ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿಕೊಂಡು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಸ್ತ್ರೀದ್ವೇಷದ ಹೇಳಿಕೆ ನೀಡಿದ್ದಾರೆ ಎಂದು ಸಂಸದೆಯರು ಗುರುವಾರ ಪ್ರತಿಭಟನೆ ನಡೆಸಿದರು.
ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಟಿಎಂಸಿ ಪಕ್ಷದ ಮಹಿಳಾ ಸಂಸದರು ಪ್ರತಿಭಟನೆ ನಡೆಸಿ, ಗಿರಿರಾಜ್ ಸಿಂಗ್ ಅವರನ್ನು ಸಂಸದ ಸ್ಥಾನದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದರು.
‘ನಾವು ನಿಮ್ಮ ಹೇಳಿಕೆಗಳನ್ನು ಕೇಳಿದ್ದೇವೆ, ಅವೆಲ್ಲವೂ ಸಂಪೂರ್ಣವಾಗಿ ನಾಚಿಕೆಗೇಡಿನ, ಸ್ತ್ರೀದ್ವೇಷ ಹಾಗೂ ಪರುಷ ಪ್ರಧಾನವಾಗಿವೆ. ಕೇಂದ್ರ ಸಚಿವರು ಭಾರತದ ಏಕೈಕ ಮಹಿಳಾ ಮುಖ್ಯಮಂತ್ರಿಯ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಇದೇ ರೀತಿಯ ಭಾಷೆ ಬಳಸುವುದು ಬಿಜೆಪಿ ಮತ್ತು ಅದರ ಮಂತ್ರಿಗಳಿಗಿರುವ ಸಮಸ್ಯೆ’ ಎಂದು ಸಂಸದೆ ಮಹುವಾ ಮೊಯಿತ್ರಾ ವಾಗ್ದಾಳಿ ನಡೆಸಿದರು.
‘ಅವರು ಮಹಿಳಾ ಪ್ರಾಧಾನ್ಯತೆಯನ್ನು ಇಷ್ಟಪಡುವುದಿಲ್ಲ. ಆಡಳಿತದ ನಡೆಸುವ ಸ್ಥಾನಗಳಲ್ಲಿ ಮಹಿಳೆಯರ ಇರುವಿಕೆಯನ್ನು ಅವರು ಒಪ್ಪುವುದಿಲ್ಲ. ಏಕೆಂದರೆ, ಅವರು ಸ್ತ್ರೀದ್ವೇಷ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದರ ಕುರಿತು ಹೇಳಿಕೆ ನೀಡಿದ್ದ ಗಿರಿರಾಜ್ ಸಿಂಗ್, ‘ಜಷ್ನ್ ಮನ ರಹೀ ಹೈ, ತುಮ್ಕೆ ಲಗಾ ರಹೀ ಹೈ, ಯೇ ಉಚಿತ್ ನಹೀ ಹೈ (ಅವರು ಸಂಭ್ರಮಿಸುತ್ತಾರೆ. ಜತೆಗೆ, ನೃತ್ಯವನ್ನೂ ಮಾಡುತ್ತಿದ್ದಾರೆ. ಅವರ ವರ್ತನೆ ಅನುಚಿತವಾಗಿದೆ) ಎಂದು ಹೇಳಿದ್ದರು. ಟಿಎಂಸಿ ರಾಜ್ಯಸಭಾ ಸಂಸದ ಸಂತಾನು ಸೇನ್ ಅವರು ಬುಧವಾರ ಸದನದಲ್ಲಿ ಮಾತನಾಡುವಾಗಗ ಸಚಿವರ ಹೇಳಿಕೆಯನ್ನು ಪ್ರಸ್ತಾಪಿಸಿದ್ದರು.
‘ನಮ್ಮ ಕ್ಯಾಬಿನೆಟ್ ಮಂತ್ರಿಯೊಬ್ಬರು ದೇಶದ ಏಕೈಕ ಮಹಿಳಾ ಮುಖ್ಯಮಂತ್ರಿಯನ್ನು ಗುರಿಯಾಗಿಸಿಕೊಂಡ ರೀತಿಯನ್ನು ನಾನು ಬಲವಾಗಿ ಪ್ರತಿಭಟಿಸಲು ಬಯಸುತ್ತೇನೆ. ಬೇಕಿದ್ದರೆ ನಿಮಗೆ ನಾನು ಅವರ ವೀಡಿಯೊವನ್ನು (ಮಮತಾ ಬ್ಯಾನರ್ಜಿ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ವಿಡಿಯೋ) ತೋರಿಸುತ್ತೇನೆ. ಅದನ್ನು ಗಮನಿಸಬೇಕು’ ಎಂದು ಅವರು ಹೇಳಿದರು. ಟಿಎಂಸಿ ರಾಜ್ಯಸಭೆಯಲ್ಲಿ ಇಬ್ಬರು ಮಹಿಳಾ ಸದಸ್ಯರನ್ನು ಮತ್ತು ಲೋಕಸಭೆಯಲ್ಲಿ ಏಳು ಮಹಿಳಾ ಸದಸ್ಯರನ್ನು ಹೊಂದಿದೆ.
ಇದನ್ನೂ ಓದಿ; ಕುಮಾರಸ್ವಾಮಿ ಜತೆಗೆ ಮುಸ್ಲಿಂ ಧಾರ್ಮಿಕ ಮುಖಂಡ ತನ್ವೀರ್ ಹಾಶ್ಮಿ; ಯತ್ನಾಳ್ಗೆ ಕಾಂಗ್ರೆಸ್ ತಿರುಗೇಟು