ಇತ್ತೀಚೆಗೆ ಬಿಬಿಸಿ ಸುದ್ದಿ ಸಂಸ್ಥೆಯು 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಆರೋಪಗಳು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕುರಿತಾದ ಸರಣಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಇಂದು ಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.
ಅಂತರರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆಗಳ ಅಕ್ರಮದ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದು, ಅದರಂತೆ ಬಿಬಿಸಿ ಮೇಲೂ ಆರೋಪ ಕೇಳಿಬಂದಿದೆ. ಹಾಗಾಗಿ ಸಮೀಕ್ಷೆ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಕೆಲವು ಪತ್ರಕರ್ತರ ದಾಖಲೆಗಳು ಮತ್ತು ಫೋನ್ಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಅಧಿಕಾರಿಗಳು ಇದು ಸಮೀಕ್ಷೆಯೇ ಹೊರತು ದಾಳಿಯಲ್ಲ, ಫೋನ್ಗಳನ್ನು ಹಿಂತಿರುಗಿಸಲಾಗುವುದು ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರಕ್ಕೆ ತಡೆ ವಿವಾದ; ಮೂರು ವಾರಗಳಲ್ಲಿ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
“ನಮಗೆ ಕೆಲವು ಸ್ಪಷ್ಟೀಕರಣಗಳು ಬೇಕಾಗಿದ್ದವು ಮತ್ತು ಅದಕ್ಕಾಗಿ ನಮ್ಮ ತಂಡವು ಬಿಬಿಸಿ ಕಚೇರಿಗೆ ಭೇಟಿ ನೀಡುತ್ತಿದೆ ಮತ್ತು ನಾವು ಸಮೀಕ್ಷೆಯನ್ನು ನಡೆಸುತ್ತಿದ್ದೇವೆ. ನಮ್ಮ ಅಧಿಕಾರಿಗಳು ಖಾತೆ ಪುಸ್ತಕಗಳನ್ನು ಪರಿಶೀಲಿಸಲು ಹೋಗಿದ್ದಾರೆ, ಇದು ದಾಳಿಯಲ್ಲ” ಎಂದು ಆದಾಯ ತೆರಿಗೆ ಮೂಲಗಳು ಪ್ರತಿಪಾದಿಸುತ್ತವೆ.
ಕಳೆದ ತಿಂಗಳು “ಭಾರತ: ಮೋದಿ ಪ್ರಶ್ನೆ” ಎಂಬ ಎರಡು ಭಾಗಗಳ ಸಾಕ್ಷ್ಯಚಿತ್ರದ ಸರಣಿಯನ್ನು ಬಿಬಿಸಿ ಹೊರತಂದಿತ್ತು ಆದರೆ ಭಾರತ ಸರ್ಕಾರ ಜನವರಿ 21 ರಂದು, ಮಾಹಿತಿ ತಂತ್ರಜ್ಞಾನ ನಿಯಮಗಳ 2021ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ವಿವಾದಾತ್ಮಕ ಸಾಕ್ಷ್ಯಚಿತ್ರದ ಲಿಂಕ್ಗಳನ್ನು, YouTube ವೀಡಿಯೊಗಳು ಮತ್ತು Twitter ಪೋಸ್ಟ್ಗಳನ್ನು ಭಾರತದಲ್ಲಿ ನಿರ್ಬಂಧಿಸಲು ನಿರ್ದೇಶಿಸಿತು.
ಪ್ರಧಾನಿ ಮೋದಿಯವರನ್ನು ಟೀಕಿಸುವ ಸಾಕ್ಷ್ಯಚಿತ್ರದ ಬಗ್ಗೆ ಸರ್ಕಾರವು ಬಿಬಿಸಿಯನ್ನು ಗುರಿಯಾಗಿಸಿಕೊಂಡಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
विनाश काले विपरीत बुद्धि pic.twitter.com/bSFGHLjYOD
— Jairam Ramesh (@Jairam_Ramesh) February 14, 2023
“ಇಲ್ಲಿ ನಾವು ಅದಾನಿ-ಹಿಂಡೆನ್ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯನ್ನು ಕೇಳುತ್ತಿದ್ದೇವೆ, ಅಲ್ಲಿ ಸರ್ಕಾರವು ಬಿಬಿಸಿಯನ್ನು ಕಾಡುತ್ತಿದೆ. ವಿನಾಶ ಕಾಲಕ್ಕೆ ವಿಪರೀತ ಬುದ್ದಿ ಎನ್ನುವಂತಾಗಿದೆ” ಎಂದು ಕಾಂಗ್ರೆಸ್ ನಾಯಕ ರಮೇಶ್ ಜೈರಾಮ್ ಪ್ರತಿಕ್ರಿಯಿಸಿದ್ದಾರೆ.