Homeಚಳವಳಿಉತ್ತರದಾದ್ಯಂತ ಪ್ರಶ್ನೆ ಕೇಳುತ್ತಿರುವ ರೈತರು

ಉತ್ತರದಾದ್ಯಂತ ಪ್ರಶ್ನೆ ಕೇಳುತ್ತಿರುವ ರೈತರು

- Advertisement -
- Advertisement -

ಉತ್ತರ ಭಾರತದ ರೈತರು ಗ್ರಾಮ ಬಂದ್ ಪ್ರತಿಭಟನೆಯ ಹೋರಾಟ ಆರಂಭಿಸಿದ್ದಾರೆ. ತಮ್ಮ ಯಾವುದೇ ಉತ್ಪನ್ನವನ್ನೂ ಮಂಡಿಗಳಿಗೆ ಕಳಿಸುವುದಿಲ್ಲ; ಇಲ್ಲೇ ಕೊಳೆಯಲಿ ಪರವಾಗಿಲ್ಲ ಎಂಬ ವಿನೂತನ ಪ್ರತಿಭಟನೆ ಇದು. ಹಾಲು, ತರಕಾರಿ, ಹಣ್ಣುಗಳ ಪೂರೈಕೆ ನಗರಗಳಿಗೆ ಬಂದ್ ಆದಾಗಲೇ ನಗರಿಗರಿಗೆ ರೈತರ ಕಷ್ಟ ಗೊತ್ತಾಗುವುದು.
ಈ ಪ್ರತಿಭಟನೆ ಉತ್ತರ ಭಾರತದಲ್ಲಿ, ಅದರಲ್ಲೂ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‍ಗಢ, ಮಹಾರಾಷ್ಟ್ರ ಮತ್ತು ಪಂಜಾಬುಗಳಲ್ಲಿ ತೀವ್ರ ಸ್ವರೂಪ ಪಡೆದಿದೆ. ಈ ಹೋರಾಟ ಭಾಜಪ ಆಳ್ವಿಕೆಯ ರಾಜ್ಯಗಳಲ್ಲಿ ತೀವ್ರವಾಗಿದೆ ಎನ್ನುವುದು ಕಾಕತಾಳೀಯ ಅಲ್ಲ; ಹಾಗೆಂದು ಅದು ರಾಜಕೀಯ ಕುತಂತ್ರದ ಆಟವೂ ಅಲ್ಲ. ಈ ರಾಜ್ಯಗಳ ಸರಕಾರಗಳು ರೈತರ ಬಗ್ಗೆ ಸತತವಾಗಿ ತಾತ್ಸಾರದ ಧೋರಣೆ ತಳೆದ ಕಾರಣ ರೈತರ ಬೇಗುದಿ ಹೆಚ್ಚಿದೆ. ಈ ಹೋರಾಟ ಏಕಾಏಕಿ ಹುಟ್ಟಿಕೊಂಡದ್ದೂ ಅಲ್ಲ, ಯಾವುದೋ ಭಾವನಾತಕ ಕಾರಣಕ್ಕೇ ಭುಗಿಲೆದ್ದ ಪ್ರತಿಭಟನೆಯೂ ಅಲ್ಲ. ಇದು ಭೂಕಂಪದ ಮೊದಲಿನ ಸರಣಿ ಗುರುಗಾಟದ ಹಾಗೆ; ಕಳೆದ ಕೆಲವು ವರ್ಷಗಳಿಂದ ಅಲ್ಲಿಇಲ್ಲಿ ವ್ಯಕ್ತವಾಗುತ್ತಲೇ ಇದೆ.
ಕಳೆದ ವರ್ಷ ಮಧ್ಯಪ್ರದೇಶದ ಮಾಂಡ್‍ಸೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಪೋಲೀಸರು ಗೋಲೀಬಾರ್ ಮಾಡಿ ಆರು ರೈತರ ಜೀವ ಹೋಗಿತ್ತು. ಈ ದಮನದ ನೆನಪು ರೈತರಲ್ಲಿ ಇನ್ನೂ ಹಸಿಯಾಗಿದೆ. ಈ ಗೋಲೀಬಾರಿನ ಬಳಿಕ ಸರ್ಕಾರ ಅಷ್ಟಿಷ್ಟು ಕ್ರಮ ಕೈಗೊಂಡರೂ ಮತ್ತೆ ರೈತ ನಿರ್ಲಕ್ಷದ ಜಾಡಿಗೆ ಮರಳಿದೆ. ಈ ಬಾರಿಯ ಗ್ರಾಮ ಬಂದ್ ಹೋರಾಟದ ಭಾಗವಾಗಿ ಮಾಂಡ್‍ಸೂರಿನಲ್ಲಿ ಇದೇ ಜೂನ್ ಆರರಂದು, ಗೋಲೀಬಾರಿನಲ್ಲಿ ಹುತಾತ್ಮರಾದ ರೈತರನ್ನು ಸ್ಮರಿಸುವ ಹುತಾತ್ಮ ದಿನಾಚರಣೆಯೂ ನಡೆಯಲಿದೆ. ಸಾವಿರಾರು ರೈತರು ಸೇರಲಿದ್ದಾರೆ.
ಈ ಹೋರಾಟಕ್ಕೆ ಇನ್ನೊಂದು ಆಯಾಮವಿದೆ. ಇಷ್ಟು ದಿನ ಆಯಾ ರಾಜ್ಯ ಅಥವಾ ಸಂದರ್ಭಗಳಲ್ಲಿ ಬೇಗುದಿ ಅನುಭವಿಸಿದ ರೈತರು ಬೀದಿಗಿಳಿದಾಗ ಉಳಿದ ಸಂಘಟನೆಗಳು ಅದಕ್ಕೆ ಬೆಂಬಲ ನೀಡಿ ಹೋರಾಟದ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದರು. ಕಳೆದ ವರ್ಷದ ಮಧ್ಯಪ್ರದೇಶದ ರೈತ ಹೋರಾಟವಿರಬಹುದು, ಭೂ ಸ್ವಾಧೀನದ ವಿರುದ್ಧ ರಾಜಸ್ತಾನದಲ್ಲಿ ಭುಗಿಲೆದ್ದ ಹೋರಾಟ ಇರಬಹುದು. ಆದರೆ ಈ ಬಾರಿ ಕಳೆದ ಎರಡು ವರ್ಷಗಳಿಂದ ಸಮಾಲೊಚನೆ ನಡೆಸಿ ಸುಮಾರು 150 ರೈತಪರ ಸಂಘಟನೆಗಳ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರೂಪುತಳೆದಿದೆ. ಕಳೆದ ವರ್ಷದ ಜುಲೈನಲ್ಲಿ ಈ ಸಮಿತಿಗೊಂದು ಸಾಂಸ್ಥಿಕ ಸ್ವರೂಪವೂ ದೊರಕಿತು. ಕೃಷಿಕ್ ಮುಕ್ತಿ ಸಂಗ್ರಾಮ ಸಮಿತಿ, ಅಖಿಲ ಭಾರತ ಕಿಸಾನ್ ಸಭಾ, ಆಶಾ, ಕರ್ನಾಟಕ ರಾಜ್ಯ ರೈತ ಸಂಘ, ಜನ ಚಳವಳಿಯ ರಾಷ್ಟ್ರೀಯ ಒಕ್ಕೂಟ, ಸ್ವರಾಜ್ ಅಭಿಯಾನ್ ಸೇರಿ ದೇಶದ ಸುಮಾರು 150 ಮುಖ್ಯ ರೈತಪರ/ ಜನಪರ ಹೋರಾಟಗಳು ಸಂಘಟನೆಗಳು ಈ ಸಮಿತಿಯ ಭಾಗವಾಗಿವೆ.
ನಮ್ಮದೆರಡೇ ಬೇಡಿಕೆಗಳು
ಕೃಷಿ ಬಿಕ್ಕಟ್ಟಿನ ಎಲ್ಲಾ ಸಮಸ್ಯೆಗಳ ವಿವರ ಈ ಎರಡು ಮೂಲಗಳಲ್ಲಿ ಹುದುಗಿದೆ ಎಂಬ ಸ್ಪಷ್ಟತೆಯನ್ನು ಈ ಸಮನ್ವಯ ಸಮಿತಿ ಅನಾವರಣಗೊಳಿಸಿದೆ. ಈ ಸಮನ್ವಯ ಸಮಿತಿ ಎರಡು ಸ್ಥೂಲ ಬೇಡಿಕೆಗಲನ್ನು ಮುಂದಿಟ್ಟಿದೆ. ಬೆಳೆಗೆ ಲಾಭದಾಯಕ ಬೆಲೆ ಮತ್ತು ಋಣಮುಕ್ತ ರೈತ. ಬೆಳೆಗೆ ಲಾಭದಾಯಕ ಬೆಲೆ ನೀಡಿದರೆ ಸಾಲ ಮನ್ನಾದಂಥಾ ಬೇಡಿಕೆಗಳೇ ಅಸಂಗತವಾಗುತ್ತದೆ ಎಂಬ ನಿಲುವನ್ನು ಬಹುತೇಕ ಆರ್ಥಿಕ ತಜ್ಞರಷ್ಟೇ ಅಲ್ಲ, ರೈತ ನಾಯಕರೂ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವೇ ನೇಮಿಸಿದ ಸ್ವಾಮಿನಾಥನ್ ಸಮಿತಿ ಈ ಕುರಿತ ಶಿಫಾರಸ್ಸುಗಳನ್ನು ಪ್ರಕಟಗೊಳಿಸಿದ್ದು ಕೇಂದ್ರ ಸರ್ಕಾರ ಅದನ್ನು ಜಾರಿಗೊಳಿಸದೇ ನುಣುಚಿಕೊಳ್ಳುತ್ತಿದೆ. ಕಳೆದ ವರ್ಷ ಸರ್ವೋಚ್ಛ ನ್ಯಾಯಾಲಯದಲ್ಲಿ ‘ಈ ಶಿಫಾರಸ್ಸನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ; ಅದು ಬೆಲೆ ಏರಿಕೆಗೆ ಕಾರಣವಾಗುತ್ತದೆ’ ಎಂದು ಅಫಿಡವಿಟ್ ಸಲ್ಲಿಸಿದ್ದ ಮೋದಿ ಈ ವರ್ಷ ರೈತ ಅಸಹನೆಯ ಬಿಸಿ ತಟ್ಟಿದ್ದರಿಂದ ಸ್ವಾಮಿನಾಥನ್ ಶಿಫಾರಸು ಜಾರಿ ಮಾಡುತ್ತಿದ್ದೇವೆ ಎಂದು ಘೋಷಿಸಿದ್ದಾರೆ. ಆದರೆ ಮೋದಿ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯ ಚೌಕಟ್ಟು ಪೂರಾ ಲೊಳಲೊಟ್ಟೆ. ಸರ್ಕಾರ ಉತ್ಪಾದನಾ ವೆಚ್ಚ + 50% ಎಂಬ ಸೂತ್ರ ಮುಂದಿಟ್ಟಿರುವುದರಲ್ಲಿ ಭೂಮಿಯ ಬಂಡವಾಳದ ವೆಚ್ಚ ಮತ್ತಿತರ ಪರೋಕ್ಷ ವೆಚ್ಚಗಳು ಸೇರಿಲ್ಲ. ಅಷ್ಟೇಕೆ ಉತ್ಪಾದನಾ ವೆಚ್ಚವನ್ನು ಸರ್ಕಾರ ಲೆಕ್ಕ ಹಾಕಿದ್ದೇ ಅವಾಸ್ತವವಾಗಿದೆ. ಕುಗ್ಗಿದ ಉತ್ಪಾದನಾ ವೆಚ್ಚವನ್ನು ತಾನೇ ತೀರ್ಮಾನಿಸಿ ಅದರ ಆಧಾರದ ಮೇಲೆ ತಾನೇ ಬೆಲೆ ಘೋಷಿಸುವ ಸರ್ಕಾರದ ಅಡ್ಡ ಕಸುಬಿತನ ರೈತ ಮುಖಂಡರಿಗೆ ಅರ್ಥವಾಗಿದೆ.
ಈ ರೀತಿ ಅತಾರ್ಕಿಕವಾದ ಕನಿಷ್ಠ ಬೆಂಬಲ ಬೆಲೆಯೂ ರೈತರಿಗೆ ದಕ್ಕುತ್ತಿಲ್ಲ ಎಂಬುದನ್ನು ಸಾಬೀತುಪಡಿಸಲು ಈ ಸಮಿತಿಯು ದೇಶದ ಬಹುತೇಕ ಮಾರುಕಟ್ಟೆಗಳಿಗೆ ಹೋಗಿ ಅಧ್ಯಯನ ನಡೆಸಿದೆ. ಎಲ್ಲಾ ಕಡೆ ಒಂದೇ ಚಿತ್ರಣ. ಕನಿಷ್ಠ ಬೆಂಬಲ ಬೆಲೆ ಎನ್ನುವುದೇ ದೊಡ್ಡ ಮೋಸ. ಆದ್ದರಿಂದಲೇ ಲಾಭದಾಯಕ ಬೆಲೆ ಕುರಿತಂತೆ ನಿಷ್ಕರ್ಷೆಗೆ ಬರಲು ಕಾನೂನು ರೂಪಿಸಲೂ ಈ ಸಮಿತಿ ಒತ್ತಾಯಿಸುತ್ತಿದೆ. ಬೆಲೆ ಕುಸಿತದ ಸಮಯದಲ್ಲಿ ಸರ್ಕಾರದ ಮಧ್ಯಪ್ರವೇಶ, ಮಾರುಕಟ್ಟೆ ಬೆಲೆ ಮತ್ತು ಸರ್ಕಾರದ ಬೆಲೆಯ ಮಧ್ಯೆಯ ವ್ಯತ್ಯಾಸವನ್ನು ರೈತರಿಗೆ ಸಬ್ಸಿಡಿ ರೂಪದಲ್ಲಿ ನೀಡುವುದು ಎಲ್ಲಾ ಈ ಬೇಡಿಕೆಗಳಲ್ಲಿ ಸೇರಿದೆ.
ಈ ಸಮಿತಿ ಗಹನವಾಗಿ ಯೋಚಿಸಿರುವ ಇನ್ನೊಂದು ಆಯಾಮ ಸಾಲದ್ದು. ಋಣಮುಕ್ತ ರೈತ ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿರುವ ಸಮಿತಿ, ರೈತ ಸಂಕುಲ ಯಾವುದೇ ಋಣ ಬಾಧೆಯಿಂದ ನರಳದಂತೆ ಮಾಡುವ ಮಾರ್ಗೋಪಾಯಗಳನ್ನು ಸರ್ಕಾರ ರಚಿಸಬೇಕು ಎಂದು ಒತ್ತಾಯಿಸಿದೆ. ಮುಖ್ಯ ಅಂಶವೆಂದರೆ ಈ ಬೇಡಿಕೆ ಯಾಕೆ ಎಂಬುದಷ್ಟೇ ಅಲ್ಲ, ಇದನ್ನು ಹೇಗೆ ಮಾಡಬಹುದು ಎಂಬು ಅನುಷ್ಠಾನ ಯೊಗ್ಯ ಸಲಹೆಗಳೂ ಈ ಸಮಿತಿಯಲ್ಲಿದೆ. ಸರ್ಕಾರಗಳು ನುಣುಚಿಕೊಳ್ಳಲು ಸಾದ್ಯವೇ ಇಲ್ಲ!
ಹಾಗಿದ್ದರೆ ಸರ್ಕಾರಗಳು ಯಾಕೆ ನುಣುಚಿಕೊಳ್ಳುತ್ತಿವೆ?
ಈ ಚಳವಳಿ ಉತ್ತರಭಾರತದಲ್ಲಿ ಪ್ರಖರವಾಗಿ ಬೆಳೆಯುತ್ತಿರುವುದರ ಹಿಂದೆ ಭಾಜಪದ ರಾಜಕೀಯ ಹಿತಾಸಕ್ತಿಗಳ ಜನದ್ರೋಹ ಇದೆ. ಗ್ರಾಮೀಣ ವರ್ಗವನ್ನು ಭಾವುಕ ವಿಷಯಗಳ ಮೂಲಕ ಹಾದಿ ತಪ್ಪಿಸುತ್ತಾ ಆಡಳಿತದ ತಣ್ಣನೆ ಆಟದಲ್ಲಿ ಕಾರ್ಪೋರೇಟ್ ಹಿತಾಸಕ್ತಿಗೆ ಮಣೆ ಹಾಕುವ ಕೆಲಸ ಭಾಜಪ ಕಾಂಗ್ರೆಸ್ಸಿಗಿಂತಲೂ ತೀವ್ರವಾಗಿ ಮಾಡುತ್ತಿದೆ. ಕಾರ್ಪೋರೇಟ್ ಕುಳಗಳ ಕೆಟ್ಟ ಸಾಲಗಳನ್ನು ನಿರಂತರವಾಗಿ ಮನ್ನಾ ಮಾಡುತ್ತಾ ಬಂದಿರುವ ಈ ಸರ್ಕಾರ ಆ ನಷ್ಟ ತುಂಬಿಸಲು ಬ್ಯಾಂಕುಗಳಿಗೆ ಬಜೆಟ್ ಅನುದಾನ ಬೇರೆ ನೀಡುತ್ತಿದೆ. ಅರ್ಥಾತ್ ಕಾರ್ಪೋರೇಟ್ ನಷ್ಟವನ್ನು ನೇರಾ ನೇರಾ ಸರ್ಕಾರ ತುಂಬಿ ಕೊಡುತ್ತಿದೆ; ಅದೂ ನಮ್ಮ ತೆರಿಗೆ ಮೂಲಕ.
ಈ ಕಳ್ಳಾಟಕ್ಕೆ ಶಾಶ್ವತ ಕೊನೆ ಹೇಳಲು ಈ ಸಂಯುಕ್ತ ಸಮನ್ವಯ ಸಮಿತಿಯ ನೇತೃತ್ವದ ರೈತ ಹೋರಾಟ ನಿರ್ಧರಿಸಿದಂತಿದೆ. ಭಾಜಪ ತನ್ನ ಭಾವನಾತ್ಮಕ ಕೋಮು ಧ್ರುವೀಕರಣದ ಮೂಲಕ ಹುಲುಸು ಬೆಲೆ ಪಡೆದಿರುವ ರಾಜ್ಯಗಳಲ್ಲೇ ಈ ಭೂಕಂಪದ ಅದುರುವಿಕೆ ತೀವ್ರವಾಗುತ್ತಿದೆ. ಮೊದಲೇ ಅಭಿವೃದ್ಧಿ ಕುಂಠಿತವಾಗಿರುವ ಈ ರಾಜ್ಯಗಳಲ್ಲಿ ರೈತ ನಿರ್ಲಕ್ಷ್ಯವೂ ಸೇರಿಕೊಂಡರೆ ಅಧಿಕಾರಸ್ಥ ಪಕ್ಷಕ್ಕೆ ಅದಕ್ಕಿಂತ ದೊಡ್ಡ ಅಪಾಯದ ಸೂಚನೆ ಇಲ್ಲ. ದಕ್ಷಿಣದ ರಾಜ್ಯಗಳಲ್ಲಿ ಅದೂ ಕರ್ನಾಟಕದಲ್ಲಿ ಸ್ಥಳೀಯ ಮಂಥನದ ಸಂಕ್ರಮಣ ಸ್ಥಿತಿಯಲ್ಲಿ ಉತ್ತರದಷ್ಟು ತೀವ್ರ ಹೋರಾಟ ತಕ್ಷಣಕ್ಕೆ ಹೊಮ್ಮದು. ಆದರೆ ಈ ಚಳವಳಿ ರೈತ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಪಡೆವ ಸ್ಪಷ್ಠತೆಯೊಂದಿಗೆ ಹೊರಟಿರುವ ಕಾರಣ ಈ ವರ್ಷ ಅಭೂತಪೂರ್ವ ಚಳವಳಿ ಎಲ್ಲೆಡೆ ಭುಗಿಲೇಳಲಿದೆ. ಕರ್ನಾಟಕವೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

– ಕೆ.ಪಿ.ಸುರೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...