ಐತಿಹಾಸಿಕ ರೈತ ಹೋರಾಟದ ವೇಳೆ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ವಿಚಾರಣೆ ಪೂರ್ಣಗೊಳ್ಳಲು ಸುಮಾರು ಐದು ವರ್ಷಗಳು ಬೇಕಾಗಬಹುದು ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯ ಬುಧವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ವಿ. ರಾಮಸುಬ್ರಮಣಿಯನ್ ಅವರ ಪೀಠ, “ಇದಕ್ಕೆ ಕನಿಷ್ಠ ಐದು ವರ್ಷಗಳು ಬೇಕು ಎಂದು ವರದಿ ಹೇಳುತ್ತದೆ. 208 ಸಾಕ್ಷಿಗಳು, 117 ದಾಖಲೆಗಳು ಮತ್ತು 27 FSL (ವಿಧಿ ವಿಜ್ಞಾನ ವರದಿ) ವರದಿಗಳಿವೆ” ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆಶಿಶ್ ಮಿಶ್ರಾ ದಾಖಲಿಸಿದ ಕ್ರಾಸ್ ಎಫ್ಐಆರ್ನಲ್ಲಿ ಬಂಧಿತರಾಗಿರುವ ವ್ಯಕ್ತಿಗಳ ವಿವರಗಳನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ಪೀಠವು ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ.
“ನಮಗೆ ಬೇಕಾಗಿರುವುದು ಎಫ್ಐಆರ್ ಸಂಖ್ಯೆ 220 ರಲ್ಲಿ ಇನ್ನೂ ಎಷ್ಟು ಜನರನ್ನು ಬಂಧಿಸಲಾಗಿದೆ? 4/5/3 ವ್ಯಕ್ತಿಗಳು ಇದ್ದಾರೆಯೇ? ಅವರ ವಿವರಗಳೇನು? ಎಷ್ಟು ಮಂದಿ ಬಂಧನದಲ್ಲಿದ್ದಾರೆ” ಎಂದು ನ್ಯಾಯಮೂರ್ತಿ ಕಾಂತ್ ಅವರು ರಾಜ್ಯ ಸರ್ಕಾರದ ಪರ ಹಾಜರಾದ ಹಿರಿಯ ವಕೀಲ ಗರಿಮಾ ಪ್ರಸಾದ್ ಅವರನ್ನು ಕೇಳಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಜುಲೈ 26 ರಂದು ಜಾಮೀನು ನಿರಾಕರಿಸಿದ ಆದೇಶದ ವಿರುದ್ಧ ಆಶಿಶ್ ಮಿಶ್ರಾ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿದ ವಕೀಲ ಪ್ರಶಾಂತ್ ಭೂಷಣ್, ಪ್ರತಿದಿನವೂ ವಿಚಾರಣೆ ನಡೆಸಲು ಕೆಳ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ನ್ಯಾಯಾಲಯವನ್ನು ಒತ್ತಾಯಿಸಿದರು. ಮೂವರು ಸಾಕ್ಷಿಗಳ ಮೇಲೆ ‘ಕ್ರೂರವಾಗಿ’ ದಾಳಿ ಮಾಡಲಾಗಿದೆ ಎಂದು ವಾದಿಸಿದ ಅವರು, ಮೊದಲು ವಸ್ತು ಸಾಕ್ಷಿಗಳನ್ನು ಪರೀಕ್ಷಿಸಲು ಕೆಳ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಸೂಚಿಸಿದರು.
“ಪ್ರಾಸಿಕ್ಯೂಷನ್ ಸಾಕ್ಷ್ಯಕ್ಕಾಗಿ ಪ್ರಕರಣವನ್ನು ನಿಗದಿಪಡಿಸಲಾಗಿದೆ ಎಂದು ವರದಿ ಹೇಳುತ್ತದೆ. ವಸ್ತು ಸಾಕ್ಷಿಯನ್ನು ಪರೀಕ್ಷಿಸಬೇಕಾಗಿತ್ತು, ಆದರೆ ಅವರು ಅಸ್ವಸ್ಥರಾಗಿದ್ದರು ಮತ್ತು ಜ್ವರ ಬಂದಿತ್ತು. ಇಂತಹ ಪ್ರಾಯೋಗಿಕ ತೊಂದರೆಗಳು ಉದ್ಭವಿಸುತ್ತವೆ ”ಎಂದು ಪ್ರಶಾಂತ್ ಭೂಷಣ್ ಅವರ ವಾದಗಳಿಗೆ ಪ್ರತಿಕ್ರಿಯೆಯಾಗಿ ನ್ಯಾಯಮೂರ್ತಿ ಕಾಂತ್ ಹೇಳಿದ್ದಾರೆ.