ನಾನು ಕರ್ನಾಟಕ ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಬಿಜೆಪಿ ಪಕ್ಷದವರೆ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದಿದ್ದ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಇಂದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ರಾಜಕೀಯ ಪಕ್ಷದ ಘೋಷಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿರುವ ತಮ್ಮ ನಿವಾಸ ಪಾರಿಜಾತದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, “ನಾನು ಯಾವುದೇ ಹೊಸ ಕೆಲಸ ಆರಂಭಿಸಿದರೂ ಸೋತಿಲ್ಲ. ಗೋಲಿ ಆಟದಲ್ಲೇ ನಾನು ಸೋಲು ಒಪ್ಪಿಕೊಂಡಿಲ್ಲ. ಈಗ ಇಲ್ಲೂ ಸೋಲು ಎನ್ನುವುದು ಇಲ್ಲ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಶ್ರೀರಾಮುಲು ಅವರನ್ನು ಮಗನಿಗಿಂತ ಹೆಚ್ಚಾಗಿ ನೋಡಿಕೊಂಡು ಬಂದಿದ್ದೇವೆ. ರಾಮುಲು ಬಿಜೆಪಿಯಲ್ಲಿ ಉನ್ನತ ಸ್ಥಾನದಲ್ಲಿ ಇದ್ದಾರೆ. ಪಕ್ಷ ಬಿಟ್ಟು ಬನ್ನಿ ಎಂದು ನನ್ನ ಸ್ನೇಹವನ್ನು ದುರುಪಯೋಗ ಮಾಡಿಕೊಳ್ಳಲ್ಲ” ಎಂದಿದ್ದಾರೆ.
“ಅವರು ನಮ್ಮ ಜತೆಗೆ ಬರಬೇಕು ಎಂದು ಹೇಳಲ್ಲ. ಆತ ನನ್ನ ಉತ್ತಮ ಸ್ನೇಹಿತ. ಚಿಕ್ಕಂದಿನಿಂದಲೂ ನಾವು ಜೊತೆಯಾಗಿ ಬೆಳೆದಿದ್ದೇವೆ. ಈಗಲೂ ಹಾಗೆಯೇ ಇದ್ದೇವೆ. ರಾಜಕೀಯ ಬೇರೆ, ಸ್ನೇಹವೇ ಬೇರೆ. ರಾಮುಲು ಹಿಂದುಳಿದ ಜನಾಂಗದ ಒಳ್ಳೆಯ ಲೀಡರ್. ಎಷ್ಟೇ ಕಷ್ಟಗಳಿದ್ದರೂ ಅವರು ರಾಜಕೀಯವಾಗಿ ಸಾಧನೆ ಮಾಡಿದ್ದಾರೆ” ಎಂದು ಜನಾರ್ದನ ರೆಡ್ಡಿ ಹೇಳಿದರು.
“ರಾಜ್ಯ ಸರ್ಕಾರ ಹಿಂದೆಯೂ ನನ್ನನ್ನು ಟಾರ್ಗೆಟ್ ಮಾಡಿತ್ತು. ಈಗಲೂ ನನ್ನನು ಗುರಿಯಾಗಿಸಿಕೊಂಡಿದೆ. ಆದರೆ ಕರ್ನಾಟಕ ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ. ಏನು ಯೋಚನೆ ಮಾಡ್ತೀನಿ ಅದನ್ನೇ ಹೇಳ್ತೀನಿ, ಏನು ಹೇಳ್ತೀನಿ ಅದನ್ನೇ ಮಾಡ್ತೀನಿ. ರಾಜ್ಯದ 30 ಜಿಲ್ಲೆಗಳ ಅಭಿವೃದ್ಧಿ ನನ್ನ ಗುರಿ” ಎಂದಿದ್ದಾರೆ.
ಗಣಿ ಲೂಟಿ ಪ್ರಕರಣಗಳಲ್ಲಿ ಸಿಲುಕಿರುವ ಜನಾರ್ದನ ರೆಡ್ಡಿಯವರು ನವೆಂಬರ್ 06ರಿಂದ ಬಳ್ಳಾರಿ ಜಿಲ್ಲೆಯಲ್ಲಿ ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹಾಗಾಗಿ ಅವರು ಬಳ್ಳಾರಿ ಬಿಟ್ಟು ಗಂಗಾವತಿ ಜಿಲ್ಲೆಯಿಂದ ಸ್ಪರ್ಧಿಸಲು ಸಿದ್ದತೆ ನಡೆಸಿದ್ದಾರೆ.
ಗಂಗಾವತಿ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಯಿಂದಲೂ ಬಿಜೆಪಿಯ ಶಾಸಕ ಪರಣ್ಣ ಮುನಾವಳ್ಳಿ ಮತ್ತು ಹಿಂದೆ ಜೆಡಿಎಸ್ನಲ್ಲಿದ್ದು ಸದ್ಯ ಕಾಂಗ್ರೆಸ್ನಲ್ಲಿರುವ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ನಡುವೆ ನೇರ ಹಣಾಹಣಿ ನಡೆದಿದೆ. ಈ ಬಾರಿ ಜನಾರ್ದನ ರೆಡ್ಡಿಯವರು ಸ್ಪರ್ಧಿಸಿದರೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.
ಇದನ್ನೂ ಓದಿ; ಬಿಜೆಪಿಯವರೆ ನನಗೆ ತೊಂದರೆ ಕೊಡುತ್ತಿದ್ದಾರೆ: ಜನಾರ್ದನ ರೆಡ್ಡಿ ಅಸಮಾಧಾನ