Homeಮುಖಪುಟಕಾರವಾರ: ಕಿಮ್ಸ್‌ನಲ್ಲಿ ವಿಡಿಯೋ-ಆಡಿಯೋ ಗುದುಮುರಿಗೆ!!

ಕಾರವಾರ: ಕಿಮ್ಸ್‌ನಲ್ಲಿ ವಿಡಿಯೋ-ಆಡಿಯೋ ಗುದುಮುರಿಗೆ!!

- Advertisement -
- Advertisement -

ಕಾರವಾರದ ಮೆಡಿಕಲ್ ಕಾಲೇಜು ಉರುಫ್ ಕಿಮ್ಸ್ ಗಲೀಜು-ಗಲಾಟೆ-ಗುಳುಂಗಳಿಂದ ಗಬ್ಬೆದ್ದು ನಾರುತ್ತಿದೆ. ಈ ಕಿಮ್ಸ್ ಶುರುವಾದಾಗಿಂದಲೂ ಅಲ್ಲಿ ಆಡಳಿತದಲ್ಲಿ ‘ಕಾರವಾರ ರಿಪಬ್ಲಿಕ್’ ಕಿಂಗ್‍ಗಳು ಕೈಯಾಡಿಸುತ್ತಲೇ ಬಂದಿದ್ದಾರೆ. ಆರಂಭದಲ್ಲಿ ತಮ್ಮೊಂದಿಗೆ ಹೊಂದಿಕೊಂಡಿದ್ದ, ನಂತರ ಸೆಟೆದು ನಿಂತಿದ್ದ ಡೀನ್ ಕಮ್ ಡೈರೆಕ್ಟರ್ ಡಾ| ದೊಡ್ಮನಿಯನ್ನು ಎತ್ತಗಂಡಿ ಮಾಡಿಸಿ ಅನರ್ಹ ಡಾ| ಗಜಾನನ ನಾಯಕ್‍ನನ್ನು ಇದೇ ಕಾರವಾರ್ ರಿಪಬ್ಲಿಕ್ ಪ್ರತಿಷ್ಠಾಪಿಸಿಕೊಂಡಿತ್ತು. ಆತನಿಂದ ಜಿಲ್ಲಾ ಆಸ್ಪತ್ರೆ ನಂದನವನವಾಗುತ್ತದೆ; ರೋಗಿಗಳಿಗೆ ತೊಂದರೆ-ಕೊರತೆಯೆಂಬುದೇ ಆಗುವುದಿಲ್ಲ ಎಂಬಂತೆ ರಿಪಬ್ಲಿಕ್ ಮಾಫಿಯಾ ಬಿಂಬಿಸಿತ್ತು. ಆದರೆ ಎಂದೂ ಕ್ಲಿನಿಕಲ್ ಪ್ರಾಕ್ಟೀಸ್ ಮಾಡದ ಡಾ| ಗಜಾನನ ವಕ್ಕರಿಸಿದ್ದೇ ತಡ, ಕಿಮ್ಸ್‍ನಲ್ಲಿ ಸರಣಿ ಅವಾಂತರ-ಅನಾಹುತ-ಆಧ್ವಾನ ಆಗಹತ್ತಿದೆ……..

ಕಿಮ್ಸ್‍ನ ಕೋವಿಡ್-19 ವಾರ್ಡ್‍ಂತೂ ರೌರವ ನರಕ. ವಾರ್ಡ್ ತುಂಬ ಕಸ-ಕೊಚ್ಚೆ ಶುದ್ಧ ಕುಡಿಯುವ ನೀರಿಗೂ ಗತಿಯಿಲ್ಲ. ಹೈಜೀನಿಕ್ ಊಟ-ತಿಂಡಿ ಕೇಳಲೇಬೇಡಿ. ಡಾಕ್ಟರ್-ದಾದಿಯರು ಬಂದರೆ ಬಂದರು, ಇಲ್ಲದಿದ್ದರೆ ಇಲ್ಲ. ಸ್ವಚ್ಛತಾ ಕರ್ಮಚಾರಿಗಳಂತೂ ಕಾಣುವುದೇ ಇಲ್ಲ. ಕಿಮ್ಸ್ ಡೈರೆಕ್ಟರ್ ಡಾ| ಗಜಾನನ ಮತ್ತು ವೈದ್ಯಕೀಯ ಅಧೀಕ್ಷರು, ಡಾ| ಕುಡ್ತರ್‍ಕರ್ ಪಿಪಿಇ ಕಿಟ್ ಧರಿಸಿ ವಾರ್ಡಿಗೆ ಹೋದದ್ದೇ ಇಲ್ಲ!! ರೋಗ ನಿರೋಧಕ ಶಕ್ತಿಯಿದ್ದ ರೋಗಿ ಕಿಮ್ಸ್‍ನಿಂದ ಬಚಾವಾಗಿ ಬರಬೇಕೇ ಹೊರತು ಇಲ್ಲಿಯ ಶುಶ್ರೂಷೆಯಿಂದ ಬದುಕಲು ಸಾಧ್ಯವೇ ಇಲ್ಲ. ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಉತ್ಸಾಹಿ ಐಎಎಸ್ ಅಧಿಕಾರಿ ಮಹಮ್ಮದ್ ರೋಷನ್ ಕೋವಿಡ್ ಕೇಂದ್ರದ ಉಸ್ತುವಾರಿ ನೋಡಿಕೊಂಡಷ್ಟು ದಿನ ಯಾವುದೇ ಸಮಸ್ಯೆಯಿರಲಿಲ್ಲ.

ಕಿಮ್ಸ್ ಡೈರೆಕ್ಟರ್ ಡಾ| ಗಜಾನನ ಮತ್ತು ಸುಪರಿಂಡೆಂಟೆಂಟ್ ಡಾ| ಕುಡ್ತರ್‍ಕರ್ ಕೋವಿಡ್ ಕೇಂದ್ರದ ಯಜಮಾನಿಕೆಗಾಗಿ ಲಾಬಿ ಮಾಡುತ್ತಿದ್ದಂತೆಯೇ ಜಿಲ್ಲಾಡಳಿತ ಅಂತರ ಕಾಯ್ದುಕೊಂಡಿತು. ಕೋವಿಡ್ ಕೇಂದ್ರ ಕಬ್ಜಾ ಮಾಡಿಕೊಂಡ ಡಾ| ಗಜಾನನ ಸಿಇಓ ರೊಷನ್‍ರ ಸಾಧನೆ ಶ್ರಮವೆಲ್ಲ ತನ್ನ ಸಾಹಸವೆಂಬಂತೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಕಾರವಾರದ ಅವರ ಜಾತಿವಂತರ ಪತ್ರಿಕೆಯಂತೂ ‘ಮೃತ್ಯುಂಜಯ’ ಎಂಬ ಹಾಸ್ಯಾಸ್ಪದ ಬಿರುದು ಕೊಟ್ಟುಬಿಟ್ಟಿತು.

ಸೋಂಕಿತರು ಗುಣವಾಗಿ ಹೋಗುವಾಗ ಹೂವು ಕೊಟ್ಟು ಚಪ್ಪಾಳೆ ಹೊಡೆದು ಫೋಟೋ ಸೆಷನ್ ನಡೆಸಿ ಕಾಳಜಿಯ ವೈದ್ಯಾಗ್ರೇಸನ ಪೋಸು ಕೊಡುತ್ತಿದ್ದವರ ಬಣ್ಣ ಕಳೆದ 10-7-2020ರಂದು ಬಯಲಾಗಿ ಹೋಯಿತು. ಬೆಂಗಳೂರಲ್ಲಿ ಚಾರ್ಟ್‍ಟೆಡ್ ಅಕೌಂಟೆಂಟ್ ಉದ್ಯೋಗ ಮಾಡಿಕೊಂಡಿದ್ದ ಕಾರವಾರದ ನಿತಿನ್ ನಾಯಕ್ ಎಂಬ ತರುಣ ಮೂರು ದಿನಗಳ ಹಿಂದೆ ಈ ಕೋವಿಡ್ ಕೇಂದ್ರಕ್ಕೆ ದಾಖಲಾಗಿದ್ದ. ಅಲ್ಲಿದ್ದ ಸೋಂಕಿತರೆಲ್ಲ ಹೀನಾಯ ಸ್ಥಿತಿಯಲ್ಲಿದ್ದರು; ಮೂರು ದಿನ ನಿತಿನ್ ಸಹ ಹಿಂಸೆ ಅನುಭವಿಸಿದ್ದಾನೆ. ಈತ ಇಡೀ ಉದ್ದಗಲಕ್ಕೆ ಓಡಾಡುತ್ತ ಅಲ್ಲಿಯ ಅವ್ಯವಸ್ಥೆ-ಅನೈರ್ಮಲ್ಯ-ಲೋಪ-ದೋಷ ಲೈವ್ ಕಮೆಂಟರಿ ಮೂಲಕ ತೋರಿಸುತ್ತ ವಿಡಿಯೋ ಮಾಡಿಸಿಕೊಂಡಿದ್ದಾನೆ. ಆತನಿಗೆ ವಾರ್ಡ್‍ನ ಇತರ ಸೋಂಕಿತರು ಶೂಟಿಂಗ್‍ಗೆ ನೆರವಾಗಿದ್ದಾರೆ. ವಾರ್ಡಿಗೆ ಡಾಕ್ಟರ್ಸ್-ದಾದಿಯರು ಮತ್ತ ಸ್ವಚ್ಛತಾ ಕರ್ಮಚಾರಿಗಳ್ಯಾರು ಬರುತ್ತಿಲ್ಲ; ರೋಗಿಗಳ ಮೇಲೆ ಯಾರಿಗೂ ನಿಗಾಇಲ್ಲ ಎಂದಿರುವ ನಿತಿನ್ ವಾರ್ಡ್ ತುಂಬ ತುಂಬಿರುವ ಬಯೋಲಾಜಿಕಲ್ ತ್ಯಾಜ್ಯ, ನೀರು ನಿಂತು ಕೊಚ್ಚೆ ನಿರ್ಮಾಣವಾಗಿರುವುದು, ಬಿಸಿ ನೀರಿಗೂ ಗತಿಯಿಲ್ಲದಿರುವುದು, ಶೌಚಾಲಯದ ದುರವಸ್ಥೆ-ಅಸಹ್ಯ, ಅತಿ ಅವಶ್ಯವಾದ ನೀರೂ ಸರಬರಾಜಾಗದಿರುವುದು, ಸ್ವಚ್ಛತೆಯಿಲ್ಲದ ಊಟ-ಉಪಹಾರದ ಕತೆ ಹೇಳುತ್ತ ಹೊರಜಗತ್ತಿಗೆ ಕಳುಹಿಸಿದ್ದಾನೆ. ಇದಕ್ಕಿಂತ ಮುಖ್ಯವಾಗಿ 4 ದಿನಗಳ ಹಿಂದೆ ಅಸುನೀಗಿದ್ದ ಶಿರಸಿಯ ವ್ಯಕ್ತಿಗೆ ಸೇರಿದ ಹಾಸಿಗೆ-ಸಾಮಾನುಗಳು ಆತ ಜೀವ ಬಿಟ್ಟಲ್ಲೇ ಬಿದ್ದಿರುವುದು ತೋರಿಸಿದ್ದಾನೆ. ಆತ ಈ ವೀಡಿಯೋ ಶೇರ್ ಮಾಡಿದ ಹತ್ತೇ ನಿಮಿಷದಲ್ಲಿ ವೈರಲ್ ಆಗಿದೆ.

ಅಲ್ಲಿಗೆ ಡೀನ್ ಡಾ|ಗಜಾನನರ ಗ್ಯಾಂಗಿನ ಕರ್ಮಕಾಂಡ ಜಗಜ್ಜಾಹೀರಾಗಿ ಹೋಗಿದೆ. ಇದರಿಂದ ಕಂಗಾಲಾದ ಅವರ ಮರುದಿನವೇ ಗುಣಪಟ್ಟು ಬಿಡುಗಡೆಯಾದ ಸೋಂಕಿತರಿಂದ ಆಸ್ಪತ್ರೆಯಲ್ಲಿ ಅತ್ಯುತ್ತಮ ವ್ಯವಸ್ಥೆಯಿದೆ…. ಹಣ್ಣು.. ಮೊಟ್ಟೆ… ಭರ್ಜರಿ ಊಟ ಕೊಡಲಾಗುತ್ತದೆ.. ವೈದ್ಯರು-ದಾದಿಯರು ಕಾಳಜಿ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.. ಎಂದೆಲ್ಲಾ ಹೇಳಿಸಿ ವೀಡಿಯೋ ಮಾಡಿಸಿದ್ದಾರೆ. ಈ ವಿಡಿಯೋದಲ್ಲಿ ಬೇಡವೆಂದರೂ ಡಾ| ಗಜಾನನ ಮತ್ತು ಡಾ| ಕುಡ್ತರ್ಕರ್ ಕಾಣಿಸುತ್ತಾರೆ. ಪ್ರತಿದಿನ ಸಂಜೆ ನಾಲ್ಕು ಗಂಟೆಗೆ ತ್ಯಾಜ್ಯ ಹೊರಸಾಗಿಸಲಾಗುತ್ತದೆಂದು ಡಾ| ಗಜಾನನ ಹೇಳಿದ್ದಾರೆ. ಆದರೆ ವಾರ್ಡ್‍ನ ಮೂಲೆ ಮೂಲೆಯಲ್ಲಿ ನಾಲ್ಕೈದು ದಿನ ಸಂಗ್ರಹವಾಗುವಷ್ಟು ತ್ಯಾಜ್ಯ ತುಂಬಿರುವುದು ಅವರು ಹಸೀ ಸುಳ್ಳು ಹೇಳುತ್ತಿದ್ದಾರೆಂಬುದನ್ನು ಸಾಬೀತುಪಡಿಸುತ್ತದೆ.

ಇಷ್ಟಕ್ಕೇ ಅವರ ಹತಾಶೆ-ಆಕ್ರೋಶ ನಿಂತಿಲ್ಲ. ಅವ್ಯವಸ್ಥೆಯ ವಿಡಿಯೋ ಮಾಡಿದ ತರುಣ ಮತ್ತವನಿಗೆ ಸಹಾಯ ಮಾಡಿದ ಸೋಂಕಿತರನ್ನು ಆಸ್ಪತ್ರೆಯ ಬಾಗಿಲಿಗೆ ಕರೆಸಿಕೊಂಡಿದ್ದಾರೆ. ಗಾಜಿನ ಗೋಡೆಯ ಆಚೆ ನಿಂತು ಪಕ್ಕ ರೌಡಿಯಂತೆ ಹಾರಾಡಿ, ಸೋಂಕಿತರೊಂದಿಗೆ ಜಗಳವಾಡಿದ್ದಾರೆ. ವಿಡಿಯೋ ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ವಿಡಿಯೋ ಕೂಡ ಕ್ಷಣಾರ್ಧದಲ್ಲಿ ವೈರಲ್ ಆಗಿಹೋಗಿದೆ. ಈ ಎಲ್ಲಾ ವಿಡಿಯೋಗಳು, ಫೋಟೋಗಳು ನಮಗೆ ಲಭ್ಯವಾಗಿವೆ. ಈ ಪುರಾವೆಗಳಿಂದ ಡೀನ್ ಸಾಹೇಬರ ‘ಯೋಗ್ಯತೆ’ ಊರಿಗೆಲ್ಲ ಪಕ್ಕ ಆಗಿದೆ!! ಅವರ ಪರವಾಗಿ ಪತ್ರಕರ್ತ ಮಾಧವ ನಾಯ್ಕರೇಕೆ ವಕಾಲತ್ತು ವಹಿಸುತ್ತಿದ್ದಾರೆ ಎಂಬುದೇ ಸೋಜಿಗದ ಸಂಗತಿ.

ವಿಡಿಯೋ ಧೀರ ನಿತಿನ್ ಮಾಧವನಾಯ್ಕ್‍ರ ಜಾತಿ ಬಂಧು. ಆತನ ತಂದೆ ಕಾರವಾರದ ಪ್ರಮುಖ ರಾಜಕಾರಣಿ. ಹೀಗಾಗಿ ನಿತಿನ್‍ಗೆ ಪೂಸಿ ಹೊಡೆಯಬೇಕಾಗಿ ಬಂತು. ಮಾಧವನಾಯ್ಕ್ ನಿನಗೆ ಸಪೋರ್ಟ್ ಮಾಡ್ತೇನೆ ಎಂದು ನಿತಿನ್‍ಗೆ ಹೇಳಿದ್ದಂತೆ ಕಾಣುತ್ತಿದೆ. ಆದರೆ ಅವರೇ ಮರುದಿನ ನಿತಿನ್ ವಿಡಿಯೋ ಮಾಡಿದ್ದು ತಪ್ಪು ಎಂದು ಹೇಳಿಕೆ ಬದಲಾಯಿಸಿದ್ದರು. ಇದರಿಂದ ಕೆರಳಿದ ನಿತಿನ್ ಮಾಧವನಾಯ್ಕ್‍ರಿಗೆ ಫೋನಾಯಿಸಿ “ಇದೆಂಥ ವಿಶ್ವಾಸ ದ್ರೋಹ ಸಾರ್” ಎಂದಿದ್ದಾನೆ. ಕಕ್ಕಾಬಿಕ್ಕಿಯಾದ ಮಾಧವ ಏನೋ ಸಮಜಾಯಿಷಿ ಕೊಟ್ಟಿದ್ದಾರೆ. ನಿತಿನ್ ತನ್ನನ್ನು ನಾಲ್ಕು ದಿನದಿಂದ ಒಬ್ಬೇ ಒಬ್ಬ ಡಾಕ್ಟರ್ ಅಥವಾ ನರ್ಸ್ ಮಾತಾಡಿಸಿಲ್ಲ, ತಾನು ಕೊಳಚೆಯಲ್ಲಿದ್ದೇನೆ ಎಂದಿದ್ದಾನೆ. ಹಾಗಿದ್ದರೆ ಡಾ.ಗಜಾನನರಿಗೆ ಫೋನ್ ಸಂಪರ್ಕ ಮಡುತ್ತೇನೆ ನೀನೇ ಮಾತಾಡು ಎಂದಿದ್ದಾನೆ. ಮೂವರ ನಡುವೆ ಬರೋಬ್ಬರಿ ಮುವ್ವತ್ತಾ ಮೂರುವರೆ ನಿಮಿಷ ಕಾನ್ಫರೆನ್ಸ್ ಸಂಭಾಷಣೆ ನಡೆದಿದೆ.

ನಿತಿನ್‍ನ ಒಂದು ಪ್ರಶ್ನೆಗೂ ಉತ್ತರಿಸಲಾಗದೆ ಡಾ| ಗಜಾನನ ಮತ್ತು ಮಾಧವ ನಾಯ್ಕ್ ತಡವರಿಸಿದ್ದಾರೆ! ಈ ಆಡಿಯೋ ಸಹ ಜಿಲ್ಲೆಯಲ್ಲಿ ಹಿಟ್ ಆಗಿದೆ! ಈ ವಿಡಿಯೋ ಮತ್ತು ಆಡಿಯೋ ವಾರ್ ಜಿಲ್ಲಾಧಿಕಾರಿ ಡಾ| ಹರೀಶ್‍ಕುಮಾರ್ ಮತ್ತು ಶಾಸಕಿ ರೂಪಾಲಿ ನಾಯ್ಕ್ “ಸುಮ್ಮನೆ” ನೋಡಿದ್ದು ಅನೇಕ ಅನುಮಾನ ಮೂಡಿಸಿದೆ. ‘ಕೊರೊನಾ ಸಂಹಾರ ಸೈನ್ಯ’ದ ಸುಪ್ರೀಂ ಕಮಾಂಡರ್ ಆಗಿರುವ ಜಿಲ್ಲಾಧಿಕಾರಿ ಕಿಮ್ಸ್‍ನ ಕರ್ಮಕಾಂಡ ಕಂಡೂ ಕಾಣದಂತಿರುವುದೇಕೆ? ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡ್ತೇನೆಂದು ಭರವಸೆ ನೀಡುವ ಶಾಸಕಿ ರೂಪಾಲಿಯಮ್ಮ ಕೋವಿಡ್ ರೋಗಿಗಳಿಗೆ ಕೊಡಬೇಕಾದ ಮೊಟ್ಟೆ ಸಿಗದಿದ್ದರೂ ಕೇಳುತ್ತಿಲ್ಲ! ಹೀಗಿರುವಾಗ ಅದ್ಹೇಗೆ ಕಿಮ್ಸ್‍ನ ಅವ್ಯವಹಾರ-ಅವಾಂತರ ಪ್ರಶ್ನಿಸಿಯಾರು? ಒಟ್ಟಿನಲ್ಲಿ ಸಾವಿರಾರು ರೂಪಾಯಿ ಅನುದಾನದ ಕಿಮ್ಸ್‍ನ ಕೋವಿಡ್ ವಾರ್ಡ್‍ನಲ್ಲಿ ಬೇಲಿಯೇ ಹೊಲ ಮೇಯುತ್ತಿದೆ.


ಇದನ್ನು ಓದಿ: ಕರ್ನಾಟಕದ ಕೊರೊನಾ ಡಾಕ್ಟರ್ ಏನು ಹೇಳುತ್ತಾರೆ? ಡಾ.ಆಸಿಮ ಬಾನು ಸಂದರ್ಶನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕರ್ನಾಟಕ ವಿಧಾನ ಪರಿಷತ್‌ನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

0
ಕರ್ನಾಟಕ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜೂನ್ 3ರಂದು ಮತದಾನ ನಡೆಯಲಿದೆ. ಕರ್ನಾಟಕ ವಿಧಾನ ಪರಿಷತ್ತಿನ 3 ಶಿಕ್ಷಕರ ಕ್ಷೇತ್ರ ಮತ್ತು 3 ಪದವೀಧರ ಕ್ಷೇತ್ರಗಳಿಗೆ...