ನನ್ನ ಭದ್ರತಾ ಸಿಬ್ಬಂದಿಯನ್ನು ತೆಗೆದುಹಾಕಿರುವುದರ ಹಿಂದಿನ ಉದ್ದೇಶ ನನ್ನನ್ನು ಕೊಲ್ಲಲು ನಡೆಸಿರುವ ಪಿತೂರಿಯೇ? ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವೀಲ್ ಚೇರ್ನಲ್ಲಿಯೇ ಕುಳಿತು ಬಂಕುರಾ ಜಿಲ್ಲೆಯ ಮೆಜಿಯಾದಲ್ಲಿ ನಡೆದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಮತಾ, “ಕೇಂದ್ರ ಗೃಹ ಸಚಿವರು ದೇಶವನ್ನು ನಡೆಸುತ್ತಿದ್ದಾರಾ ಅಥವಾ ಬಂಗಾಳದಲ್ಲಿ ನಮಗೆ ಕಿರುಕುಳ ನೀಡಲು ಸಂಚು ರೂಪಿಸುತ್ತಿದ್ದಾರಾ? ಅವರ ರ್ಯಾಲಿಗಳಲ್ಲಿ ಕಡಿಮೆ ಜನ ಸೇರುತ್ತಿರುವುದರಿಂದ ಅಮಿತ್ ಶಾ ನಿರಾಶೆಗೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಅವರು (ಅಮಿತ್ ಶಾ) ದೇಶವನ್ನು ನಡೆಸುವ ಬದಲು, ಕೋಲ್ಕತ್ತಾದಲ್ಲಿ ಕುಳಿತು ಟಿಎಂಸಿ ಮುಖಂಡರಿಗೆ ಕಿರುಕುಳ ನೀಡುವ ಪಿತೂರಿ ನಡೆಸುತ್ತಿದ್ದಾರೆ. ಅವರಿಗೆ ಏನು ಬೇಕು? ಅವರು ನನ್ನನ್ನು ಕೊಲ್ಲಲು ಬಯಸುತ್ತಾರೆಯೇ? ನನ್ನನ್ನು ಕೊಲ್ಲುವ ಮೂಲಕ ಈ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಅವರು ಭಾವಿಸಿದ್ದಾರೆಯೇ? ಅದು ಅವರ ತಪ್ಪು ಕಲ್ಪನೆ” ಎಂದು ಹೇಳಿದ್ದಾರೆ.
“ರೈತರು ಆರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಾಗಿದ ಕೇಂದ್ರದ ಮಂತ್ರಿಗಳೆಲ್ಲಾ ಬಂಗಾಳದಲ್ಲಿ ಹೋಟೆಲ್ ಬುಕ್ ಮಾಡಿ ಕುಳಿತುಕೊಂಡಿದ್ದಾರೆ. ಅಲ್ಲಿ, ನನ್ನನ್ನು ಕೊಲೆಗೈಯಲು, ಟಿಎಂಸಿಯನ್ನು ನಾಶ ಮಾಡಲು ಮತ್ತು ಚುನಾವಣಾ ಆಯೋಗವನ್ನು ಬಳಸಿಕೊಂಡು ಟಿಎಂಸಿ ವಿರುದ್ಧ ಹೇಗೆ ಪ್ರಕರಣಗಳನ್ನು ದಾಖಲಿಸಬಹುದು ಎಂದು ಸಂಚು ಹೂಡುತ್ತಿದ್ದಾರೆ” ಎಂದು ಆರೋಪಿಸಿದರು.
ಕಳೆದ ವಾರ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಗಾಯಗೊಂಡ ನಂತರ, ಮುಖ್ಯಮಂತ್ರಿಯ ಭದ್ರತಾ ಸಿಬ್ಬಂದಿಗಳ ಉಸ್ತುವಾರಿ ವಿವೇಕ್ ಸಹಯ್ ಅವರನ್ನು ಚುನಾವಣಾ ಆಯೋಗವು ಅಮಾನತುಗೊಳಿಸಿದೆ.
ಇದನ್ನೂ ಓದಿ: ಅರ್ನಾಬ್ ವಾಟ್ಸಾಪ್ ಚಾಟ್: ಕೇಂದ್ರಕ್ಕೆ ಯಾವುದೇ ಮಾಹಿತಿಯಿಲ್ಲ ಎಂದ ಸಚಿವ ಜಿ.ಕಿಶನ್ ರೆಡ್ಡಿ
It is real