Homeನ್ಯಾಯ ಪಥಸರಳ, ಸಜ್ಜನಿಕೆಯ ದಿಟ್ಟ ಹೋರಾಟಗಾರ ದೊರೆಸ್ವಾಮಿಯವರು ನಮಗೆಲ್ಲಾ ಮಾದರಿ

ಸರಳ, ಸಜ್ಜನಿಕೆಯ ದಿಟ್ಟ ಹೋರಾಟಗಾರ ದೊರೆಸ್ವಾಮಿಯವರು ನಮಗೆಲ್ಲಾ ಮಾದರಿ

- Advertisement -
- Advertisement -

ದೊರೆಸ್ವಾಮಿಯವರ ಒಡನಾಡಿಗಳಾಗಿದ್ದ, ಹಿರಿಯ ವಕೀಲರಾಗಿರುವ ಶೇಷಾದ್ರಿಯವರು ಹೇಳುತ್ತಿದ್ದ ಒಂದು ಘಟನೆ ನನಗೆ ಇಂದಿಗೂ ಆಶ್ಚರ್ಯವನ್ನುಂಟುಮಾಡುತ್ತದೆ. ಸುಮಾರು 50-60 ವರ್ಷಗಳ ಹಿಂದೆ ದೊರೆಸ್ವಾಮಿಯವರು ಬೆಂಗಳೂರಿನ ಹನುಮಂತನಗರದಲ್ಲಿ ವಾಸಿಸುತ್ತಿದ್ದರು. ಅಲ್ಲಿಂದ ಅವರು ಮಾರುಕಟ್ಟೆ ಬಳಿ ಇರುವ ಗಾಳಿ ಆಂಜನೇಯ ಸ್ವಾಮಿ ದೇವಾಲಯದವರೆಗೆ ನಡೆದುಕೊಂಡು ಬಂದರು. ಅಂದು ಅಲ್ಲಿರುವ ಖಾದಿ ಗ್ರಾಮೋದ್ಯೋಗ ಮಳಿಗೆಯಲ್ಲಿ ಸಬ್ಸಿಡಿ ದರದಲ್ಲಿ ಖಾದಿ ಬಟ್ಟೆಗಳನ್ನು ಮಾರುತ್ತಿದ್ದರು. ದೊರೆಸ್ವಾಮಿಯವರು ಒಂದು ಜುಬ್ಬಾ, ಒಂದು ಪಂಚೆ ಮತ್ತು ಟವೆಲ್ ಒಂದನ್ನು ಆಯ್ಕೆ ಮಾಡಿ ಎಷ್ಟು ಹಣ ಎಂದು ಕೇಳುತ್ತಾರೆ. ಅಂಗಡಿಯಾತ ಬೆಲೆ ಹೇಳಿ, ’ಸರ್ ಹಿಂದಿನ ಸಾರಿ ನೀವು ಹಣ ಕೊಡುವುದು ಮರೆತಿದ್ದೀರಿ’ ಎಂದನಂತೆ. ಆಗ ದೊರೆಸ್ವಾಮಿಯವರು ತಮ್ಮಲ್ಲಿದ್ದ ಹಣ ನೀಡಿ, ಹಿಂದಿನ ಸಾಲ ಪೂರ್ತಿ ತೀರಿಸಿದ ನಂತರವೇ ಹೊಸದನ್ನು ಖರೀದಿಸುತ್ತೇನೆ ಎಂದು ಹೇಳಿ ಬರಿಗೈನಲ್ಲಿ ವಾಪಸ್ ಹೋದರಂತೆ. ಇದೊಂದು ಉದಾಹರಣೆ ಸಾಕು ಅವರ ಪ್ರಾಮಾಣಿಕತೆ ಮತ್ತು ಸರಳ ಜೀವನವನ್ನು ತಿಳಿಯಲು.

ದೊರೆಸ್ವಾಮಿಯವರು ಸ್ವಾತಂತ್ರ್ಯ ಹೋರಾಟಗಾರರು, ಸರಳ ಸಜ್ಜನಿಕೆಗೆ ಬಹಳ ಹೆಸರುವಾಸಿಯಾದವರು. ದೇಶಪ್ರೇಮ, ಜನರ ಬಗ್ಗೆ ಕಾಳಜಿ, ಜನಸಾಮಾನ್ಯರ ಕಷ್ಟನಷ್ಟಗಳಿಗೆ ಸ್ಪಂದಿಸುವ ಗುಣ ಅವರದ್ದು. ಜನರ ಸಮಸ್ಯೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ತರುವುದಕ್ಕಾಗಿ, ಕೃಷಿಕರು, ಕಾರ್ಮಿಕರು ಮತ್ತು ಹಿಂದುಳಿದವರ ಸಾಮಾಜಿಕ ನ್ಯಾಯಕ್ಕಾಗಿ ತಾವು ನಿಧನರಾಗುವವರೆಗೂ ದಣಿವರಿಯದೇ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡ ಹಿರಿಯ ಜೀವ ಅದು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ 14 ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದ್ದರು. ನಂತರ ಇಂದಿರಾ ಗಾಂಧಿಯವರು ಹೇರಿದ್ದ ತುರ್ತುಪರಿಸ್ಥಿತಿ ವಿರೋಧಿಸಿ ಹೋರಾಟ ಮಾಡಿದ್ದಕ್ಕಾಗಿ 4 ತಿಂಗಳು ಜೈಲಿನಲ್ಲಿರಬೇಕಾಗಿತ್ತು. ಅವರು ತ್ಯಾಗಮಯಿ, ಸಮಾಜದ ಬಗ್ಗೆ ಬದ್ಧತೆ, ಕಾಳಜಿಯ ಮನೋಭಾವ ರೂಢಿಸಿಕೊಂಡಿದ್ದರು. ದೇಶದ ಬಗ್ಗೆ ಮತ್ತು ದೇಶದಲ್ಲಿನ ಜನರ ಬಗ್ಗೆ ಸದಾ ಚಿಂತಿಸುತ್ತಿದ್ದರು. ದೇಶದ ಆಗು ಹೋಗುಗಳ ಬಗ್ಗೆ ಬಹಳ ತೀಕ್ಷ್ಣವಾಗಿ ಪರಿವೀಕ್ಷಣೆ ಮಾಡುತ್ತಿದ್ದರು. ಜನರ ಸ್ವಾತಂತ್ರ್ಯ ಸಂರಕ್ಷಣೆಯ ಬಗ್ಗೆ ಚಿಂತನೆ ಮಾಡುತ್ತಿದ್ದರು. ದೇಶದ ರೈತರು, ಬಡವರು, ದಲಿತರು, ಮಹಿಳೆಯರು ಸೇರಿದಂತೆ ತುಳಿತಕ್ಕೊಳಗಾದವರ ಪರವಾಗಿ ಅವರು ನಿರಂತರವಾಗಿ ದನಿಯೆತ್ತುತ್ತಿದ್ದರು ಮತ್ತು ಅದಕ್ಕಾಗಿ ಸರ್ಕಾರದ ಗಮನ ಸೆಳೆಯುತ್ತಿದ್ದರು.

ಅವರ ವ್ಯಕ್ತಿತ್ವ, ನಿಸ್ವಾರ್ಥ ಜೀವನದ ಕುರಿತು ಯುವಜನರು, ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು ಮತ್ತು ರಾಜಕಾರಣಿಗಳು ಹೆಚ್ಚು ತಿಳಿದುಕೊಂಡು ಅವರಂತೆ ನಡೆದುಕೊಳ್ಳಬೇಕಿದೆ. ಆದರೆ ನಮ್ಮ ದೇಶದ ಜನ ಗಾಂಧಿಯವರನ್ನೇ ಮರೆತುಬಿಟ್ಟಿದ್ದು, ದೊರೆಸ್ವಾಮಿಯವರನ್ನು ಎಷ್ಟು ನೆನಪಿಟ್ಟುಕೊಳ್ಳುತ್ತಾರೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ಆದರೆ ದೊರೆಸ್ವಾಮಿಯವರಂತ ಪ್ರಾಮಾಣಿಕ ವ್ಯಕ್ತಿಗಳು ಇದ್ದಿದ್ದರಿಂದಲೇ ಈ ಸಮಾಜ ಇಷ್ಟಾದರೂ ಸಹ್ಯವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಅವರು ಜೆ.ಪಿ ನಗರದ ಮನೆಯಲ್ಲಿರುವಾಗ ನಾನು ಅವರ ಆರೋಗ್ಯ ವಿಚಾರಿಸಲು ಎರಡು ಬಾರಿ ಹೋಗಿದ್ದೆ. ಅವರು ತಮ್ಮ ಜೀವಮಾನವಿಡಿ ಸ್ವಂತ ಮನೆ ಮಾಡಲಿಲ್ಲ. ಬಾಡಿಗೆ ಮನೆಯಲ್ಲಿಯೇ
ಅರ್ಥಪೂರ್ಣವಾಗಿ ಬದುಕಿದರು. ಅವರನ್ನು ಸಾಮಾಜಿಕ ಕಾರ್ಯಕರ್ತರು ಬಹಳ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು. ನಮ್ಮಂಥವರು ಅವರನ್ನು ನೋಡಲು ಹೋದರೆ ಬಹಳ ಗೌರವದಿಂದ ಸತ್ಕರಿಸುತ್ತಿದ್ದರು. ಮನುಷ್ಯ ಮನುಷ್ಯನಾಗಿ ಹೇಗೆ ಬದುಕಬೇಕು ಎಂಬುದನ್ನು ಅವರು ನಮಗೆ ಕಲಿಸಿದರು. ನಾನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯಾಗಿ ಅವರನ್ನು ನೋಡಿದಾಗ, ಅವರ ರೀತಿಯೇ ಬದುಕಬೇಕು, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು, ಅವರ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಎಷ್ಟೋ ಸಲ ನನಗೆ ಅನ್ನಿಸಿದೆ. ಅವರ ತುಂಬು ಜೀವನವನ್ನು ನೋಡಿ ಸಂತಸವಾಗಿದೆ. ಈ ವರ್ಷ ಏಪ್ರಿಲ್ 10ನೇ ತಾರೀಖು ಅವರ 104ನೇ ಜನ್ಮದಿನದ ಸಂದರ್ಭದಲ್ಲಿ ಅವರ ಹೋರಾಟದ ಕುರಿತ ವೆಬಿನಾರ್‌ನಲ್ಲಿ ನಾನು ಮಾತನಾಡಿದೆ. ಅದರಿಂದ ಧನ್ಯಭಾವ ಅನುಭವಿಸಿದೆ. ಅವರು ಇನ್ನೊಂದು ದಶಕ ಬದುಕಿರುತ್ತಾರೆ ಎಂದುಕೊಂಡಿದ್ದೆ. ಅವರ ಆಶಯಗಳಾದ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ, ದೇಶದ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆ ಉಳಿಯುತ್ತದೆ. ಪ್ರಜಾಪ್ರಭುತ್ವ ಬೆಳೆಯುತ್ತದೆ. ನಾಗರಿಕ ಸಮಾಜ ಇನ್ನೂ ಉತ್ಕೃಷ್ಟ ರೀತಿಯಲ್ಲಿ ನಡೆದುಕೊಳ್ಳುತ್ತದೆ ಎಂಬುದನ್ನು ನೋಡಿ ಅವರು ಸಂತಸ ಪಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅವರು ನಮ್ಮನ್ನೆಲ್ಲಾ ಅಗಲಿಹೋಗಿದ್ದಾರೆ.

ಬೆಂಗಳೂರಿನ ಜಯದೇವ ಆಸ್ಪತ್ರೆಯ ಡಾ.ಸಿಎನ್ ಮಂಜುನಾಥ್ ಅವರನ್ನು ಈ ಸಂದರ್ಭದಲ್ಲಿ ನಾವು ನೆನೆಯಬೇಕು. ಏಕೆಂದರೆ ದೊರೆಸ್ವಾಮಿಯವರಿಗೆ ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೂ ಸಹ ಮಂಜುನಾಥ್ ಅವರು ಬಹಳ ಮುತುವರ್ಜಿಯಿಂದ ನೋಡಿಕೊಂಡಿದ್ದಾರೆ. ಮಾರ್ಚ್ ತಿಂಗಳಲ್ಲಿ ನಾನು ದೊರೆಸ್ವಾಮಿಯವರನ್ನು ಭೇಟಿ ಮಾಡಿದಾಗ ಅವರು ಕೆಮ್ಮುತ್ತಿದ್ದರು. ಏಕೆಂದು ಕೇಳಿದಾಗಿ, ’ನನ್ನ ಶ್ವಾಸಕೋಶ ಚೆನ್ನಾಗಿದೆ. ಆದರೆ ಮೂಗಿನಲ್ಲಿ ಏನೋ ಸಮಸ್ಯೆಯಾಗಿ ಕೆಮ್ಮುತ್ತಿದ್ದೇನೆ’ ಅಂದರು. ಆಗ ನಾನು ವಿಕ್ರಮ್ ಆಸ್ಪತ್ರೆಯ ಇಎನ್‌ಟಿ ತಜ್ಞರಾದ ಡಾ.ಶ್ರೀನಿವಾಸ್ ಅವರಿಗೆ ಫೋನ್ ಮಾಡಿದೆ. ಸ್ವಾತಂತ್ರ್ಯ ಹೋರಾಟಗಾರರು, ಹಿರಿಯರು, ಮಾರ್ಗದರ್ಶಕರು, ನಮ್ಮ ಆಸ್ತಿ, ನಮ್ಮ ದೇಶದ ಸಂಪತ್ತು ಇವರು, ಇವರನ್ನು ನೀವು ಮುತುವರ್ಜಿಯಿಂದ ನೋಡಬೇಕು ಎಂದು ಕೇಳಿಕೊಂಡೆ. ಅವರು ಸಂತೋಷದಿಂದ ಒಪ್ಪಿ ಕರೆದುಕೊಂಡು ಬರಲು ಹೇಳಿದರು. ಆದರೆ ಅಂತಹ ದೊಡ್ಡ ಆಸ್ಪತ್ರೆಗೆ ನಾನು ಹೋಗಲಾರೆ ಎಂದು ದೊರೆಸ್ವಾಮಿಯವರು ಹೋಗಲೇ ಇಲ್ಲ. ತಮ್ಮ ಸರಳತೆಯನ್ನು ಬಿಟ್ಟುಕೊಡಲು ದೊರೆಸ್ವಾಮಿಯವರು ತಯಾರಿರಲಿಲ್ಲ.

ದೊರೆಸ್ವಾಮಿಯವರಿಗೆ ನಾವು ಪ್ರತಿ ಕ್ಷಣ ಶ್ರದ್ಧಾಂಜಲಿಯನ್ನು ಸಲ್ಲಿಸಬೇಕಾಗಿದೆ. ಸಂಸದೀಯ ಪ್ರಜಾಪ್ರಭುತ್ವ ಮಾತ್ರವಲ್ಲದೆ ಜನರ ಪ್ರಜಾಪ್ರಭುತ್ವವನ್ನು ಕಟ್ಟಲಿಕ್ಕೆ ಅವರ ಹಾದಿಯಲ್ಲಿ ನಾವು ಮುಂದೆ ಹೋಗಬೇಕಾಗಿದೆ. ಆಗ ಮಾತ್ರ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನಿಸುತ್ತದೆ.

ಕಳೆದ ವರ್ಷ ಕೆಲ ಬೇಜವಾಬ್ದಾರಿ ರಾಜಕಾರಣಿಗಳು, ಜನಪ್ರತಿನಿಧಿಗಳು ದೊರೆಸ್ವಾಮಿಯವರ ಬಗ್ಗೆ ಕ್ಷುಲ್ಲಕ ಮಾತುಗಳನ್ನಾಡಿದ್ದು ನನಗೆ ತೀವ್ರ ಖೇದವೆನಿಸಿದೆ. ದೊರೆಸ್ವಾಮಿಯವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಟೀಕೆ ಟಿಪ್ಪಣಿ ಮಾಡಿದಾಗ ಅದನ್ನು ಸಹಿಸಲಾಗದೆ, ಸಹಿಷ್ಣುತೆ ಇಲ್ಲದವರು ಮಾತುಗಳನ್ನಾಡಿದರು. ಮೇರು ವ್ಯಕ್ತಿತ್ವಕ್ಕೆ ಈ ರೀತಿ ನಡೆದುಕೊಂಡಿದ್ದು ಇಡೀ ಕರ್ನಾಟಕ ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ನಾನು ಭಾವಿಸುತ್ತೇನೆ. ಈಗಲಾದರೂ ಅವರು ಅದನ್ನು ಯೋಚಿಸಿ, ತಮ್ಮ ಹೇಳಿಕೆ ತಪ್ಪಾಯಿತು ಎಂದು ಹೇಳುತ್ತಾರೆ ಎಂದು ನಾನು ಭಾವಿಸಿದ್ದೇನೆ.

ಜಸ್ಟಿಸ್ ವಿ. ಗೋಪಾಲಗೌಡ
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು. ಒರಿಸ್ಸಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...