Homeಕರ್ನಾಟಕ‘ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಲಿ’: ಸಚಿವರ ಹೇಳಿಕೆ ಸ್ವಾಗತಿಸಿದ ರೈತರು ಏನಂತಾರೆ?

‘ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಲಿ’: ಸಚಿವರ ಹೇಳಿಕೆ ಸ್ವಾಗತಿಸಿದ ರೈತರು ಏನಂತಾರೆ?

ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ತರಬೇಕಾದ ಅಗತ್ಯತೆಗಳ ಬಗ್ಗೆ ರೈತರು ತಮ್ಮ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ

- Advertisement -
- Advertisement -

“ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಚರ್ಚೆ ನಡೆಸಲಾಗುವುದು” ಎಂದು ರಾಜ್ಯ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ಅವರು ಹೇಳಿರುವುದನ್ನು ರೈತರು ಸ್ವಾಗತಿಸಿದ್ದಾರೆ.

“ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕೇವಲ ಕೋಮು ಕೇಂದ್ರಿತವಾಗಿ ನೋಡಲಾಗುತ್ತಿತ್ತು. ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಆದರೆ ಇದರಿಂದ ಇಡೀ ರೈತಾಪಿ ಸಮುದಾಯ ತೊಂದರೆಗೆ ಸಿಲುಕಿರುವುದು ಚರ್ಚೆಯಾಗಿರಲಿಲ್ಲ. ಈ ನಿಟ್ಟಿನಲ್ಲಿ ಸಚಿವರು ಇಟ್ಟಿರುವ ಹೆಜ್ಜೆ ಸ್ವಾಗತಾರ್ಹ” ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸಚಿವ ಕೆ.ವೆಂಕಟೇಶ್, “ಈಗ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕೋಣ ಮತ್ತು ಎಮ್ಮೆಗಳ ವಧೆಗೆ ಅವಕಾಶವಿದೆ. ಆದರೆ ಹಸುವನ್ನು ಕಡಿಯಲು ಅವಕಾಶ ಇಲ್ಲ. ಹಸುವನ್ನು ಯಾಕೆ ಕಡಿಯಬಾರದು? ಈ ಕಾಯ್ದೆಯಿಂದಾಗಿ ರೈತರಿಗೆ ಬಹಳ ತೊಂದರೆ ಆಗುತ್ತಿದೆ. ಸ್ವತಃ ನಾನು ಹಸುವನ್ನು ಸಾಕಿದ್ದೇನೆ. ಒಂದು ಹಸು ಸತ್ತುಹೋದಾಗ ಅದನ್ನು ಮಣ್ಣು ಮಾಡಲು ಕಷ್ಟಪಡಬೇಕಾಯಿತು. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸುತ್ತೇವೆ” ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ, “ಗೋಹತ್ಯೆ ನಿಷೇಧ ಹಿಂಪಡೆಯುವ ಮುನ್ನ ಕಾಂಗ್ರೆಸ್ಸಿನವರು ಗೋಹತ್ಯೆಯ ಬಗ್ಗೆ ಗಾಂಧೀಜಿಯವರ ನಿಲುವು ಏನಿತ್ತು ಎಂಬುದನ್ನು ತಿಳಿಯಲಿ” ಎಂದಿದ್ದಾರೆ.

ರಾಜಕೀಯ ಹಗ್ಗಜಗ್ಗಾಟ ಏನೇ ಇರಲಿ, ರಾಜ್ಯದ ರೈತಾಪಿ ಸಮುದಾಯ ಸಚಿವರ ಹೇಳಿಕೆಯನ್ನು ಮುಕ್ತವಾಗಿ ನೋಡುತ್ತಿದೆ.

ಇದನ್ನೂ ಓದಿರಿ: ಮಂಡ್ಯ: ಲಾರಿಗೆ ಕಾರು ಡಿಕ್ಕಿ ಹೊಡೆದು ನಾಲ್ವರು ನಿಧನ; ವಾರದಲ್ಲಿ 3ನೇ ಪ್ರಕರಣ

ರೈತರ ಮನದಾಳದ ಮಾತುಗಳು

ಮಂಡ್ಯ ಜಿಲ್ಲೆಯ ರೈತ ನಗರಕೆರೆ ಜಗದೀಶ್ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. “ಇತಿಹಾಸ ಪ್ರಸಿದ್ಧ ಮುಡುಕುತೊರೆ ಜಾತ್ರೆಯಲ್ಲಿ ಮಾರಾಟ ಮಾಡಲೆಂದು ಮಳವಳ್ಳಿ ರೈತನೊಬ್ಬ ಹಸುಗಳನ್ನು ಸಾಗಣೆ ಮಾಡುವಾಗ ಇಲ್ಲಿನ ಪೊಲೀಸರು ತಡೆದರು. ಗೋರಕ್ಷಣೆಯ ಹೆಸರಿನಲ್ಲಿ ದಾಂಧಲೆ ಎಬ್ಬಿಸುವವರೇನೂ ಅಲ್ಲಿರಲಿಲ್ಲ. ಸರ್ಕಾರದ ಭಾಗವಾಗಿರುವ ಪೊಲೀಸರೇ ತೊಂದರೆ ಕೊಟ್ಟರು. ಜಾತ್ರೆಯಲ್ಲಿ ಮಾರಲೆಂದು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರೂ ಕೇಳಲಿಲ್ಲ. ಮೈಸೂರಿನಲ್ಲಿರುವ ಗೋಶಾಲೆಯೊಂದಕ್ಕೆ ಹಸುಗಳನ್ನು ಎಳೆದುಕೊಂಡು ಹೋದರು. ಅದರ ಪಾಲನೆಗಾಗಿ ಪ್ರತಿ ದಿನ ಮುನ್ನೂರು ರೂಪಾಯಿ ಕಟ್ಟುವಂತೆ ರೈತನನ್ನು ಒತ್ತಾಯಿಸಲಾಯಿತು. ಕಾಯ್ದೆಯಡಿ ಪ್ರಕರಣ ಕೂಡ ದಾಖಲಾಗಿತ್ತು. ದಿನವೂ ಹಣ ಕಟ್ಟಲಾಗದೆ ಮನನೊಂದ ರೈತ, ಈ ಹಸುಗಳು ನನ್ನವಲ್ಲ ಎಂದು ಬರೆದುಕೊಟ್ಟು ತಪ್ಪಿಸಿಕೊಂಡ. ಸಾಗಣೆಗಾಗಿ ತರಲಾಗಿದ್ದ ವಾಹನದ ಮಾಲೀಕ ಜಾಮೀನು ಪಡೆಯಲೆಂದೇ 50,000 ರೂಪಾಯಿ ಖರ್ಚು ಮಾಡಿದ. ಈಗಲೂ ಕೋರ್ಟು ಕಚೇರಿ ಅಲೆಯುತ್ತಿದ್ದಾನೆ” ಎಂದು ವಿಷಾದಿಸಿದರು.

“ದನದ ಮಾಂಸ ಮಾರುವ ಮುಸ್ಲಿಮರಿಗೆ ತೊಂದರೆಯಾಗುತ್ತಿದೆ ಎಂಬುದಷ್ಟೇ ಮೇಲುನೋಟಕ್ಕೆ ಚರ್ಚೆಯಾಗುತ್ತಿದೆ. ಆದರೆ ರೈತರಿಗೆ ಆಗುತ್ತಿರುವ ನಷ್ಟ ಮಾತ್ರ ಯಾರ ಗಮನಕ್ಕೂ ಬರುತ್ತಿಲ್ಲ. ನಮ್ಮ ಮನೆಯಲ್ಲಿನ ಒಂದು ಹಸುವಿನ ಕಾಲು ಮುರಿಯಿತು. ಅದನ್ನು ಮಾರಾಟ ಮಾಡಬೇಕಾದಾಗ ಸಾಕಷ್ಟು ತೊಂದರೆಯಾಯಿತು. ಕಾನೂನಿನಲ್ಲಿ ಬದಲಾವಣೆ ತಂದರೆ ರೈತರಿಗೆ ಅನುಕೂಲವಾಗುತ್ತದೆ” ಎಂದರು.

“ಹಸುವಿನಿಂದ ಉಪಯೋಗವಿಲ್ಲದಿದ್ದಾಗ ಅವುಗಳನ್ನು ಸಾಕುವ ಕಷ್ಟವೇನೆಂದು ರೈತರಿಗೆ ಮಾತ್ರ ಗೊತ್ತು. ಮೊದಲೆಲ್ಲ ಇಪ್ಪತ್ತು ಮೂವತ್ತು ಹಸುಗಳನ್ನು ಸಾಕಿಕೊಳ್ಳುತ್ತಿದ್ದವರು ಈಗ ತಮ್ಮ ಮನೆಗಷ್ಟೇ ಅವಶ್ಯಕತೆ ಇರುವಷ್ಟು ಹಸುಗಳನ್ನು ಕಟ್ಟಿಕೊಂಡಿದ್ದಾರೆ. ಹಸುವೊಂದು ಮೂರು ತಿಂಗಳು ಹಾಲು ನೀಡುವುದನ್ನು ನಿಲ್ಲಿಸಿದರೂ ಭಾರವೆನಿಸುತ್ತದೆ. ಮೂರು ತಿಂಗಳ ಕಾಲ ಪೋಷಣೆಯಲ್ಲಿ ಯಾವುದೇ ಕೊರತೆ ಮಾಡುವಂತಿಲ್ಲ. ಹಿಂಡಿ, ಬೂಸಾವನ್ನು ಹಾಕಲೇಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹಾಲು ಕಡಿಮೆಯಾಗುತ್ತದೆ. ಹೀಗಿರುವಾಗ ಗಂಡು ಕರುಗಳನ್ನು, ಕಾಲು ಮುರಿದುಕೊಂಡ ಹಸುಗಳನ್ನು ಇಟ್ಟುಕೊಂಡು ಏನು ಮಾಡೋಣ?” ಎಂದು ಪ್ರಶ್ನಿಸಿದರು.

“ಮೊದಲೆಲ್ಲ ಗೊಡ್ಡು ಹಸುಗಳನ್ನೂ ಇಟ್ಟುಕೊಳ್ಳಲಾಗುತ್ತಿತ್ತು. ಏಕೆಂದರೆ ಗೋಮಾಳಗಳು ಇದ್ದವು. ಹೇಗೋ ಮೇವು ಸಿಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಗೋಮಾಳಗಳು ಇಲ್ಲವಾಗಿವೆ. ಕಾನೂನಿನಲ್ಲಿ ತಿದ್ದುಪಡಿ ತಂದರೆ ಮೊದಲು ಅನುಕೂಲವಾಗುವುದು ರೈತರಿಗೆ” ಎಂದು ಸ್ಪಷ್ಟಪಡಿಸಿದರು.

ಮದ್ದೂರು ಪಟ್ಟಣದ ರೈತರಾದ ದಿವಾಕರ್‌ ತಮ್ಮ ಕಷ್ಟಗಳನ್ನು ‘ನಾನುಗೌರಿ.ಕಾಂ’ ಜೊತೆಯಲ್ಲಿ ಹಂಚಿಕೊಂಡರು. “ಪ್ರಯೋಜನವಿಲ್ಲದ ಹಸುವನ್ನು ಇಂದಿನ ಪರಿಸ್ಥಿತಿಯಲ್ಲಿ ಪೋಷಿಸುವುದು ಕಷ್ಟ. ಮನುಷ್ಯರನ್ನು ಸಾಕುವುದು ಸುಲಭ. ಗೋವುಗಳ ವಿಚಾರದಲ್ಲಿ ಈ ಮಾತನ್ನು ಹೇಳಲಾಗದು. ಹಸುಗಳನ್ನು ಗೋಶಾಲೆಗೆ ಹೊಡೆದು ಹಿಂಸೆ ಕೊಟ್ಟು ಸಾಯಿಸಲಾಗುತ್ತಿದೆ. ಮೇವು, ನೀರಿಲ್ಲದೆ ಅವುಗಳು ಸೊರಗುತ್ತವೆ. ಇದನ್ನೆಲ್ಲ ಕಣ್ಣಿಂದಲೇ ನೋಡಿದ್ದೇವೆ. ಹಾಗೆ ಸಾಯಿಸುವುದಕ್ಕಿಂತ ನೇರವಾಗಿ ಮಾಂಸ ಮಾರಾಟಗಾರರಿಗೆ ಮಾರುವುದು ಉತ್ತಮ. ನಾಲ್ಕಾರು ಜನರಾದರೂ ತಿನ್ನುತ್ತಾರೆ” ಎಂದು ಆಶಿಸಿದರು.

“ಗೋವಿನ ಮಾಂಸ ಸಿಗದಿದ್ದಾಗ ಮಟನ್ ಬೆಲೆ ಹೆಚ್ಚಾಯಿತು. ಹಸು ಸಾಕುವುದಕ್ಕಿಂತ ಕುರಿ, ಮೇಕೆ ಸಾಕುವುದು ಸೂಕ್ತ ಎಂಬ ನಿರ್ಧಾರಕ್ಕೆ ರೈತ ಬಂದನು. 2003-04ರಲ್ಲಿ ಒಂದು ಕಂತೆ ಮೇವಿಗೆ ಮೂರರಿಂದ ನಾಲ್ಕು ರೂಪಾಯಿ ಇತ್ತು. ಕೆಲವು ರೈತರು ತಮ್ಮ ಗದ್ದೆಗಳಲ್ಲಿಯೇ ಉಚಿವಾಗಿ ಮೇವು ಕೊಟ್ಟುಬಿಡುತ್ತಿದ್ದರು. ಇಂದು ಒಂದು ಕಂತೆ ಮೇವಿಗೆ 50 ರೂಪಾಯಿ ಆಗಿದೆ. ಒಂದು ಹಸುವಿಗೆ ದಿನಕ್ಕೆ ಒಂದು ಹೊರೆ ಹಸಿ ಹುಲ್ಲು, ಎರಡು ಹೊರೆ ಒಣ ಹುಲ್ಲು ಹಾಕಬೇಕು. ಒಂದು ಟೈಮ್‌ಗೆ ಎರಡೂವರೆ ಕೆ.ಜಿ. ಹಿಂಡಿಯನ್ನು ನೀಡಬೇಕು. ಒಂದು ಕೆ.ಜಿ. ಹಿಂಡಿಯ ಬೆಲೆ ಕನಿಷ್ಠ 35 ರೂಪಾಯಿ ಇದೆ. ಹೀಗಿರುವಾಗ ಹೇಗೆ ಹಸುಗಳನ್ನು ಸಾಕುವುದು?” ಎಂದು ಕೇಳಿದರು.

ಇದನ್ನೂ ಓದಿರಿ: ನಮ್ಮ ಸಚಿವರಿವರು: ಸಭ್ಯ ರಾಜಕಾರಣಕ್ಕೆ ಮತ್ತೊಂದು ಹೆಸರೇ ‘ಕೆ.ವೆಂಕಟೇಶ್‌’

“2013ರಿಂದಲೂ ಹಾಲಿನ ಬೆಲೆಯಲ್ಲಿ ಚೇತರಿಕೆ ಕಂಡಿಲ್ಲ. ಬೇಸಿಗೆ ವೇಳೆ ಪ್ರತಿ ಲೀಟರ್‌ ಹಾಲಿನ ಬೆಲೆ ಹೆಚ್ಚೆಂದರೆ 27 ರೂಪಾಯಿ ಆಗುತ್ತದೆ. ಮಳೆಗಾಲ ಬಂತೆಂದರೆ ಹಾಲಿನ ಬೆಲೆ 23- 24 ರೂ.ವರೆಗೂ ಕುಸಿಯುತ್ತದೆ. ಹಾಲಿನ ಗುಣಮಟ್ಟ ಸರಿ ಇಲ್ಲ ಎಂಬ ತಕರಾರು ತೆಗೆಯುತ್ತಾರೆ. ಇದೆಲ್ಲ ನೋಡಿದರೆ ಹಸುಗಳನ್ನು ಯಾಕೆ ಸಾಕಬೇಕು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಒಂದು ಕಾಲದಲ್ಲಿ ಹತ್ತು ಹಸುಗಳನ್ನು ಸಾಕಿಕೊಂಡಿದ್ದ ನಾನು ಈಗ ಮನೆಯ ಅಗತ್ಯಕ್ಕೆ ಸಾಕೆಂದು ಒಂದು ಹಸು ಕಟ್ಟಿಕೊಂಡಿದ್ದೇನಷ್ಟೇ” ಎಂದು ತಮ್ಮ ಸಂಕಷ್ಟಗಳನ್ನು ವಿವರಿಸಿದರು.

ಮತ್ತೊಬ್ಬ ರೈತರಾದ ಕರೋಟಿ ತಮ್ಮಣ್ಣ ಮಾತನಾಡಿ, “ಹಸುಗಳನ್ನು ಸಾಕಲೆಂದು ಗೋ ಶಾಲೆಗಳನ್ನು ಸರ್ಕಾರ ಮಾಡಿದೆ. ಈ ಶಾಲೆಗಳು ಗೋವುಗಳಿಗೆ ನರಕವಾಗಿವೆ. ಇವುಗಳಿಗೆ ಸುರಿಯುವ ಹಣವನ್ನು ರೈತರಿಗೆ, ಹೈನುಗಾರಿಕೆ ಮಾಡುವವರಿಗೆ ಸಹಾಯಧನವಾಗಿ ನೀಡಿದರೆ ಗೋವಿನ ರಕ್ಷಣೆಯಾಗುತ್ತದೆ” ಎಂದರು.

ಮುಂದುವರಿದು, “ಹಸುಗಳನ್ನು ಸಾಕುವ ರೈತರು ಅವುಗಳಿಗೆ ವಯಸ್ಸಾದಾಗ ಮಾರಾಟ ಮಾಡಿ ಹಣವನ್ನು ದುಂದು ವೆಚ್ಚ ಮಾಡುತ್ತಿರಲಿಲ್ಲ. ಮತ್ತೊಂದು ಹಸುವನ್ನು ತಂದು ಸಾಕುತ್ತಿದ್ದನು. ಗೋಹತ್ಯೆ ನಿಷೇಧ ಕಾಯ್ದೆ ಬಂದ ಮೇಲೆ ಮಾರಾಟ ಕುಸಿಯಿತು. ಕದ್ದು ಮಾರಾಟ ಮಾಡುವಂತಾಯಿತು. ಹೈನುಗಾರಿಕೆ ಮಾಡುವವನಿಗೆ ಬಹುದೊಡ್ಡ ನಷ್ಟವಾಯಿತು. ಕಾನೂನು ತಿದ್ದುಪಡಿಯಾದರೆ ಸಾಕುವವನಿಗೂ ಮತ್ತು ಮಾರುವವನಿಗೂ ಇಬ್ಬರಿಗೂ ಅನುಕೂಲವಾಗುತ್ತದೆ” ಎಂದು ತಿಳಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read