Homeಮುಖಪುಟಹೊಸ ವರುಷದ ಸಂಕ್ರಮಣ; ಗವಿ ಗಂಗಾಧರೇಶ್ವರ ದೇವಸ್ಥಾನದ ಸೂರ್ಯ ಮಜ್ಜನದ ಹಿಂದಿನ ವಿಜ್ಞಾನ ಗೊತ್ತೆ?

ಹೊಸ ವರುಷದ ಸಂಕ್ರಮಣ; ಗವಿ ಗಂಗಾಧರೇಶ್ವರ ದೇವಸ್ಥಾನದ ಸೂರ್ಯ ಮಜ್ಜನದ ಹಿಂದಿನ ವಿಜ್ಞಾನ ಗೊತ್ತೆ?

ಖಗೋಳೀಯವಾಗಿ ಸೂರ್ಯ ಮಜ್ಜನದ ಪ್ರಕ್ರಿಯೆ ವರ್ಷದಲ್ಲಿ ಎರಡು ಬಾರಿ ನಡೆಯಬೇಕು. ಅಂದರೆ, ಸೂರ್ಯ ದಕ್ಷಿಣಾಯನದಿಂದ ಉತ್ತರಾಯನಕ್ಕೆ ಪಥ ಬದಲಿಸುವ 22-23 ದಿನಕ್ಕೂ ಮುಂಚೆ, ಅಂದರೆ ನವೆಂಬರ್ 27-28ರಂದು ಮತ್ತು ಪಥ ಬದಲಿಸಿದ 22-23 ದಿನಗಳ ನಂತರ, ಅಂದರೆ ಈಗಿನ, ಜನವರಿ 14ರಂದು!

- Advertisement -
- Advertisement -

ಬಸವಣ್ಣ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲಾ ಎಂದರು. ಜಗತ್ತು ಕೂಡ ಕಾಲಕಾಲಕ್ಕೆ ಹಲವು ಬದಲಾವಣೆಗಳನ್ನೊಳಗೊಂಡು ಚಲನೆಯಲ್ಲಿರುತ್ತದೆ. ಈಗ, 21ನೇ ಶತಮಾನದ ಎರಡು ದಶಕಗಳನ್ನು ಕಳೆದು ಮೂರನೇ ದಶಕದ ಪ್ರಥಮ ವರುಷದಲ್ಲಿ ನಾವು ಇದ್ದೇವೆ. ಈ ಹೊಸ ವರುಷದಲ್ಲಿ, ಬದಲಾದ/ಬದಲಾಗುತ್ತಿರುವ ಸಾಮಾಜಿಕ ಸಮಸ್ಯೆಗಳನ್ನು ಶಕ್ತವಾಗಿ ಎದುರಿಸಲುಬೇಕಾದ ನವಚೇತನದೊಂದಿಗೆ, ಹೊಸ ಹುರುಪಿನೊಂದಿಗೆ ಎಲ್ಲರೂ ಅವರವರ ಆಸಕ್ತಿಯ ವಿಷಯಗಳಲ್ಲಿ, ವೈಜ್ಞಾನಿಕ ಮನೋಭಾವದೊಂದಿಗೆ ಸಮಾನತೆಯ ಹಸಿರು ದಾರಿಯಲ್ಲಿ ನಡೆಯೋಣ ಎಂದು ಆಶಿಸುತ್ತೇನೆ. ವರ್ಷದ ಮೊದಲ ತಿಂಗಳಿನಲ್ಲಿಯೇ ಬರುವ ಹಬ್ಬ ಸಂಕ್ರಾಂತಿ. ಸಂಕ್ರಾಂತಿ. ಸಂಕ್ರಮಣ ಎಂದರೂ ಕೂಡ ಬದಲಾಗುವುದು ಎಂದರ್ಥ.

ಭೂಮಿ ಸೂರ್ಯನ ಸುತ್ತ ಸುತ್ತುತ್ತಿದ್ದರೂ, ನಾವು ಭೂಮಿ ಮೇಲೆಯೇ ಇರುವುದರಿಂದ, ಭೂಮಿಯಿಂದ ನೋಡಿದಾಗ ಸೂರ್ಯ ಭೂಮಿಯ ಸುತ್ತ ಸುತ್ತುತ್ತಿದ್ದಾನೆ ಎಂದು ಕಾಣಿಸುವುದು ಸಹಜ. ಹೀಗೆ, ಭೂಮಿಯಿಂದ ಸೂರ್ಯನ ತೋರಿಕೆಯ ಚಲನೆಯನ್ನು ಗಮನಿಸಿದಾಗ, ಸೂರ್ಯ ಒಂದು ವರ್ಷದ ಅವಧಿಯಲ್ಲಿ ಆಕಾಶದಲ್ಲಿ ನಿರ್ದಿಷ್ಟ ಪಥದಲ್ಲಿ ಚಲಿಸುವಂತೆ ಕಾಣುತ್ತದೆ. ಈ ಪಥದಲ್ಲಿ ಕಾಣುವ ನಕ್ಷತ್ರ ಪುಂಜಗಳನ್ನು ರಾಶಿಗಳು ಎಂದು ಕರೆಯುತ್ತೇವೆ. ಇವುಗಳು ಮೀನ, ಮೇಷ, ವೃಷಭ, ಮಿಥುನ, ಕರ್ಕಟ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಕುಂಭ, ಧನು, ಮಕರ ಮತ್ತು ಉರಗಧರ ಹೀಗೆ ಒಟ್ಟು 13 ರಾಶಿಗಳನ್ನು ಖಗೋಳ ವಿಜ್ಞಾನದಲ್ಲಿ ಗುರುತಿಸಲಾಗಿದೆ.

ಭೂಮಿಯಿಂದ ನೋಡಿದಾಗ, ಸೂರ್ಯನೂ ಸೇರಿದಂತೆ, ಸೌರಮಂಡಲದ ಎಲ್ಲಾ ಗ್ರಹಗಳು ಈ 13 ರಾಶಿಗಳ ದಿಕ್ಕಿನಲ್ಲಿಯೇ ಕಾಣಸಿಗುತ್ತವೆ ಮತ್ತು ಈ ರಾಶಿಗಳು ಇರುವ ಪಥದಲ್ಲಿಯೇ ಚಲಿಸುತ್ತವೆ. ಭೂಮಿಯಿಂದ ಸೂರ್ಯನು ಕಾಣುವ ಸ್ಥಾನವನ್ನು ಒಂದು ವರ್ಷದವರೆಗೂ ನಾವು ಗಮನಿಸಿದರೆ, ಸುಮಾರು 28 ದಿನಗಳಲ್ಲಿ ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವುದನ್ನು ಕಾಣಬಹುದು. ಹೀಗೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ ಚಲಿಸುವುದನ್ನು ಸಂಕ್ರಮಣ ಎಂದು ಕರೆಯುತ್ತೇವೆ. ಈ ಸಂಕ್ರಮಣವು ಪ್ರತಿ ತಿಂಗಳು ನಡೆಯುತ್ತಿದ್ದರೂ, ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಬರುವ ಸಮಯದ ಆಸುಪಾಸಿನಲ್ಲಿ ದಕ್ಷಿಣಾಯನದಿಂದ ಉತ್ತರಾಯನಕ್ಕೆ ಪಥ ಬದಲಿಸುವ ಕ್ರಿಯೆ ಸಂಭವಿಸುವುದರಿಂದ, ಮಕರ ಸಂಕ್ರಾಂತಿ ವಿಶೇಷ ಎಂದು ಹಬ್ಬವಾಗಿ ಆಚರಿಸುತ್ತಾರೆ.

ಪ್ರತಿವರ್ಷ ಸೂರ್ಯ ದಕ್ಷಿಣಾಯನದಿಂದ ಉತ್ತರಾಯನಕ್ಕೆ ಪಥ ಬದಲಿಸುವ ದಿನ ಡಿಸೆಂಬರ್ 21/22 ರಂದು ನಡೆಯುತ್ತದೆ. ಆದರೂ, ಉತ್ತರಾಯನ ದಿನ, ಜನವರಿ ತಿಂಗಳ ಎರಡನೇ ವಾರದಲ್ಲಿ ಬರುವ ಮಕರ ಸಂಕ್ರಾಂತಿ ದಿನದಂದೆ ಎಂದು ಪ್ರಚಲಿತದಲ್ಲಿದೆ. ಭಾರತದಲ್ಲಿ ಅನೇಕ ರೀತಿಯಲ್ಲಿ ಆಚರಿಸುವ ಮಕರ ಸಂಕ್ರಾಂತಿ ಹಬ್ಬವನ್ನು, ದಕ್ಷಿಣ ಭಾರತದಲ್ಲಿ ಸುಗ್ಗಿ ಕಾಲವಾಗಿ ಆಚರಿಸುವುದು ವಿಶೇಷ. ಮಕರ ಸಂಕ್ರಾಂತಿ ದಿನದಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ನಡೆಯುವ ವಿಶೇಷ ವಿದ್ಯಮಾನದ ಬಗ್ಗೆ ತಿಳಿಯೋಣ.

ದೇಶದಲ್ಲಿ ಹಲವು ಪ್ರಾಚೀನ ಗುಹಾಂತರ ದೇವಾಲಯಗಳಿದ್ದು, ಬೆಂಗಳೂರಿನ ಗವಿಪುರದ ಗುಟ್ಟಹಳ್ಳಿಯಲ್ಲಿರುವ ಗವಿ ಗಂಗಾಧರೇಶ್ವರ ದೇವಸ್ಥಾನ ಹೆಚ್ಚು ಪ್ರಸಿದ್ಧಿಯಾಗಿದೆ. ಈ ದೇವಾಲಯವನ್ನು ಕ್ರಿ.ಶ.9ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಮಾಗಡಿ ಕೆಂಪೇಗೌಡರು ಈ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳನ್ನು ಮಾಡಿದ್ದರು ಎನ್ನಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ದೇವಸ್ಥಾನದ ಗರ್ಭಗುಡಿಯ ಶಿವಲಿಂಗಕ್ಕೆ ಸೂರ್ಯನ ಕಿರಣಗಳು ಬೀಳುವುದು ಇಲ್ಲಿನ ವಿಶೇಷ ವಿದ್ಯಮಾನ. ಇದನ್ನು ದೇವಾಲಯದವರು, ಸೂರ್ಯ ಮಜ್ಜನ ಎಂದು ಕರೆಯುತ್ತಾರೆ. ಇದು ಪ್ರತಿ ವರ್ಷದ ಮಕರ ಸಂಕ್ರಾಂತಿಯ ದಿನ ನಡೆಯುವ ವಿದ್ಯಮಾನವಾಗಿದೆ. ಸೂರ್ಯ ದಕ್ಷಿಣಾಯನದಿಂದ ಉತ್ತರಾಯನಕ್ಕೆ ಪಥ ಬದಲಿಸುವ ದಿನವೂ ಇದೇ ದಿನ ಎಂದೇ ಸಾಮಾನ್ಯವಾಗಿ ನಂಬಲಾಗಿದೆ.

ಜನವರಿ 14 ಉತ್ತರಾಯನದ ದಿನವೇ ಅಥವಾ ಮಕರ ಸಂಕ್ರಮಣ ದಿನವೇ?

ಖಗೋಳೀಯವಾಗಿ ಪ್ರತಿ ವರುಷ ಡಿಸೆಂಬರ್ 21/22ರಂದೆ ಸೂರ್ಯನ ಪಥ ದಕ್ಷಿಣಾಯನದಿಂದ ಉತ್ತರಾಯನಕ್ಕೆ ಬದಲಾಗಿರುತ್ತದೆ. ಜನವರಿ 14ರಂದು (ಆ ದಿನದ ಆಸುಪಾಸಿನಲ್ಲಿ) ನಡೆಯುವುದು ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಚಲಿಸುವುದು ಮಾತ್ರ. ಇದರ ಅರ್ಥ ಮಕರ ಸಂಕ್ರಾಂತಿಯ ದಿನ ಸೂರ್ಯಪಥ ಬದಲಿಸುವುದಿಲ್ಲ.

ಖಗೋಳೀಯವಾಗಿ ಸೂರ್ಯ ಮಜ್ಜನ, ಆಯನದ ದಿನ ಅಂದರೆ, ಉತ್ತರಾಯನದ ದಿನದಂದು ನಡೆದಿದ್ದರೆ, ವರ್ಷದಲ್ಲಿ ಒಂದೇ ಒಂದು ದಿನ ಮಾತ್ರ ದೇವಸ್ಥಾನದಲ್ಲಿ, ಸೂರ್ಯ ಮಜ್ಜನವಾಗುತ್ತಿತ್ತು. ಆದರೆ, ಉತ್ತರಾಯನ ನಡೆದು 22-23 ದಿನಗಳ ನಂತರ ಸೂರ್ಯ ಮಜ್ಜನವನ್ನು ಜನವರಿ 14ರಂದು ದೇವಸ್ಥಾನದಲ್ಲಿ ನೋಡುತ್ತಿದ್ದೇವೆ. ಹೀಗಿದ್ದಾಗ, ಖಗೋಳೀಯವಾಗಿ ಸೂರ್ಯ ಮಜ್ಜನದ ಪ್ರಕ್ರಿಯೆ ವರ್ಷದಲ್ಲಿ ಎರಡು ಬಾರಿ ನಡೆಯಬೇಕು. ಅಂದರೆ, ಸೂರ್ಯ ದಕ್ಷಿಣಾಯನದಿಂದ ಉತ್ತರಾಯನಕ್ಕೆ ಪಥ ಬದಲಿಸುವ 22-23 ದಿನಕ್ಕೂ ವಂಚೆ, ಅಂದರೆ ನವೆಂಬರ್ 27-28ರಂದು ಮತ್ತು ಪಥ ಬದಲಿಸಿದ 22-23 ದಿನಗಳ ನಂತರ, ಅಂದರೆ ಈಗಿನ, ಜನವರಿ 14ರಂದು!

ವೈಜ್ಞಾನಿಕ ವಿವರಗಳನ್ವಯ ನವೆಂಬರ್ 30/ಡಿಸೆಂಬರ್ 01ರಂದು ವರ್ಷದ ಎರಡನೇ ಸೂರ್ಯ ಮಜ್ಜನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ನಡೆಯಲೇಬೇಕು. ಆದರೆ, ಈ ಎರಡನೇ ಸೂರ್ಯ ಮಜ್ಜನಕ್ಕೆ ಅಷ್ಟು ಜನಪ್ರಿಯತೆ ಇಲ್ಲ ಹಾಗೂ ದೇವಸ್ಥಾನವು ಈ ಬಗ್ಗೆ ಯಾವ ಮಾಹಿತಿಯನ್ನೂ, ಪ್ರಚಾರವನ್ನೂ ನೀಡಿದಂತಿಲ್ಲ ಅಥವಾ ಆಚರಣೆಯೂ ನಡೆದಂತಿಲ್ಲ. ಆದುದರಿಂದ, ಸಾರ್ವಜನಿಕರಿಗೆ ಈ ಬಗ್ಗೆ ತಿಳಿವು ಕಡಿಮೆ. ಮಕರ ಸಂಕ್ರಾಂತಿಯ ಕಾಲದಲ್ಲಿ ನಡೆಯುವ ಸೂರ್ಯ ಮಜ್ಜನ ಮಾತ್ರ ಆಚರಣೆಯಲ್ಲಿದ್ದು, ಅದೇ ದಿನ ಉತ್ತರಾಯನದ ದಿನ ಎಂದು ಹೇಳಲಾಗುತ್ತದೆ. ಆದರೆ, ಜನವರಿ 14, ಉತ್ತರಾಯನದ ದಿನ ಅಲ್ಲ.

ವೈಜ್ಞಾನಿಕ ಅಧ್ಯಯನ

ಈ ದೇವಸ್ಥಾನದ ಬಗ್ಗೆ ಹೆಚ್ಚು ವೈಜ್ಞಾನಿಕ ಸಂಶೋಧನೆಗಳು ನಡೆದಿಲ್ಲವಾದರೂ, 2008ರಲ್ಲಿ ಖಗೋಳ ವಿಜ್ಞಾನಿಯಾದ ಮತ್ತು ಜವಹರಲಾಲ್ ನೆಹರೂ ತಾರಾಲಯದ ನಿವೃತ್ತ ನಿರ್ದೇಶಕರಾದ ಡಾ. ಬಿ.ಎಸ್ ಶೈಲಜಾ ಮತ್ತು ಅವರ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳಾದ ಜಯಂತ್ ವ್ಯಾಸನಕೆರೆ ಮತ್ತು ಸುದೇಶ್ ಕೆ ನಡೆಸಿದ ಅಧ್ಯಯನ ಪ್ರಮುಖವಾದದ್ದು. ಇವರು ಗವಿ ಗಂಗಾಧರೇಶ್ವರ ದೇವಸ್ಥಾನದ ವಾಸ್ತು ಶಿಲ್ಪ ಮತ್ತು ದೇವಸ್ಥಾನದ ಮುಂದೆ ಇರುವ ಸೂರ್ಯ ಪಾನಾ ಮತ್ತು ಚಂದ್ರ ಪಾನಾ ಎಂದು ಕರೆಯುವ ದೊಡ್ಡ ಗಾತ್ರದ ಬಿಲ್ಲೆಯಿರುವ ಎರಡು ಕಂಬಗಳ ಬಗ್ಗೆ ಹಲವು ಅಧ್ಯಯನಗಳನ್ನು ನಡೆಸಿದರು. ಸೂರ್ಯ ಪಾನಾ ಮತ್ತು ಚಂದ್ರ ಪನಾವೆಂಬ ಕಂಬಗಳ ನೆರಳುಗಳಿಗೂ ಮತ್ತು ಸೂರ್ಯನ ಸಂಕ್ರಮಣ ಮತ್ತು ಆಯನ ದಿನಗಳಿಗೂ ಇರುವ ಸಂಬಂಧವನ್ನು ಪರಿಶೀಲಿಸಿ, ಈ ಎರಡೂ ಬಿಲ್ಲೆಗಳು ಬೇಸಿಗೆಯಲ್ಲಿ ಬರುವ summer solsticesಗೆ ಹೊಂದಿಸಿದಂತೆ ಕಟ್ಟಿರುವುದನ್ನು ಪ್ರಪ್ರಥಮ ಬಾರಿಗೆ ಈ ತಂಡವು ಗುರುತಿಸಿತು. ಇವರು ಗುರುತಿಸುವವರೆಗೂ ಈ ವಿಷಯದ ದಾಖಲೆ ಎಲ್ಲೂ ಇರಲಿಲ್ಲ ಮತ್ತು ಯಾರಿಗೂ ತಿಳಿದಿರಲಿಲ್ಲ. ಇದೇ ತಂಡವು ದೇವಸ್ಥಾನದ ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ವಿಶೇಷ ವಿವರಗಳನ್ನು ಕಂಡುಕೊಂಡಿತು.

1792ರಿಂದ 1808ರವರೆಗೆ ಅಂದಿನ ಈಸ್ಟ್ ಇಂಡಿಯಾ ಕಂಪನಿ ಕಾಲದ ಆಳ್ವಿಕೆಯಲ್ಲಿ, ಪ್ರಸಿದ್ಧ ಬ್ರಿಟಿಷ್ ಚಿತ್ರಕಾರನಾದ ಥಾಮಸ್ ಡೇನಿಯಲ್‌ರವರು ಭಾರತದಲ್ಲಿ ಸಂಚರಿಸಿ ಹಲವು ನಗರಗಳ, ಕಟ್ಟಡಗಳ, ದೇವಸ್ಥಾನಗಳ ವಾಸ್ತು ಶಿಲ್ಪದ ಚಿತ್ರಗಳು ಮತ್ತು ನಿಸರ್ಗದ ಚಿತ್ರಗಳನ್ನು ಬಿಡಿಸಿದ್ದರು. ಈ ಚಿತ್ರಗಳಲ್ಲಿ ಡೇನಿಯಲ್ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದ ಚಿತ್ರವನ್ನು ಕೂಡ ಬಿಡಿಸಿದ್ದಾರೆ. ಅಂದು ರಚಿಸಿದ್ದ ಗವಿ ಗಂಗಾಧರೇಶ್ವರ ದೇವಸ್ಥಾನದ ಚಿತ್ರಕಲೆಗಳನ್ನು ಪ್ರಸ್ತುತದ ದೇವಸ್ಥಾನದ ಕಟ್ಟಡಕ್ಕೆ ಹೋಲಿಸಿ ಸೂಕ್ಷ್ಮವಾಗಿ ವಿಶ್ಲೇಷಿಸುವ ಕೆಲಸವನ್ನು ಡಾ. ಬಿ.ಎಸ್ ಶೈಲಜಾ ಮತ್ತು ತಂಡದವರು ಕೈಗೊಂಡರು.

ಜನವರಿಯಂದು ನಡೆಯುವ ಸೂರ್ಯ ಮಜ್ಜನ, ಪ್ರಸ್ತುತದ ದೇವಸ್ಥಾನದ ಚಿತ್ರದಲ್ಲಿ ಗುರುತಿಸಿರುವಂತೆ ಕಿಟಕಿಯ ಮೂಲಕ ಸೂರ್ಯನ ಬೆಳಕು ಹಾದುಹೋಗಿ, ಶಿವಲಿಂಗದ ಮೇಲೆ ಬೀಳುವುದು ಪ್ರತಿ ವರ್ಷದ ಪ್ರಕ್ರಿಯೆ. ಡೇನಿಯಲ್‌ರವರ 1792ರ ಚಿತ್ರಕಲೆ ಮತ್ತು ಈಗ ಇರುವ ದೇವಸ್ಥಾನದ ಚಿತ್ರವನ್ನು ಗಮನಿಸಿದರೆ, ಅಂದಿನ ಕಟ್ಟಡಕ್ಕೆ ಚಿತ್ರದಲ್ಲಿ ಗುರುತಿಸಿರುವ ಜಾಗದಲ್ಲಿ ಕಿಟಕಿ ಇಲ್ಲದಿರುವುದನ್ನು ಕಾಣಬಹುದು. ಇದರಿಂದ, ಈ ಕಿಟಕಿಯ ಮೂಲಕ ಸೂರ್ಯನ ಬೆಳಕು ಹಾದುಹೋಗಿ ಶಿವಲಿಂಗದ ಮೇಲೆ ಬೀಳುವುದನ್ನು 18ನೇ ಶತಮಾನದ ನಂತರ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಅಳವಡಿಸಿಕೊಂಡಿರಬಹುದು ಎನ್ನಬಹುದಾಗಿದೆ. ಡಾ. ಬಿ.ಎಸ್ ಶೈಲಜಾ ಮತ್ತು ತಂಡದವರು ಕೈಗೊಂಡ ಈ ಅಧ್ಯಯನವನ್ನು ಡಿಸೆಂಬರ್ 10, 2008ಲ್ಲಿ ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಪ್ರಕಟಿಸುವ ಕರಂಟ್ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

200 ವರ್ಷಗಳ ಕೆಳಗೆ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಮಾರ್ಪಾಡಿಸಿರುವ ಈ ಸೂರ್ಯ ಮಜ್ಜನದ ಪ್ರಕ್ರಿಯೆಯು ಮಕರ ಸಂಕ್ರಾಂತಿಯ ದಿನಕ್ಕೆ ಅನುವಾಗುವಂತೆ ನಿರ್ಮಿಸಿದ್ದಾರೆಯೇ ವಿನಃ ಸೂರ್ಯನು ಪಥ ಬದಲಿಸುವ ಉತ್ತರಾಯನ ದಿನಕ್ಕೆ ಅನುವಾಗುವಂತೆ ನಿರ್ಮಿಸಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಅಥವಾ ಅಂತಹ ಪುರಾವೆಗಳು ಇನ್ನೂ ಸಿಕ್ಕಿಲ್ಲ ಎನ್ನಬಹುದು.

ಮಕರ ಸಂಕ್ರಾಂತಿ, ಜನವರಿ 14ರಂದೇ ಆಚರಿಸಲಾಗುತ್ತಾ?

ಈ ಪ್ರಶ್ನೆ ಕೇಳಿಕೊಂಡರೆ, ಉತ್ತರ ’ಇಲ್ಲಾ. ಮಕರ ಸಂಕ್ರಾಂತಿ ಎಂದರೆ, ಭೂಮಿಯಿಂದ ನೋಡಿದಾಗ ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಚಲಿಸುವ ದಿನ. ಈ ದಿನ ಉಂಟಾಗುವುದು ಭೂಮಿ ಮತ್ತು ಸೂರ್ಯನ ಹಲವು ಚಲನೆಗಳ ಮೇಲೆ ಅವಲಂಬಿತವಾಗಿದೆ. ಭೂಮಿಯು ಸೂರ್ಯನ ಸುತ್ತ ಸುತ್ತುವುದಲ್ಲದೆ, ತನ್ನ ಕಾಲ್ಪನಿಕ ಅಕ್ಷದ ಸುತ್ತಲೂ ತಿರುಗುತ್ತಿದ್ದಾನೆ. ಈ ತಿರುಗುವ ಅಕ್ಷವು ಕಾಲ್ಪನಿಕವಾದ ಲಂಬದ ಸಾಮಾನ್ಯ ಅಕ್ಷಕ್ಕೆ 23.5 ಡಿಗ್ರಿಯಲ್ಲಿ ಬಾಗಿದೆ. (ಚಿತ್ರದಲ್ಲಿ ಗಮನಿಸಿ). ಈ ಅಕ್ಷವು ಸಹ ವೃತ್ತಾಕಾರದಲ್ಲಿ ಬುಗುರಿಯಂತೆ ತಿರುಗುತ್ತದೆ. ಇದನ್ನು ಭೂಮಿಯ ಪ್ರಿಸಿಶನ್ ಎಂದು ಕರೆಯುತ್ತಾರೆ. ಭೂಮಿಯ ಈ ಅಕ್ಷವು ಒಂದು ಸುತ್ತು ತಿರುಗಲು ಸುಮಾರು 26,000 ವರ್ಷಗಳು ತೆಗೆದುಕೊಳ್ಳುತ್ತದೆ. ಹೀಗೆ ಈ ಕಾಲ್ಪನಿಕ ಅಕ್ಷವು ಬುಗುರಿಯಂತೆ ನಿಧಾನವಾಗಿ ತಿರುಗುತ್ತಿರುವಾಗ, ಶತಮಾನಗಳು ಕಳೆದಂತೆ, ಭೂಮಿಯಲ್ಲಿನ ಸಂಕ್ರಮಣ ಮತ್ತು ಆಯನದ (ಉತ್ತರಾಯನ & ದಕ್ಷಿಣಾಯನದ) ದಿನಗಳು ಬದಲಾಗುತ್ತವೆ (ಕಾಲಗಳು, ಧೃವ ನಕ್ಷತ್ರಳೂ ಬದಲಾಗುತ್ತವೆ). ಖಗೋಳೀಯವಾಗಿ ಲೆಕ್ಕ ಹಾಕಿದರೆ, ಮಕರ ಸಂಕ್ರಾಂತಿಯ ದಿನ 70-80 ವರ್ಷಗಳಿಗೆ ಸುಮಾರು ಒಂದು ದಿನ ಮುಂದೆ ಹೊಗುತ್ತದೆ. ಹಾಗಾಗಿ, ಪ್ರಸ್ತುತ ನಾವು ಆಚರಿಸುತ್ತಿರುವ ಮಕರ ಸಂಕ್ರಾಂತಿಯ ದಿನ ಜನವರಿ 14 ರಂದು ಇದ್ದರೂ, 200 ವರ್ಷಗಳ ಹಿಂದೆ ಜನವರಿ 14 ಇರಲಿಲ್ಲ! ಮುಂದೆ ಹಲವು ವರ್ಷಗಳ ನಂತರ ಇದೇ ದಿನ ಇರುವುದಿಲ್ಲ.


ಇದನ್ನೂ ಓದಿ: ಆಕಾಶ ವೀಕ್ಷಣೆ: ದಿಗುವಳಯದಲಿ ಧೂಮಕೇತುಗಳೊಗೆದವೆನಲುತ್ಪಾತ ಕೋಟಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...