Homeಮುಖಪುಟಸಚಿವಾಲಯ ಮುತ್ತಿಗೆ ಹಿಂಸಾಚಾರ ಪ್ರಕರಣ: ಕೇರಳ ಯುವ ಕಾಂಗ್ರೆಸ್ ಮುಖ್ಯಸ್ಥನ ಬಂಧನ

ಸಚಿವಾಲಯ ಮುತ್ತಿಗೆ ಹಿಂಸಾಚಾರ ಪ್ರಕರಣ: ಕೇರಳ ಯುವ ಕಾಂಗ್ರೆಸ್ ಮುಖ್ಯಸ್ಥನ ಬಂಧನ

- Advertisement -
- Advertisement -

ಕೇರಳ ಸಚಿವಾಲಯದ ಬಳಿ ಕಳೆದ ವರ್ಷ ಡಿಸೆಂಬರ್ 21ರಂದು ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇರಳ ಯುವ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಮಮ್‌ಕೂಟತಿಲ್ ಅವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಮಕೂಟತಿಲ್ ಅವರ ಬಂಧನ ವಿರೋಧಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದ್ದಾರೆ. ಮಮಕೂಟತಿಲ್ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದ ನಂತರ, ಜನವರಿ 22 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ತಿರುವನಂತಪುರಂನ ಕಂಟೋನ್ಮೆಂಟ್ ಪೊಲೀಸರು ಅಡೂರಿನಲ್ಲಿರುವ ರಾಹುಲ್ ಮನೆಯಿಂದ ಅವರನ್ನು ಮಂಗಳವಾರದಂದು ವಶಕ್ಕೆ ಪಡೆದರು. ‘ನನ್ನ ತಾಯಿಯ ಮುಂದೆ ನನ್ನನ್ನು ಬಂಧಿಸಲು ಸಿಎಂ ಪಿಣರಾಯಿ ವಿಜಯನ್ ನಿರ್ಧಾರ ಮಾಡಿದ್ದಾರೆ. ಆದರೆ, ನಾನು ನನ್ನ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ’ ಎಂದು ಯುವ ಕಾಂಗ್ರೆಸ್ ಅಧ್ಯಕ್ಷರು ಪೊಲೀಸ್ ವಾಹನದಲ್ಲಿ ಕುಳಿತು ಮಾಧ್ಯಮಗಳಿಗೆ ಹೇಳಿದರು.

ಕಾಂಗ್ರೆಸ್ ಸಾಂಸ್ಥಿಕ ಚುನಾವಣೆಯ ನಂತರ ಕಳೆದ ವರ್ಷ ನವೆಂಬರ್‌ನಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದ ಮಮಕೂಟತಿಲ್ ಅವರು ಡಿಸೆಂಬರ್‌ನಲ್ಲಿ ಪಕ್ಷವು ಆಯೋಜಿಸಿದ್ದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಾಖಲಾದ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿದ್ದಾರೆ. ಮೊದಲ ಆರೋಪಿ ಪ್ರತಿಪಕ್ಷದ ನಾಯಕ ವಿ.ಡಿ.ಸತೀಶ, ಎರಡು ಮತ್ತು ಮೂರನೇ ಆರೋಪಿ ಶಾಸಕರಾದ ಶಫಿ ಪರಂಬಿಲ್ ಮತ್ತು ಎಂ.ವಿನ್ಸೆಂಟ್.

ಕಾನೂನುಬಾಹಿರ ಸಭೆ, ಗಲಭೆ, ಅಕ್ರಮವಾಗಿ ಸಾರಿಗೆ ತಡೆಹಿಡಿಯುವುದು, ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವುದು, ಸ್ವಯಂಪ್ರೇರಿತವಾಗಿ ಹಾನಿ ಮಾಡುವುದು ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದು ಸೇರಿದಂತೆ ಹಲವು ಅಪರಾಧಗಳ ಅಡಿ ರಾಹುಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅನಾಮಧೇಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಹುಲ್ ಬಂಧನ ವಿರೋಧಿಸಿ ಪ್ರತಿಭಟಿಸಿದ ಕೇರಳ ಕಾಂಗ್ರೆಸ್ ಕಾರ್ಯಕರ್ತರು

ರಾಹುಲ್ ಬಂಧನ ವಿರೋಧಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದಲ್ಲಿ ರಸ್ತೆ ಹಾಗೂ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಅಲ್ಲದೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರತಿಕೃತಿ ದಹಿಸಿದರು. ಮಾಮ್ಕೂಟತಿಲ್ ಬಂಧನದ ಸಮಯದಲ್ಲಿ ಅವರ ತಾಯಿ ಮನೆಯಲ್ಲಿದ್ದರು. ಅನೇಕ ಪೊಲೀಸರು ಮನೆಗೆ ಬಂದಿದ್ದರೂ ಏನಾಗುತ್ತಿದೆ ಎಂದು ತಿಳಿದಿರಲಿಲ್ಲ. ಮನೆಯಿಂದಲೇ ರಾಹುಲ್‌ನನ್ನು ಬಂಧಿಸುವಂತೆ ಮೇಲಾಧಿಕಾರಿಗಳಿಂದ ನಿರ್ದೇಶನವಿದೆ ಎಂದು ಅವರ ತಾಯಿ ಆರೋಪಿಸಿದ್ದಾರೆ.

ರಾಹುಲ್ ಹಠಾತ್ ಬಂಧನಕ್ಕಾಗಿ ಸತೀಶನ್ ಪೊಲೀಸರನ್ನು ಟೀಕಿಸಿದ್ದಾರೆ. ‘ಆತ ಅಪರಾಧಿ ಅಥವಾ ಭಯೋತ್ಪಾದಕನಲ್ಲ. ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಕೊಂದ ಆರೋಪಿಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಿದ ಅದೇ ಸರ್ಕಾರ ಮತ್ತು ಪೊಲೀಸರು, ರಾಹುಲ್‌ನನ್ನು ಆತನ ಮನೆಯಿಂದ ಮುಂಜಾನೆ ಬಂಧಿಸಿದ್ದಾರೆ’ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕರನ್ ಎಲ್‌ಡಿಎಫ್ ಸರ್ಕಾರ ಮತ್ತು ಪೊಲೀಸರಿಗೆ ಪ್ರತೀಕಾರದ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಸಿಪಿಐ (ಎಂ) ಮತ್ತು ಪೊಲೀಸರ ಸಂಚಿನಿಂದ ರಾಹುಲ್ ಅವರನ್ನು ಬಂಧಿಸಲಾಗಿದೆ. ಒಂದು ವೇಳೆ ನೋಟಿಸ್ ನೀಡಿದ್ದರೆ ತಾನಾಗಿಯೇ ಪೊಲೀಸರ ಮುಂದೆ ಹಾಜರಾಗುತ್ತಿದ್ದ. ಬದಲಾಗಿ, ಅಪರಾಧಿಗಳಂತೆ, ಅವರನ್ನು ಮುಂಜಾನೆ ಅವರ ಮನೆಯಿಂದ ಬಂಧಿಸಲಾಗಿದೆ’ ಎಂದು ಕಿಡಿಕಾರಿದರು.

ಬಂಧನವನ್ನು ಸಮರ್ಥಿಸಿಕೊಂಡ ಎಲ್‌ಡಿಎಫ್ ಸಂಚಾಲಕ ಇಪಿ ಜಯರಾಜನ್, ‘ಯುವ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಅವರಿಗೆ ವಿಶೇಷ ರಕ್ಷಣೆ ಇದೆಯೇ? ಕಾನೂನು ಮತ್ತು ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲವೇ? ಆತ ಹೋಗಿ ದೊಣ್ಣೆ, ಕಲ್ಲುಗಳಿಂದ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರೆ ಕ್ರಮ ಎದುರಿಸುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ; ಮೋದಿ ಜನಪ್ರಿಯತೆಯನ್ನು ರಾಹುಲ್‌ಗೆ ಹೋಲಿಸಿದ ಕಾರ್ತಿ: ನೋಟಿಸ್ ಕೊಟ್ಟ ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read