ಸಂಪುಟ ವಿಸ್ತರಣೆಯ ಗದ್ದಲದ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರ ಸಮಯ ಕೇಳಿರುವ ಮುಖ್ಯಮಂತ್ರಿ ಪಕ್ಷದ ವರಿಷ್ಠರನ್ನು, ಕೇಂದ್ರ ಸಚಿವರು ಮತ್ತು ಕಾನೂನು ತಜ್ಞರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
ಗುರುವಾರ ಬೆಳಗ್ಗೆ ದೆಹಲಿಗೆ ತೆರಳಲಿರುವ ಅವರು ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಬಳಿಕ ರಾಜ್ಯದ ಸಂಸದರು ಹಾಗೂ ಅಂತಾರಾಜ್ಯ ಜಲ ವಿವಾದವನ್ನು ಪ್ರತಿನಿಧಿಸುವ ಕಾನೂನು ತಜ್ಞರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, “ಬಜೆಟ್ ಅಧಿವೇಶನದ ವೇಳೆ ರಾಜ್ಯದ ಸಂಸದರನ್ನು ಭೇಟಿ ಮಾಡುವ ಪರಿಪಾಠವಿದ್ದು, ಅದಕ್ಕಾಗಿ ಸಮಯ ಕೇಳಿದ್ದೇನೆ. ಇದು ಬಹುತೇಕ ದೃಢಪಟ್ಟಿದೆ. ನಾನು ಗುರುವಾರ ಬೆಳಿಗ್ಗೆ ದೆಹಲಿಗೆ ಹೋಗುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಮಾನಸಿಕ ಅಸ್ವಸ್ಥೆಯ ವಿಡಿಯೊ ಮುಸ್ಲಿಮರ ವಿರುದ್ಧ ದ್ವೇಷ ಹಬ್ಬಿಸಲು ಬಳಕೆ
ಮೇಕೆದಾಟು ಜಲಾಶಯ ಯೋಜನೆ ಸೇರಿದಂತೆ ಅಂತಾರಾಜ್ಯ ನದಿ ನೀರು ವಿವಾದದ ಬಗ್ಗೆ ಚರ್ಚಿಸಲು ಎಲ್ಲಾ ಜಲ ವಿವಾದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕಾನೂನು ತಜ್ಞರು ಮತ್ತು ವಕೀಲರನ್ನು ಭೇಟಿ ಮಾಡಲಿದ್ದಾರೆ. ಜೊತೆಗೆ ಕೆಲವು ಕೇಂದ್ರ ಸಚಿವರನ್ನೂ ಭೇಟಿ ಮಾಡಲಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಅದರ ಬಗ್ಗೆ ಈಗಲೇ ಯಾವುದೇ ಮಾಹಿತಿ ಬಹಿರಂಗಪಡಿಸಲಾರೆ ಎಂದಿದ್ದಾರೆ.
ಇದನ್ನೂ ಓದಿ: ಸಂವಿಧಾನ ವಿರೋಧಿ ಚರ್ಚಾ ಸ್ಪರ್ಧೆ: ‘ಪತ್ರ’ ಮುಖೇನ ಕ್ಷಮೆ ಕೇಳಿದ್ದ ವಿಇಎಸ್ ಶಾಲೆ, ಪ್ರೆಸ್ಮೀಟ್ನಲ್ಲಿ ಯೂಟರ್ನ್!