ನಿನ್ನೆ ನಿಧನರಾದ ದಕ್ಷಿಣ ಕೋರಿಯಾದ ಪ್ರಸಿದ್ಧ ನಿರ್ದೇಶಕ ’ಕಿಮ್ ಕಿ ಡುಕ್’ ಅವರಿಂದ ಪ್ರಭಾವಿತರಾಗದ ನಿರ್ದೇಶಕರಿಲ್ಲ. ಕನ್ನಡದ ಹೊಸ ತಲೆಮಾರಿನ ನಿರ್ದೇಶಕ ಬಿ ಎಂ ಗಿರಿರಾಜ್, ಕಿಮ್ ಕಿ ಡುಕ್ ಅವರ ಸಿನಿಮಾ ಕಟ್ಟುವ ಬಗೆಯನ್ನು ಮತ್ತು ಅವರ ಮೇಲೆ ಆದ ಪ್ರಭಾವವನ್ನು ನೆನಪಿಸಿಕೊಂಡಿದ್ದಾರೆ.
ನಾನು ಕಿಮ್ ಕಿ ಡುಕ್ ಸಿನಿಮಾ ಮೊದಲು ನೋಡಿದ್ದು ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ದಿನಗಳಲ್ಲಿ. ಸ್ನೇಹಿತರೊಬ್ಬರು ‘ಬ್ರೆತ್’ ಎಂಬ ಸಿನಿಮಾ ಬಗ್ಗೆ ಹೇಳಿದ್ದರು. ಅದನ್ನು ಹುಡುಕಿಕೊಂಡು ಬಂದು ನೋಡಿದೆ. ಅದೊಂದು ಫ್ಯಾಸಿನೇಟಿಂಗ್ ಸಿನಿಮಾ ಆಗಿತ್ತು. ಚಿತ್ರಕತೆ ತುಂಬಾ ವಿಚಿತ್ರವಾಗಿತ್ತು. ಮರಣದಂಡನೆಗೆ ಶಿಕ್ಷೆಯಾದ ವ್ಯಕ್ತಿಯ ಸುತ್ತ ಹೆಣೆದ ಕತೆ.
ಇದನ್ನೂ ಓದಿ: ಹಿಂದಿ ಹೇರಿಕೆಗೆ ವಿಭಿನ್ನ ವಿರೋಧ: ಪವನ್ ಕುಮಾರ್ ನಿರ್ದೇಶನದ ’ಏನ್ ಮಾಡೋದು..?’ ಕಿರುಚಿತ್ರ ವೈರಲ್!
ಕಿಮ್ ಕಿ ಡುಕ್ ಅವರ ಸಿನಿಮಾ, ಚಿತ್ರಕತೆ, ಪಾತ್ರಗಳು ಒಂದು ಭಾವ ಸತ್ಯದ ಹುಡುಕಾಟದಲ್ಲಿರುತ್ತವೆ. ನಾವು ಎಲ್ಲವನ್ನು ನೈತಿಕತೆಯ ಚೌಕಟ್ಟಿನಲ್ಲಿ ನೊಡುತ್ತೇವೆ. ಸಮಾಜದಲ್ಲಿ ಇದು ಹೀಗಾಗಬಾರದು, ಇದು ಸರಿಯಲ್ಲ, ತಪ್ಪು ಎಂದೆಲ್ಲಾ ಹೇಳುತ್ತೇವೆ. ಆದರೆ ಕಿಮ್ ಕಿ ಡುಕ್ ಇದೆಲ್ಲವನ್ನು ಮೀರಿದ ಮಾನವೀಯ ಬೌದ್ಧ ದೃಷ್ಟಿಕೋನದಲ್ಲಿ ಜೀವನ ನೋಡುವುದನ್ನು ಕಾಣುತ್ತೇವೆ.
ಡುಕ್ ನಿರ್ದೇಶಿಸಿದ ಮತ್ತೊಂದು ಚಿತ್ರ 3-ಐರನ್, ನಾನು ನೋಡಿದ ವಿಶಿಷ್ಟವಾದ ಪ್ರೇಮಕತೆ. ಒಬ್ಬ ವ್ಯಕ್ತಿ ತಾನೊಬ್ಬನೇ ಇರುವಾಗ ಹೇಗೊ ಬದುಕಿಕೊಳ್ತಾನೆ. ಆದರೆ ಹತ್ತು ಜನರ ನಡುವೆ ಬದುಕುವುದು ಸವಾಲು. ಅಲ್ಲಿ ತನ್ನತನ, ವ್ಯಕ್ತಿ ವಿಶೇಷ ಎಂಬುದೇನಿರುತ್ತದೆ, ಅದು ಕಳೆದು ಹೋಗಿ ಬಿಡುವ ಸಾಧ್ಯತೆ ಇರುತ್ತದೆ. ಕಿಮ್ ಕಿ ಡುಕ್ ಅವರ ಎಲ್ಲ ಸಿನಿಮಾಗಳಲ್ಲಿ ಈ ಎಳೆ ಕಂಡು ಬರುತ್ತದೆ. ಒಂಟಿಯಾಗಿರುವವ, ಸಮಾಜದ ಭಾವವಾಗಿ ಎದುರಿಸುವ ಸಂಕಟಗಳನ್ನು ಧ್ವನಿಸುತ್ತಲೇ ಬಂದಿದ್ದಾರೆ. ಇದು ಸ್ವತಃ ಕಿಮ್ ಕಿ ಡುಕ್ ಅವರ ಆತಂರಿಕ ಸಂಘರ್ಷವೆನಿಸುತ್ತದೆ.
ವೃತ್ತಿ ಜೀವನದ ಒಂದು ಘಟ್ಟದಲ್ಲಿ ಅವರದ್ದೇ ಒಂದು ಸಾಕ್ಷ್ಯಚಿತ್ರ ಬಂದು. ಅದರಲ್ಲಿ ಸಿನಿಮಾ ಜೀವನದಲ್ಲಿ ತಮ್ಮ ಸಾಧನೆ ಶೂನ್ಯ ಎಂದು ಹೇಳಿಕೊಳ್ಳುತ್ತಾರೆ. ಮಾನಸಿಕ ಒತ್ತಡದಲ್ಲಿದ್ದ ಸಂಧರ್ಭವನ್ನು ಬಿಚ್ಚಿಡುವ ಈ ಸಾಕ್ಷ್ಯಚಿತ್ರದಲ್ಲಿ ದೂರದ ಬೆಟ್ಟದಲ್ಲಿ ಗುಡಿಸಲೊಂದರಲ್ಲಿ ಬದುಕಿದ್ದನ್ನು ಅದರಲ್ಲಿ ವಿವರಿಸಿದ್ದರು. ತಾನೇನೇ ಮಾಡುತ್ತಿದ್ದರೂ, ಅದು ತನ್ನ ಆಡಂಬರವಷ್ಟೇ. ನನ್ನ ಲೆಗಸಿಯಾಗಿ, ಸಿನಿಮಾಕ್ಕಿಂತ ಹತ್ತು ಶಿಷ್ಯರನ್ನು ಬೆಳೆಸಿ ಹೋಗಬೇಕಿತ್ತು. ಅವರೆಲ್ಲರೂ ತಮ್ಮನ್ನು ಮಾರಿಕೊಂಡರು ಎಂಬ ಬೇಸರವನ್ನು ವ್ಯಕ್ತಪಡಿಸಿದ್ದರು.
ಭ್ರಷ್ಟತೆಯ ಬಗ್ಗೆ ಮಧ್ಯಮ ವರ್ಗದ ನಂಬಿಕೆಯನ್ನು ಜನಪ್ರಿಯ ಧಾಟಿಯಲ್ಲಿ ಹೇಳುವ ಆಕ್ಟ್ – 1978
ಈ ಸಾಕ್ಷ್ಯಚಿತ್ರ, ಸ್ವತಃ ಕಿಮ್ ಕಿ ಡುಕ್ ಕ್ಯಾಮೆರಾ ಎದುರು ಮಾತನಾಡುತ್ತಾ ಹೋಗಿದ್ದಷ್ಟೆ. ಅದನ್ನು ನೋಡಿದ ನನ್ನಂತಹ ಅನೇಕರಿಗೆ, ಆಯ್ತು ಇನ್ನು ಮೇಲೆ ಇವರು ಸಿನಿಮಾ ಮಾಡೋದಿಲ್ಲ ಅನ್ನಿಸಿತ್ತು. ಆದರೆ ಕಿಮ್ ಕಿ ಡುಕ್ ಮತ್ತೊಂದು ಹೊಸ ಸಿನಿಮಾದೊಂದಿಗೆ ಪ್ರತ್ಯಕ್ಷವಾಗಿದ್ದರು. ಸಿನಿಮಾ ಮಾಡುತ್ತಾ ಖಿನ್ನತೆ ಒಳಗಾಗಿದ್ದ ಡುಕ್, ಸಿನಿಮಾ ಮೂಲಕವೇ ಅದರಿಂದ ಹೊರಬರುವ ದಾರಿ ಕಂಡುಕೊಂಡರು. ಸಿನಿಮಾನೇ ಅವರಿಗೆ ಕಾಯಿಲೆ ಆಗಿತ್ತು, ಸಿನಿಮಾನೇ ಅವರಿಗೆ ಮದ್ದಾಯ್ತು. ಕ್ಯಾಪ್ರೊ ಹೇಳ್ತಾರಲ್ಲ, ‘ ಸಿನಿಮಾಕ್ಕೆ ಮದ್ದೆಂದರೆ, ಇನ್ನಷ್ಟು ಸಿನಿಮಾ ಮಾಡೋದು” ಹಾಗೆ.

ಇದನ್ನೂ ಓದಿ: ಬಾಲಿವುಡ್ ನಟಿ ರಿಚಾ ಚಾಡ್ಡಾಗೆ ಭಾರತರತ್ನ ಡಾ.ಅಂಬೇಡ್ಕರ್ ಪ್ರಶಸ್ತಿ
ಬುದ್ಧ ಸಮಾಜದ ಒಳಗೇ ಇದ್ದು, ಸಮಾಜದಲ್ಲಿ ಪರಿವರ್ತನೆಗೆ ಪ್ರಯತ್ನಿಸಿದ್ದು, ಕಿಮ್ ಕಿ ಡುಕ್ಗೂ ಮನವರಿಕೆ ಆಯ್ತು ಅನ್ನಿಸುತ್ತೆ. ಬುದ್ಧನ ಹಲವು ಚಿಂತನೆಗಳು ಅವರ ಸಿನಿಮಾಗಳಲ್ಲಿ ಕಾಣಿಸುತ್ತವೆ. ಸ್ಪ್ರಿಂಗ್, ಸಮ್ಮರ್, ಫಾಲ್, ವಿಂಟರ್ ಆಳ ಪದರಗಳ ಸಿನಿಮಾ ಅದು. ದೃಶ್ಯ ಸೌಂದರ್ಯದಲ್ಲೂ, ಭಾವ ಸೌಂದರ್ಯದಲ್ಲೂ ಹಲವು ವಿಚಾರಗಳನ್ನು ಹೇಳುತ್ತಾರೆ. ಮನುಷ್ಯನ ಕೆಲಸದಿಂದ ಏನೊ ಒಂದು ಕ್ರಿಯೆ ಘಟಿಸುತ್ತಲೇ ಇರುತ್ತದೆ. ಆದರೆ ಏನೂ ಆಗಲ್ಲ ಎಂದು ಭಾವಿಸಿಯೇ ಕೆಲಸ ಮಾಡುತ್ತಿರಬೇಕಾಗುತ್ತದೆ. ಈ ಬೌದ್ಧ ತತ್ವವನ್ನು ಡುಕ್ಗಿಂತ ಸೊಗಸಾಗಿ ಇನ್ನಾರು ಸೆರೆಹಿಡಿದಿಲ್ಲ.
ಅಚ್ಚರಿಯ ಸಂಗತಿಯೆಂದರೆ, ಇದು ಧಾರ್ಮಿಕವಲ್ಲದ ಚಿಂತನೆಯೂ ಹೌದು. ಬೌದ್ಧ ಅನುಯಾಯಿ ಆಗುವುದು ಸುಲಭ, ಬುದ್ಧನಾಗುವುದು ಕಷ್ಟ. ಈ ಚಿಂತನೆಗಳು ಡುಕ್ ಸಿನಿಮಾದಲ್ಲಿ ತುಂಬಾ ಸೊಗಸಾಗಿ, ಮಾನವೀಯವಾಗಿ ಪ್ರತಿಫಲಿಸುತ್ತವೆ. ಯಾವುದೇ ಸೃಜನಶೀಲ ಸೃಷ್ಟಿಯಲ್ಲಿ, ಸೃಷ್ಟಿ ಮಾಡುವವನು ತನ್ನ ನೈತಿಕತೆಯನ್ನು ಹೇರಿಬಿಡುತ್ತಾನೆ. ಆ ನೈತಿಕತೆ, ಆತನ ಅಹಂ. ಅದಕ್ಕೆ ಶ್ರೇಷ್ಠತೆಯ ಲೇಪ ಹಚ್ಚುತ್ತಿರುತ್ತೇವೆ. ಅದನ್ನು ಮೀರುವುದೇ ಸವಾಲು. ಡುಕ್ಗೆ ಮನುಷ್ಯನ ಮೇಲೆ ಅಪಾರವಾದ ಪ್ರೀತಿ ಇತ್ತು. ಆದರೆ ನಂಬಿಕೆ ಇರಲಿಲ್ಲ. ಈ ವೈರುಧ್ಯಗಳ ನಡುವೆ ಹೊಯ್ದಾಟ, ಖಿನ್ನತೆ ಅವರ ಸಿನಿಮಾಗಳಲ್ಲಿ ಕಾಣಿಸುತ್ತದೆ. ಆದರೆ ಅದರಲ್ಲೂ ಯಾವುದೊ ಸೌಂದರ್ಯ, ಸತ್ಯ ಹುಡುಕುವುದಕ್ಕೆ ಪ್ರಯತ್ನಿಸುತ್ತಾ ಇದ್ದರು.
ಅವರ ಚಿತ್ರಗಳಲ್ಲಿ ನಿಶ್ಯಬ್ದವನ್ನು ಬಳಸುವ ರೀತಿ ನನ್ನನ್ನು ಸದಾ ಕಾಡಿದೆ. ನನ್ನ ಸಿನಿಮಾಗಳಲ್ಲಿ ಶಬ್ದವಿರುತ್ತದೆ. ಅದೇ ಕಾರಣಕ್ಕೊ ಏನೊ, ಡುಕ್ ಅವರ ಚಿತ್ರಗಳಲ್ಲಿ ನಿಶ್ಯಬ್ದವನ್ನು ಬಳಸುವ ರೀತಿಯೇ ಒಂದು ದೊಡ್ಡ ಸಾಧನೆ. ಅಂತಹ ಪ್ರತಿಭೆಯನ್ನು ಕಳೆದುಕೊಂಡಿದ್ದೇವೆ. ನಿಜಕ್ಕೂ ಕಿಮ್ ಕಿ ಡುಕ್ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ.
ಇದನ್ನೂ ಓದಿ: ಸಾಮಾಜಿಕ ಜಾಲತಾಣಿಗರು ನೋಡಲೇಬೇಕಾದ ಚಿತ್ರ ‘ದಿ ಸೋಷಲ್ ಡೈಲೆಮಾ’: ನಮಗೇನಾದರೂ ಪಾಠಗಳಿವೆಯೇ?
