ಹಿರಿಯ ರಾಜಕಾರಣಿ ಶರದ್ ಪವಾರ್ರವರು NCP ಅಧ್ಯಕ್ಷ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಮುಂಬೈನ ಕಾರ್ಯಕ್ರಮವೊಂದರಲ್ಲಿ ಈ ನಿರ್ಧಾರ ಘೋಷಿಸಿರುವ ಅವರು, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೂ ಸಹ ಸಕ್ರಿಯ ರಾಜಕಾರಣದಲ್ಲಿರುತ್ತೇನೆ ಎಂದಿದ್ದಾರೆ.
ಮುಂಬೈನ ಯಶವಂತ್ರಾವ್ ಚವಾಣ್ ಪ್ರತಿಷ್ಠಾನದಲ್ಲಿ ತಮ್ಮ ಆತ್ಮ ಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, “ನಾನು NCP ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ. ಆದರೆ ನಿವೃತ್ತಿಯಾಗುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ಮುಂದೆಯು ಸಾರ್ವಜನಿಕ ಸಭೆಗಳು, ರ್ಯಾಲಿಗಳಲ್ಲಿ ಭಾಗವಹಿಸುತ್ತೇನೆ. ನಾನು ದೆಹಲಿಯಲ್ಲಿರಲಿ, ಮುಂಬೈ ಅಥವಾ ಪುಣೆಯಲ್ಲಿರಲಿ ಎಂದಿನಿಂದ ನಿಮಗೆ ಸಿಗುತ್ತೇನೆ” ಎಂದಿದ್ದಾರೆ.
1960 ರ ಮೇ 1 ರಂದು ಸಕ್ರಿಯ ರಾಜಕಾರಣಕ್ಕೆ ಇಳಿದೆ. ಈಗ 2023ರ ಮೇ 1 ರಂದು ಕೆಳಗಿಳಿಯುವುದು ಅನಿವಾರ್ಯ ಅನಿಸುತ್ತಿದೆ. ಹಾಗಾಗಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯುತ್ತಿದ್ದೇನೆ ಎಂದಿದ್ದಾರೆ.
ನನ್ನ ರಾಜ್ಯಸಭಾ ಸದಸ್ಯತ್ವದ ಅವಧಿ ಇನ್ನೂ ಮೂರು ವರ್ಷವಿದೆ. ಸಂಸತ್ತಿನಲ್ಲಿ ಮಹಾರಾಷ್ಟ್ರ ಮತ್ತು ಭಾರತದ ಕುರಿತು ಮಾತನಾಡುತ್ತೇನೆ. ಬೇರೆ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ಆದರೆ ತಮ್ಮ ಉತ್ತರಾಧಿಕಾರಿ ಯಾರು ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಬದಲಿಗೆ ಒಂದು ಸಮಿತಿಯನ್ನು ರಚಿಸಿದ್ದು ಆ ಸಮಿತಿಯು ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಸಮಿತಿಯಲ್ಲಿ ಪವಾರ್ ಮಗಳಾದ ಸುಪ್ರಿಯಾ ಸುಳೆ, ಸಹೋದರನ ಮಕ್ಕಳಾದ ಅಜಿತ್ ಪವಾರ್, ಪ್ರಫುಲ್ ಪಟೇಲ್, ಜಯಂತ್ ಪಟೇಲ್, ಅನಿಲ್ ದೇಶ್ಮುಖ್, ರಾಜೇಶ್ ಟೋಪೆ, ಛಗನ್ ಭುಜ್ಬಾಲ್ ಮತ್ತು ಇತರರು ಇದ್ದಾರೆ.
#WATCH | "I am resigning from the post of the national president of NCP," says NCP chief Sharad Pawar pic.twitter.com/tTiO8aCAcK
— ANI (@ANI) May 2, 2023
ಶರದ್ ಪವಾರ್ರವರು 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿತರಾದ ನಂತರ ಪಿ.ಎ ಸಂಗ್ಮಾ ಮತ್ತು ತಾರೀಖ್ ಅನ್ವರ್ ಜೊತೆಗೂಡಿ ಎನ್ಸಿಪಿ ಕಟ್ಟಿದ್ದರು. ಅವರು ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದಾರೆ. ಅಲ್ಲದೇ ಕೇಂದ್ರ ರಕ್ಷಣಾ ಸಚಿವ ಮತ್ತು ಕೃಷಿ ಮಂತ್ರಿಯೂ ಆಗಿದ್ದರು.
ಬೆಂಬಲಿಗರ ಪ್ರತಿಭಟನೆ
ಶರದ್ ಪವಾರ್ರವರ ಈ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಪವಾರ್ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿ ಸಮಾಧಾನಪಡಿಸಿದ್ದಾರೆ.
ಇದನ್ನೂ ಓದಿ: ಬಜರಂಗದಳ, ಪಿಎಫ್ಐ ನಿಷೇಧ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ