Homeಮುಖಪುಟಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆ: ಸರ್ಕಾರ ಮಾಡುತ್ತಿರುವುದೇನು? ಮಾಡಬೇಕಾದುದ್ದೇನು?

ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆ: ಸರ್ಕಾರ ಮಾಡುತ್ತಿರುವುದೇನು? ಮಾಡಬೇಕಾದುದ್ದೇನು?

ಭಾರತದ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಎಷ್ಟು? ಪ್ರಸ್ತುತ ಬೇಡಿಕೆ ಎಷ್ಟು? ಬೇಡಿಕೆಯನ್ನು ಪೂರೈಸಲು ಭಾರತವು ಸಜ್ಜುಗೊಂಡಿದೆಯೇ? ಪ್ರಶ್ನೆಗಳಿಗೆ ಉತ್ತರಗಳು

- Advertisement -
- Advertisement -

ನಿನ್ನೆ ಬೆಂಗಳೂರಿನ ಬೊಮ್ಮಸಂದ್ರದ ಸ್ವಾಸ್ಥಿಕ್ ಹಾಸ್ಪಿಟಲ್ ವೈದ್ಯ ಡಾ, ವಿಜಯ್ ಭಾಸ್ಕರ್ ರೆಡ್ಡಿ ಎನ್ನುವವರು ಜಾಲತಾಣದ ಮೂಲಕ ‘ನಮಗೆ ತುರ್ತಾಗಿ ಆಕ್ಸಿಜನ್ ಒದಗಿಸಿ. ಸಂಜೆ ಹೊತ್ತಿಗೆ 9 ಕೋವಿಡ್ ರೋಗಿಗಳಿಗೆ ತುಂಬ ತೊಂದರೆ ಆಗಲಿದೆ. ದಯವಿಟ್ಟು ನೆರವು ನೀಡಿ’ ಎಂದು ಸರ್ಕಾರವನ್ನು ಆಗ್ರಹಿಸಿದರು.

ಕನಿಷ್ಠ ಆ ರೋಗಿಗಳನ್ನು ಬೇರೆಡೆ ಕಳಿಸಲಾದರೂ ಸರ್ಕಾರ ವ್ಯವಸ್ಥೆ ಮಾಡಿತೆ ಎಂಬುದರ ಬಗ್ಗೆ ನಂಬಿಕೆಯೇ ಇಲ್ಲ. ಆ ಒಂಭತ್ತು ಜೀವಗಳು ಬದುಕಿರಲಿ ಎಂದು ಆಶಿಸೋಣ.

ಏಕೆಂದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೇ ಮಣಿಪಾಲ್ ಆಸ್ಪತ್ರೆ (5 star hospital) ಒಳಗೆ ಬೆಡ್ ಸಿಗಲಿಲ್ಲ. ಅಂದರೆ ಇಲ್ಲಿ ಮಣಿಪಾಲ ಹಾಸ್ಪಿಟಲ್ ಸರ್ಕಾರ ಸೂಚಿಸಿದಂತೆ ಸರ್ಕಾರದ ಪರವಾಗಿ ಕೋವಿಡ್‌ ರೋಗಿಗಳಿಗೆ ಬೆಡ್ ಕಾದಿರಿಸಿದೆ ಎಂದುಕೊಂಡರೆ ಅದು ಗ್ರೇಟ್! ಛೇ, ನಂಬೋಕೆ ಆಗುತ್ತಾ?

ಈಗ ಮತ್ತೆ ಬೆಂಗಳೂರಿನ ಬೊಮ್ಮಸಂದ್ರದ ಡಾ. ವಿಜಯ ಭಾಸ್ಕರ್ ರೆಡ್ಡಿ ಅವರ ಜಾಲತಾಣದ ವಿಡಿಯೋ ಗಮನಿಸಿದರೆ, ಮಧ್ಯಮ ಹಂತದ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಕೊರತೆಯಾಗಿದೆ.
ಕಳೆದ ವರ್ಷ ಸುಮಾರು ಆರು ಪತ್ರಗಳನ್ನು ಕೋವಿಡ್ ಕುರಿತಂತೆ ಮುಖ್ಯಮಂತ್ರಿಗೆ ಬರೆದ ಗದಗ ಶಾಸಕ ಎಚ್.ಕೆ ಪಾಟೀಲರು, ಪ್ರತಿ ಪತ್ರದಲ್ಲೂ ಆಕ್ಸಿಜನ್ ಕೊರತೆ, ವೆಂಟಿಲೇಟರ್ಸ್‌ ಬಗ್ಗೆ ಎಚ್ಚರಿಸುತ್ತ ಬಂದಿದ್ದರು. ಒಮ್ಮೆ ಅವರು ಆರೋಗ್ಯ ಸಚಿವ ಸುಧಾಕರ್ ಸಮ್ಮುಖದಲ್ಲೇ ಸಿಎಂ ಭೇಟಿಯಾಗಿ ಈ ವಿಷಯ ಎತ್ತಿದ್ದರು.

ಕೈಗಾರಿಕಾ ವಲಯದಲ್ಲಿನ ಆಕ್ಸಿಜನ್ ಅನ್ನು ಮುಲಾಜಿಲ್ಲದೇ ಬಳಸಿಕೊಳ್ಳಿ, ಅದನ್ನು ವೈದ್ಯಕೀಯ ಆಕ್ಸಿಜನ್ ಆಗಿ ರೂಪಾಂತರಿಸಿ ಎಂದೆಲ್ಲ ಅವರು ವಿವರಿಸಿದ್ದರು. ಆದರೆ ಈ ಸರ್ಕಾರಕ್ಕೆ ಒಂದು ಗೊತ್ತು ಗುರಿ ಇರದ ಪರಿಣಾಮ ಈಗಲೂ ಆಸ್ಪತ್ರೆ ಬೆಡ್, ಆಕ್ಸಿಜನ್ ಕೊರತೆ- ಎಲ್ಲ ವೈದ್ಯಕೀಯ ಕೊರತೆ ಮತ್ತೆ ಎದುರಾಗತೊಡಗಿವೆ.

ಡೆಮಾಕ್ರಸಿಗೂ ಆಕ್ಸಿಜನ್ ಕೊರತೆ!

ಕೊರೋನಾ ಸಾಂಕ್ರಾಮಿಕ ರೋಗದ ತೀವ್ರ ಎರಡನೇ ಅಲೆಯನ್ನು ಭಾರತ ಗ್ರಹಿಸುತ್ತಿದ್ದಂತೆ, ಕೋವಿಡ್ ರೋಗಿಗಳಿಗೆ ಮತ್ತು ಇತರರಿಗೆ ಆಮ್ಲಜನಕದ ಪೂರೈಕೆಯ ಅವಶ್ಯಕತೆಯು ದೇಶದ ಮುಂದೆ ಹೊರಹೊಮ್ಮಿದೆ.

ಪ್ರತಿ ದಿನ ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದ ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ಆಮ್ಲಜನಕದ ಗರಿಷ್ಠ ಬಳಕೆ ಮತ್ತು ಉತ್ಪಾದನಾ ಮಿತಿಯನ್ನು ತಲುಪಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 16 ಶುಕ್ರವಾರದಂದು, ದೇಶದಲ್ಲಿ ಆಮ್ಲಜನಕದ ಪೂರೈಕೆಯ ಲಭ್ಯತೆಯ ವಿಷಯದ ಬಗ್ಗೆ ಮಾತನಾಡಿದರು. ಆಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸಲು ಕರೆ ನೀಡಿದರು. ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಇದಕ್ಕೆ ಏನನ್ನೋಣ! ಮೂರನೇ ಅಲೆ ಗಮನದಲ್ಲಿ ಇಟ್ಟುಕೊಂಡು ಈ ಮಾತು ಹೇಳ್ತಾ ಇದ್ದಾರಾ ಎಂಬ ಸಂಶಯ ಕಾಡತೊಡಗಿದೆ. ಏಕೆಂದರೆ, ಅವರು ಘೋಷಿಸಿದ ಅಥವಾ ಬಯಸಿದ ಯೋಜನೆಗಳ ವ್ಯಾಪ್ತಿ, ಕಾಲಾವಧಿ ಹಾಗಿದೆ!

ಭಾರತದ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಎಷ್ಟು? ದೇಶದಲ್ಲಿ ಪ್ರಸ್ತುತ ಆಮ್ಲಜನಕದ ಬೇಡಿಕೆ ಎಷ್ಟು? ಈ ಬೇಡಿಕೆಯನ್ನು ಪೂರೈಸಲು ಭಾರತವು ಸಾಕಷ್ಟು ಸಜ್ಜುಗೊಂಡಿದೆಯೇ? ಎಂಬ ಸರಳ ಪ್ರಶ್ನೆಗಳನ್ನು ಕೇಳಿಕೊಳ್ಳೋಣ.

ಕೆಲವು ಅಂಕಿಅಂಶ ನೋಡೋಣ ಬನ್ನಿ…

ಭಾರತವು ಪ್ರತಿದಿನ ಎಷ್ಟು ಆಮ್ಲಜನಕವನ್ನು ಉತ್ಪಾದಿಸುತ್ತದೆ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಎಷ್ಟು ಬೇಕು?

ಭಾರತವು ಪ್ರತಿದಿನ 7,127 ಮೆಟ್ರಿಕ್ ಟನ್ ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಏಪ್ರಿಲ್ 12 ರಂದು ಭಾರತದ ವೈದ್ಯಕೀಯ ಆಮ್ಲಜನಕದ ಬಳಕೆ 3,842 ಮೆಟ್ರಿಕ್ ಟನ್ ಆಗಿದ್ದು, ಇದು ದೈನಂದಿನ ಉತ್ಪಾದನಾ ಸಾಮರ್ಥ್ಯದ ಶೇಕಡಾ 54 ರಷ್ಟಿದೆ. ಅಂದರೆ ದೇಶದಲ್ಲಿ ಉತ್ಪಾದನೆ ಆಗುವ ಆಮ್ಲಜನಕದ ಅರ್ಧದಷ್ಟನ್ನೂ ಕೊವಿಡ್ ರೋಗಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡದ ಸರ್ಕಾರಗಳು ನಮ್ಮನ್ನು ಆಳುತ್ತಿವೆ.

ಇದನ್ನು ತುರ್ತು ಸಂದರ್ಭ ಎಂದು ಘೋಷಿಸಿ ಎಲ್ಲ ಉತ್ಪಾದಿತ ಆಮ್ಲಜನಕವನ್ನು ವ್ಥದ್ಯಕೀಯ ಕ್ಷೇತ್ರಕ್ಕೆ ತಿರುಗಿಸಲು ಏನು ಅಡ್ಡಿ? ಉತ್ಪಾದಿಸಿದ ಘಟಕಗಳಿಗೆ ಸರಿಯಾದ ಮೊತ್ತ ಪಾವತಿಸಿದರೆ ಆಯ್ತು. 100 ಭವಿಷ್ಯದ ಹಾಸ್ಪಿಟಲ್‌ಗೆ ಹಾಕುವ ಪಿಎಂ-ಕೇರ್ಸ್‌ ಹಣ ಸದ್ಯದ ಇಂತಹ ತುರ್ತುಗಳಿಗೆ ಮೊದಲು ಬಳಕೆಯಾಗಬೇಕು ಅಲ್ಲವೆ?

ಮೊದಲ ಕೊರೋನಾ ಅಲೆಯ ಲೆಕ್ಕ ಇಟ್ಟುಕೊಂಡು ಹಲವಾರು ಅಧ್ಯಯನಗಳು ಮತ್ತು ವರದಿಗಳು ವೈರಸ್ ಸೋಂಕಿಗೆ ಒಳಗಾದ ಒಟ್ಟು ಜನರ ಪೈಕಿ, ಸರಿಸುಮಾರು 6 ಪ್ರತಿಶತದಷ್ಟು ಜನರಿಗೆ ಆಮ್ಲಜನಕದ ಬೆಂಬಲ ಬೇಕಾಗುತ್ತದೆ ಎಂದು ಹೇಳುತ್ತವೆ. ಇದು ಕೇಂದ್ರ ಆರೋಗ್ಯ ಇಲಾಖೆಯ ಅಧಿಕೃತ ನಂಬಿಕೆಯೂ ಆಗಿದೆ.

ಏಪ್ರಿಲ್ 1 ರಂದು, ದೇಶದಲ್ಲಿ ಸುಮಾರು 1 ಲಕ್ಷ ಸಕ್ರಿಯ ಪ್ರಕರಣಗಳಿದ್ದವು, ಆದರೆ ಏಪ್ರಿಲ್ 16 ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 17 ಲಕ್ಷಕ್ಕೆ ಏರಿತು. ಸರ್ಕಾರದ ಅಂಕಿಅಂಶದ ಪ್ರಕಾರ, ಒಟ್ಟು ಶೇಕಡಾ 6 ರಷ್ಟು ಆಮ್ಲಜನಕದ ಬೇಡಿಕೆ ಈಡೇರಿದರೆ, ವೈರಸ್ ಸೋಂಕಿಗೆ ಒಳಗಾದ 1 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಸ್ತುತ ಆಮ್ಲಜನಕದ ಬೆಂಬಲ ಸಿಗಬಹುದು. ಇದು ಇತರ ಕಾಯಿಲೆಗಳಿಂದ ಬಳಲುತ್ತಿರುವ ಜನರನ್ನು ಒಳಗೊಂಡಿರುವುದಿಲ್ಲ.

ಇದಲ್ಲದೆ, ಭಾರತದಾದ್ಯಂತ ಉಕ್ಕಿನ ಸ್ಥಾವರಗಳಲ್ಲಿ ಸರಿಸುಮಾರು 14,000 ಮೆಟ್ರಿಕ್ ಟನ್ ಆಮ್ಲಜನಕವಿದೆ ಎಂದು ವರದಿಯಾಗಿದೆ, ಇದನ್ನು ಪ್ರಧಾನ ಮಂತ್ರಿಯೊಂದಿಗಿನ ಸಭೆಯಲ್ಲಿ ತಜ್ಞರು ಸೂಚಿಸಿದ್ದಾರೆ. ಇದನ್ನು ಬಳಸಿಕೊಳ್ಳಲು ಆಗುವುದಿಲ್ಲವೆ?

ಕೇಂದ್ರವು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ?

ಸರಬರಾಜು ಕೊರತೆಯನ್ನು ಕಡಿಮೆ ಮಾಡಲು ಭಾರತ 50,000 ಮೆಟ್ರಿಕ್ ಟನ್ ವೈದ್ಯಕೀಯ ಆಮ್ಲಜನಕವನ್ನು ಆಮದು ಮಾಡಿಕೊಳ್ಳಲಿದೆಯಂತೆ! 100 ಹೊಸ ಆಸ್ಪತ್ರೆಗಳು ಪಿಎಂ-ಕೇರ್ಸ್ ನಿಧಿಯಡಿ ನಿರ್ಮಾಣಗೊಂಡು (ಮುಂದಿನ ಮಹಾಕುಂಭದ ಹೊತ್ತಿಗೇನೋ!) ತಮ್ಮದೇ ಆದ ಆಮ್ಲಜನಕ ಘಟಕವನ್ನು ಹೊಂದಿರುತ್ತವೆಯಂತೆ!

4,880 ಮೆಟ್ರಿಕ್ ಟನ್, 5,619 ಮೆಟ್ರಿಕ್ ಟನ್ ಮತ್ತು 6,593 ಮೆಟ್ರಿಕ್ ಟನ್ ಆಮ್ಲಜನಕವನ್ನು ಕ್ರಮವಾಗಿ ಏಪ್ರಿಲ್ 20, ಏಪ್ರಿಲ್ 25 ಮತ್ತು ಏಪ್ರಿಲ್ 30 ರವರೆಗೆ 12 ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಈ 12 ರಾಜ್ಯಗಳು ಹೆಚ್ಚಿನ ಹೊರೆಯ ರಾಜ್ಯಗಳಾಗಿವೆ – ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ದೆಹಲಿ, ಛತ್ತೀಸ್‌ಗಡ, ಕರ್ನಾಟಕ, ಕೇರಳ, ತಮಿಳುನಾಡು, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ.

ದಿನದ 24 ಗಂಟೆಯೂ ಟ್ಯಾಂಕರ್‌ಗಳು ಚಲಿಸಲಿವೆಯಂತೆ, ಶಿಫ್ಟ್‌ಗಳಲ್ಲಿ ಚಾಲಕರು ಕೆಲಸ ಮಾಡುತ್ತಾರೆ ಮತ್ತು ಬೇಡಿಕೆಯ ಏರಿಕೆಯನ್ನು ಪೂರೈಸಲು ಸಾಕಷ್ಟು ಸಾಮರ್ಥ್ಯವಿದೆಯಂತೆ!
ಸಿಲಿಂಡರ್ ಭರ್ತಿ ಮಾಡುವ ಪ್ಲಾಂಟ್‌ಗಳಿಗೆ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅನುಮತಿ ಇದೆ.

ಕೈಗಾರಿಕಾ ಸಿಲಿಂಡರ್‌ಗಳನ್ನು ಶುದ್ಧೀಕರಿಸಿದ ನಂತರ ವೈದ್ಯಕೀಯ ಆಮ್ಲಜನಕಕ್ಕೆ ಬಳಸಲು ಅನುಮತಿಸಲಾಗುವುದಂತೆ. (ಗದಗಿನ ಶಾಸಕ ಹೋದ ವರ್ಷದಿಂದ ಇದನ್ನು ಪತ್ರಗಳ ಮೂಲಕ, ಸುದ್ದಿಗೋಷ್ಠಿಗಳ ಮೂಲಕ ಆಗ್ರಹಿಸುತ್ತಲೇ ಬಂದಿದ್ದಾರೆ!) ಅಂತೆಯೇ, ಸಾರಜನಕ ಮತ್ತು ಆರ್ಗಾನ್ ಟ್ಯಾಂಕರ್‌ಗಳನ್ನು ಆಮ್ಲಜನಕ ಟ್ಯಾಂಕರ್‌ಗಳಾಗಿ ಪರಿವರ್ತಿಸಲು ಅನುಮತಿಸಲಾಗುವುದು ಎಂಬ ನವನವೀನ ಯೋಜನೆಯೂ ಇದೆ! ಇದೆಲ್ಲವೂ ತುರ್ತಾಗಿ ನಡೆಯುತ್ತದೆ ಎಂಬ ಭರವಸೆ ಜನರಲ್ಲಿ ಉಳಿದಿಲ್ಲ.

ವೈದ್ಯಕೀಯ ಬಳಕೆಗಾಗಿ ಉಕ್ಕಿನ ಸ್ಥಾವರಗಳಿಂದ ಹೆಚ್ಚುವರಿ ಆಮ್ಲಜನಕವನ್ನು ಪಡೆಯುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ಇವರು ಚರ್ಚೆ ಮಾಡಿ ಅವರು ಒಪ್ಪಿ ಸರಬರಾಜು ಮಾಡುವ ಹೊತ್ತಿಗೆ ಎಷ್ಟು ಜೀವ ಬಲಿಯಾಗಿರುತ್ತವೆಯೋ? ನಿನ್ನೆ ಬೆಂಗಳೂರಿನ ಬೊಮ್ಮಸಂದ್ರದ ವೈದ್ಯರು ಒಂಭತ್ತು ಕೊವಿಡ್ ರೋಗಿಗಳನ್ನು ಉಳಿಸಲು ಬೇಗ ಆಕ್ಸಿಜನ್ ಪೂರೈಸಿ ಎಂದು ಕೇಳಿಕೊಳ್ಳುತ್ತಿದ್ದ ವಿಡಿಯೋ ಗಮನಿಸಿದರೆ, ಇವತ್ತು ದೇಶದಲ್ಲಿ ಅದೆಷ್ಟು ಜನರು ಆಕ್ಸಿಜನ್ ಕೊರತೆಯಿಂದ ಅಸು ನೀಗುತ್ತಿದ್ದಾರೋ ಎಂದು ಹೇಳಲಾಗದು. ಏಕೆಂದರೆ ಚಿತಾಗಾರಗಳಲ್ಲಿ ಸಾಲು ಇದೆ, ಸ್ಮಶಾನಗಳಲ್ಲಿ ಜಾಗವಿಲ್ಲ.

ಆಮ್ಲಜನಕ ಟ್ಯಾಂಕರ್‌ಗಳ ಎಲ್ಲಾ ಅಂತರ್-ರಾಜ್ಯ ಚಲನೆಯನ್ನು ಸುಲಭವಾಗಿ ಚಲಿಸುವಂತೆ ಮಾಡಲು ಪರವಾನಗಿಗಳ ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರ ಮೊದಲಿಂದಲೂ ಹೇಳುತ್ತ ಬಂದಿದೆ.

ಈ ಕ್ರಮಗಳು ಸಾಕಾಗಿದೆಯೇ? ಸವಾಲುಗಳು ಯಾವುವು?

ಉತ್ಪಾದನಾ ಘಟಕಗಳು ಅಥವಾ ಪ್ಲಾಂಟ್‌ಗಳಿಂದ ಆಸ್ಪತ್ರೆಯ ಹಾಸಿಗೆಗಳಿಗೆ ಆಮ್ಲಜನಕ ತಲುಪಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವುದು ಸರ್ಕಾರಗಳು ಪ್ರಸ್ತುತ ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ದೇಶಾದ್ಯಂತ ಹಲವಾರು ಆಸ್ಪತ್ರೆಗಳು ಈಗಾಗಲೇ ಕೊರತೆಯನ್ನು ಎದುರಿಸುತ್ತಿರುವುದರಿಂದ, ಹಲವಾರು ರಾಜ್ಯಗಳು ಕೇಂದ್ರದ ಸಹಾಯದ ಮೇಲೆ ಅಥವಾ ಆಮ್ಲಜನಕ ಪೂರೈಕೆಗಾಗಿ ನೆರೆಯ ರಾಜ್ಯಗಳನ್ನು ಬೇಡುತ್ತಿವೆ.

ಮಾಹಿತಿಯ ಪ್ರಕಾರ, ದೇಶದ ಸರಿಸುಮಾರು 1,200-1,500 ಟ್ಯಾಂಕರ್‌ಗಳು ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸುತ್ತವೆ. ರಾಜ್ಯದೊಳಗಡೆ ಮತ್ತು ಅಂತರರಾಜ್ಯ ಪರವಾನಗಿಯಲ್ಲಿನ ಹೊಸ ವಿನಾಯತಿಗಳೊಂದಿಗೆ ಅವುಗಳ ಚಲನೆ ಸರಾಗವಾಗಲಿದೆ ಎನ್ನಲಾಗಿದೆ. ಇದು ಅಧಿಕಾರಿ ವಲಯ ಹೇಳಿ ಕೈ ತೊಳೆದುಕೊಳ್ಳುವ ಮಾತು.

ಆದರೆ, ಇಲ್ಲೂ ದೊಡ್ಡ ಲಾಬಿ ಇದೆ. ಕರ್ನಾಟಕ ಅಂತಹ ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದಿಸುತ್ತಿಲ್ಲ. ಕೈಗಾರಿಕಾ ಬೇಡಿಕೆಗಾಗಿ ತಮಿಳುನಾಡು, ಆಂಧ್ರ, ಕೇರಳಗಳನ್ನು ಅವಲಂಬಿಸಿದೆ. ಈಗ ಮಹಾರಾಷ್ಟ್ರ ಗುಜರಾತ್‌ನಲ್ಲಿ ಹೆಚ್ಚು ಬೇಡಿಕೆ ಇರುವ ಕಾರಣ ಕರ್ನಾಟಕ ಬೈಪಾಸ್ ಮಾಡಿ ಆ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ಇದು ಕೂಡ ಈಗ ಒಂದು ದೊಡ್ಡ ದಂಧೆಯೇ ಆಗಿದೆ. (ಜೀವ ಉಳಿಸಲು ಅದು ಯಾವ ರಾಜ್ಯವನ್ನಾದರೂ ತಲುಪಲಿ ಎಂಬ ಸದಾಶಯ ಇರಿಸಿಕೊಂಡೇ ಇದನ್ನು ಬರೆಯಲಾಗಿದೆ)

100 ಆಸ್ಪತ್ರೆಗಳು ಪಿಎಂ-ಕೇರ್ಸ್ ನಿಧಿಯ ಮೂಲಕ ತಮ್ಮದೇ ಆದ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವ ಆದೇಶ ಮತ್ತು 50,000 ಮೆಟ್ರಿಕ್ ಟನ್ ಆಮ್ಲಜನಕವನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಗಳು ಕೆಲವು ವಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಕೆಲವು ವಾರಗಳೇ? ಕೆಲವು ತಿಂಗಳು ಅಥವಾ ಕೆಲವು ವರ್ಷ ಅಂತಾ ಹೇಳಿ ಎಂದು ಹಲವು ನೆಟ್ಟಿಗರು ಟೀಕೆ ಮಾಡಿದ್ದಾರೆ. ದೇಶಾದ್ಯಂತ ಆಮ್ಲಜನಕದ ತಕ್ಷಣದ ಅಗತ್ಯವನ್ನು ಪೂರೈಸುವುದು ಇನ್ನೂ ಒಂದು ಸವಾಲಾಗಿ ಉಳಿದಿದೆ. ಸದ್ಯಕ್ಕಂತೂ ಪರಿಹಾರ ಇಲ್ಲವೇ? ಎಲ್ಲ ಕೈಗಾರಿಕಾ ಆಮ್ಲಜನಕವನ್ನು ವಶ ಮಾಡಿಕೊಳ್ಳಬೇಕು, ಅದನ್ನು ವೈದ್ಯಕೀಯ ಆಮ್ಲಜನಕವಾಗಿ ಪರಿವರ್ತಿಸಬೇಕು ಮತ್ತು ಯಾವುದೇ ತಾರತಮ್ಯ ಇಲ್ಲದೇ ಅಗತ್ಯ ಇರುವೆಡೆ ಪೂರೈಸಬೇಕು.

ಹಾಗಂತ ಆಮ್ಲಜನಕ ಉತ್ಪಾದಿಸುವ ಸಣ್ಣ ಘಟಕಗಳನ್ನು ಕೊಲ್ಲಬಾರದು. ಅವಕ್ಕೆ ಒಂದಿಷ್ಟು ಜಾಸ್ತಿ ರೊಕ್ಕ ಕೊಟ್ಟೇ ಅದನ್ನು ಖರೀದಿಸಬೇಕು, ಅಲ್ಲಿರುವ ಕಾರ್ಮಿಕರಿಗೂ ಅದರ ಲಾಭ ಸಿಗುವಂತೆ ನೋಡಿಕೊಳ್ಳಬೇಕು ಅಲ್ಲವೇ?

ಏಕೋ ಆಶಯ ದೊಡ್ಡದಾಯ್ತು ಅನಿಸಬಹುದು. ಆದರೆ ದಿಢೀರನೇ 100 ಹಾಸ್ಪಿಟಲ್ ನಿರ್ಮಿಸುವ, ಅಲ್ಲಿಂದ ಆಕ್ಸಿಜನ್ ಉತ್ಪಾದಿಸುವ ‘ಕನಸಿ’ಗಿಂತ ಇದು ಸ್ವಲ್ಪ ಪ್ರಾಕ್ಟಿಕಲ್ ಮತ್ತು ತಕ್ಷಣಕ್ಕೆ ತೊಂದರೆಯಲ್ಲಿ ಇರುವವರಿಗಾಗಿ ಇದು ಅಗತ್ಯ.

ಪ್ರಜಾಪ್ರಭುತ್ವವೇ ಆಕ್ಸಿಜನ್ ಕೊರತೆಯಿಂದ ಬಳಲುತ್ತಿರುವಾಗ ಕಷ್ಟಪಟ್ಟು ಉಸಿರಾಡಿಕೊಂಡು ಬದುಕಬೇಕು ಜನಸಾಮಾನ್ಯರು…..

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಕಳೆದ ವರ್ಷದಂತೆ ಇನ್ನು ವೇಗವಾಗಿ ಕೊರೊನಾ ವಿರುದ್ಧ ಹೋರಾಡೋಣ; ಮೋದಿ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...