ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ವಿಚಾರಣೆ ನಡೆಸಲು ಸೋಮವಾರ ಮೇರಿ ಕೋಮ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಈ ಬಗ್ಗೆ ಕಳೆದ ವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಪ್ರಮುಖ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದ ಕುಸ್ತಿಪಟು ಸಾಕ್ಷಿ ಮಲಿಕ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ತಮ್ಮ ಜೊತೆ ಸಮಾಲೋಚನೆ ನಡೆಸದೇ ತನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳಿಗೆ ಸಮಿತಿಯನ್ನು ರಚಿಸಿದ್ದಕ್ಕಾಗಿ ಮಂಗಳವಾರ ಸಾಕ್ಷಿ ಮಲಿಕ್ ನಿರಾಶೆ ವ್ಯಕ್ತಪಡಿಸಿದ್ದಾರೆ. ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಮುಖ್ಯಸ್ಥನ ಮೇಲೆ ತನಿಖೆ ನಡೆಸಲು ಮೇಲ್ವಿಚಾರಣಾ ಸಮಿತಿಯ ಮುಖ್ಯಸ್ಥರಾನ್ನಾಗಿ ಬಾಕ್ಸಿಂಗ್ ದಂತಕಥೆ ಮೇರಿ ಕೋಮ್ ಅವರನ್ನು ಘೋಷಿಸಿದ ಒಂದು ದಿನದ ನಂತರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
ಸಾಕ್ಷಿ ಮಲಿಕ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, “ಮೇಲ್ವಿಚಾರಣಾ ಸಮಿತಿ ರಚನೆ ಮಾಡುವ ಮುನ್ನ, ನಮ್ಮನ್ನು ಸಂಪರ್ಕಿಸಲಾಗುವುದು ಎಂದು ನಮಗೆ ಭರವಸೆ ನೀಡಲಾಗಿತ್ತು. ಆದರೆ ನಮ್ಮ ಸಲಹೆಗಳನ್ನು ಸಹ ತೆಗೆದುಕೊಳ್ಳದಿರುವುದು ತುಂಬಾ ದುರದೃಷ್ಟಕರ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕುಸ್ತಿ ಫೆಡರೇಶನ್ ಅಧ್ಯಕ್ಷನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ; ಮೇರಿ ಕೋಮ್ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚನೆ
ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್ನಲ್ಲಿ ಮೂರು ದಿನಗಳ ಕಾಲ ನಡೆದ ಪ್ರತಿಭಟನೆ ವ್ಯಾಪಕ ಗಮನ ಸೆಳೆದಿತ್ತು. ಈ ಪ್ರತಿಭಟನೆಯಲ್ಲಿ ವಿಜೇಂದರ್ ಸಿಂಗ್, ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಇತರರು ಭಾಗಿಯಾಗಿದ್ದರು. ಡಬ್ಲ್ಯುಎಫ್ಐ ಮುಖ್ಯಸ್ಥರು ತಮ್ಮ ವಿರುದ್ಧದ ತನಿಖೆ ಮುಗಿಯುವವರೆಗೆ ಅವರ ಸ್ಥಾನದಿಂದ ಹಿಂದೆ ಸರಿಯುವಂತೆ ಕೇಂದ್ರ ಸರ್ಕಾರದಿಂದ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಬಳಿಕ ಕುಸ್ತಿ ಸಂಸ್ಥೆಯೂ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಸೋಮವಾರ, ಮೇಲುಸ್ತುವಾರಿ ಸಮಿತಿಯ ಬಗ್ಗೆ ಘೋಷಣೆ ಮಾಡುವಾಗ “ಸಮಿತಿಯು ಡಬ್ಲ್ಯುಎಫ್ಐ ವಿರುದ್ಧದ ಗಂಭೀರ ಆರೋಪಗಳನ್ನು ಪರಿಶೀಲಿಸುತ್ತದೆ. ಅದು ಎರಡೂ ಕಡೆಯ ಮಾತುಗಳನ್ನು ಆಲಿಸುತ್ತದೆ ಮತ್ತು ಒಂದು ತಿಂಗಳಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸುತ್ತದೆ. ತನಿಖೆ ಪೂರ್ಣಗೊಳ್ಳುವವರೆಗೂ ಸಮಿತಿಯು ಡಬ್ಲ್ಯುಎಫ್ಐನ ಕಾರ್ಯಚಟುವಟಿಕೆಗಳ ಉಸ್ತುವಾರಿಯನ್ನು ವಹಿಸುತ್ತದೆ” ಎಂದು ಠಾಕೂರ್ ಹೇಳಿದರು.
ಈ ಸಮಿತಿಯಲ್ಲಿ ಬಾಕ್ಸಿಂಗ್ ಪಟು ಮೇರಿ ಕೋಮ್ ಅಷ್ಟೇ ಅಲ್ಲದೇ, ಇತರ ಸದಸ್ಯರು ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಯೋಗೇಶ್ವರ್ ದತ್, ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ತೃಪ್ತಿ ಮುರ್ಗುಂಡೆ, SAI ನ ಮಿಷನ್ ಒಲಿಂಪಿಕ್ ಸೆಲ್ ಸದಸ್ಯೆ ಮತ್ತು ಮಾಜಿ SAI ನಿರ್ವಾಹಕರಾದ ರಾಧಿಕಾ ಶ್ರೀಮನ್ ಮತ್ತು Cdr ರಾಜೇಶ್ ರಾಜಗೋಪಾಲನ್ ಇದ್ದಾರೆ.