Homeಮುಖಪುಟಮಕ್ಕಳ ಕಾಮಿಡಿ ಶೋನಲ್ಲಿ ಪ್ರಧಾನಿ ಅವಹೇಳನ ಆರೋಪ; I&Bಗೆ ದೂರು ನೀಡಿದ BJP

ಮಕ್ಕಳ ಕಾಮಿಡಿ ಶೋನಲ್ಲಿ ಪ್ರಧಾನಿ ಅವಹೇಳನ ಆರೋಪ; I&Bಗೆ ದೂರು ನೀಡಿದ BJP

- Advertisement -
- Advertisement -

ಝೀ-ತಮಿಳ್‌ ಚಾನೆಲ್‌‌ ಆಯೋಜಿಸಿದ್ದ ಮಕ್ಕಳ ರಿಯಾಲಿಟಿ ಷೋ ‘ಜೂನಿಯರ್ ಸೂಪರ್ ಸ್ಟಾರ್ ಸೀಸನ್ 4’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯನ್ನು ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಿ ತಮಿಳುನಾಡು ಬಿಜೆಪಿ ನಾಯಕ ಸಿಟಿಆರ್ ನಿರ್ಮಲ್ ಕುಮಾರ್ ಅವರು ಕಾರ್ಯಕ್ರಮದ ವಿರುದ್ದ ದೂರು ದಾಖಲಿಸಿದ್ದಾರೆ. ಇವರ ದೂರು ಆಧರಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ವಿಷಯದ ಬಗ್ಗೆ ವಿವರಣೆ ನೀಡುವಂತೆ ಝೀ ಟಿವಿಗೆ ನೋಟಿಸ್ ನೀಡಿದೆ.

ಝೀ ತಮಿಳು ಟಿವಿ ಚಾನೆಲ್‌ನ ಜನವರಿ 15ರ ಟಿವಿ ಕಾರ್ಯಕ್ರಮ ಜೂನಿಯರ್ ಸೂಪರ್ ಸ್ಟಾರ್ ಸೀಸನ್ 4 ರ ಪ್ರಸಾರದ ವಿರುದ್ಧ ಸಚಿವಾಲಯವು ದೂರನ್ನು ಸ್ವೀಕರಿಸಿದೆ ಎಂದು ನೋಟಿಸ್ ಹೇಳಿದೆ. “ಸಚಿವಾಲಯಕ್ಕೆ 7 ದಿನಗಳ ಅವಧಿಯೊಳಗೆ ದೂರಿನ ಕುರಿತು ಪ್ರತಿಕ್ರಿಯೆಗಳನ್ನು ನೀಡಲು ವಿನಂತಿಸಲಾಗಿದೆ. ವಿಫಲವಾದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಬಿಜೆಪಿ, ಮೋದಿ ವಿರುದ್ಧ ಪೋಸ್ಟ್: ಧಾರಾವಾಹಿಯಿಂದ ಮರಾಠಿ ನಟ ಹೊರಕ್ಕೆ, ಗ್ರಾಮದಲ್ಲಿ ಚಿತ್ರೀಕರಣ ಬೇಡ ಎಂದ ಗ್ರಾಮಸ್ಥರು

ನಿರ್ಮಲ್‌ ಕುಮಾರ್‌‌‌ ಅವರು ಆರೋಪಿಸಿರುವ ಈ ಕಾರ್ಯಕ್ರಮದಲ್ಲಿ, ಜನಪ್ರಿಯ ತಮಿಳು ಐತಿಹಾಸಿಕ, ರಾಜಕೀಯ ವಿಡಂಬನಾತ್ಮಕ ಚಲನಚಿತ್ರ ‘ಇಮ್ಸೈ ಅರಸನ್ 23 ನೇ ಪುಲಿಕೇಸಿ’ಯ ಸ್ಕಿಟ್‌ ಅನ್ನು ನಾಟಕೀಯವಾಗಿ ನಿರೂಪಿಸಲಾಗಿತ್ತು. ಅದರಲ್ಲಿ ರಾಜ ಮತ್ತು ಮಂತ್ರಿಯಂತೆ ಧರಿಸಿರುವ ಇಬ್ಬರು ಮಕ್ಕಳು ವಿಡಂಬನಾತ್ಮಕವಾಗಿ ಮಾತನಾಡುತ್ತಾರೆ.

ಸ್ಕಿಟ್‌ನಲ್ಲಿ ಬಳಸಿದ ಸಂಭಾಷಣೆಗಳಲ್ಲಿ, “ಸಿಂಧಿಯಾ ಎಂಬ ಕಾಲ್ಪನಿಕ ದೇಶದ ರಾಜನೊಬ್ಬ ಕಪ್ಪುಹಣವನ್ನು ತಡೆಯಲು ಕರೆನ್ಸಿಯನ್ನು ರದ್ದುಗೊಳಿಸಿ ವಿಫಲನಾದ. ನಂತರ ಅದನ್ನು ಮುಚ್ಚಿಡಲು ವಿವಿಧ ಬಣ್ಣಗಳ ಕೋಟುಗಳನ್ನು ಧರಿಸಿ ಜಗತ್ತನ್ನು ಸುತ್ತಿದ” ಎಂದು ಮಗುವೊಂದು ಹೇಳುತ್ತದೆ.

ಇಷ್ಟೇ ಅಲ್ಲದೆ, ಲಾಭದಲ್ಲಿರುವ ಉದ್ದಿಮೆಗಳನ್ನು ಮಾರುತ್ತಿರುವ ಬಗ್ಗೆಯೂ ಮಕ್ಕಳಿಬ್ಬರು ಸ್ಕಿಟ್‌ನಲ್ಲಿ ಮಾತನಾಡುತ್ತಾರೆ. ಜೊತೆಗೆ, “ಬೇರೆ ದೇಶದ ಜನರು ಖುಷಿಯಾಗಿ ಇರುವುದು ನಮ್ಮ ಆಡಳಿತ ಇಲ್ಲದಿರುವುದರಿಂದಾಗಿದೆ, ಅಲ್ಲಿಗೆ ಮಾರುವೇಷದಲ್ಲಿ ಹೋಗಬೇಕಾಗುತ್ತದೆ. ಇಲ್ಲವೆಂದರೆ ನಮ್ಮನ್ನು ಗುರುತಿಸುತ್ತಾರೆ. ನಮ್ಮ ದೇಶದಲ್ಲಾದರೆ ನಮ್ಮನ್ನು ಗುರುತಿಸುವುದೇ ಇಲ್ಲ” ಎಂದು ಮಂತ್ರಿಯ ವೇಷದಲ್ಲಿ ಇರುವ ಮಗುವೊಂದು ರಾಜನ ವೇಷದಾರಿಗೆ ಅಣಕಿಸುತ್ತಾ ಹೇಳುತ್ತದೆ.

ಇದನ್ನೂ ಓದಿ:ಶ್ರೀರಾಮನಂತೆಯೆ ಪ್ರಧಾನಿ ಮೋದಿ ‘ದೇವರ ಅವತಾರ’: ಮಧ್ಯಪ್ರದೇಶ ಕೃಷಿ ಸಚಿವ ಕಮಲ್ ಪಟೇಲ್‌

ನಾಟಕದ ಈ ಸಂಭಾಷಣೆಯು ಪ್ರಧಾನಿ ಮೋದಿಯನ್ನು ನೇರವಾಗಿ ಉಲ್ಲೇಖಿಸುತ್ತದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಕಾರ್ಯಕ್ರಮವು 2016 ರ ನೋಟು ಅಮಾನ್ಯೀಕರಣದ ಬಗ್ಗೆ ಪ್ರಧಾನಿಯವರನ್ನು ತಮಾಷೆ ಮಾಡಿದೆ ಮತ್ತು ಅವರ ಅಧಿಕಾರಾವಧಿಯ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತದೆ ಎಂದು ಬಿಜೆಪಿ ಆರೋಪಿಸಿದೆ.

ಚಿಕ್ಕ ಮಕ್ಕಳನ್ನು ದುರುದ್ದೇಶದಿಂದ ಈ ಸಂಭಾಷಣೆ ನಡೆಸುವಂತೆ ಮಾಡಲಾಗಿದೆ ಎಂದು ನಿರ್ಮಲ್ ಕುಮಾರ್ ಅವರು ಝೀ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ತಮಿಳುನಾಡು ಮುಖ್ಯ ಕ್ಲಸ್ಟರ್ ಅಧಿಕಾರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್‌: ಹೈದ್ರಾಬಾದ್‌ನಲ್ಲಿ ಉದ್ಘಾಟನೆಯಾಗಲಿರುವ ರಾಮಾನುಜಾಚಾರ್ಯರ ಪ್ರತಿಮೆ ಪ್ರಧಾನಿ ಮೋದಿ ನಿರ್ಮಿಸಿದ್ದಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...