Homeಕರ್ನಾಟಕತಮಿಳುನಾಡಿನಂತೆ ಕರ್ನಾಟಕವೂ NEP ತಿರಸ್ಕರಿಸಬೇಕು: ಕಣ್ಕಟ್ಟು ಪುಸ್ತಕದ ಕುರಿತ ಸಂವಾದದಲ್ಲಿ ಎಸ್‌.ಜಿ ಸಿದ್ದರಾಮಯ್ಯ

ತಮಿಳುನಾಡಿನಂತೆ ಕರ್ನಾಟಕವೂ NEP ತಿರಸ್ಕರಿಸಬೇಕು: ಕಣ್ಕಟ್ಟು ಪುಸ್ತಕದ ಕುರಿತ ಸಂವಾದದಲ್ಲಿ ಎಸ್‌.ಜಿ ಸಿದ್ದರಾಮಯ್ಯ

ಬಾಲಕಾರ್ಮಿಕ ಪದ್ದತಿ ನಿಷೇಧಿಸಲಾಗಿದೆ. ಆದರೆ 6ನೇ ತರಗತಿಯಿಂದಲೇ ಕೌಶಲ್ಯದ ಹೆಸರಲ್ಲಿ ಕುಲಕಸುಬುಗಳನ್ನು ಹೇರಲಾಗುತ್ತಿದೆ. ಕೌಶಲ್ಯವೆಂಬ ಕಣ್ಕಟ್ಟು, ಜೀತವೆಂಬ ಕ್ರೌರ್ಯವನ್ನು ಮರೆಸುತ್ತಿದೆ.

- Advertisement -
- Advertisement -

ತಮಿಳುನಾಡಿನಂತೆ ಕರ್ನಾಟಕವೂ NEP ತಿರಸ್ಕರಿಸಬೇಕು. ತಮಿಳುನಾಡನ್ನು ನಾವು ಮಾದರಿಯಾಗಿ ತೆಗೆದುಕೊಂಡು ಆ ಧೈರ್ಯವನ್ನು ಹೀಗಿನ ಸರ್ಕಾರ ತೋರಬೇಕು. ಇಲ್ಲದಿದ್ದರೆ ತನ್ನ ಪ್ರಣಾಳಿಕೆಗೆ ತಾನೇ ಮಾಡಿಕೊಂಡ ದ್ರೋಹವಾಗುತ್ತದೆ ಎಂದು ಹಿರಿಯ ಚಿಂತಕರಾದ ಎಸ್‌.ಜಿ ಸಿದ್ದರಾಮಯ್ಯನವರು ಅಭಿಪ್ರಾಯಪಟ್ಟರು.

ಹೊಸ ಶಿಕ್ಷಣ ನೀತಿಯ ಕುರಿತು ಬಿ. ಶ್ರಿಪಾದ್ ಭಟ್‌ರವರು ಬರೆದಿರುವ ಕಣ್ಕಟ್ಟು ಪುಸ್ತಕದ ಕುರಿತ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಸರ್ಕಾರ ಯಾವಾಗಲೂ ಆರೋಗ್ಯ ಮತ್ತು ಶಿಕ್ಷಣವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಆಗ ಮಾತ್ರ ಸುಧಾರಣೆ ಸಾಧ್ಯ. ಆದರೆ ಅವು ಖಾಸಗೀಕರಣಗೊಂಡಲ್ಲಿ ಅಸಮಾನತೆ ಹೆಚ್ಚುತ್ತದೆ. ಇಂದಿನ ಶಿಕ್ಷಣ ಮತ್ತು ಆರೋಗ್ಯದ ವ್ಯಾಪರೀಕರಣವು ಸರ್ಕಾರದ ಅಸಮರ್ಥತೆಯನ್ನು ಸೂಚಿಸುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿಗೂ ಕೇವಲ ಕೆಲವೇ ಶಿಕ್ಷಕರ ಇಚ್ಛಾಶಕ್ತಿಯಿಂದ ಹಲವು ಶಾಲೆಗಳು ಎಷ್ಟು ಅಭಿವೃದ್ದಿಯಾಗಿವೆ ಎಂಬುದನ್ನು ನೋಡಬಹುದು. ಆದರೆ ಸರ್ಕಾರದ ಸರಿಯಾದ ಮೇಲ್ವಿಚಾರಣೆ ಇಲ್ಲದಿರುವುದು, ರಾಜಕಾರಣಗಳು ಶಿಕ್ಷಣವನ್ನು ದಂಧೆಯಾಗಿಸಿರುವುದು ಇಂದಿನ ಶಿಕ್ಷಣದ ದುಸ್ಥಿತಿಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಎನ್‌ಇಪಿ ಹೆಸರಿನಲ್ಲಿ ನಾಗ್ಪುರ ಎಜುಕೇಷನ್ ಪಾಲಿಸಿ ತಂದು ಶಿಕ್ಷಣವನ್ನು ಮತ್ತಷ್ಟು ಹಿಂದಕ್ಕೆ ಒಯ್ಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಕಾಣದ ಕೈಗಳು ಈ ಎನ್‌ಇಪಿಯನ್ನು ರಚಿಸಿದ್ದಾರೆ. ಅದರ ಅನಾಹುತಗಳನ್ನು ಶ್ರೀಪಾದ್‌ ಭಟ್‌ರವರು ಎಳ ಎಳೆಯಾಗಿ ಈ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ನಮ್ಮ ರಾಜಕಾರಣಿಗಳು ಎನ್‌ಇಪಿ ಜಾರಿಗೊಳಿಸುವ ಮೂಲಕ ಅಜ್ಞಾನಿಗಳಾಗಿ, ಅವಿವೇಕಿಗಳಾಗಿ ವರ್ತಿಸುತ್ತಾರೆ. ಶಿಕ್ಷಣ ಯಾವಾಗಲೂ ನೆಲಮೂಲದಿಂದ ಮೇಲಕ್ಕೆ ಬರಬೇಕು. ಆದರೆ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣದಿಂದ ಅಂದರೆ ಮೇಲಿನಿಂದ ಕೆಳಕ್ಕೆ ಜಾರಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎನ್‌ಇಪಿ ಜಾರಿಯಾದಾಗಿನಿಂದ ಪ್ರವೇಶ, ದಾಖಲಾತಿ ಎಲ್ಲವೂ ಆನ್‌ಲೈನ್‌ ಮಾಡುವ ಮೂಲಕ ಡ್ರಾಪ್‌ಔಟ್‌ಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈಗಾಗಲೇ ದೇಶದಲ್ಲಿ 65 ಲಕ್ಷ ಮಕ್ಕಳು ಡ್ರಾಪ್‌ಔಟ್ ಆಗಿದ್ದಾರೆ ಎಂದು ಹೈಕೋರ್ಟ್ ಹೇಳುತ್ತಿದೆ. ಈ ಎನ್‌ಇಪಿ ವಿದ್ಯಾರ್ಥಿಗಳಿಗೆ ಆಮಿಷ ತೋರಿಸಿ ವಂಚಿಸುವಂತಿದೆ. ಏಕೆಂದರೆ ಸರ್ಕಾರಕ್ಕೆ ಅಗ್ಗಕ್ಕೆ ದುಡಿಯುವ ಅಗ್ನಿವೀರರು ಬೇಕಿದೆ, ಕಾಲಾಳುಗಳಾಗಿ ಬೀದಿಯಲ್ಲಿ ಮಚ್ಚಿಡಿದು ಹೊಡೆದಾಡುವವರು ಬೇಕಾಗಿದೆ. ಇದನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಇಲ್ಲದಿದ್ದರೆ ನಮ್ಮ ದೇಶ ಉಳಿಯುವುದಿಲ್ಲ ಎಂದರು.

ನಮ್ಮದು ಬಹುಸಂಸ್ಕೃತಿಗಳ ರಾಷ್ಟ್ರ. ಯಾವುದೇ ಸಮುದಾಯ ಬರೀ ರಾಜಕೀಯ ಸ್ವಾತಂತ್ರ್ಯ ಪಡೆದರೆ ಸಾಲದು, ಸಾಂಸ್ಕೃತಿಕ ಸ್ವಾತಂತ್ರ್ಯವೂ ಮುಖ್ಯ. ಇಲ್ಲದಿದ್ದರೆ ಅದು ವಿನಾಶವಾಗುತ್ತದೆ ಎಂದು ಆಫ್ರಿಕಾದ ಶಿಕ್ಷಣ ತಜ್ಞ ಗೂಗಿ ವಾ ಥಿಯೊಂಗೊ ಹೇಳಿದ್ದಾರೆ. ಅದೇ ರೀತಿಯಲ್ಲಿ ಆಫ್ರಿಕಾದ ಸಮುದಾಯಗಳು ನಾಶವಾಗುತ್ತಿದ್ದು, ನಮ್ಮ ದೇಶವೂ ಅದೇ ದಾರಿಯಲ್ಲಿದೆ ಎಂದು ಎಸ್‌.ಜಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

2500 ವರ್ಷಗಳ ಸಾಂಸ್ಕೃತಿಕ ದಾಷ್ಯದಿಂದ ನಮ್ಮ ಸಮುದಾಯಗಳು ಇನ್ನೂ ಬಿಡುಗಡೆಗೊಂಡಿಲ್ಲ. ಆ ಹಾದಿಯಲ್ಲಿದ್ದಾಗಲೆ ಈ ಎನ್‌ಇಪಿ ಬಂದಿದ್ದು, ಮತ್ತೆ ಚಾತುರ್ವಣ್ಯಕ್ಕೆ ದೂಡುವ ಯತ್ನ ನಡೆಯುತ್ತಿದೆ. ಅಸಮಾನತೆಯನ್ನು ನೆಲೆಗೊಳಿಸಿ ಶಿಕ್ಷಣ ವಂಚಿಸಲಾಗುತ್ತಿದೆ. ಒಂದು ಕಡೆ ಬಾಲಕಾರ್ಮಿಕ ನಿಷೇಧಿಸುವ ಕಾನೂನಿದೆ. ಇನ್ನೊಂದೆಡೆ ಆರನೇ ತರಗತಿಯಿಂದಲೇ ಕೌಶಲ್ಯ ಕಲಿಸುವ ಹೆಸರಿನಲ್ಲಿ ಕುಲಕಸುಬುಗಳನ್ನು ಮಾಡಲು ಮಕ್ಕಳನ್ನು ಪ್ರೇರಿಪಿಸಲಾಗುತ್ತಿದೆ. ಕೌಶಲ್ಯ ಎನ್ನುವ ಕಣ್ಕಟ್ಟು, ಜೀತ ಎನ್ನುವ ಕ್ರೌರ್ಯವನ್ನು ಮರೆಸುತ್ತಿದೆ ಎಂದರು.

ಈ ಅಪಾಯಗಳ ಬಗ್ಗೆ ಯಾರೂ ಎಚ್ಚೆತ್ತುಕೊಳ್ಳಬೇಕಿತ್ತೊ ಅವರೆ ಅವುಗಳನ್ನು ಹೊತ್ತು ಮೆರೆಸುವ ಹಾಗೆ ಮಾಡಲಾಗುತ್ತಿದೆ. ನಮ್ಮ ಶಿಕ್ಷಣ ಸಚಿವರುಗಳು ಮೊದಲ ಎನ್‌ಇಪಿ ಕುರಿತಂತೆ ತಿಳುವಳಿಕೆ ಪಡೆಯಬೇಕಾದರೆ ಈ ಪುಸ್ತಕ ಓದಬೇಕಾಗಿದೆ. ಮೊದಲು ಎನ್‌ಇಪಿ ಕಿತ್ತೊಗೆಯಿರಿ. ಈ ದೇಶಕ್ಕೆ ಅದರ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೊಷಿಸಿದ್ದನ್ನು ಈಡೇರಿಸಬೇಕು. ಇದೇ ವರ್ಷವೇ ಕಿತ್ತೋಗೆಯಬೇಕು ಎಂದು ಅವರು ಆಗ್ರಹಿಸಿದರು.

ಎಲ್ಲರನ್ನೂ ಒಳಗೊಳ್ಳುವ ಹಾಗೆ ಕೊಠಾರಿ ಶಿಕ್ಷಣ ನೀತಿಯನ್ನು ರೂಪಿಸಲಾಗಿತ್ತು. ಮೀಸಲಾತಿಯನ್ನು ಅದಕ್ಕಾಗಿಯೇ ಜಾರಿಗೊಳಿಸಲಾಗಿದೆ. ಆದರೆ ಮೀಸಲಾತಿಯ ಕುರಿತು ಈ ಎನ್‌ಇಪಿಯಲ್ಲಿ ಪ್ರಸ್ತಾಪವೇ ಇಲ್ಲ. ಆದರೆ ಮೆರಿಟ್ ಆಧಾರಿತ ಸ್ಕಾಲರ್‌ಶಿಪ್‌ ಬಗ್ಗೆ ಮಾತ್ರ ಇದು ಮಾತಾಡುತ್ತದೆ. ಇಡಬ್ಲೂಎಸ್‌ ಬಂದಂತೆ ಎನ್‌ಇಪಿ ಕೂಡ ಕಣ್ಕಟ್ಟಿನೊಂದಿಗೆ ಜಾರಿಗೊಳಿಸುವ ಹುನ್ನಾರ ನಡೆಯುತ್ತಿದೆ. ಮಾನವೀಕರಣಗೊಂಡ ಸಮಾಜ, ಸಾಮಾಜಿಕ ನ್ಯಾಯದ ಸಮಾಜ ಬೇಕಾದರೆ ವರ್ಣನೀತಿಯನ್ನು, ಸನಾತನಾ ಮೌಲ್ಯಗಳನ್ನು ಪೋಷಿಸುವ ಎನ್‌ಇಪಿಯನ್ನು ರದ್ದುಗೊಳಿಸಬೇಕು ಎಂದರು.

ಮತೀಯವಾದವನ್ನು ಹೇರಲಾಗುತ್ತಿದೆ: ಡಾ.ಎಚ್.ಡಿ ಉಮಾಶಂಕರ್ ಆತಂಕ

ಎನ್‌ಇಪಿ ಜಾರಿಯಾದ ನಂತರದ ರಾಜ್ಯಶಾಸ್ತ್ರ ಪಠ್ಯಕ್ರಮದಲ್ಲಿ ರಾಮಾಯಣದಲ್ಲಿ ರಾಮರಾಜ್ಯದ ಪರಿಕಲ್ಪನೆ, ಆಧ್ಯಾತ್ಮಿಕ ಚಿಂತನೆಗಳು, ವರ್ಣಧರ್ಮ ಎಂದರೇನು? ಧರ್ಮ ಎಂದರೇನು? ಎಂಬಂತಹ ಪಾಠಗಳನ್ನು ಸೇರಿಸಲಾಗಿದೆ. ಭಾರತ ಮತ್ತು ಸಂವಿಧಾನ ಪಾಠದಲ್ಲಿ ಭಾರತೀಯ ಜ್ಞಾನಪರಂಪರೆ, ಗುರುಕುಲ ಪದ್ಧತಿಯ ಬಗ್ಗೆ ಚರ್ಚಿಸಲಾಗಿದೆ. ಆ ಮೂಲಕ ವಿದ್ಯಾರ್ಥಿಗಳ ಮೇಲೆ ಮತೀಯವಾದವನ್ನು ಹೇರಲಾಗುತ್ತಿದೆ ಎಂದು ಪ್ರಾಧ್ಯಾಪಕರಾದ ಡಾ.ಎಚ್.ಡಿ ಉಮಾಶಂಕರ್ ಆತಂಕ ವ್ಯಕ್ತಪಡಿಸಿದರು.

ಎನ್‌ಇಪಿಯನ್ನು ಜಾರಿಗೊಳಿಸಿದಾಗ ನಾವು ವಿಷಯ ಆಯ್ಕೆಗೆ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯವಿದೆ, ಕಲಿಕಾ ಸಮಯವನ್ನು ಕಡಿತಗೊಳಿಸಲಾಗಿದೆ, ಕೌಶಲ್ಯಭಿವೃದ್ದಿ ಕಡೆ ತೆಗೆದುಕೊಂಡು ಹೋಗಲು ಸಾಧ್ಯವಾಗಬಹುದು, ನಿರಂತರ ಮೌಲ್ಯಮೌಪನ ಸಾಧ್ಯ ಎಂದು ನಂಬಿದ್ದೆವು. ಆದರೆ ಎರಡು ವರ್ಷದ ನಂತರ ಅದೆಲ್ಲವೂ ಸುಳ್ಳಾಗಿದ್ದು ವಿದ್ಯಾರ್ಥಿಗಳ ಡ್ರಾಪ್‌ಔಟ್ ಮಾತ್ರ ಹೆಚ್ಚುತ್ತಿದೆ ಎಂದರು.

ಪಿಯುಸಿ ಮುಗಿಸಿ ಬಂದ ವಿದ್ಯಾರ್ಥಿಗಳಿಗೆ ಯಾವುದೇ ತಯಾರಿ ಇರುವುದಿಲ್ಲ. ಆನ್‌ಲೈನ್‌ ಮೂಲಕ ಅಡ್ಮಿಷನ್, ಪರೀಕ್ಷೆ ಶುಲ್ಕ ಎಲ್ಲವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕಾಗಿದೆ. ಬಹಳ ವಿದ್ಯಾರ್ಥಿಗಳ ಬಳಿ ಮೊಬೈಲ್, ಡೇಟಾ ಇರುವುದಿಲ್ಲ. ಇದೆಲ್ಲ ದೊಡ್ಡ ತೊಡಕಾಗಿದೆ. ಫೀಸ್ ಕಟ್ಟಲು ಬಾರದ ಕೆಲ ವಿದ್ಯಾರ್ಥಿಗಳು ಪರೀಕ್ಷೆಯನ್ನೇ ಬರೆದಿಲ್ಲ. ವಿಷಯಗಳ ಆಯ್ಕೆಯಲ್ಲಿ ಗೊಂದಲಗಳು ಮುಂದುವರಿದಿವೆ ಎಂದರು.

ಇದು ನಾಗ್ಪುರ ಎಜುಕೇಶನ್ ಪಾಲಿಸಿ: ಡಾ. ರವಿಕುಮಾರ್ ಬಾಗಿ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದಕ್ಷಿಣ ಭಾರತವನ್ನು, ಕರ್ನಾಟಕವನ್ನು ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದೆ. ಹಾಗಾಗಿ ಇಲ್ಲಿ ಮಾತ್ರವೇ ಮೊದಲು ಎನ್‌ಇಪಿ ಜಾರಿಗೊಳಿಸಿದ್ದಾರೆ. ಇದಕ್ಕೆ ನಮ್ಮ ರಾಜಕೀಯ ನಾಯಕರು ಸಹ ಅದನ್ನು ಹೊತ್ತು ಮೆರೆಸಿ ಅವಸರವರಸವಾಗಿ ಆರಂಭಿಸಿದರು. ಆದರೆ ಅದು ಹೊಸ ಶಿಕ್ಷಣ ನೀತಿಯ ಬದಲಿಗೆ ನಾಗ್ಪುರ ಎಜುಕೇಶನ್ ಪಾಲಿಸಿ ಎಂಬುದು ಸಾಬೀತಾಗಿದೆ ಎಂದು ಪ್ರಾಧ್ಯಾಪಕರಾದ ಡಾ. ರವಿಕುಮಾರ್ ಬಾಗಿ ಅಭಿಪ್ರಾಯಪಟ್ಟರು.

ಒಂದು ದೇಶದ ಸಾಮಾಜಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಬೇಕೆಂದರೆ ಆ ದೇಶದ ಶಿಕ್ಷಣ ವ್ಯವಸ್ಥೆಯನ್ನು ನಾಶಗೊಳಿಸಿದರೆ ಸಾಕು. ಆ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಸಂವಿಧಾನ ಎಲ್ಲರಿಗೂ ಸಮಾನವಾದ ಶಿಕ್ಷಣವನ್ನು ಕೊಡಬೇಕು ಎಂದು ಬಯಸುತ್ತದೆ. ಆದರೆ ಎನ್‌ಇಪಿ ಅದಕ್ಕೆ ವ್ಯತಿರಿಕ್ತವಾಗಿದೆ. ಮತೀಯತೆಯನ್ನು, ಕೆಲವೇ ವರ್ಗದ ಹಿತಾಸಕ್ತಿಯನ್ನು, ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಬಿತ್ತುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಲೆ ಎಂಬ ವ್ಯವಸ್ಥೆಯೆ ಇನ್ನೂ ಸಾಮಾಜೀಕರಣಗೊಂಡಿಲ್ಲ. ವೈಚಾರಿಕೆತೆ, ವೈಜ್ಞಾನಿಕತೆ ಎಂಬುದಕ್ಕೆ ಇಲ್ಲಿ ಅವಕಾಶವೇ ಇಲ್ಲ. ಪಶ್ಚಿಮದ ರಾಷ್ಟ್ರಗಳು ಮುಂದಕ್ಕೆ ಚಲಿಸಿದರೆ, ನಾವು ಹಿಂದಕ್ಕೆ ಓಡುತ್ತಿದ್ದೇವೆ. ಸಂಸ್ಕೃತ ಎನ್ನುವ ಸತ್ತಿರುವ ಭಾಷೆಗೆ ಒಂದು ವಿವಿ ಕಟ್ಟಿ ಅದಕ್ಕೆ ಸಾವಿರಾರು ಕೋಟಿ ರೂ ಖರ್ಚು ಮಾಡಲು ನಮ್ಮ ಸರ್ಕಾರಗಳು ಮುಂದಾಗುತ್ತಿವೆ. ಅವರಿಗೆ ನಮ್ಮ ಕನ್ನಡ ಸರ್ಕಾರಿ ಶಾಲೆಗಳು ಕಾಣುತ್ತಿಲ್ಲ ಎಂದರು.

ಪುಸ್ತಕದ ಕುರಿತು ಪ್ರಾಧ್ಯಾಪಕರಾದ ಪ್ರೊ. ವಿನುತಾ, ವಿ.ಎಲ್ ನರಸಿಂಹಮೂರ್ತಿ, ಎಸ್‌ಎಫ್‌ಐ ಮುಖಂಡರಾದ ಭೀಮನಗೌಡ ಸಂಕೇಶ್ವರಹಾಳ ಮಾತನಾಡಿದರು. ಕೆ.ಎಸ್ ವಿಮಲರವರು ಪ್ರಾಸ್ತವಿಕವಾಗಿ ಮಾತನಾಡಿದರು. ಪುಸ್ತಕದ ಲೇಖಕರಾದ ಶ್ರೀಪಾದ್ ಭಟ್, ಕೌದಿ ಪ್ರಕಾಶನದ ಮುರಳಿ ಮೋಹನ್ ಕಾಟಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಅನ್ನ ಭಾಗ್ಯ, ಒಕ್ಕೂಟ ತತ್ವ ಮತ್ತು ಕರ್ನಾಟಕ ವಿರೋಧಿ ದಳ (ಕವಿದ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

0
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ...