ರೈತರು ತಾವು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಒತ್ತಾಯಿಸಿ ಹರಿಯಾಣದ ಕುರುಕ್ಷೇತ್ರದಲ್ಲಿ ಮಹಾಪಂಚಾಯತ್ ನಡೆಸುತ್ತಿದ್ದಾರೆ. ಸೋಮುವಾರ ಪ್ರತಿಭಟನಾ ಸ್ಥಳ ಆಗಮಿಸಿದ ಕುಸ್ತಿಪಟು ಬಜರಂಗ್ ಪುನಿಯಾ ಅವರು ರೈತರಿಗೆ ಬೆಂಬಲ ಸೂಚಿಸಿದ್ದಾರೆ.
ಈ ವೇಳೆ ಮಾತನಾಡಿದ ಬಜರಂಗ್ ಪುನಿಯಾ ಅವರು, ”ರೈತರು ತಮ್ಮ ಶ್ರಮ ಮತ್ತು ಬೆಳೆಗಳಿಗೆ ಸರಿಯಾದ ಬೆಲೆಯನ್ನು ಏಕೆ ಪಡೆಯಬಾರದು? ನಾನು ಕೂಡ ರೈತರ ಕುಟುಂಬಕ್ಕೆ ಸೇರಿದವನಾದ್ದರಿಂದ ರೈತರಿಗೆ ಬೆಂಬಲ ನೀಡಲು ಇಲ್ಲಿಗೆ ಬಂದಿದ್ದೇನೆ. ನಾವು ನಮ್ಮ ಬೆಳೆಗಳ ಎಂಎಸ್ಪಿಯನ್ನು ಕೇಳುತ್ತಿದ್ದೇವೆ ಮತ್ತು ಸರ್ಕಾರವು ಈ ಬೇಡಿಕೆಯನ್ನು ಒಪ್ಪಿಕೊಳ್ಳಬೇಕು” ಎಂದು ಪುನಿಯಾ ಪ್ರತಿಭಟನಾ ಸ್ಥಳದಲ್ಲಿ ಆಗ್ರಹಿಸಿದರು.
”ಅಜಯ್ ಮಿಶ್ರಾ ಟೆನಿ (ಕೇಂದ್ರ ಸಚಿವ) ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ ವಿಫಲವಾಗಿದೆ. ಈಗ ನಾವು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟಿಸಬೇಕಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಬಲವಾಗಿ ಧ್ವನಿ ಎತ್ತಬೇಕಿದೆ” ಎಂದು ಪುನಿಯಾ ಹೇಳಿದರು.
2021ರಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ಬೆಂಗಾವಲು ವಾಹನಗಳು ರೈತರ ಗುಂಪಿನ ನಡುವೆ ಹರಿದು ಹೋಯಿತು ರೈತರು ಸಾವಿಗೀಡಾದರು. ಈ ಲಖಿಂಪುರ ಖೇರಿ ಪ್ರಕರಣದಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆರೋಪಿ ಎಂದು ಹೆಸರಿಸಲಾಯಿತು. ಆಗ ರೈತರು ಭಾರೀ ಪ್ರತಿಭಟನೆ ನಡೆಸಿದರೂ ಕೂಡ ಅಜಯ್ ಮಿಶ್ರಾ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯದ ಆರೋಪ: ಸರ್ಕಾರದ ಉದಾಸೀನವೋ? ಆರೋಪಿಯ ರಕ್ಷಣೆಗೆ ಮಾಡುತ್ತಿರುವ ತಂತ್ರವೋ?
ಭಾನುವಾರ, ಕುಸ್ತಿಪಟುಗಳು ಹಿಂದಿಯಲ್ಲಿ ಟ್ವಿಟ್ ಮಾಡಿದ್ದು, ”ರೈತರು ತಮ್ಮ ಬೆಳೆಗಳಿಗೆ ಎಂಎಸ್ಪಿ ಕೇಳುತ್ತಿದ್ದಾರೆ. ಇಡೀ ದೇಶಕ್ಕೆ ಅನ್ನ ನೀಡುವ ರೈತರು ವರ್ಷವಿಡೀ ಹೊಲಗಳಲ್ಲಿ ಕಷ್ಟಪಟ್ಟು ದುಡಿಯುತ್ತಾರೆ. ಅವರ ಶ್ರಮಕ್ಕೆ, ಬೆಳೆಗೆ ಸರಿಯಾದ ಬೆಲೆ ಸಿಗಬೇಕಲ್ಲವೇ? ಈ ಹೋರಾಟದಲ್ಲಿ ಕುಸ್ತಿಪಟು ರೈತರೊಂದಿಗೆ ನಾವಿದ್ದೇವೆ. ನಾವು ಈ ಕುಟುಂಬಗಳಿಂದ ಬಂದವರು” ಎಂದು ಬರೆದಿದ್ದಾರೆ.
किसान MSP माँग रहे हैं यानी अपनी फसलों का न्यूनतम समर्थन मूल्य. पूरे देश का पेट भरने वाले किसान सारा साल खेत में मेहनत करते हैं. क्या उनकी मेहनत और फसल के बदले उसको सही दाम नहीं मिलने चाहिए. हम पहलवान किसानों के इस संघर्ष में उनके साथ हैं. हम लोग इन्हीं परिवारों से आते हैं. 🙏🏽
— Bajrang Punia 🇮🇳 (@BajrangPunia) June 11, 2023
ಲೈಂಗಿಕ ಕಿರುಕುಳದ ಆರೋಪದ ಮೇಲೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳಾದ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಈ ವರ್ಷದ ಆರಂಭದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಶುಕ್ರವಾರ, ಕುಸ್ತಿಪಟುಗಳು ಸೋನೆಪತ್ ಜಿಲ್ಲೆಯ ಛೋಟು ರಾಮ್ ಧರ್ಮಶಾಲಾದಲ್ಲಿ ‘ಪಂಚಾಯತ್’ ಕರೆದರು. ಈ “ನ್ಯಾಯಕ್ಕಾಗಿ ಹೋರಾಟ”ಕ್ಕೆ ತಮ್ಮನ್ನು ಬೆಂಬಲಿಸಿದ ಖಾಪ್ ಸದಸ್ಯರು, ರೈತರು ಮತ್ತು ಮಹಿಳಾ ಸಂಘಟನೆಗಳ ಸದಸ್ಯರನ್ನು ಆಹ್ವಾನಿಸಿದರು.
ಕುಸ್ತಿಪಟುಗಳು ಬುಧವಾರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ನಡೆಸಿದ ಚರ್ಚೆಯನ್ನು ತಮ್ಮ ಬೆಂಬಲಿಗರಿಗೆ ತಿಳಿಸಿದರು.