾಡಗೀತೆಯಾಗಿ ಆರಿಸಿತು. ಅದರ ಅನಂತರ ಸರ್ಕಾರವೂ ಇದನ್ನೇ ನಾಡಗೀತೆ ಎಂದು ಅಂಗೀಕರಿಸಿ, ಪರಿಷತ್ತಿನ ಆಯ್ಕೆಯನ್ನು ದೃಢಗೊಳಿಸಿ, 6-1-2004ರಂದು ಕರ್ನಾಟಕದ ನಾಡಗೀತೆಯನ್ನಾಗಿ ನಿಗದಿಪಡಿಸಿ ಆದೇಶ ಹೊರಡಿಸಿತು.
ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳ ಬಗ್ಗೆ ಹಾಗೂ ನಾಡಗೀತೆಯನ್ನು ತಿರುಚಿ ಬರೆದಿರುವ ಕುರಿತು ದಿನಪತ್ರಿಕೆಗಳಲ್ಲಿ ಓದುವ, ಹೀನಾಯ ಸ್ಥಿತಿ ತಲುಪಿರುವುದಕ್ಕೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅತ್ಯಂತ ಖೇದ ಹಾಗೂ ಬೇಸರದ ಸಂಗತಿಯಾಗಿದೆ.
“ಮನುಜ ಮತ ವಿಶ್ವಪಥ” ಎಂಬ ಸಂದೇಶದ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ, ಪ್ರಕೃತಿಯಲ್ಲಿ ದೇವರನ್ನು ಕಾಣುವ, ದೇವರಲ್ಲಿ ಪ್ರಕೃತಿಯನ್ನು ಕಾಣುವ ದೈವಿಕ ಸಂಬಂಧಗಳನ್ನು ಪ್ರತಿಪಾದಿಸಿದ ಸರ್ವೋದಯ ತತ್ವಪ್ರತಿಪಾದಕರು ಕುವೆಂಪು ಅವರು. ಸಾಮಾಜಿಕ, ಧಾರ್ಮಿಕ, ಆರ್ಥಿಕ ಅಸಮಾನತೆಯನ್ನು ಮತ್ತು ಲಿಂಗಭೇದವನ್ನು ನಿವಾರಿಸಿಕೊಂಡು ಈ ಜಗತ್ತು “ಸರ್ವಜನಾಂಗದ ಶಾಂತಿಯ ತೋಟ”ವಾಗಬೇಕೆಂದು ಕನಸು ಕಂಡ ಶ್ರೇಷ್ಠ ದಾರ್ಶನಿಕರು. ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಸಾಹಿತ್ಯದ ಮೂಲಕ ಅರ್ಥಗರ್ಭಿತ ಪ್ರಯತ್ನ ಮಾಡಿದ ಮೇರು ಸಾಹಿತಿಗಳು. ಅವರ ಸಾಹಿತ್ಯವನ್ನು ಓದಿದವರ್ಯಾರೂ ಸಹ ಕುವೆಂಪು ಅವರ ಕುರಿತು ಚಕಾರ ಎತ್ತುವ ಧೈರ್ಯವನ್ನು ಮಾಡುವುದಿಲ್ಲ. ಯಾರು ಈ ಮಹಾದಾರ್ಶನಿಕರನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲವೋ, ಅಂಥವರು ಮಾತ್ರ ಅಡ್ಡದಾರಿಯನ್ನು ಹಿಡಿದು, ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡುತ್ತಾರೆ.
ಶ್ರೀರಾಮಕೃಷ್ಣ ಪರಮಹಂಸರ, ಶ್ರೀ ವಿವೇಕಾನಂದರ ಚಿಂತನೆಗಳನ್ನು ಆದರ್ಶವನ್ನಾಗಿಸಿಕೊಂಡು, ಸಾಹಿತ್ಯದಲ್ಲಿ ಆಧ್ಯಾತ್ಮೀಕತೆಯನ್ನು ಸರಳವಾಗಿ, ಎಲ್ಲರೂ ಅರ್ಥ ಮಾಡಿಕೊಳ್ಳುವ ಹಾಗೆ ರಚಿಸಿದ ಮಹಾಕವಿಯ ಕುರಿತು ನಿಂದನೆಯನ್ನು ಮಾಡಿರುವುದು ವೈಯಕ್ತಿಕವಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಖಂಡಿಸುವುದರ ಜೊತೆಗೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದವರ ವಿರುದ್ಧ ಸರ್ಕಾರ ತಡಮಾಡದೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ.
ಕುವೆಂಪು ಅವರ ಪುಸ್ತಕಗಳನ್ನು ಬಹಳ ಗೌರವದಿಂದ, ಭಕ್ತಿಯಿಂದ ಓದುವ ನಾನು, ಅವರ ಪ್ರಕೃತಿ ವರ್ಣನೆಗೆ ಮಾರುಹೋಗುವುದರ ಜೊತೆಗೆ, ಅವರ ಶ್ರೇಷ್ಠ ಚಿಂತನೆಗಳಿಂದ ಪ್ರೇರಿತನಾಗಿ “ಮನುಜ ಮತದಲ್ಲಿ” ನಂಬಿಕೆ ಇಟ್ಟಂಥವನು. ಕುವೆಂಪು ಅವರ ಚಿಂತನೆಯ ಮಾರ್ಗದಲ್ಲಿಯೇ, ಕನ್ನಡ ಸಾಹಿತ್ಯ ಪರಿಷತ್ತು ಜಾತಿ, ಮತ, ಧರ್ಮ, ಲಿಂಗ ತಾರತಮ್ಯವಿಲ್ಲದೆ ನನ್ನ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಸಾಧಾರಣವಾಗಿ ನನ್ನ ಎಲ್ಲ ಭಾಷಣಗಳಲ್ಲೂ ಕುವೆಂಪು ಅವರ ಚಿಂತನೆಗಳನ್ನು ಉಲ್ಲೇಖಿಸುತ್ತೇನೆ. ಯಾವುದೇ ಸಾಹಿತಿಯನ್ನು ಟೀಕಿಸುವ ಮೊದಲು ಅವರ ಸಾಹಿತ್ಯದ ಸಾರ-ಸರ್ವವನ್ನು ಅರಿತುಕೊಳ್ಳಬೇಕು. ತಿಳಿದುಕೊಳ್ಳದೇ ಮಾತನಾಡುವುದು ಶೋಭೆಯಲ್ಲ. ಹಿನ್ನೆಲೆ ತಿಳಿದುಕೊಳ್ಳದೇ ಮಾತನಾಡುವುದು, ಅವರ ಬೇಜವಾಬ್ದಾರಿತನವನ್ನು ಹಾಗೂ ಅಪ್ರಬುದ್ಧತೆಯನ್ನು ತೋರಿಸುತ್ತದೆ.
ಇದನ್ನೂ ಓದಿರಿ: ‘ಕುವೆಂಪು & ನಾಡಗೀತೆಗೆ ಮಾಡುವ ಅಪಮಾನ ನೋಡಿ ತೆಪ್ಪಗಿರಲು ನನಗೆ ಕಷ್ಟ’: ಪ್ರತಿಷ್ಠಾನಕ್ಕೆ ‘ಹಂಪನಾ’ ರಾಜೀನಾಮೆ
ಕುವೆಂಪು ಅವರನ್ನು ನಿಂದಿಸಿದವರ ಹಾಗೂ ನಾಡಗೀತೆಯನ್ನು ತಿರುಚಿ ಬರೆದವರ ಮೇಲೆ ಕ್ರಮಕೈಗೊಳ್ಳುವಂತೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿಗಳ ಒತ್ತಾಯವನ್ನು ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳುವ ಬಗ್ಗೆ ತೀರ್ಮಾನ ಕೈಗೊಂಡಿರುವುದನ್ನು, ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲಿಸುತ್ತಾ, ತಡಮಾಡದೇ ಅಂಥವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತದೆ.
ರಾಷ್ಟ್ರಕವಿ ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿರುವ ಹಾಗೂ ನಾಡಗೀತೆಯನ್ನು ತಿರುಚಿ ಬರೆದವರ ಮೇಲೆ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ ಹಾಗೂ ಪರಿಷತ್ತಿನ ಎಲ್ಲಾ ಜಿಲ್ಲಾ ಘಟಕಗಳ, ಗಡಿನಾಡ ಘಟಕಗಳ, ತಾಲ್ಲೂಕು ಹಾಗೂ ಹೋಬಳಿ ಘಟಕಗಳ ಅಧ್ಯಕ್ಷರುಗಳು, ಈ ಖಂಡನೆಗೆ ಒಮ್ಮತದಿಂದ ಕೇಂದ್ರ ಪರಿಷತ್ತಿಗೆ ಬೆಂಬಲವನ್ನು ಸೂಚಿಸಿದ್ದಾರೆ.
– ಡಾ. ಮಹೇಶ ಜೋಶಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
ಈ ಜೋಷಿಯ ಆಗ್ರಹ ಅನುಮಾನಾಸ್ಪದ, ಅಪ್ರಾಮಾಣಿಕ! ತನ್ನ ಹೇಳಿಕೆಯಲ್ಲಿ ಎಲ್ಲೂ ಅವಹೇಳನ ಮಾಡಿರುವವರ ಹೆಸರನ್ನು ಹೇಳದೆ ಜಾಣತನ! ಏಕೆ ಅವರಿಗೆ ಚಕ್ರತೀರ್ಥನ ಹೆಸರು ಗೊತ್ತಿಲ್ಲವೇ? ಅಲ್ಲದೆ, ಈ ಕೆಲಸವನ್ನು ಈತ ಪರಿಷತ್ತಿನ ಅಧ್ಯಕ್ಷನಾಗಿ ಈ ಹಿಂದೆಯೇ ಮಾಡಬೇಕಿತ್ತಲ್ಲವೇ? ಬೇರೆ ಮೂಲಗಳಿಂದ ಪ್ರತಿಭಟನೆ, ಕ್ರಮಕ್ಕೆ ಆಗ್ರಹ ಹೆಚ್ಚಾಗುತ್ತಿರುವಾಗ ಇನ್ನೂ ಸುಮ್ಮನೇ ಇರುವುದು ಸರಿಯಲ್ಲ ಎಂದು ಮಾಡುತ್ತಿರುವ ಕಾಟಾಚಾರದ ಪ್ರತಿಭಟನೆಯಾಗಿದೆ ಇದು. ವಾಸ್ತವವಾಗಿ ಕನ್ನಡ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಠ್ಯ ಪುಸ್ತಕ ಪರಿಷ್ಕರಣೆ ವಾಸ್ತವದಲ್ಲಿ ಅದು ‘ಕರಚಳಕ’ ಆದ ತಕ್ಷಣ ಪರಿಷತ್ತು ಅದರ ಅಪಸವ್ಯಗಳ ಕುರಿತು ಧ್ವನಿ ಎತ್ತಬೇಕಿತ್ತು! ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿ, ಚಕ್ರತೀರ್ಥ ಕನ್ನಡ ಧ್ವಜವನ್ನು- ಅದು ಪರಿಷತ್ತಿನ ದಲ್ಲದಿದ್ದರೂ – ತನ್ನ ಒಳ ಉಡುಪಿಗೆ ಹೋಲಿಸಿ ಅವಮಾನಿಸಿದಾಗಲೇ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಬೇಕಿತ್ತು. ಜಾತಿ ಬಾಂಧವನೆಂಬ ಕಾರಣಕ್ಕೆ ಮೇಲಾಗಿ ಚಕ್ರತೀರ್ಥನ ಉಪಾದ್ವ್ಯಾಪಗಳಿಗೆ ಆಂತರಿಕ ಸಹಮತಿ ಇದ್ದುದರಿಂದಲೆ ಪರಿಷತ್ತಿನ ಅಧ್ಯಕ್ಷರು ಮೌನವಾಗಿದ್ದು, ಈಗ ಅನಿವಾರ್ಯವೆಂದಾಗ ಮಾತನಾಡುತ್ತಿರುವುದು ಖಂಡನೀಯ. ಇದು ಎಲ್ಲಾ ಜಿಲ್ಲಾಧ್ಯಕ್ಷರುಗಳ ತಪ್ಪೂ ಆಗಿದೆ.