Homeಕರ್ನಾಟಕಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರ ಕಡೆಗಣನೆ: ಪರ್ಯಾಯ ಸಮ್ಮೇಳನಕ್ಕೆ ಸಾಹಿತಿಗಳ ಚಿಂತನೆ

ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರ ಕಡೆಗಣನೆ: ಪರ್ಯಾಯ ಸಮ್ಮೇಳನಕ್ಕೆ ಸಾಹಿತಿಗಳ ಚಿಂತನೆ

“ಗುರುಗೋವಿಂದ ಭಟ್ಟರ ಮೊಮ್ಮಗ ಎಂದು ಕಸಾಪ ಅಧ್ಯಕ್ಷರು ಹೇಳಿಕೊಳ್ಳುತ್ತಾರೆ. ಶರೀಫರು ಯಾರು? ಗೋವಿಂದ ಭಟ್ಟರು ಯಾರು? ಅಷ್ಟೂ ಗೊತ್ತಾಗಲ್ಲವಾ?”

- Advertisement -
- Advertisement -

ಹಾವೇರಿಯಲ್ಲಿ ಜನವರಿ 6ರಿಂದ 8ರವರೆಗೆ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರನ್ನು ಕಡೆಗಣಿಸಲಾಗಿದ್ದು, ಪರ್ಯಾಯ ಸಮ್ಮೇಳನ ನಡೆಸುವ ಚಿಂತನೆಯನ್ನು ಕನ್ನಡದ ಜಾತ್ಯತೀಯ ಮನಸ್ಸುಗಳು ಮಾಡುತ್ತಿವೆ.

ಕನ್ನಡದ ಪ್ರಾತಿನಿಧಿಕ ಸಂಸ್ಥೆ ಎಂದೇ ಕರೆಯಲಾಗುವ ಕನ್ನಡ ಸಾಹಿತ್ಯ ಪರಿಷತ್‌ (ಕಸಾಪ) ಈ ಹಿಂದೆ ಯಾವತ್ತೂ ಈ ರೀತಿಯ ಪ್ರಮಾದವನ್ನು ಮಾಡಿರಲಿಲ್ಲ. ಮಹೇಶ ಜೋಷಿಯವರು ಅಧ್ಯಕ್ಷರಾದ ಮೇಲೆ ವಿವಾದಗಳ ಮೂಲಕ ಸದ್ದು ಮಾಡುತ್ತಿರುವ ಕಸಾಪ, “ಈಗ ಮುಸ್ಲಿಮರನ್ನು ಹೊರಗಿಡುವ ಮಟ್ಟಕ್ಕೆ ತಲುಪಿದೆ” ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.

“ಆರ್‌ಎಸ್‌ಎಸ್ ಮನಸ್ಥಿತಿ ಇಲ್ಲಿ ಕೆಲಸ ಮಾಡಿದೆ. ಜಾತಿ ದ್ವೇಷ, ಧರ್ಮದ್ವೇಷ ಢಾಳಾಗಿ ಕಾಣುತ್ತಿದೆ” ಎಂಬ ಟೀಕೆಗೆ ಸಮ್ಮೇಳನ ಗುರಿಯಾಗಿದೆ.

ಕನ್ನಡ ಸಾಹಿತ್ಯ ಪರಿಷತ್‌ ಮಾಡಿರುವ ಎಡವಟ್ಟಿನ ಕುರಿತು ಹಿರಿಯ ವಿದ್ವಾಂಸರಾದ ಪ್ರೊ.ಪುರುಷೋತ್ತಮ ಬಿಳಿಮಲೆಯವರು ಫೇಸ್‌ಬು‌ಕ್‌ನಲ್ಲಿ ಪೋಸ್ಟ್ ಮಾಡಿದ್ದು, “ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಮುಸ್ಲಿಂ ಲೇಖಕರನ್ನು ಹೊರಗಿಟ್ಟಿರುವುದು ಆಕಸ್ಮಿಕ ಏನೂ ಅಲ್ಲ. ನೆಹರೂ ಅಂಥ ಲೇಖಕರನ್ನೇ ಹೊರಗಿಟ್ಟವರಿವರು. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ತನ್ನ ನಿಲುವನ್ನು ನೇರವಾಗಿಯೇ ಪ್ರಕಟಿಸಬೇಕು” ಎಂದು ಆಗ್ರಹಿಸಿದ್ದಾರೆ. ಜೊತೆಗೆ “ಕೆಲವರನ್ನು ಕರೆದಿದ್ದು ಅವರು ಬರುವುದಿಲ್ಲ ಎಂದೂ ಹೇಳಿರಬಹುದು” ಎಂಬ ಮಾತನ್ನೂ ಸೇರಿಸಿದ್ದಾರೆ.

“ಆಧುನಿಕ ಕನ್ನಡ ಸಾಹಿತ್ಯದಲ್ಲಿ ಶಿಶುನಾಳ ಷರೀಫರೇ ನಮಗೆ ಸಿಗುವ ಮೊದಲ ಮಹತ್ವದ ಕವಿ. ಆನಂತರ ಕೆ.ಎಸ್‌.ನಿಸಾರ್‌ ಅಹಮದ್‌, ಬೊಳುವಾರು ಮಹಮ್ಮದ್‌ ಕುಞಿ, ಸಾರಾ ಅಬೂಬಕರ್,‌ ಹಸನ್ ನಯೀಂ ಸುರಕೋಡ, ರಹಮತ್‌ ತರೀಕರೆ ಮೊದಲಾದವರು ಕನ್ನಡದ ಸುಪ್ರಸಿದ್ಧ ಲೇಖಕರು. ಬೊಳುವಾರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಬೇಕಿತ್ತು. ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಬರಬೇಕು. ದಾದಾಪೀರ್‌ ಜೈನ್ ಅವರಿಗೆ ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಸಬೀಹಾ ಭೂಮಿ ಗೌಡರು ಲೇಖಕಿಯಾಗಿ ಪ್ರಸಿದ್ಧರು” ಎಂದು ಕಸಾಪಕ್ಕೆ ನೆನಪಿಸಿದ್ದಾರೆ.

“ಒಂದಾದರೂ ಪುಸ್ತಕ ಪ್ರಕಟಿಸಿದ ಮುಸ್ಲಿಂ ಲೇಖಕರು ಬಹಳ ಜನ ಇದ್ದಾರೆ. ಬಹುಶಃ ಮುಂದಿನ 10 ವರ್ಷದಲ್ಲಿ ಕನ್ನಡದ ಲೇಖಕರೆಂದರೆ ಮುಸ್ಲಿಮರೇ ಆಗಿರುತ್ತಾರೆ. ಅವರಲ್ಲಿ ನನಗೆ ಕೂಡಲೇ ನೆನಪಿಗೆ ಬರುವವರೆಂದರೆ, ಆರಿಫ್‌ ರಾಜಾ, ಎ.ಕೆ.ಕುಕ್ಕಿಲ, ಬಿ.ಎಂ.ಬಷೀರ್, ಇಸ್ಮಾಯಿಲ್ , ಮಹಮ್ಮದ್‌ ಕುಳಾಯಿ, ಗಂಗಾವತಿ ಸಲೀಮಾ, ಅಬ್ಬುಸ್ಸಲಾಮ್ ಪುತ್ತಿಗೆ, ಇಬ್ರಾಹಿಂ ಸಯೀದ್ ಸಾಬ್, ಸಲಾಂ ಸಮ್ಮಿ, ಬಾನು ಮುಷ್ತಾಕ್, ಫಾತಿಮಾ ರಲಿಯಾ, ಕೆ.ಷರೀಫಾ, ಡಿ.ಬಿ.ರಜಿಯಾ, ಜಹಾನ್ ಆರಾ, ಎ.ಎಸ್.ಮಕಾನದಾರ , ಬಿ.ಪೀರ್ ಭಾಷಾ, ಅಜಮೀರ ನಂದಾಪುರ, ದಸ್ತಗೀರ್ ದಿನ್ನಿ, ಇಮಾಮ್ ಹಡಗಲಿ, ಮುಸ್ತಾಫಾ, ಡಾ.ಮಕ್ತೂಂಬಿ ಮುಲ್ಲಾ, ಶಿ ಜು ಪಾಶಾ, ಮೆಹಬೂಬ್ಬಿ ಶೇಖ್ , ಸಿರಾಜ್ ಬಿಸರಳ್ಳಿ, ನಜ್ಮಾ ನಜೀರ್ ಚಿಕ್ಕನೇರಳೆ, ಮುನವ್ವರ್ ಜೋಗಿಬೆಟ್ಟು, ಬಿ.ಎಂ.ಹನೀಫ್‌, ಮೆಹಬೂಬಭಾಷಾ ಮಕಾನದಾರ, ಬಾಬು ಮನಸೇ, ಹಕೀಂ ಪದಡ್ಕ, ಹಸನ್ಮುಖಿ ಬಡಗನ್ನೂರು, ಆಸೀಫಾ, ನೂರಜಾನ್, ಸಕೀನಾ ಬೇಗಂ, ಸುನೈಫ್ ವಿಟ್ಲ, ಇಮಾಮ್ ಹಡಗಲಿ, ಅಮೀರಸಾಬ ವಂಟಿ, ಉಮರ್ ದೇವರಮನಿ, ಅಮೀನ್ ಅತ್ತಾರ್, ಸಯ್ಯದ್ ಸಿಕಂದರ್ ಮೀರ್ ಅಲಿ, ಚಾಂದ್ ಕವಿಚಂದ್ರ, ಕಾ ಹು ಚಾನಪಾಶಾ, ಸೈಫ್ ಜಾನ್ಸೆ, ರಾಜೇಸಾಬ ಬಾಗವಾನ್, ಶರೀಫ್ ಹಸಮಕಲ್, ಆಶಿಖ್ ಮುಲ್ಕಿ , ಇಮಾಮ್ ಗೋಡೆಕಾರ, ಸಿಹಾನಾ ಎಂ ಬಿ ಮೊದಲಾದವರು” ಎಂದು ಪಟ್ಟಿ ಮಾಡಿದ್ದಾರೆ.

ಮತ್ತೊಂದು ಪೋಸ್ಟ್ ಮಾಡಿರುವ ಅವರು, “ಪರ್ಯಾಯ ಸಮ್ಮೇಳನ ಇವತ್ತಿನ ತುರ್ತು. ದಾವಣಗೆರೆ ಅಥವಾ ಬೆಂಗಳೂರು ಅನುಕೂಲ. ಕೋಲಾರ, ಮೈಸೂರು, ಶಿವಮೊಗ್ಗವೂ ಆದೀತು. ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವ, ಪ್ರೊ.ಬರಗೂರು ರಾಮಚಂದ್ರಪ್ಪ ಬರಬೇಕು. ಪ್ರೊ.ರಾಜೇಂದ್ರ ಚೆನ್ನಿ, ಅರುಣ್‌ ಜೋಳದಕೂಡ್ಲಿಗಿ, ಬಿ.ಎಂ.ಹನೀಫ್‌ ಮೊದಲಾದವರು ಬರುತ್ತಾರೆ. ಅವರವರದೇ ಖರ್ಚು. ಸಭಾಂಗಣ, ಮಧ್ಯಾಹ್ನ ಊಟ, ಧ್ವನಿವರ್ಧಕ, ಚಹಾ ಇತ್ಯಾದಿಗಳಿಗೆ ಕ್ರೌಡ್‌ ಫಂಡಿಂಗ್‌ ಮಾಡೋಣ. ನಾನು ನನ್ನ ಖರ್ಚಲ್ಲಿ ಬರುತ್ತೇನೆ. ಸತ್ಯನಾರಾಯಣ ಪೂಜೆಗೆ ಸುದ್ದಿ ಕೇಳಿಯೇ ಹೋಗಬೇಕಂತೆ. ಇದೂ ಹಾಗೆಯೇ ಆಗಲಿ. ಸಮ್ಮೇಳನದಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಯಾವುದೂ ಯಃಕಶ್ಚಿತವೂ ಅಲ್ಲ. ಯಾರಾದರೂ ಸಮರ್ಥ ನಾಯಕತ್ವ ಕೊಡಿ” ಎಂದು ಕೋರಿದ್ದಾರೆ.

ಬಿಳಿಮಲೆಯವರ ಪೋಸ್ಟ್‌ಗೆ ಹತ್ತಾರು ಲೇಖಕರು ಪ್ರತಿಕ್ರಿಯೆ ನೀಡಿದ್ದು, ಪರ್ಯಾಯ ಸಮ್ಮೇಳನಕ್ಕೆ ಬೆಂಬಲ ನೀಡುತ್ತಿದ್ದಾರೆ.

ಹಿರಿಯ ಪತ್ರಕರ್ತರು ಹಾಗೂ ಲೇಖಕರಾದ ಬಿ.ಎಂ.ಹನೀಫ್ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿ, “ಹಾವೇರಿಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಸುಮಾರು 80 ಮಂದಿ ಸಾಧಕರಿಗೆ ಸನ್ಮಾನ ಆಗುತ್ತಿದೆ. ಪ್ರತಿಸಲವು ಸನ್ಮಾನ ಮಾಡುವಾಗ ರಾಜ್ಯದ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಈ ವೇದಿಕೆಯಲ್ಲಿ ಗೌರವಿಸಲಾಗುತ್ತಿತ್ತು. ಕರ್ನಾಟಕದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಾಧಕರು ಇವರಿಗೆ ಸಿಗಲಿಲ್ಲವೆಂದರೆ ಇವರು ಸ್ಪಷ್ಟವಾಗಿ ಕಮ್ಯುನಲ್‌ ಆಗಿದ್ದಾರೆ ಎಂದರ್ಥ. ಅಪ್ರಜ್ಞಾಪೂರ್ವಕವಾಗಿ ಮುಸ್ಲಿಮರ ಹೆಸರು ಬಿಟ್ಟು ಹೋಗಿರಲು ಸಾಧ್ಯವಿಲ್ಲ. ಶಿಕ್ಷಣ, ಸಹಕಾರಿ ಕ್ಷೇತ್ರ, ಪತ್ರಿಕೋದ್ಯಮ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆಗೈದ ಮುಸ್ಲಿಮರಿದ್ದಾರೆ” ಎಂದು ವಿವರಿಸಿದರು.

“ಕಾವ್ಯಕ್ಷೇತ್ರದಲ್ಲಿ ಬಹುಮುಖ್ಯವಾಗಿ ಹೆಸರು ಮಾಡಿದವರನ್ನು ಪ್ರಧಾನ ಕವಿಗೋಷ್ಠಿಯಲ್ಲಿ ಗುರುತಿಸಲಾಗುತ್ತದೆ. 25 ಮಂದಿ ಕವಿಗಳಲ್ಲಿ ಒಬ್ಬರೇ ಒಬ್ಬರು ಮುಸ್ಲಿಮರಿಲ್ಲ. ಬೇರೆ ಕವಿಗೋಷ್ಠಿಗಳಲ್ಲಿ ಹೆಸರಿಗೆ ನಾಲ್ಕು ಮುಸ್ಲಿಮರನ್ನು ಹಾಕಿಕೊಂಡಿದ್ದಾರೆ. ಹಾಗೆ ಆಯ್ಕೆಯಾದವರು ಅನರ್ಹರೇನಲ್ಲ. ಇತ್ತೀಚೆಗೆ ಬರೆಯುತ್ತಿರುವ ಪ್ರತಿಭಾವಂತರೇ ಆಗಿದ್ದಾರೆ. ಆದರೆ ಪ್ರಧಾನ ವೇದಿಕೆಯಲ್ಲಿ ನಡೆಯುವ ಕವಿಗೋಷ್ಠಿಗೆ ಯಾವ ಮುಸ್ಲಿಮರೂ ಸಿಗಲಿಲ್ಲವೇ? ಪ್ರಧಾನ ವೇದಿಕೆಯಲ್ಲಿ ನಡೆಯುವ 9 ವಿಚಾರಗೋಷ್ಠಿಗಳಲ್ಲಿ ಸುಮಾರು 34 ಮಂದಿ ಮಾತನಾಡುತ್ತಾರೆ. ಇದರಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ” ಎಂದು ವಿಷಾದಿಸಿದರು.

“ಮುಸ್ಲಿಂ ಎಂದು ಹೇಳಿದ ತಕ್ಷಣ- ತಮ್ಮ ಜಾತಿಯವರ ಬಗ್ಗೆ ಇವರು ಹೇಳುತ್ತಿದ್ದಾನೆಂದು ಕೆಲವರು ಆರೋಪಿಸಬಹುದು. ಆದರೆ ಕನ್ನಡ ಸಾಹಿತ್ಯ ಪರಿಷತ್ ಎಂದಿಗೂ ಕಮ್ಯುನಲ್ ಆಗಿ ವರ್ತಿಸಿಲ್ಲ. ಈ ರೀತಿಯ ತಾರತಮ್ಯ ಎಂದೂ ಆಗಿರಲಿಲ್ಲ. ದಲಿತರು, ಮಹಿಳೆಯರು, ಮುಸ್ಲಿಮರು- ಹೀಗೆ ಎಲ್ಲರಿಗೂ ಪ್ರಾತಿನಿಧ್ಯವನ್ನು ನೀಡಲಾಗುತ್ತಿತ್ತು” ಎಂದು ಸ್ಮರಿಸಿದರು.

“ಹಿರಿಯರ ಸ್ಮರಣೆ ಗೋಷ್ಠಿಗೆ ನಿಸಾರ್‌ ಅಹಮ್ಮದ್ ಅವರ ಹೆಸರು ನೆನಪಾಗಲಿಲ್ಲವಾ? ಕರ್ನಾಟಕ ಪ್ರಾದೇಶಿಕ ವೈವಿಧ್ಯತೆ ಎಂಬ ಗೋಷ್ಠಿ ಇದೆ. ಪ್ರಾದೇಶಿಕ ವೈವಿಧ್ಯತೆ ಎಂದು ತುಳು, ಕೊಂಕಣಿ, ಕೊಡವ, ಅರೆಭಾಷೆಗಳನ್ನು ಗುರುತಿಸಲಾಗಿದೆ. ಆದರೆ ಬ್ಯಾರಿ ಭಾಷೆಯನ್ನು ಏಕೆ ಬಿಟ್ಟಿದ್ದೀರಿ? ರಾಜ್ಯದಲ್ಲಿ ಹದಿನಾಲ್ಕು ಲಕ್ಷ ಮುಸ್ಲಿಮರು ಬ್ಯಾರಿ ಭಾಷೆ ಮಾತನಾಡುತ್ತಾರೆ. ಕರ್ನಾಟಕ ಸರ್ಕಾರ ಬ್ಯಾರಿ ಅಕಾಡೆಮಿಯನ್ನು ಸ್ಥಾಪಿಸಿದೆ. ಕನ್ನಡ ಸಾಹಿತ್ಯ ಕೃಷಿ ಮಾಡಿರುವ ಮುಸ್ಲಿಂ ಲೇಖಕರನ್ನು ಪಟ್ಟಿ ಮಾಡಿದರೆ ಶೇ. 60ರಷ್ಟು ಲೇಖಕರು ಬ್ಯಾರಿ ಮಾತೃಭಾಷೆಯ ಕನ್ನಡಿಗ ಲೇಖಕರೇ ಇದ್ದಾರೆ. ಇದ್ಯಾವುದನ್ನೂ ಗಮನಿಸದೆ ಸುಮ್ಮನೆ ಬಿಟ್ಟಿದ್ದೀರಿ ಎಂದರೆ ನೀವು ಕನ್ನಡ ಸಾಹಿತ್ಯದ ಬಗ್ಗೆ ಕುರುಡಾಗಿದ್ದೀರಿ ಎಂದರ್ಥ. ನಿಮ್ಮ ಮನಸ್ಸಿನಲ್ಲಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ, ಜಾತಿ ದ್ವೇಷ, ಧರ್ಮ ದ್ವೇಷವನ್ನು ನಿಮ್ಮೊಳಗೆ ತುಂಬಿಕೊಂಡಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಕಸಾಪ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಇಂದು ಉಳಿಯಲಿಲ್ಲ. ಕಸಾಪ ಅಧ್ಯಕ್ಷರಿಗೆ ಇದು ತಿಳಿಯಲಿಲ್ಲವಾ? ಕಸಾಪ ಅಧ್ಯಕ್ಷರು ಕನ್ನಡದ ಬಗ್ಗೆ ಕಂಠಶೋಷಣೆ ಮಾಡಿಕೊಳ್ಳುತ್ತಾರೆ. ಗುರುಗೋವಿಂದ ಭಟ್ಟರ ಮೊಮ್ಮಗ ಎಂದು ಹೇಳಿಕೊಳ್ಳುತ್ತಾರೆ. ಶಿಶುನಾಳ ಶರೀಫರ ಪದ ಹಾಡಿಕೊಂಡು ತಿರುತ್ತಾರೆ. ಶರೀಫರು ಯಾರು? ಗುರು ಗೋವಿಂದ ಭಟ್ಟರು ಯಾರು? ಅಷ್ಟೂ ಗೊತ್ತಾಗಲ್ಲವಾ?” ಎಂದು ಕೇಳಿದರು.

“ಮುಸ್ಲಿಮರಷ್ಟೇ ಅಲ್ಲ. ದಲಿತರು ಎಷ್ಟು ಮಂದಿ ಇದ್ದಾರೆ? ಮಹಿಳೆಯರಿಗೆ ಎಷ್ಟು ಸ್ಥಾನಮಾನ ನೀಡಿದ್ದೀರಿ? ಸ್ವಾಗತ, ವಂದನಾರ್ಪಣೆ, ನಿರೂಪಣೆ ಮಾಡೋದಷ್ಟೇ ಮಹಿಳೆಯರ ಕೆಲಸವಾ?” ಎಂದು ಪ್ರಶ್ನಿಸಿದರು.

ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹೇಶ ಜೋಶಿಯವರ ಪ್ರತಿಕ್ರಿಯೆ ಪಡೆಯಲು ಮೂರ್ನಾಲ್ಕು ಬಾರಿ ಕರೆ ಮಾಡಲಾಯಿತು. ಅವರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...