ಕಳೆದ ವರ್ಷ ಅಕ್ಟೋಬರ್ನಲ್ಲಿ ಉತ್ತರ ಪ್ರದೇಶದ ಲಖಿಂಪುರ್ ಖೇರಿನಲ್ಲಿ ಕಾರು ಹರಿಸಿ ರೈತರ ಹತ್ಯಾಕಾಂಡ ನಡೆಸಲಾಗಿತ್ತು. ಈ ಹತ್ಯಾಕಾಂಡದಿಂದ ಮೃತಪಟ್ಟ ರೈತರಿಗೆ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿರುವ ರೈತರು, ಚುನಾವಣೆಯಲ್ಲಿ ’ನೋಟಾ’ಕ್ಕೆ ಮತ ನೀಡುವುದಾಗಿ ತಿಳಿಸಿದ್ದಾರೆ.
ಲಖೀಂಪುರ್ ಖೇರಿಯ ರೈತರು ವಿಧಾನಸಭಾ ಚುನಾವಣೆಯಲ್ಲಿ ‘ನೋಟಾ’ ಬಟನ್ ಒತ್ತಲು ಮನಸ್ಸು ಮಾಡಿದ್ದಾರೆ. ರಾಜ್ಯ ಬಿಜೆಪಿ ಮತ್ತು ಎಸ್ಪಿಯ ಎರಡು ದೊಡ್ಡ ಪಕ್ಷಗಳು ನಮಗೆ ದ್ರೋಹ ಬಗೆದಿವೆ ಎಂದು ಆರೋಪಿಸಿರುವ ರೈತರು, ನಾವು ಬಿಜೆಪಿಗೆ ಅಥವಾ ಎಸ್ಪಿಗೆ ಮತ ಹಾಕುವುದಿಲ್ಲ ಎಂದಿದ್ದಾರೆ.
ಕಳೆದ ವರ್ಷದ ಅಕ್ಟೋಬರ್ 3 ರಂದು ಕೇಂದ್ರ ಸಚಿವ ಅಜಯ್ ಮಿಶ್ರಾ ತೆನಿ ಅವರ ಮಗ ಆಶಿಶ್ ಮಿಶ್ರಾ ತೆನಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಎಸ್ಯುವಿ ಹರಿಸಿ ನಾಲ್ವರ ರೈತರನ್ನು ಹತ್ಯೆ ಮಾಡಿದ್ದರು. ಒತ್ತಡಗಳ ಬಳಿಕ ಆಶಿಶ್ ಮಿಶ್ರಾ ತೆನಿಯನ್ನು ಬಂಧಿಸಲಾಗಿದೆ. ಆದರೆ, ಸಚಿವ ಅಜಯ್ ಮಿಶ್ರಾ ತೆನಿಯನ್ನು ಸಂಪುಟ ಸಚಿವ ಸ್ಥಾನದಿಂದ ಕೈಬಿಟ್ಟಿಲ್ಲ. ಇದರಿಂದ ಅಸಮಾಧಾನಗೊಂಡಿರುವ ರೈತರು, ವಿವಿಧ ರಾಜಕೀಯ ಪಕ್ಷಗಳಿಂದ ತಾವು ಮೋಸ ಹೋಗಿದ್ದೇವೆ ಎಂದಿದ್ದಾರೆ.
ತೆರಾಯ್ ಬೆಲ್ಟ್ನಲ್ಲಿರುವ ಲಖಿಂಪುರ್ ಖೇರಿ ಜಿಲ್ಲೆಯ ಜನಸಂಖ್ಯೆಯಲ್ಲಿ ಬಹುಪಾಲು ರೈತರೇ ಇದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಆರೋಪಿ ಆಶೀಶ್ ಮಿಶ್ರಾ ಸೇರಿ ಮೂವರಿಗೆ ಜಾಮೀನು ನಿರಾಕರಣೆ
“ಬಿಜೆಪಿ, ಎಸ್ಪಿ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ನಮಗೆ ಸುಳ್ಳು ಆಶ್ವಾಸನೆಗಳನ್ನು ನೀಡಿದ್ದು, ಚುನಾವಣೆಯ ಸಂದರ್ಭದಲ್ಲಿ ನಮ್ಮನ್ನು ‘ಸರಕಾಗಿ ಬಳಸಿಕೊಳ್ಳಲು’ ಬಯಸುತ್ತಿವೆ. ಹೀಗಾಗಿ ಯಾವುದೇ ರಾಜಕೀಯ ಪಕ್ಷದ ಮೇಲೆ ನಮಗೆ ಭರವಸೆ ಇಲ್ಲ” ಎಂದು ಸ್ಥಳೀಯ ರೈತ ಗುರ್ವಿಂದರ್ ಸಿಂಗ್ ಹೇಳಿದ್ದಾರೆ.
ಎಸ್ಪಿ ಮತ್ತು ಬಿಜೆಪಿ ರೈತರಿಗೆ ಮೋಸ ಮಾಡಿದೆ ಎಂದು ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆಯ ಮುಖ್ಯಸ್ಥ ವಿ.ಎಂ. ಸಿಂಗ್ ಆರೋಪಿಸಿದ್ದಾರೆ. “ಎಸ್ಪಿ- ರಾಷ್ಟ್ರೀಯ ಲೋಕದಳ ಮೈತ್ರಿಕೂಟ ಮತ್ತು ಬಿಜೆಪಿ ರೈತರನ್ನು ಮೂರ್ಖರನ್ನಾಗಿಸುತ್ತಿವೆ, ನಾವು ಅವರಿಬ್ಬರನ್ನು ಏಕೆ ಬೆಂಬಲಿಸಬೇಕು?” ಎಂದು ಪ್ರಶ್ನಿಸಿದ್ದಾರೆ.
’ಅಕ್ಟೋಬರ್ 3 ರ ಘಟನೆಯ ನಂತರ ನಾವು ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ. ಕಬ್ಬು ಗಿರಣಿ ಮಾಲೀಕರು ಸಾಗುವಳಿದಾರರಿಗೆ ಪಾವತಿಸಬೇಕಾದ 2,000 ಕೋಟಿ ರೂಪಾಯಿಗಳ ಬಡ್ಡಿಯನ್ನು ಮನ್ನಾ ಮಾಡಿದ ಸಮಾಜವಾದಿ ಪಕ್ಷವನ್ನು ಬೆಂಬಲಿಸಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ.
1966ರ ಕಬ್ಬು ನಿಯಂತ್ರಣ ಆದೇಶದ ಪ್ರಕಾರ ಕಬ್ಬಿನ ಬಾಕಿ ಬೆಲೆಯನ್ನು 14 ದಿನಗಳೊಳಗೆ ಪಾವತಿಸದಿದ್ದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಶೇ.15ರಷ್ಟು ಬಡ್ಡಿ ನೀಡಬೇಕು. ಆದರೆ, ಸಕ್ಕರೆ ಉದ್ಯಮವು ಸಂಕಷ್ಟದಲ್ಲಿದೆ ಎಂದಿದ್ದ ಆಗಿನ ಎಸ್ಪಿ ಸರ್ಕಾರ ರೈತರಿಗೆ ಬರಬೇಕಿದ್ದ ಸುಮಾರು 2,000 ಕೋಟಿ ರೂ. ಮನ್ನಾ ಮಾಡಿತ್ತು.
ಮತ್ತೊಬ್ಬ ರೈತ ರಾಜ್ ಸಿಂಗ್ ಮಾತನಾಡಿ, ‘ನಮ್ಮ ಮಕ್ಕಳು ಓದಲು, ಮದುವೆಯಾಗಲು ಸಾಧ್ಯವಾಗುತ್ತಿಲ್ಲ, ನಾವು ಯಾವುದೇ ಪಕ್ಷಕ್ಕೆ ಮತ ಹಾಕಲು ಬಯಸುವುದಿಲ್ಲ ಮತ್ತು ನೋಟಾ ಆಯ್ಕೆಯನ್ನು ಬಳಸುತ್ತೇವೆ’ ಎಂದಿದ್ದಾರೆ.
ಈ ಹಿಂದೆ, ಶಾಮ್ಲಿ ಜಿಲ್ಲೆಯ ಕಶ್ಯಪ್ ಸಮುದಾಯದ ಪಂಚಾಯತ್, 17 ಹಿಂದಿರುಳಿದ ವರ್ಗಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ವರ್ಗಾಯಿಸುವ ಅವರ ಬೇಡಿಕೆಯನ್ನು ಸರ್ಕಾರ ಈಡೇರಿಸದ ಕಾರಣ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಸದಸ್ಯರು ಯಾವುದೇ ಅಭ್ಯರ್ಥಿಗೆ ಮತ ಹಾಕುವುದಿಲ್ಲ. ನೋಟಾಗೆ ಮತ ನೀಡುವುದಾಗಿ ಘೋಷಿಸಿತ್ತು.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಸಚಿವರ ವಜಾ, ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಗೆ ಎಸ್ಕೆಎಂ ಸಜ್ಜು