ಗುಜರಾತ್ನ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರ ಒಂಬತ್ತು ಜನರ ವಿರುದ್ಧ ಅನುಮತಿ ಇಲ್ಲದೇ ಸಾರ್ವಜನಿಕ ರ್ಯಾಲಿ ನಡೆಸಿದ್ದರು ಎಂಬ ಆರೋಪದ ಮೇಲೆ ಅವರ ವಿರುದ್ಧ ಜುಲೈ 2017ರಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಕಳೆದ ವರ್ಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದೀಗ ಆ ಪ್ರಕರಣದಲ್ಲಿ ಅವರನ್ನು ಮೆಹ್ಸಾನಾ ಸೆಷನ್ಸ್ ನ್ಯಾಯಾಲಯವು ಖುಲಾಸೆಗೊಳಿಸಿದೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಹಿಂದಿನ ತೀರ್ಪನ್ನು ರದ್ದುಗೊಳಿಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಿ.ಎಂ. ಪವಾರ್ ಅವರು, ”ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವುದು ಅವರ ಹಕ್ಕು ಎಂದು ಹೇಳುವ ಮೂಲಕ ಈ ಪ್ರಕರಣವನ್ನು “ಆಧಾರರಹಿತ” ಎಂದು ಕರೆದಿದ್ದಾರೆ” ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
”ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದನ್ನು ಮತ್ತು ಶಾಂತಿಯುತ ಪ್ರತಿಭಟನೆಯನ್ನು ಅಪರಾಧ ಎಂದು ಬ್ರಾಂಡ್ ಮಾಡಿದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯದ ಹಕ್ಕಿಗೆ ಬೆಲೆ ಇರುವುದಿಲ್ಲ” ಎಂದು ನ್ಯಾಯಾಧೀಶ ಪವಾರ್ ಹೇಳಿದರು.
ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ”ಸರ್ಕಾರ ಮತ್ತು ಅದರ ನೀತಿಗಳ ವಿರುದ್ಧ ಟೀಕೆ, ಚರ್ಚೆ ಮತ್ತು ಪ್ರಾಮಾಣಿಕ ಭಿನ್ನಾಭಿಪ್ರಾಯಗಳು ವ್ಯಕ್ತವಾಗಲು ಬಿಡಬೇಕು ಅದು ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯ” ಎಂದು ಪವಾರ್ ಹೇಳಿದರು.
ಇದನ್ನೂ ಓದಿ: ಬಿಲ್ಕಿಸ್ ಬಾನೊ ಅತ್ಯಾಚಾರಿ ಬಿಜೆಪಿ ಶಾಸಕರೊಂದಿಗೆ ಗುಜರಾತ್ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿ
”ಜನರ ಧ್ವನಿಯನ್ನು ಹತ್ತಿಕ್ಕಲು ಅಧಿಕಾರ ಮತ್ತು ಕಾನೂನಿನ ಪ್ರಕ್ರಿಯೆಯ ದುರುಪಯೋಗವು ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ನಡೆಯಬಾರದು ಮತ್ತು ಯಾವುದೇ ಟೀಕೆಗಳ ಭಯವಿಲ್ಲದೆ ಜನರ ಸ್ವಾತಂತ್ರ್ಯವನ್ನು ರಕ್ಷಿಸುವುದು ಪ್ರತಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿನ ಸರ್ಕಾರದ ಕರ್ತವ್ಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಚುನಾಯಿತ ನಾಯಕರು ಜನರ ಮೇಲೆ ಆಡಳಿತ ನಡೆಸುವುದಕ್ಕಾಗಿ ಅಲ್ಲ, ಬದಲಿಗೆ ಅವರ ಸೇವೆ ಮಾಡಲು ಇದ್ದಾರೆ ಎಂದು ಪವಾರ್ ಹೇಳಿದರು.
ತೀರ್ಪಿನ ನಂತರ ಮೆವಾನಿ ಅವರು ಟ್ವಿಟರ್ ಮಾಡಿದ್ದು, ”ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದನ್ನು ಮತ್ತು ಶಾಂತಿಯುತ ಪ್ರತಿಭಟನೆ ಮಾಡುವ ಹಕ್ಕನ್ನು ಮೆಹ್ಸಾನಾ ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿದೆ ಮತ್ತು ಆಧಾರರಹಿತ ಪ್ರಕರಣ ಎಂದು ಹೇಳುವ ಮೂಲಕ ಮೆಹ್ಸಾನಾದ ಸೆಷನ್ ನ್ಯಾಯಾಲಯವು 2017ರ ಕ್ಷುಲ್ಲಕ ಪ್ರಕರಣದಲ್ಲಿ ಇಂದು ನಮ್ಮನ್ನು ಖುಲಾಸೆಗೊಳಿಸಿದೆ. ಸತ್ಯಮೇವ ಜಯತೆ [ಸತ್ಯವೊಂದೇ ಜಯಿಸುತ್ತದೆ]!” ಎಂದು ಟ್ವೀಟ್ ಮಾಡಿದ್ದಾರೆ.
Upholding our rights to deliberate, discuss & debate in a democracy & quoting the prosecutors case to be "baseless," a session court in Mehsana has acquitted us today in a frivolous case registered by Mehsana police in 2017 for carrying out protest.
Satyamev Jayate!
— Jignesh Mevani (@jigneshmevani80) March 29, 2023
2016ರಲ್ಲಿ ಸತ್ತ ಹಸುವಿನ ಚರ್ಮ ಸುಲಿದ ಆರೋಪದ ಮೇಲೆ ಗೋರಕ್ಷಕರು ಉನಾದಲ್ಲಿ ದಲಿತರ ಮೇಲೆ ಸಾರ್ವಜನಿಕವಾಗಿ ಥಳಿಸುವುದಕ್ಕೆ ಸಂಬಂಧಿಸಿದಂತೆ ರ್ಯಾಲಿಯನ್ನು ಆಯೋಜಿಸಿದ್ದರು. ಆ ಕಾರಣಕ್ಕಾಗಿ ಮೇವಾನಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಅಧಿಕಾರಿಗಳು ಆರಂಭದಲ್ಲಿ ಈ ರ್ಯಾಲಿಗೆ ಅನುಮತಿ ನೀಡಿದರು. ಸಂಘಟಕರು ರ್ಯಾಲಿಯೊಂದಿಗೆ ಮುಂದೆ ಹೋದರು. ಆ ನಂತರ ಸಾರ್ವಜನಿಕ ಅವ್ಯವಸ್ಥೆಯನ್ನು ಉಲ್ಲೇಖಿಸಿ ರ್ಯಾಲಿಗೆ ಅನುಮತಿಯನ್ನು ರದ್ದುಗೊಳಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಯಿತು.
ಮೇನಲ್ಲಿ ಶಿಕ್ಷೆಯಾಗುವ ಕೆಲವು ದಿನಗಳ ಮೊದಲು, ಅಸ್ಸಾಂ ಪೊಲೀಸರು ಮೇವಾನಿಯನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ಗಳಿಗಾಗಿ ಬಂಧಿಸಿದ್ದರು.