Homeಅಂಕಣಗಳುಮುರುಘಾ ಶರಣರ ಮರುಳು ಮಾತು ನಿಜವೆ?

ಮುರುಘಾ ಶರಣರ ಮರುಳು ಮಾತು ನಿಜವೆ?

- Advertisement -
- Advertisement -

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಹರಿದು ಬಂದ ಜನಸಾಗರ ನೋಡಿದ ಬಿಜೆಪಿಗಳು ಅದಕ್ಕೆ ಪ್ರತಿಯಾಗಿ ತಾವೂ ಸಾಗರೋಪಾದಿಯಲ್ಲಿ ಜನರನ್ನು ಸೇರಿಸುವ ಬಗ್ಗೆ ಗಾಢ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರಂತಲ್ಲಾ. ಸ್ವತಃ ಎಡೂರಪ್ಪನವರೇ ಇಡೀ ದಿನ ಟಿ.ವಿ. ಮುಂದೆ ಕುಳಿತು ಸಿದ್ದರಾಮೋತ್ಸವ ನೋಡಿ, ಏನೂ ಹೇಳಲಾಗದ ಏನೂ ಮಾಡಲಾಗದ ಅಸಹಾಯಕತೆ ಚಡಪಡಿಕೆ ಪ್ರದರ್ಶಿಸಿದರು. ಕಾರಣ ಅವರೀಗ ಮುಖ್ಯಮಂತ್ರಿಯಲ್ಲಿ. ವಿರೋಧಪಕ್ಷದ ನಾಯಕರೂ ಅಲ್ಲ. ತಮ್ಮ ಅಧಿಕಾರಾವಧಿಯ ಮಧ್ಯದಲ್ಲೇ ಅವರನ್ನು ಕೆಳಗಿಳಿಸಲಾಯ್ತು. ಇಳಿಯುವಾಗಲಾದರೂ ಇಂತಹದೊಂದು ಎಡೂರು ಜಾತ್ರೆ ಮಾಡಿಬಿಡಬಹುದಿತ್ತು. ಆ ಜಾತ್ರೆಗೆ ಸರಕಾರದಿಂದ ಭಿಕ್ಷೆ ಪಡೆದ ಹಲವು ಜಗತ್ತಿನ ಜಗದ್ಗುರುಗಳ ಪರಿಷೆಯೇ ನೆರೆಯುತ್ತಿತ್ತು. ಸಹಜವಾಗಿ ಆ ಮಠಗಳ ಭಕ್ತಾದಿಗಳು, ಸರಕಾರಿ ಮತ್ತು ಖಾಸಗಿಯವರ ಸುವಿಹಾರಿ ಬಸ್ಸಿನಲ್ಲಿ ಬಂದಿಳಿಯುತ್ತಿದ್ದರು. ಅವರಿಗೆಲ್ಲಾ ಹೋಳಿಗೆ ಶೀಖರಣೆ ಊಟ ಹಾಕಿಕಳಿಸಬಹುದಿತ್ತು. ಪೀಠ ಹಿಡಿದು ಕುಳಿತಿರುವ ಸಿರಿವಂತ ಸ್ವಾಮಿಗಳು, ತಮ್ಮ ಎಂದಿನ ನಿಷ್ಠುರ ಮಾತುಗಳನ್ನು ಝಳಪಿಸಿ ಎಡೂರಪ್ಪನವರು ಎಂದಿಗೂ ಸ್ಥಾನ ಬಿಟ್ಟುಕೊಡಬಾರದು, ನನ್ನನ್ನಾದರೂ ನೋಡಿ ಅವರು ಧೈರ್ಯ ತುಂಬಿಕೊಳ್ಳಬೇಕೆಂದು ಅಪ್ಪಣೆ ಕೊಡಿಸಿದರೆ, ಇನ್ನ ಮುರುಘಾ ಮಠದವರು ಎಡೂರಪ್ಪನವರು ಎದೆಗುಂದಬಾರದು, ಸುತ್ತ ಮುತ್ತ ಶತ್ರುಗಳಿರುವಾಗ ಧೈರ್ಯದಿಂದ ರಾಜ್ಯವನ್ನಾಳಬೇಕು ಎಂದು ಹೇಳೇ ಹೇಳುತ್ತಿದ್ದರಂತಲ್ಲಾ, ಥೂತ್ತೆರಿ.

****

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವಕ್ಕೆ ಬಂದಿದ್ದ ರಾಹುಲಗಾಂಧಿಯನ್ನು ಒಂದರ್ಥದಲ್ಲಿ ಹೈಜಾಕ್ ಮಾಡಿದ ಡಿ.ಕೆ. ಶಿವಕುಮಾರ್ ತಾವು ಮುಂದೆ ಮುಖ್ಯಮಂತ್ರಿಯಾಗಲು ಶರಣ ಸಮೂಹದ ಓಟು ಬೇಕಾದ್ದರಿಂದ, ತಂತ್ರಗಾರಿಕೆ ನಡೆಸಿ, ಅದರಂತೆ ಮುರುಘಾ ಶರಣರಿಂದ ರಾಹುಲಗಾಂಧಿಗೆ ಲಿಂಗದೀಕ್ಷೆ ಕೊಡಿಸೇಬಿಟ್ಟರಂತಲ್ಲಾ. ಮುಖ್ಯವಾಗಿ ದಯವೇ ಧರ್ಮದ ಮೂಲವೆಂದು ಒಪ್ಪಿದವರೆಲ್ಲಾ ಬಸವಣ್ಣನ ಅನುಯಾಯಿಗಳಾಗುತ್ತಾರೆ. ಅವರಿಗೆ ಲಿಂಗದೀಕ್ಷೆಯ ಅಗತ್ಯವೇ ಇರುವುದಿಲ್ಲ. ಇಂತಹ ಸೂಕ್ಷ್ಮ ವಿಚಾರ ಮುರುಘಾ ಶರಣರಿಗೆ ಹೊಳೆಯಬೇಕಿತ್ತು. ನಮ್ಮ ಮುರುಘಾ ಶರಣರು ಬೆಂಬಲಿಸಿದ ಎಡೂರಪ್ಪ ಶರಣ. ಬಸವ ತತ್ವಪ್ರತಿಪಾದಕರಾಗಬೇಕಿತ್ತು. ಆದರೇ ಮಾಡಿದ್ದೆಲ್ಲಾ ಪುರೋಹಿತ ಶಾಹಿಗಳು ಹೇಳಿದ ಕೆಲಸವನ್ನು. ಅವರ ನಂತರ ಮುಖ್ಯಮಂತ್ರಿಯಾದ ಸಾದಲಿಂಗಾಯಿತರ ಬಸವರಾಜ ಬೊಮ್ಮಾಯಿ ಮತ್ತೊಬ್ಬ ಶರಣ. ಲಿಂಗಕಟ್ಟಿಗೊಂಡು ಇವರು ಮಾಡಿದ ಆಡಳಿತವೆಲ್ಲಾ ಕೇಶವಕೃಪಾದ ಆಜ್ಞೆಯ ಪರಿಪಾಲನೆ; ಹಿಜಾಬು, ನಮಾಜು, ಮುಸ್ಲಿಂ ವ್ಯಾಪಾರಿಗಳ ನಿರ್ಬಂಧ ಇತ್ಯಾದಿ ಕೇಶವ ಕೃಪದ ಮನೆಹಾಳು ಕೃತ್ಯಗಳ ಜಾರಿ ಮತ್ತು ಸಮರ್ಥನೆ; ಇದ ಒಬ್ಬ ಲಿಂಗದೀಕ್ಷೆಯ ಶರಣನ ಆಡಳಿತದಲ್ಲಿ ಜರುಗಿದ ದುಸ್ವಪ್ನ. ಸಿದ್ದರಾಮಯ್ಯ ಹುಟ್ಟಿನಿಂದ ಶರಣನಲ್ಲ. ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣ ಮಾಡಿದ್ದು ಬಸವ ಜಯಂತಿಯಂದು. ನಂತರ ಮಾಡಿದ್ದು ಶರಣರ ದಾಸೋಹ ಕಲ್ಪನೆಯ ಅನನಭಾಗ್ಯ ಮುಂತಾದ ಕೆಲಸ. ಹಾಗೆ ನೋಡಿದರೆ, ಲಿಂಗದೀಕ್ಷೆಗೂ ಶರಣ ತತ್ವ ಪ್ರತಿಪಾದನೆಗೂ ತಾಳಮೇಳವೇ ಇಲ್ಲವೆಂಬುದು ಮುರುಘಾ ಶರಣರಿಗೆ ಹೊಳೆಯಬೇಕಿತ್ತಂತಲ್ಲಾ, ಥೂತ್ತೆರಿ.

*****

ಚಿತ್ರದುರ್ಗದ ಮಠಕ್ಕೆ ಬಂದ ರಾಹುಲಗಾಂಧಿಯನ್ನ ಹಿಡಿದುಕೊಂಡ ಮುರುಘಾ ಶರಣರು, ಮೋದಿ ಒಬ್ಬ ಸಮರ್ಥನಾಯಕ, ಸದ್ಯ ನಮ್ಮ ಸುತ್ತಲೂ ಶತ್ರು ರಾಷ್ಟ್ರಗಳಿದ್ದು, ಅವುಗಳಿಂದ ದೇಶವನ್ನ ರಕ್ಷಿಸಬೇಕಾದರೆ ಮೋದಿಯಂತಹ ಸಮರ್ಥ ನಾಯಕ ಬೇಕೆಂದು ರಾಹುಲಗಾಂಧಿಗೇ ಹೇಳಿದರಂತಲ್ಲಾ. ಆಗ ಮುಗ್ದ ಬಾಲಕನಂತೆ ಮುರುಘಾ ಶರಣರ ಮುಖ ನೋಡಿದ ರಾಹುಲಗಾಂಧಿ, ಶರಣರ ಜ್ಞಾನಕ್ಕೆ ಮರುಕ ಪಟ್ಟಿರಬಹುದಲ್ಲವೆ. ಮುಖ್ಯವಾಗಿ ಕಾಮನ್ ಸೆನ್ಸ್ ಏಂಬುದೊಂದು ಮನಸ್ಥಿತಿ ಇದ್ದಿದ್ದರೆ, ಮೋದಿಯ ಸಮರ್ಥ ನಾಯಕತ್ವದ ಅರಿವಾಗಬೇಕಿತ್ತು. ಚೀನಾ ಅತಿಕ್ರಮಿಸಿರುವ ವಿಷಯವನ್ನು ದೇಶದ ಮುಂದೆ ಅವರು ಈವರೆಗೂ ಹೇಳಿಲ್ಲ. ಕೃಷಿ ಕಾಯ್ದೆ ಜಾರಿಮಾಡಿದ್ದಕ್ಕಾಗಿ ಒಂದು ವರ್ಷ ನಡೆದ ರೈತರ ಧರಣಿಯಲ್ಲಿ ಏಳುನೂರ ರೈತರು ಹತರಾದರು. ಆ ಬಗ್ಗೆ ಮೋದಿ ಈವರೆಗೂ ಪ್ರತಿಕ್ರಿಯಿಸಿಲ್ಲ. ಹೀಗಿರುವಾಗ, ಮೋದಿ ಒಬ್ಬ ಸಮರ್ಥ ಪ್ರಧಾನಿ ಎಂಬ ಅಭಿಪ್ರಾಯವನ್ನು ಹೊಂದಿರುವ ಮುರುಘಾ ಶರಣರು ಚಿತ್ರದುರ್ಗದಾಚೆಗೆ ದೇಶದ ಆಗುಹೋಗುಗಳನ್ನು ಕಣ್ಣುತೆರೆದು ನೋಡಿದರೆ ನಿಜದ ಅರಿವಾಗಬಹುದು ಎಂಬ ಅಭಿಪ್ರಾಯ ರಾಹುಲಗಾಂಧಿಗೆ ಹೊಳೆದಿರಬಹುದಂತಲ್ಲಾ, ಥೂತ್ತೆರಿ.

****

ಇನ್ನ ನಮ್ಮೂರ ಕೆರೆ ಕೋಡಿಯಲ್ಲಿ ಕುಳಿತಿರುವ ಕಾಲಜ್ಞಾನಿ ಸ್ವಾಮೀಜಿಗಳು ಎಂದಿನಂತೆ ಮತ್ತೆ ಜನಗಳನ್ನು ಹೆದರಿಸಿದ್ದಾರೆ. ದುರ್ದೈವವೆಂದರೆ ಅವರ ಮಾತುಗಳಿಗೆ ಯಾರೂ ಹೆದರಿದಂತೆ ಕಾಣದೇ ಇರುವುದರಿಂದ ಮತ್ತೆ ಗುಡಾಗಿದ್ದಾರಂತಲ್ಲಾ. ಆ ಗುಡುಗಿನ ಶಬ್ದ ಯಾವುದೆಂದರೆ ಕರ್ನಾಟಕ ಅತಿವೃಷ್ಠಿಯಿಂದ ಕಂಗೆಟ್ಟು ಹೋಗಲಿದೆ, ದಟ್ಟೈಸಿದ ಮೋಡದಿಂದ ಧಾರಾಕಾರ ಮಳೆಯಾಗುತ್ತದೆ. ಈ ಮಳೆ ದೆಸೆಯಿಂದ ಕೆರೆಕಟ್ಟಿ ತುಂಬಿ ಹರಿಯುತ್ತವೆ. ಆದಕಾರಣ ಕೆರೆಗೆ ಬಿಟ್ಟು ಸಾಕುತ್ತಿರುವ ಮೀನುಗಳು ಕೊಚ್ಚಿಕೊಂಡು ಹೋಗಿ ಕಂಡವರ ಪಾಲಾಗುತ್ತವೆ. ಕೆರೆ ಏರಿ ಹೊಡೆಯುತ್ತದೆ. ಮನೆಗಳ ಗೋಡೆ ಕುಸಿಯುತ್ತದೆ. ಗೋಡೆ ಕೆಳಗೆ ಸಿಕ್ಕವರು ಸತ್ತುಹೋಗುತ್ತಾರೆ. ಜಾನುವಾರುಗಳು ನೀರಲ್ಲಿ ತೇಲುತ್ತ ಹೋಗುತ್ತವೆ. ರಸ್ತೆಯ ಬದಿಯ ಮರಗಳು ರಸ್ತೆಗೇ ಉರುಳುತ್ತವೆ. ಸಂಚಾರಕ್ಕೆ ಅಡ್ಡಿಯಾಗುತ್ತದೆ. ದೇವಸ್ಥಾನ ಮಠಗಳಿಗೆ ಹೋಗುವ ಜನಗಳಿಗೆ ಅನಾನುಕೂಲವಾಗಿ ಪೂಜೆಪುನಸ್ಕಾರಗಳು ನಿಂತುಹೋಗುತ್ತವೆ. ಮಳೆಯಿಂದ ಬೆಳೆಗೆ ಹಾನಿಯಾಗುತ್ತದೆ. ಬೆಳೆಹಾನಿಯಿಂದ ಮಳೆ ಹೆಚ್ಚಾಗುತ್ತದೆ. ದಿನಕ್ಕೊಂದು ಕೊಲೆಯಾಗುತ್ತದೆ. ಕಳ್ಳತನ ಜಾಸ್ತಿಯಾಗುತ್ತದೆ. ಸರಕಾರದ ತನಿಖೆ ನಾಟಕವಾಗುತ್ತದೆ. ರಾಜ್ಯ ಆಳುವ ನಾಯಕನಿಗೆ ಅಪಾಯವಿದೆ. ಅವರಿಗೆ ಅನಾರೋಗ್ಯವುಂಟಾಗಿ ಮಾನಸಿಕ ನೆಮ್ಮದಿ ಕಳೆದುಕೊಂಡು ಏನೇನೂ ಮಾತನಾಡುತ್ತಾರೆ, ಇದಕ್ಕೆ ಪರಿಹಾರವಿದೆ. ಈ ಆಷಾಢ ಮಾಸ ಮುಗಿದ ನಂತರ ಮಠಕ್ಕೆ ಒಂದುನೂರು ದೀಪ ಹಚ್ಚಿ ದಾಸೋಹನಡೆಸಿ ಗುರುವರ್ಯರ ಪಾದ ಹಿಡಿದರೆ ಎಲ್ಲವೂ ಸಾಂಗವಾಗಿ, ಅವರು ನಿರಾತಂಕವಾಗಿ ರಾಜ್ಯದಾಳಬಹುದೆಂಬ ಸಂದೇಶ ಹೊgಟಿದೆಯಂತಲ್ಲಾ, ಥೂಥೂ ಥೂತ್ತೆರಿ.


ಇದನ್ನೂ ಓದಿ: ಭೈರಪ್ಪನವರ ಕೃತಿಗಳಿಗೆ ಒಳ್ಳೆ ವಿಮರ್ಶೆ ಬಂದಿಲ್ಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...