Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಬೇಟೆಯಲ್ಲ ಆಟವೆಲ್ಲ: ಗೊಂದಲ ಗೋಜಲುಗಳನ್ನು ಕಾಣಿಸುವ ಕಾದಂಬರಿ

ಪುಸ್ತಕ ಪರಿಚಯ; ಬೇಟೆಯಲ್ಲ ಆಟವೆಲ್ಲ: ಗೊಂದಲ ಗೋಜಲುಗಳನ್ನು ಕಾಣಿಸುವ ಕಾದಂಬರಿ

- Advertisement -
- Advertisement -

ಜಯಂತ್ ಕಾಯ್ಕಿಣಿ, ವಿವೇಕ್ ಶಾನಬಾಗ್ ಮತ್ತು ಎಂ.ಎಸ್. ಶ್ರೀರಾಮ್ ಈ ಮೂವರೂ ಬರಹಗಾರರ ಬಗ್ಗೆ ನನಗೆ ಯಾವಾಗಲೂ ಹೆಚ್ಚಿನ ಕುತೂಹಲ. ಈ ಮೂವರೂ ಹಲವು ಘಟ್ಟಗಳಲ್ಲಿ, ಕರ್ನಾಟಕದಿಂದ ದೂರದಲ್ಲಿ-ದೇಶದ ಹಲವೆಡೆಯಲ್ಲಿ, ದೇಶದಿಂದಾಚೆಗೆ ನೆಲೆಸಿದ್ದು, ಬದಲಾಗುತ್ತಿರುವ ಜಗತ್ತನ್ನು ಕರ್ನಾಟಕದ ಸೊಗಡಿನೊಂದಿಗೆ ಖುದ್ದಾಗಿ ನೋಡಿದವರು. ನನ್ನ ಪ್ರೀತಿಯ ಊರಾದ ಮುಂಬಯಿಯಲ್ಲಿ ಇದ್ದವರು(ಹೀಗೆ ನಾನು ಅಂದುಕೊಂಡಿದ್ದು). ನನ್ನ ಸೀಮಿತ ತಿಳಿವಳಿಕೆಯಲ್ಲಿ ವ್ಯಾಸರಾಯ ಬಲ್ಲಾಳರು ಮತ್ತು ಯಶವಂತ ಚಿತ್ತಾಲರ ನಂತರ ಕಾರ್ಪೋರೆಟ್ ಜಗತ್ತನ್ನು ಖುದ್ದಾಗಿ ನೋಡಿ ಬರೆದವರು ಇವರುಗಳೇ. ಕಾಯ್ಕಿಣಿ ಕಟ್ಟಿಕೊಡುವ ಮುಂಬಯಿಯ ವಿವರ ನನ್ನ ಕಣ್ಣನ್ನು ಅರಳಿಸುತ್ತಿದ್ದವು. ಆದರೆ ನನ್ನ ಮುಂಬಯಿ ಮತ್ತು ಕಾಯ್ಕಿಣಿಯವರ ಮುಂಬಯಿಯಲ್ಲಿ ದೊಡ್ಡ ಅಂತರವಿದೆ. ನಾನು ಮುಂಬಯಿ ಸೇರಿದ ವರ್ಷವೇ ಅವರು ಮುಂಬಯಿ ತೊರೆದಿದ್ದೂ ಅದಕ್ಕೆ ಕಾರಣವಿರಬಹುದು.

ನಮ್ಮ(ಭಾರತದ) ಜಗತ್ತು ಒಂದು ಟ್ರಾನ್ಸಿಷನಲ್ ಅವಧಿಯಲ್ಲಿ ಸಾಗುತ್ತಿದೆ, ಸಂಬಂಧಗಳು ಬದಲಾಗುತ್ತಿವೆ. ಹಿಂದೆ ನೋಡಿದ ಭಾರತವೇನೂ ಕಾಣೆಯಾಗಿಲ್ಲ, (ನಮ್ಮಂಥ ’ಆಧುನಿಕ’ ಜಗತ್ತಿನಲ್ಲಿ ಪ್ರವೇಶಿಸುವವರಿಗೆ ಕಣ್ಮರೆಯಾಗಿದ್ದು ನಿಜ.) ಅದರೊಂದಿಗೆ ಹೊಸ ಜಗತ್ತೊಂದು ಸೃಷ್ಟಿಯಾಗಿದ್ದು, ಅದು ಹಲವರಿಗೆ ಮುಚ್ಚಿದ ಬಾಗಿಲ ಜಗತ್ತಿನಂತೆ ಇದೆ. ಪ್ರವೇಶಾವಕಾಶ ಎಲ್ಲರಿಗೂ ಇದೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ, ಹೆಚ್ಚಿನವರಿಗೆ ಅದರ ಬಾಗಿಲು ಮುಚ್ಚಿಯೇ ಇದೆ. ಆ ಜಗತ್ತಿನ ಭಾಷೆ ಇಂಗ್ಲಿಷು. ಭಾಷೆಯೊಂದಿಗೆ ಸಂಸ್ಕೃತಿ ಹೇಗೆ ತಗಲುಹಾಕಿಕೊಂಡಿದೆ ಎಂಬುದು ನಮಗೆಲ್ಲ ತಿಳಿದ ವಿಷಯ. ಈ ’ಸೌತ್ ಬಾಂಬೆ’(ಸೊಬೊ)ಯ ಜಗತ್ತನ್ನು ಭೇದಿಸುವುದು ಕಷ್ಟವಿದ್ದರೂ, ಭೇದಿಸಿದವರೂ ಅನೇಕರಿದ್ದಾರೆ. ಈ ಎರಡೂ ಜಗತ್ತುಗಳಲ್ಲಿ ವಿಹರಿಸಿದ ಇವರ ಸಾಹಿತ್ಯ ಓದಲು ಎಂದಿಗೂ ಕುತೂಹಲಕಾರಿಯಾದದ್ದೇ.

ಬೇಟೆಯಲ್ಲ ಆಟವೆಲ್ಲ ಎಂಬ ಎಂ ಎಸ್ ಶ್ರೀರಾಮ್ ಅವರ ಕಥೆಯೂ ಈ ಜಗತ್ತನ್ನು ಭೇದಿಸಿದವರ ಕಥೆ. ಕಾರ್ಪೋರೇಟ್ ಜಗತ್ತಿನ ಹೆಚ್ಚಿನ ಕಥೆಗಳಂತೆ ಈ ಕಥೆಯೂ ಹೊಸ ಜಗತ್ತಿನಲ್ಲಿ ’ಯಶಸ್ವಿ’ಯಾದವರ ಕಥೆ. ಹೊರಗಿನಿಂದ ಕಾಣುವ ನಮ್ಮಂತವರಿಗೆ, ಮೈಸೂರಿನ ಮೂಲದ ಪಾತ್ರಗಳಿಗೆ ತಮ್ಮ ಬೇರುಗಳನ್ನು ಸಂಪೂರ್ಣವಾಗಿ ಕಳಚಿ, ಪೂರ್ಣಪ್ರಮಾಣದಲ್ಲಿ ’ಸೊಬೊ’ ಆಗಬಹುದಲ್ಲ ಎಂದೆನಿಸುತ್ತಾದರೂ, ಇವರ್‍ಯಾರೂ ಬೇರುಗಳನ್ನು ಕಳಚಿಕೊಳ್ಳುವುದಿಲ್ಲ. ಬಹುಶಃ ಆ ಮಟ್ಟದ ಯಶಸ್ವಿಗಳಾಗಿಲ್ಲವೇನೋ, ಅಥವಾ ಎಷ್ಟೇ ಯಶಸ್ಸು ಕಂಡರೂ ಸಂಪೂರ್ಣವಾಗಿ ಬೇರುಗಳನ್ನು ಕಳಚಿಕೊಳ್ಳಲು ಸಾಧ್ಯವಿಲ್ಲವೇನೋ.

ಸಹಜವಾಗಿಯೇ ಎಲ್ಲಾ ಪಾತ್ರಗಳು ಒಂದು ಟ್ರಾನ್ಸ್‌ಫಾರ್ಮೇಷನ್‌ಗೆ ಒಳಗಾಗಿದ್ದಾರೆ. ಅನಿರುದ್ಧ ಒಬ್ಬ ಆರ್ಥಾಡಾಕ್ಸ್ ವ್ಯಕ್ತಿಯಿಂದ ಅಷ್ಟೇನೂ ಆರ್ಥಾಡಾಕ್ಸ್ ಆಗಿರದ ವ್ಯಕ್ತಿಯಾಗಿ ಬದಲಾದರೆ, ಅವನು ಗೆಳೆಯ ಅಖ್ತರ್ ಹುಸೇನ್‌ನ ರೂಪಾಂತರ ಮೇಲ್ನೋಟಕ್ಕೆ ಅವನ ವಿರುದ್ಧದ ದಿಕ್ಕಿನಲ್ಲಿದೆ. ಸುಜಾತಳ ಟ್ರಾನ್ಸ್‌ಫಾರ್ಮೇಷನ್ ಅತ್ಯಂತ ಡ್ರಾಸ್ಟಿಕ್ ಆಗಿದೆ ಮತ್ತು ಆಕೆ ಎಲ್ಲರಿಗಿಂತ ಯಶಸ್ವಿಯಾಗಿದ್ದಾಗಿದೆ. ಅವರ ಆಳದ ಭಾವಗಳು, ದ್ವಂದ್ವಗಳು, ತೋರಿಕೆಗಳೆಲ್ಲವೂ ಸಹಜವಾಗಿ ಒಂದೊಂದಾಗಿ ತೆರೆದುಕೊಳ್ಳುತ್ತವೆ. ಸಹಜವಾಗಿ ತೆರೆದುಕೊಳ್ಳದೇ ಇರುವುದು ಈಗಾಗಲೇ ಆ ಸೊಬೊ ಜಗತ್ತಿನಲ್ಲಿರುವವರ ದ್ವಂದ್ವಗಳು. ಅವರನ್ನು ನೋಡಿದಾಗ ಅನಿಸುವುದು ಹಾಗೆಯೇ, ಎಷ್ಟು ಸಾರ್ಟೆಡ್ ಇದಾರಪ್ಪ, ದ್ವಂದ್ವಗಳೇ ಇಲ್ಲ ಎಂದು. ಶಿವಾನಿ ಆ ಲೋಕವನ್ನು ಪ್ರತಿನಿಧಿಸುತ್ತಾಳೆ. ಅವಳು ನನಗೆ ತಿಳಿಯಲಿಲ್ಲ. ಅವಳ ಬಾಯ್‌ಫ್ರೆಂಡ್ ಚಿನ್ಮಯನಿಗೆ ಅನಿಸಿದಂತೆ ಓದುಗನಿಗೂ ಅವಳು ಕ್ರೂರಿ ಎನಿಸುತ್ತಾಳೆ. ವ್ಯವಹಾರದಲ್ಲಿ ಅವಳು ಕ್ರುಎಲ್ ಆಗಿಯೇ ಮುಂದುವರೆಯಬೇಕಾದ ಅವಶ್ಯಕತೆ ಅವಳಿಗಿರಬಹುದು ಆದರೆ ವೈಯಕ್ತಿಕ ಜೀವನದಲ್ಲಿ? ಹೌದು, ಇರಬಹುದು. ಆದರೂ ಅವಳನ್ನು ಅರಿಯುವ, ಅವಳ ಒಳಜಗತ್ತಿನೊಳಗೆ ಇಣುಕುವ ತವಕವನ್ನು ತಣಿಸುವುದಿಲ್ಲ. ಚಿನ್ಮಯ ಮತ್ತು ಶಿವಾನಿ ನಡುವೆ ಇರಬಹುದಾಗಿದ್ದ ಪ್ಯಾಷನ್ ಓದುಗನಿಗೆ ಕಾಣಿಸುವುದಿಲ್ಲ. ಪ್ಯಾಷನ್ ಇಲ್ಲದೇ ಇರುವ ಸಂಬಂಧವಾಗಿದ್ದರೆ, ಪ್ಯಾಷನ್ ಇಲ್ಲದ, ತಣ್ಣನೆಯ ಸಂಬಂಧದ ಬಗ್ಗೆ ಇರುವ ಕುತೂಹಲವೂ ತಣಿಯುವುದಿಲ್ಲ.

ಇಲ್ಲಿಯ ಗಂಡು ಹೆಣ್ಣಿನ ಸಂಬಂಧಗಳಲ್ಲಿ ಆ ಒಂದು ತೀವ್ರವಾದ ಪ್ಯಾಷನ್ ಕಾಣಿಸುವುದಿಲ್ಲ. ಅನಿರುದ್ಧ ಕವಿತಾಳ ಸಂಬಂಧದಲ್ಲೂ ಅದು ಉಳಿದಿಲ್ಲ. ಸುಜಾತಾ ಮುಕುಂದನ ಸಂಬಂಧದಲ್ಲಿ ಅದು ಕಾಣಿಸದಿದ್ದರೂ, ಮುಕುಂದ ಮತ್ತು ಶಿವಾನಿಯ ಸಂಬಂಧವನ್ನು ಕೆದಕದೇ ಹೋಗಿದ್ದು ಆಶ್ಚರ್ಯ.

ಸಂಬಂಧಗಳು ಬದಲಾಗುತ್ತಿರುವ ಸಮಯದಲ್ಲಿ ಬದಲಾಗುತ್ತಿರುವ ರಾಜಕೀಯವನ್ನು ಎಲ್ಲೂ ತುರುಕುವ ಪ್ರಯತ್ನ ಮಾಡದೇ, ಈ ಪಾತ್ರಗಳು ಸವೆಸುವ ಪಯಣದಲ್ಲಿಯೇ ರಾಜಕೀಯದಲ್ಲಾದ ಸೂಕ್ಷ್ಮ ಬದಲಾವಣೆಗಳನ್ನು, ಅವುಗಳು ಬೀರುತ್ತಿರುವ ಪರಿಣಾಮಗಳನ್ನೂ ಅಷ್ಟೇ ಆಳವಾಗಿ ಸೂಕ್ಷ್ಮವಾಗಿ ಕಂಡಿದ್ದಾರೆ. ಈ ಟ್ರಾನ್ಸಿಷನ್‌ನ ಪರ್ವ ಎಂದರೆ ಅದರ ಪ್ರಮುಖ ಅಂಶ ಗೊಂದಲ. ಈ ಗೊಂದಲಗೋಜಲುಗಳನ್ನು ಲೀಲಾಜಾಲವಾಗಿ ಹಿಡಿದಿಟ್ಟು, ಕಥೆಯೂ ಒಂದಿಷ್ಟು ಗೊಂದಲಗಳನ್ನು ಸೃಷ್ಟಿಸಿ ನಮ್ಮ ಕಾಲದ ಒಂದು ಅತ್ಯಂತ ಪ್ರಮುಖ ಕೃತಿಯನ್ನು ಶ್ರೀರಾಮ್ ರಚಿಸಿದ್ದಾರೆ. ನಮ್ಮೆಲ್ಲರನ್ನು ಆವರಿಸುವ ಈ ಸುಂದರ ಗೊಂದಲಗೋಜಲುಗಳನ್ನು ಅನಾವರಣಗೊಳಿಸುವ-ಬಿಡಿಸುವ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಹೆಚ್ಚೆಚ್ಚು ಮೂಡಲಿ.

ರಾಜಶೇಖರ ಅಕ್ಕಿ
ಸಾಮಾಜಿಕ ಕಾರ್ಯಕರ್ತರಾಗಿರುವ ಅಕ್ಕಿ ಅಭಿನಯ, ಚಿತ್ರಕಥೆ ಬರಹ ಕಲಿಸಿಕೊಡುತ್ತಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ …

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...