Homeಕರ್ನಾಟಕಕೈ ಪಾರ್ಟಿಯ ಬಣ ಬಡಿದಾಟದಲ್ಲಿ ಹೈಕಮಾಂಡ್ ಪಾತ್ರವಿದೆಯಾ.....!?

ಕೈ ಪಾರ್ಟಿಯ ಬಣ ಬಡಿದಾಟದಲ್ಲಿ ಹೈಕಮಾಂಡ್ ಪಾತ್ರವಿದೆಯಾ…..!?

- Advertisement -
- Advertisement -

ಇದು ಕಾಂಗ್ರೆಸ್ ಹೈಕಮಾಂಡ್ ಆಡಲೇಬೇಕಿದ್ದ ಆಟ. ಅಷ್ಟೇ ರಿಸ್ಕಿ ಆಟವೂ ಹೌದು. ಸದ್ಯ ರಾಜ್ಯ ಕಾಂಗ್ರೆಸ್‍ನೊಳಗೆ ಭುಗಿಲೆದ್ದಿರುವ ಬಣ ರಾಜಕಾರಣ ತಾರಕ್ಕೇರಿರುವುದೇನೊ ದಿಟ. ಆದರೆ ಈ ಭಿನ್ನಮತದ ಹಿಂದೆ ಸ್ವತಃ ಕಾಂಗ್ರೆಸ್ ಹೈಕಮಾಂಡ್‍ನ ಪಾತ್ರವಿದೆಯಾ ಎಂಬ ಅನುಮಾನಗಳು ಗರಿಗೆದರುತ್ತಿವೆ. ಇಡೀ ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್ ಇನ್ನೆಂದೂ ಕಾಣದಂತ ನಿಶ್ಯಕ್ತ ಪರಿಸ್ಥಿತಿಯಲ್ಲಿರುವ ಇಂಥಾ ಸಂದರ್ಭದಲ್ಲಿ ತಾನೇ ಭಿನ್ನಮತಕ್ಕೆ ನೀರೆರೆದು ಪೋಷಿಸುತ್ತಾ? ಎಂಬ ಪ್ರಶ್ನೆಯೂ ಕಾಡದಿರದು.

ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲು ಮುಂದಾದರೆ ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗುತ್ತಾ ಸಾಗುತ್ತೆ. ಸಿದ್ದು ವಿರುದ್ಧ ತಿರುಗಿಬಿದ್ದಿರುವ ನಾಯಕರುಗಳಿಂದಲೇ ಶುರು ಮಾಡುವುದಾದರೆ, ಬಂಡೆದ್ದಿರುವ ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ತರದ ನಾಯಕರುಗಳೇ ಮೂಲ ಕಾಂಗ್ರೆಸ್ಸಿಗರ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅದೆಷ್ಟೇ ಶಿಥಿಲಗೊಂಡಿರಬಹುದು, ಆದರೆ ಆ ಶಿಥಿಲ ನಾಯಕತ್ವದ ಮುಂದೆಯು ಗಟ್ಟಿಯಾಗಿ ದನಿ ಬಿಚ್ಚುವ ಪ್ರಭಾವವ ಉಳಿಸಿಕೊಂಡಿರದ ಇವರೆಲ್ಲ ಬಣ ರಾಜಕಾರಣದ ಮೂಲಕ ಸ್ವತಃ ಹೈಕಮಾಂಡ್‍ಗೇ ಇರಿಸುಮುರಿಸು ತಂದಿಡಬಲ್ಲ ಚಕ್ಯತೆಯನ್ನು ಪ್ರದರ್ಶಿಸಲಾರರು ಎಂಬುದು ವಾಸ್ತವ. ತಮ್ಮತಮ್ಮ ಕ್ಷೇತ್ರಗಳಲ್ಲೇ ಗೆಲ್ಲಲು ಹೆಣಗಾಡಬೇಕಾದ ಪರಿಸ್ಥಿತಿಯಲ್ಲಿ ಇವರಿದ್ದಾರೆ. ತಾನು ಈ ಮೊದಲಿನಂತೆ ಸಿದ್ದು ಪರವಾಗಿ ಏಕಪಕ್ಷೀಯವಾಗಿ ನಿಲ್ಲಲಾರೆವು ಎಂಬ ಸಣ್ಣ ಸುಳಿವು, ಯಾನೆ ಪ್ರಚೋದನೆ ಇವರಿಗೆ ಹೈಕಮಾಂಡಿನಿಂದಲೇ ಪರೋಕ್ಷವಾಗಿ ಸಿಕ್ಕಿರದ ಹೊರತು ಇವರೆಲ್ಲ ಬಂಡಾಯದ ಬಾವುಟ ಬೀಸಾಡುವ ಸಾಧ್ಯತೆ ತೀರಾ ಕಮ್ಮಿ. ಯಾಕೆಂದರೆ ಹಿಂದೆಲ್ಲ ಇದೇ ರೀತಿ ಮೂಲ, ವಲಸಿಗ ಬೇಗುದಿಯೊಂದಿಗೆ ಹೈಕಮಾಂಡ್ ಎಡತಾಕಿದವರೆಲ್ಲ ಯಾವ ಪ್ರಯೋಜನವೂ ಕಾಣದೆ ವಾಪಾಸಾಗಿದ್ದುಂಟು. ಹೈಕಮಾಂಡ್ ಬಲವಾಗಿ ಸಿದ್ದು ಪರ ನಿಂತದ್ದೇ ಇದಕ್ಕೆ ಕಾರಣ. ಈಗಲೂ ಹೈಕಮಾಂಡ್ ಸಿದ್ದು ಪರ ಅಂತದ್ದೇ ಗಟ್ಟಿ ನಿಲುವು ತಾಳಿದ್ದಿದ್ದರೆ ಇವರು ಈ ಮಟ್ಟದ ಬಂಡಾಯವೇಳುವುದು ಕಷ್ಟದ ಮಾತು.

ಸಿದ್ದರಾಮಯ್ಯನವರ ವಿರುದ್ಧವೇ ಈ ಮಟ್ಟದ ಬಂಡಾಯವನ್ನು ಹೈಕಮಾಂಡ್ ಬಯಸುವಂತಹ ಅಗತ್ಯವೇನಾದರು ಏನಿದೆ? ಇದರಿಂದ ಸಿಟ್ಟಿಗೆದ್ದು ಒಂದೊಮ್ಮೆ ಸಿದ್ದು ಹೊರನಡೆದರೆ, ಅವರಿಲ್ಲದೆ ಪಕ್ಷ ಸಂಘಟಿಸುವ ಸಾಮಥ್ರ್ಯ ಕಾಂಗ್ರೆಸ್ಸಿಗಿದೆಯಾ? ಎಂಬ ಇನ್ನೆರಡು ಪ್ರಶ್ನೆಗಳು ಇಲ್ಲಿ ತಲೆ ಎತ್ತುತ್ತವೆ. ಎರಡನೇ ಪ್ರಶ್ನೆಗೆ ಹೈಕಮಾಂಡ್ ತಳೆದಿರಬಹುದಾದ ಲಾಜಿಕ್ ಊಹಿಸಿದರೆ, ಮೊದಲ ಪ್ರಶ್ನೆಗೆ ಉತ್ತರ ಸಿಗೋದು ಕಷ್ಟವೇನಲ್ಲ.

ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್‍ಗೆ ಸಿದ್ದರಾಮಯ್ಯ ಅನಿವಾರ್ಯ ಅನ್ನೋದು ಎಷ್ಟು ಸತ್ಯವೋ, ಸಿದ್ರಾಮಯ್ಯನವರಿಗೂ ಕಾಂಗ್ರೆಸ್ ಅಷ್ಟೇ ಅನಿವಾರ್ಯ ಎಂಬುದೂ ಅಷ್ಟೇ ವಾಸ್ತವ. ಒಂದೊಮ್ಮೆ ಸಿದ್ದು ಈಗಿರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ನಿಂದ ಹೊರನಡೆಯುವ ತೀರ್ಮಾನ ಕೈಗೊಂಡರೂ ಹೋಗುವುದೆಲ್ಲಿಗೆ? ದೇವೇಗೌಡರ ಫ್ಯಾಮಿಲಿ ಪಾರ್ಟಿಯನ್ನು ಸೇರುವ ಮಾತೇ ಇಲ್ಲ. ಬಿಜೆಪಿ ಸೇರುವುದೆಂದರೆ ಅದರು ಸಿದ್ರಾಮಯ್ಯನವರ ಇಷ್ಟು ದಿನದ ರಾಜಕೀಯ ಬದುಕನ್ನು ಅವರೇ ಕತ್ತುಹಿಸುಕಿ ಕೊಂದಂತೆ. ಇದು ಸಿದ್ರಾಮಯ್ಯನವರಿಗೆ ಚೆನ್ನಾಗಿ ಗೊತ್ತು ಅನ್ನೋದು ಹೈಕಮಾಂಡ್‍ಗೂ ತಿಳಿದಿದೆ. ಇನ್ನು ಉಳಿದಿರೋದು ಹೊಸ ಪಾರ್ಟಿ ಕಟ್ಟುವ ಆಯ್ಕೆ. ಸಿದ್ದುಗೆ ಮಾಸ್ ಲೀಡರಿಕೆ ಇದೆಯಾದರು ಒಂದು ಪಾರ್ಟಿ ಕಟ್ಟಿ ನಿಭಾಯಿಸುವಷ್ಟು ಆರ್ಥಿಕ ಸಂಪನ್ಮೂಲ ಹೊಂದಿಲ್ಲ ಅನ್ನೋದು ಅವರ ವಿರೋಧಿಗಳೂ ಒಪ್ಪಿಕೊಳ್ಳುವ ಸತ್ಯ. ಹಾಗಾಗಿ ಸಿದ್ರಾಮಯ್ಯ ರಾಜಕೀಯವಾಗಿ ಸಕ್ರಿಯವಾಗಿ ಉಳಿಯಬೇಕೆಂದರೆ ಅವರಿಗೆ ಕಾಂಗ್ರೆಸ್ ಅನಿವಾರ್ಯ. ಹೈಕಮಾಂಡ್‍ನ ಈ ಲೆಕ್ಕಾಚಾರವೇ ರಿಸ್ಕಿ ಆಟಕ್ಕೆ ಧೈರ್ಯ ಮಾಡುವಂತೆ ಮಾಡಿರೋದು.

ಈಗ ಸಿದ್ದುವನ್ನು ಇಂಥಾ ಬಂಡಾಯದ ಆಟದ ಮೂಲಕ ನಿಯಂತ್ರಿಸುವ ಅಗತ್ಯ ಹೈಕಮಾಂಡ್‍ಗೆ ಏನಿತ್ತು ಅನ್ನೋ ಪ್ರಶ್ನೆಗೆ ಮರಳೋಣ. ಸಿದ್ದು ಕಾಂಗ್ರೆಸ್ಸಿಗೆ ಬಂದಾಗಿನಿಂದಲೂ ರಾಜ್ಯ ನಾಯಕರು ಅದೆಷ್ಟೇ ಕಾಲೆಳೆಯಲು ಪ್ರಯತ್ನಿಸಿದರು ಹೈಕಮಾಂಡ್ ಮಾತ್ರ ಅವರ ಬೆನ್ನಿಗೆ ನಿಲ್ಲುತ್ತಲೇ ಬಂದಿತ್ತು. ಹೀಗೆ ಸಿದ್ರಾಮಯ್ಯರನ್ನು ಅವಲಂಬಿಸೋದು ಆಗಿದ್ದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ಗೂ ಅನಿವಾರ್ಯವಾಗಿತ್ತು ಅನ್ನೋದು ಬೇರೆ ಮಾತು. 2008ರಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ, 2013ರಲ್ಲಿ ಮುಖ್ಯಮಂತ್ರಿ ಸ್ಥಾನ, 2018ರಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷಗಿರಿ ಇವೆಲ್ಲವೂ ಸಿದ್ರಾಮಯ್ಯನವರಿಗೆ ಸಲೀಸಾಗಿ ಒಲಿದಿದ್ದಲ್ಲ. ವಲಸಿಗರು ಅನ್ನೊ ಅಡ್ಡಗಾಲು `ಮೂಲಿಗ’ರಿಂದ ಇದ್ದೇ ಇತ್ತು. ಆದರೆ ಹೈಕಮಾಂಡ್ ಮಾತ್ರ ಸಿದ್ದು ಪರವಾಗಿ ನಿಲ್ಲುತ್ತಾ ಬಂದಿತ್ತು. ಇಲ್ಲವಾಗಿದ್ದರೆ ಮಧ್ಯಂತರದಲ್ಲಿ ಭುಗಿಲೆದ್ದಿದ್ದ ದಲಿತ ಸಿಎಂ ಎಂಬ ರಾಜಕೀಯ ಚಿತಾವಣೆಯ ಕೂಗನ್ನೂ ಓವರ್‍ಟೇಕ್ ಮಾಡಿ ಸಿದ್ದು ನಿರಾತಂಕವಾಗಿ ಐದು ವರ್ಷ ಮುಖ್ಯಮಂತ್ರಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ. ಸಿದ್ದುಗೆ ಫ್ರೀ ಹ್ಯಾಂಡ್ ಕೊಟ್ಟರಷ್ಟೇ ಪಕ್ಷಕ್ಕೆ ಒಳ್ಳೆಯದ ಎಂಬ ಕಾರಣಕ್ಕೆ ಅವರ ಅವಧಿಯಲ್ಲಿ ಎಷ್ಟೇ ಒತ್ತಡ ಬಂದರು ಉಪಮುಖ್ಯಮಂತ್ರಿ ಹುದ್ದೆಯನ್ನೂ ಹೈಕಮಾಂಡ್ ಸೃಷ್ಟಿ ಮಾಡಲಿಲ್ಲ. ಇತ್ತ ಸಿದ್ದು ಕೂಡಾ ಪಕ್ಷಕ್ಕೆ ಬಲ ತುಂಬುತ್ತಲೇ ಬಂದರು.

ಆದರೆ ಈ ವಿಶ್ವಾಸಗಳೆಲ್ಲ ತಲೆಕೆಳಗಾದದ್ದು ಮೈತ್ರಿ ಸರ್ಕಾರದ ರಚನೆ ತರುವಾಯ. ದೇಶದಲ್ಲಿ ಬಿಜೆಪಿಯ ಆಪೋಷನ ವೇಗ ತಗ್ಗಿಸಬೇಕೆಂಬ ಕಾರಣಕ್ಕೆ ಹೈಕಮಾಂಡ್ ಸಮ್ಮತಿ ಸೂಚಿಸಿದ್ದ ಜೆಡಿಎಸ್ ಜೊತೆಗಿನ ಮೈತ್ರಿ ಸಂಹಿತೆಗೆ ಸಿದ್ದು ಮನಪೂರ್ವಕವಾಗಿ ಸ್ಪಂದಿಸಲೇ ಇಲ್ಲ. ಅವರದೇ ನಾಯಕತ್ವದಲ್ಲಿ ಎದುರಿಸಿದ ಆ ಚುನಾವಣೆಯಲ್ಲಿ ಸೋತರೂ, ಮತಗಳಿಕೆಯಲ್ಲಾದ ಹಿಗ್ಗುವಿಕೆಗೆ ಸಿದ್ದುವೇ ಕಾರಣ ಎಂಬುದನ್ನು ಮನಗಂಡಿದ್ದ ಹೈಕಮಾಂಡ್ ಅವರನ್ನು ಮೂಲೆಗುಂಪು ಮಾಡದೆ `ಸಮನ್ವಯ ಸಮಿತಿಯ ಅಧ್ಯಕ್ಷ’ನನ್ನಾಗಿ ಮಾಡಿ ಗೌರವಯುತವಾಗಿ ನಡೆಸಿಕೊಂಡಿತ್ತು. ಆದರೆ ಅದ್ಯಾಕೊ ಗೊತ್ತಿಲ್ಲ, ಮೋದಿ-ಶಾ ವಿರುದ್ಧ ಗುಡುಗುತ್ತಾ ಇನ್ನೂ ಎತ್ತರಕ್ಕೆ ಬೆಳೆಯಬಹುದಾಗಿದ್ದ ಸಿದ್ದು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಕಾದಾಡುವ ತಮ್ಮ ಹಳೇ ರಾಜಕೀಯಕ್ಕೇ ಸೀಮಿತಗೊಂಡುಬಿಟ್ಟರು.

ಮೈತ್ರಿ ಸರ್ಕಾರ ಬಿದ್ದುಹೋಗಲು ಇದೂ ಒಂದು ಕಾರಣವಾಯ್ತು. ಕಳೆದ ಸಂಚಿಕೆಯಲ್ಲಿ ಪತ್ರಿಕೆಗೆ ಸಂದರ್ಶನ ನೀಡಿದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದಂತೆ, `ಸಿದ್ದು ನೇರವಾಗಿ ಯಾರನ್ನೂ ಬಿಜೆಪಿಯತ್ತ ಕಳುಹಿಸದಿದ್ದರು, ಆಪ್ತರ ಮುಂದೆ ಅವರ ವ್ಯಕ್ತಪಡಿಸುತ್ತಿದ್ದ ಬೇಸರದ ಮಾತುಗಳು ಅವರನ್ನು ಮೈತ್ರಿ ಪತನದ ನಿರ್ಧಾರಕ್ಕೆ ಪ್ರಚೋದಿಸಿದ್ದವು’ ಎಂಬುದರಲ್ಲಿ ಸತ್ಯಾಂಶ ಇಲ್ಲದಿಲ್ಲ. ಬಿಜೆಪಿಗೆ ಹಾರಿದ ಅನರ್ಹ ಶಾಸಕರಲ್ಲಿ ಸಿದ್ದು ಬಳಗದಲ್ಲಿ ಗುರುತಿಸಿಕೊಂಡಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದುದು ಇದಕ್ಕೆ ಸಾಕ್ಷಿ.

ಅದಕ್ಕು ಮೊದಲು ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲು ಜೆಡಿಎಸ್ ಜೊತೆಗೆ ಸೀಟು ಹಂಚಿಕೆಯ ವೇಳೆಯಲ್ಲಿ ಆದ ಪ್ರತಿಷ್ಠೆಯ ಮೇಲಾಟಗಳಿಂದಾಗಿ ಒಗ್ಗೂಡಬೇಕಿದ್ದ ಜಾತ್ಯತೀತ ಮತಗಳು ಛಿದ್ರವಾಗಿದ್ದನ್ನೂ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸಿತ್ತು. ಅದರಲ್ಲೂ ಸಿದ್ರಾಮಯ್ಯನವರ ಬಗ್ಗೆ ಹೈಕಮಾಂಡ್ ಬೇಸರಿಸಿಕೊಳ್ಳಲು ಸಾಕಷ್ಟು ಕಾರಣಗಳಿದ್ದವು.

ಇಂಥಾ ಕಾರಣಗಳಿಂದಲೇ, `ಯೆಸ್ ಇಟ್ ಈಸ್ ಟೈಮ್ ಟು ಕಂಟ್ರೋಲ್ ಸಿದ್ದರಾಮಯ್ಯ’ ಅಂತ ಹೈಕಮಾಂಡಿಗೆ ಅನ್ನಿಸಿದ್ದರೆ ಅಚ್ಚರಿಯೇನೂ ಇಲ್ಲ. ಯಾಕೆಂದರೆ ಈಗ ಮೊದಲಿನಂತೆ ಬಂಡಾಯದಿಂದಾಗಿ ಅಧಿಕಾರವನ್ನು ಕಳೆದುಕೊಳ್ಳುವ ಭೀತಿ ಕಾಂಗ್ರೆಸ್ಸಿಗಿಲ್ಲ. ಹಾಗಾಗಿ ಸಿದ್ದು ಮೇಲೆ ಇತ್ತೀಚೆಗೆ ತನಗೂ ಬೇಸರವಿದೆ ಅನ್ನೋ ಸಂದೇಶವನ್ನು ಸಿದ್ದು ವಿರೋಧಿಗಳಿಗೆ ಪರೋಕ್ಷವಾಗಿ ದಾಟಿಸಿದ ಹೈಕಮಾಂಡ್ ಅವರು `ಪ್ರತಿಪಕ್ಷ ನಾಯಕ’ ಸ್ಥಾನದ ಆಸೆಯಲ್ಲಿ ಸಿದ್ದು ವಿರುದ್ಧ ತಿರುಗಿಬೀಳುವಂತೆ ಒಂದು ಸಣ್ಣ ಆಟ ಆಡಿದ್ದರೂ ಅಚ್ಚರಿಯಿಲ್ಲ. ಮೈತ್ರಿ ಸರ್ಕಾರ ಪತನವಾದ ನಂತರ ಸಿದ್ದು ದಿಲ್ಲಿಗೆ ಹೋಗಿಬಂದಷ್ಟೇ, ಹೈಕಮಾಂಡ್ ಪರಮೇಶ್ವರ್‍ರನ್ನೂ ದಿಲ್ಲಿಗೆ ಕರೆಸಿಕೊಂಡಿರೋದು ಇಂಥಾ ಅನುಮಾನವನ್ನು ದಟ್ಟಗೊಳಿಸುತ್ತದೆ.

ಹಾಗಂತ, ಸಿದ್ರಾಮಯ್ಯನನ್ನು ಪಕ್ಕಕ್ಕಿಟ್ಟು ಬೇರೆ ಯಾರನ್ನೋ ಪ್ರತಿಪಕ್ಷ ನಾಯಕನನ್ನಾಗಿ ಮಾಡುವ ಪರಿಸ್ಥಿತಿಯೂ ಕಾಂಗ್ರೆಸ್ಸಿಗಿಲ್ಲ. ಆ ಸಾಮಥ್ರ್ಯವಿದ್ದ ಡೀಕೆ ಈಗ ಗೂಡಿನ ಹಕ್ಕಿಯಾಗಿದ್ದಾರೆ. ಖರ್ಗೆ ರಿಸ್ಕುಗಳನ್ನು ಮೈಮೇಲೆಳೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನುಳಿದವರು ಆ ಹುದ್ದೆಯಿಂದ ಬರುವ ಸವಲತ್ತುಗಳನ್ನು ಅನುಭವಿಸಬಹುದೇ ವಿನಾಃ, ಬೀದಿಗಿಳಿದು ಆಡಳಿತ ಪಕ್ಷದ ವಿರುದ್ಧ ಗುಡುಗಿ ಪಕ್ಷ ಸಂಘಟಿಸಲಾರರು. ಅನಿವಾರ್ಯವಾಗಿ ಸಿದ್ರಾಮಯ್ಯರನ್ನೇ ಆಯ್ಕೆ ಮಾಡಬೇಕಾಗುತ್ತೆ. `ಆದರೆ ಆ ಆಯ್ಕೆ ನಿಮಗೆ ಸುಲಭಕ್ಕೆ ದಕ್ಕಿದ್ದಲ್ಲ, ಮೊದಲಿನಂತೆ ಹೈಕಮಾಂಡ್ ಇನ್ಮುಂದೆ ನಿಮ್ಮ ಪರವಾಗಿ ಗಟ್ಟಿಯಾಗಿ ನಿಲ್ಲಲಾರದು. ನಿಮ್ಮ ವಿರೋಧಿಗಳ ದನಿಗೂ ನಾವು ಕಿವಿಗೊಡಲು ಸಿದ್ಧರಿದ್ದೇವೆ, ಹಾಗಾಗಿ ವೈಪರೀತ್ಯಗಳಿಗೆ ಅವಕಾಶ ಕೊಡದೆ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗಿ’ ಎಂಬ ಸಂದೇಶದ ಮೂಲಕ ಸಣ್ಣ ಎಚ್ಚರಿಕೆಯನ್ನೂ ಸಿದ್ದುಗೆ ರವಾನಿಸಲೆಂದೇ ಈ ಬಂಡಾಯ, ದಿಲ್ಲಿಯಿಂದ ಮಧುಸೂದನ್ ಮಿಸ್ತ್ರಿಯೆಂಬ ವೀಕ್ಷಕರ ಆಗಮನ, ಅಭಿಪ್ರಾಯ ಸಂಗ್ರಹಣೆಗಳಂತ ವಿದ್ಯಮಾನಗಳು ಜರುಗಿರೋದು. ಒಂದಂತು ಖರೆ, ಈ ಬಂಡಾಯದ ಎಪಿಸೋಡನ್ನು ಹೈಕಮಾಂಡೇ ಹೆಣೆದಿರಲಿ, ಅಥವಾ ಹೆಣೆಯದಿರಲಿ ಆದರೆ ಸಿದ್ದುಗೆ ಸಣ್ಣ ಎಚ್ಚರಿಕೆ ರವಾನಿಸಲು ಹೈಕಮಾಂಡ್‍ಗೆ ಇಂತದ್ದೊಂದು ಬೆಳವಣಿಗೆಯ ಅನಿವಾರ್ಯತೆ ಇತ್ತು.

`ಕೈ’ ಚೆಲ್ಲಿದ ಅವಕಾಶ!

ಹಳ್ಳಿಗಳ ಕಡೆ ಒಂದು ಲೇವಡಿ ಮಾತಿದೆ. ‘ಕತ್ತೆಗೆ ಕೊಂಬು ಬಂದರು ಬರಹುದು, ಆದರೆ ಕಾಂಗ್ರೆಸ್ಸಿಗರಿಗೆ ಬುದ್ದಿ ಬರಲ್ಲ’ ಅಂತ. ಕಾಂಗ್ರೆಸ್ಸಿಗರ ಬಣ ರಾಜಕಾರಣ ಅದನ್ನು ದಿಟ ಮಾಡುತ್ತಿದೆ. ಶಾಸಕರ ಖರೀದಿ ಮೂಲಕ ಅಧಿಕಾರಕ್ಕೇರಿರುವ ಬಿಜೆಪಿಯ ಬಗ್ಗೆ ಜನರಲ್ಲಿ ಅಷ್ಟೇನು ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅದೇ ಸಂದರ್ಭದಲ್ಲಿ ಉಕ್ಕಿ ಹರಿದ ನೆರೆ ನಿರ್ವಹಣೆ ಮತ್ತು ಪರಿಹಾರ ನೀಡಿಕೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೋರಿದ ಅಸಡ್ಡೆಗಳು ಜನರನ್ನು ಮತ್ತಷ್ಟು ಸಿಟ್ಟಿಗೇಳಿಸಿದ್ದವು. ಇಂಥಾ ಸಂದರ್ಭದಲ್ಲಿ ಬೀದಿಗಳಿದು ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿ ಜನರ ವಿಶ್ವಾಸ ಗಳಿಸುವ ಅವಕಾಶ ಕಾಂಗ್ರೆಸ್ ನಾಯಕರ ಮುಂದಿತ್ತು. ಆದರೆ ಯಕಶ್ಚಿತ್ ಪ್ರತಿಪಕ್ಷ ನಾಯಕನ ಸ್ಥಾನದ ಕಿತ್ತಾಟದಲ್ಲಿ ಅಂತಹ ಅವಕಾಶ ಕೈಚೆಲ್ಲಿ ಕೂತಿದ್ದಾರೆ. ಕೇಂದ್ರದ ವಿರುದ್ಧ ಬಿಜೆಪಿಯವರೇ ಬಂಡಾಯವೆದ್ದು, ಪ್ರತಿಹೇಳಿಕೆ ಕೊಟ್ಟು, ಪರಸ್ಪರ ಕಾಲೆಳೆದುಕೊಳ್ಳುವಷ್ಟು ವೈಪರೀತ್ಯ ತಲುಪಿದರೂ ಕಾಂಗ್ರೆಸ್ ನಾಯಕರು ಟ್ವೀಟ್ ಮತ್ತು ಮೀಡಿಯಾ ಸ್ಟೇಟ್‍ಮೆಂಟ್ ಹೊರತಾಗಿ ಬೇರಾವ ಸಾಹಸಕ್ಕೂ ಕೈಹಾಕಲಿಲ್ಲ. ಇನ್ನು ಎನ್‍ಆರ್‍ಸಿ ವಿಚಾರದಲ್ಲೂ ಕಾಂಗ್ರೆಸ್ ನಾಯಕರದ್ದು ಇದೇ ನಿರ್ಲಕ್ಷ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...