ಕೇರಳದ ಮಲಪ್ಪುರಂ ಬಳಿಯ ಕೊಟ್ಟಕ್ಕಲ್ ನಲ್ಲಿನ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬಳನ್ನು ಮದುವೆಯಾದ ನಾಲ್ಕು ತಿಂಗಳಿಗೆ ಮಗು ಹೆತ್ತಳೆಂಬ ಕಾರಣದಿಂದ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಪೋಷಕ ಮತ್ತು ಶಿಕ್ಷಕ ಸಂಘ ಶಾಲೆಯಿಂದ ಹೊರಹಾಕಿರುವ ಘಟನೆ ನಡೆದಿದೆ.
ಪೋಷಕರ ಮತ್ತು ಶಿಕ್ಷಕ ಸಂಘ ಸಭೆಯಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಲಾಗಿದೆ ಮತ್ತು ನಾನು ಶಾಲೆಗೆ ಮರಳಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಆ ಶಿಕ್ಷಕಿಯು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಸದರಿ ಸರ್ಕಾರಿ ಶಾಲೆಯಲ್ಲಿ ಆ ಶಿಕ್ಷಕಿಯು ಕಳೆದ ಐದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಕೆಯು ಗಂಡನಿಂದ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದು ವಿಚ್ಚೇಧನ ದೊರೆಯುವುದು ವಿಳಂಬವಾಗಿದೆ. ಈಗಿರುವಾಗ ಆಕೆ ತನ್ನ ಎರಡನೇ ಗಂಡನೊಂದಿಗೆ ಮದುವೆಗೂ ಮುಂಚೆಯೇ ವಾಸಿಸಲು ಆರಂಭಿಸಿದ್ದಾರೆ. ನಂತರ 2018ರ ಜೂನ್ ನಲ್ಲಿ ಆಕೆ ಎರಡನೇ ಮದುವೆಯಾಗಿದ್ದಾರೆ. ಇದಾದ ನಾಲ್ಕು ತಿಂಗಳ ನಂತರ ಅವರು ತನಗೆ ಮಾತೃತ್ವ ರಜೆ ನೀಡಬೇಕೆಂದು ಶಾಲೆಗೆ ಅರ್ಜಿ ಸಲ್ಲಿಸಿದ ಮರುದಿನವೇ ಅವರು ಮಗುವಿಗೆ ಜನ್ಮ ನೀಡಿದ್ದಾರೆ.
ನಂತರ ಜನವರಿ 2019ಕ್ಕೆ ಅವರ ಮಾತೃತ್ವ ರಜೆ ಪೂರ್ಣಗೊಂಡ ನಂತರ ಶಾಲೆಗೆ ಬಂದರೆ, ಮದುವೆಯಾದ ನಾಲ್ಕು ತಿಂಗಳಿಗೆ ಮಾತೃತ್ವ ರಜೆ ಪಡೆದ ಕಾರಣ ಮುಂದೊಡ್ಡಿ, ಶಾಲೆಯ ಆಡಳಿತ ಮಂಡಳಿ ಅವರನ್ನು ಶಾಲೆಯೊಳಗೆ ಬಿಟ್ಟುಕೊಂಡಿಲ್ಲ. ಇದರಿಂದ ಮನನೊಂದ ಆಕೆ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಆಯೋಗವು ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಬಳಿ ಸ್ಪಷ್ಟೀಕರಣ ಕೇಳಿದೆ.
ಕೆಲವು ತಿಂಗಳುಗಳ ನಂತರ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಮ್ಮ ತನಿಖೆಯನ್ನು ಪೂರ್ಣಗೊಳಿಸಿ ಶಿಕ್ಷಕಿಯನ್ನು ಶಾಲೆಗೆ ಮರುನೇಮಿಸಿಕೊಳ್ಳಬೇಕೆಂದು ಸೂಚನೆ ನೀಡಿದೆ. ಆದರೆ ಶಾಲೆಯ ಆಡಳಿತ ಮಂಡಳಿ ಮತ್ತು ಪೋಷಕ ಮತ್ತು ಶಿಕ್ಷಕ ಸಂಘ ಆ ಸೂಚನೆಯನ್ನು ಧಿಕ್ಕರಿಸಿದ್ದಾರೆ.
“ನಾನು ಶಾಲೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದೆ. ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಸೂಚನೆಯಂತೆ ನನ್ನನ್ನು ಮತ್ತೆ ಕೆಲಸಕ್ಕೆ ನಿಯೋಜಿಸುವಂತೆ ಮನವಿ ಮಾಡಿದೆ. ಆದರೆ ಸಭೆಯಲ್ಲಿ ಪೋಷಕ ಮತ್ತು ಶಿಕ್ಷಕ ಸಂಘದವರು ನನ್ನ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಮಾತಾಡಿ ಅವಮಾನ ಮಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿ, ಶಾಲೆಗೆ ಮರಳಲು ಅವಕಾಶ ನೀಡಲಿಲ್ಲ. ಹಾಗಾಗಿ ಜೂನ್ 14 ರಂದು ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನನ್ನ ವಯಕ್ತಿಕ ಜೀವನದ ಬಗ್ಗೆ ಮಾತನಾಡಲು ಅವರ್ಯಾರಿಗೂ ಹಕ್ಕಿಲ್ಲ. ಆದರೂ ಅವರಿಗೆ ನನ್ನ ಗರ್ಭಿಣಿ ಸಮಯದ ಮೇಲೆ ಯಾಕಷ್ಟು ಕಾಳಜಿ ಎಂದು ನನಗೆ ಗೊತ್ತಿಲ್ಲ”ಎನ್ನುತ್ತಾರೆ ಆ ನೊಂದ ಶಿಕ್ಷಕಿ.
ಇದೊಂದು ನೈತಿಕ ಪೊಲೀಸ್ ಗಿರಿಯಾಗಿದೆ ಮಾತ್ರವಲ್ಲ ಆ ಶಿಕ್ಷಕಿಯ ಖಾಸಗಿತನದ ಮೇಲಿನ ದಾಳಿಯಾಗಿದೆ. ಮದುವೆ ಮಕ್ಕಳು ಅವರವರ ಖಾಸಗಿ ಬದುಕು. ಅದರಲ್ಲಿ ಇಣುಕಲು ಹೊರಗಿನವರಿಗೆ ಹಕ್ಕಿಲ್ಲ ಎಂಬುದನ್ನು ಆ ಶಾಲೆಯ ಆಡಳಿತ ಮಂಡಳಿ ತಿಳಿದಿರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಭಿಪ್ರಾಯ ವ್ಯಕ್ತಿಪಡಿಸಿದ್ದಾರೆ.
“ದೂರದಾರರು ನೀಡಿರುವ ಹೇಳಿಕೆ ಆಧರಿಸಿ, ಶಾಲೆಯ ಆಡಳಿತ ಮಂಡಳಿಯ ವಿರುದ್ಧ ನಾವು ತನಿಖೆ ಆರಂಭಿಸಿದ್ದೇವೆ.” ಎಂದು ಕೊಟ್ಟಕ್ಕಲ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂಧ್ಯಾದೇವಿಯವರು ತಿಳಿಸಿದ್ದಾರೆ.
ಆಧಾರ: ಟೈಂಮ್ಸ್ ಆಫ್ ಇಂಡಿಯಾ