ಕೆಪಿಎಸ್ಸಿ (KPSC) ಪಶುವೈದ್ಯರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಪರಾರಿಯಾದ ರೋಚಕ ಹಾದಿ ಸಿಐಡಿ (CID) ವಿಚಾರಣೆಯಿಂದ ಬಯಲಾಗಿದೆ. ರಾಜ್ಯದ ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳ ಸತತ ಮಾರ್ಗದರ್ಶನ ಮತ್ತು ಸೂಚನೆಯಂತೆಯೇ ಜ್ಞಾನೇಂದ್ರ ಕುಮಾರ್ ತಲೆಮರೆಸಿಕೊಂಡಿದ್ದರು ಎಂಬ ಸತ್ಯ ಹೊರಬಂದಿದ್ದು, ಅವರಿಗೆ ನೆರವಾದ ಆ ‘ಪ್ರಭಾವಿಗಳು’ ಯಾರು ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿ ತೀವ್ರಗೊಂಡಿದೆ.
ಪ್ರಭಾವಿ ವ್ಯಕ್ತಿಗಳು ನೀಡುತ್ತಿದ್ದ ಮಾಹಿತಿ ಮತ್ತು ಸೂಚನೆಗಳ ಆಧಾರದ ಮೇಲೆಯೇ ಜ್ಞಾನೇಂದ್ರ ಕುಮಾರ್ ತಮ್ಮ ವಾಸ್ತವ್ಯದ ಸ್ಥಳಗಳನ್ನು ಪದೇ ಪದೇ ಬದಲಾಯಿಸುತ್ತಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.
ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ ಬೆನ್ನಲ್ಲೇ ಜ್ಞಾನೇಂದ್ರ ಕುಮಾರ್ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಮುಂದಿನ ಗುರಿ ತಾವೇ ಆಗಬಹುದು ಎಂಬುದನ್ನು ಅರಿತು, ತಕ್ಷಣವೇ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಬೆಂಗಳೂರಿನಿಂದ ಎಸ್ಕೇಪ್ ಆಗಲು ಯೋಜಿಸಿದ್ದರು.
ರಾಜ್ಯದ ಪ್ರಭಾವಿಗಳ ಸಲಹೆಯಂತೆ ಸಣ್ಣ ಬಟ್ಟೆ ಬ್ಯಾಗ್ ಹಿಡಿದು ದೇವನಹಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದ್ದ ಅವರು, ಅಲ್ಲಿಂದ ನೋಯ್ಡಾದಲ್ಲಿ ಬಾಡಿಗೆ ಕೊಠಡಿ ಪಡೆದು ವಾಸ್ತವ್ಯ ಹೂಡಿದ್ದರು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ನೋಯ್ಡಾದಲ್ಲಿ ತಂಗಿದ್ದ ಕೊಠಡಿಗೆ ಜ್ಞಾನೇಂದ್ರ ಕುಮಾರ್ ಅವರು ರಾಷ್ಟ್ರೀಯ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿರುವ ತಮ್ಮ ಗೆಳತಿಯನ್ನು ಕರೆಸಿಕೊಂಡಿದ್ದರು. ಈ ವೇಳೆ ಪ್ರಭಾವಿ ವ್ಯಕ್ತಿಯೊಬ್ಬರಿಂದ ಕರೆ ಬಂದು, “ನಿನ್ನ ಮೇಲೆ ಯಾವುದೇ ಕ್ಷಣದಲ್ಲಾದರೂ ಇಡಿ ದಾಳಿಯಾಗಬಹುದು. ಹಗರಣದ ಪ್ರಮುಖ ದಾಖಲೆಗಳು ಇಡಿ ಕೈಸೇರಿವೆ, ತಕ್ಷಣ ಸ್ಥಳ ಖಾಲಿ ಮಾಡು” ಎಂದು ಎಚ್ಚರಿಸಿದ್ದರು. ಈ ವಿಚಾರ ತಿಳಿದ ಗೆಳತಿ ತೀವ್ರ ಕೋಪಗೊಂಡು, “ನಿನ್ನಿಂದಾಗಿ ನಾನು ತೊಂದರೆಗೆ ಸಿಲುಕುತ್ತೇನೆ” ಎಂದು ಜ್ಞಾನೇಂದ್ರ ಅವರಿಗೆ ಕಪಾಳಮೋಕ್ಷ ಮಾಡಿ ಅಲ್ಲಿಂದ ನಿರ್ಗಮಿಸಿದ್ದರು ಎನ್ನಲಾಗಿದೆ.
ಇಷ್ಟಕ್ಕೇ ನಿಲ್ಲದ ಹೈಡ್ರಾಮಾ, ಪ್ರಭಾವಿ ವ್ಯಕ್ತಿಯ ಸೂಚನೆಯಂತೆ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ದೆಹಲಿಗೆ ತೆರಳಿ ಜ್ಞಾನೇಂದ್ರ ಕುಮಾರ್ ಅವರನ್ನು ಭೇಟಿಯಾಗಿದ್ದರು. ಇಡಿ ಅಧಿಕಾರಿಗಳು ಬಂಧಿಸಿದರೆ ಅಥವಾ ದಾಖಲೆಗಳನ್ನು ಮುಂದೆ ಇಟ್ಟಾಗ ಹೇಗೆ ಉತ್ತರಿಸಬೇಕು, ತನಿಖೆಯನ್ನು ಹೇಗೆ ಎದುರಿಸಬೇಕು ಎಂದು ಕಾನೂನುನಾತ್ಮಕ ‘ಪಾಠ’ ಮಾಡಿದ್ದರು ಎನ್ನಲಾಗಿದೆ.
ನಿವೃತ್ತ ಅಧಿಕಾರಿಯ ಭೇಟಿಯ ನಂತರ ಜ್ಞಾನೇಂದ್ರ ಕುಮಾರ್ ತಮ್ಮ ಮೂವರು ಐಎಎಸ್ ಬ್ಯಾಚ್ಮೇಟ್ಗಳನ್ನು ದೆಹಲಿಗೆ ಕರೆಸಿಕೊಂಡು, ನಾಲ್ವರೂ ಸೇರಿ ಶ್ರೀಲಂಕಾಗೆ ತೆರಳಿದ್ದರು. ಶ್ರೀಲಂಕಾದಲ್ಲಿ ಎರಡು ದಿನ ಉಳಿದುಕೊಂಡಿದ್ದಾಗ, ತಮ್ಮ ವಿರುದ್ಧ ಆಯೋಗ ಅಥವಾ ಪೊಲೀಸರು ‘ಲುಕ್ಔಟ್ ನೋಟಿಸ್’ ಹೊರಡಿಸುವ ಸಾಧ್ಯತೆ ಇದೆ ಎಂಬ ಸುಳಿವು ಸಿಕ್ಕಿತ್ತು. ಲುಕ್ಔಟ್ ನೋಟಿಸ್ ಜಾರಿಯಾದರೆ ವಿಮಾನ ನಿಲ್ದಾಣದಲ್ಲೇ ಸಿಕ್ಕಿಬೀಳುವ ಭೀತಿಯಿಂದ ಕೊಲಂಬೊದಿಂದ ತಕ್ಷಣ ಚೆನ್ನೈಗೆ ಮರಳಿದ್ದರು.
ಆ ನಂತರ ಚೆನ್ನೈನಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜ್ಞಾನೇಂದ್ರ ಅವರು ಪ್ರಭಾವಿ ವ್ಯಕ್ತಿಗಳ ಸೂಚನೆಯಂತೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಯಾವುದೇ ಕಾರಣಕ್ಕೂ ಇಡಿ ನೋಟಿಸ್ಗೆ ಉತ್ತರಿಸದಂತೆ ಅವರಿಗೆ ಸೂಚನೆ ನೀಡಲಾಗಿತ್ತು.
ಸಿಐಡಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಜ್ಞಾನೇಂದ್ರ ಕುಮಾರ್ ಎರಡು ದಿನ ವಿಚಾರಣೆಗೆ ಹಾಜರಾಗಿದ್ದರು. ಎರಡನೇ ದಿನ ವಿಚಾರಣೆ ಮುಗಿಸಿ ಸಿಐಡಿ ಕಚೇರಿಯಿಂದ ಹೊರಬರಲು ಮುಂದಾಗುತ್ತಿದ್ದಂತೆ, ಪ್ರಭಾವಿ ವ್ಯಕ್ತಿಯೊಬ್ಬರು ಕರೆ ಮಾಡಿ “ನಿನ್ನ ಮನೆಯ ಬಳಿ ಇಡಿ ಅಧಿಕಾರಿಗಳು ಕಾಯುತ್ತಿದ್ದಾರೆ” ಎಂದು ಎಚ್ಚರಿಸಿದ್ದರು. ಇಡಿ ಬಂಧನದಿಂದ ತಪ್ಪಿಸಿಕೊಳ್ಳಲು ಅವರು ಹೊರಗೆ ಹೋಗದೆ ಮತ್ತೆ ಸಿಐಡಿ ಕಚೇರಿಯೊಳಗೇ ಸುರಕ್ಷಿತವಾಗಿ ಉಳಿಯಲು ಯತ್ನಿಸಿದ್ದರು. ಆದರೆ, ಈ ಹಿಂದೆ ನೀಡಿದ್ದ ನೋಟಿಸ್ಗಳಿಗೆ ಸರಿಯಾಗಿ ಸ್ಪಂದಿಸದ ಕಾರಣ ಸಿಐಡಿ ಅಧಿಕಾರಿಗಳೇ ಅವರನ್ನು ಮಧ್ಯರಾತ್ರಿ ಬಂಧಿಸಿದ್ದರು.
ಪ್ರಸ್ತುತ ಸಿಐಡಿ ಅಧಿಕಾರಿಗಳು ಜ್ಞಾನೇಂದ್ರ ಕುಮಾರ್ ಅವರನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ಕೆಪಿಎಸ್ಸಿ ಹಗರಣದ ಮೂಲ, ಪ್ರಭಾವಿ ರಾಜಕಾರಣಿಗಳೊಂದಿಗಿನ ಸಂಪರ್ಕ ಹಾಗೂ ಪರಾರಿಯಾಗಲು ನೆರವಾದ ಜಾಲವನ್ನು ಭೇದಿಸಲು ವಿಚಾರಣೆ ತೀವ್ರಗೊಳಿಸಿದ್ದಾರೆ.


