ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಹೋಲಿಸಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರಿಗೆ ಪಕ್ಷದ ತಮಿಳುನಾಡು ಶಿಸ್ತು ಸಮಿತಿಯು ನೋಟಿಸ್ ಜಾರಿ ಮಾಡಿದೆ.
ತಮಿಳು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ದೂರದರ್ಶನ ಸಂದರ್ಶನದಲ್ಲಿ ಮಾತನಾಡಿದ್ದ ಕಾರ್ತಿ, ರಾಹುಲ್ ಗಾಂಧಿಗಿಂತ ಪ್ರಧಾನಿ ಮೋದಿ ಹೆಚ್ಚು ಜನಪ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ. ನಂತರ, ತಮಿಳುನಾಡು ಕಾಂಗ್ರೆಸ್ ಶಿಸ್ತು ಸಮಿತಿ ಮುಖ್ಯಸ್ಥ ಕೆ.ಆರ್. ರಾಮಸಾಮಿ ಅವರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.
ಸಂದರ್ಶನದಲ್ಲಿ ಮಾತನಾಡಿ, ಅವರು ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಕುರಿತು ತಮ್ಮ ನಂಬಿಕೆ ವ್ಯಕ್ತಪಡಿಸಿದರು. ಆದರೆ, ಕಾಂಗ್ರೆಸ್ ಇವಿಎಂಗಳ ಬಳಕೆಯನ್ನು ಸಕ್ರಿಯವಾಗಿ ವಿರೋಧಿಸಿಸುತ್ತಿದೆ. ಅವುಗಳ ವಿಶ್ವಾಸಾರ್ಹತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಇವಿಎಂಗಳಿಗೆ ಸಂಬಂಧಿಸಿದ ಕಳವಳಗಳ ಬಗ್ಗೆ ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರತಿಕ್ರಿಯೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು, ಅವರು ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಸ್ಲಿಪ್ಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಇಂಡಿಯಾ ಬ್ಲಾಕ್ ಪಕ್ಷಗಳ ನಿಯೋಗಕ್ಕೆ ಸಮಯಾವಕಾಶ ನೀಡುವಂತೆ ಕೋರಿ ಚುನಾವಣಾ ಸಂಸ್ಥೆಗೆ ಪತ್ರ ಬರೆದಿದ್ದರು.
ಚೀನಾ ವೀಸಾ ನೀಡಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಕಳೆದ ವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು.
ಇಡಿ ಸಮನ್ಸ್ಗಳನ್ನು ಕಸರತ್ತು ಎಂದು ಲೇವಡಿ ಮಾಡಿದ ತಮಿಳುನಾಡಿನ ಕಾಂಗ್ರೆಸ್ ಸಂಸದರು, ‘ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಇದು ಅವರ ವಾಡಿಕೆಯ ಕಸರತ್ತುಗಳು. ಇದಕ್ಕಿಂತ ಹೆಚ್ಚೇನೂ ಇಲ್ಲ. ನಾನು ಈ ಹಿಂದೆ ಅನೇಕ ಸಮನ್ಸ್ಗಳಿಗೆ ಉತ್ತರಿಸಿದ್ದೇನೆ. ಇದು ನಿಷ್ಪ್ರಯೋಜಕ ವ್ಯಾಯಾಮ’ ಎಂದು ಹೇಳಿದ್ದಾರೆ.
ಪಂಜಾಬ್ನಲ್ಲಿ ಪವರ್ ಪ್ರಾಜೆಕ್ಟ್ನಲ್ಲಿ ಕೆಲಸ ಪೂರ್ಣಗೊಳಿಸಲು 263 ಚೀನೀ ಪ್ರಜೆಗಳಿಗೆ ಅಕ್ರಮವಾಗಿ ವೀಸಾವನ್ನು ಕಲ್ಪಿಸಲು ಕಾಂಗ್ರೆಸ್ ನಾಯಕ ₹50 ಲಕ್ಷ ಪಡೆದಿದ್ದಾರೆ ಎಂಬ ಆರೋಪವಿದೆ. ತನಿಖಾ ಸಂಸ್ಥೆಯು ಮೇ 2023 ರಲ್ಲಿ ಚೀನೀ ವೀಸಾ ‘ಹಗರಣ’ ಪ್ರಕರಣದಲ್ಲಿ ಮನಿ ಲಾಂಡರಿಂಗ್ ಪ್ರಕರಣವನ್ನು ಇವರ ಮೇಲೆ ದಾಖಲಿಸಿದೆ.
ಇದನ್ನೂ ಓದಿ; ‘ಭಾರತ ಜೋಡೋ ನ್ಯಾಯ ಯಾತ್ರೆ’ಗೆ ಮಣಿಪುರ ಹಿಂಸಾಚಾರದ ಕರಿ ನೆರಳು!