ಕೊರೊನ ಲಾಕ್ ಡೌನ್ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಘೋಷಣೆ ಮಾಡಿದೆ. ಹಾಗೆಯೇ ದೇಶವನ್ನು ಕೆಂಪು, ಕಿತ್ತಳೆ ಮತ್ತು ಹಸಿರು ಎಂದು ಮೂರು ವಲಯಗಳನ್ನಾಗಿ ವಿಂಗಡಿಸಿದೆ. ಕೆಂಪು ವಲಯದಲ್ಲಿ ಅಗತ್ಯವಸ್ತು ಗಳನ್ನು ಬಿಟ್ಟರೆ ಇತರೆ ಯಾವುದೇ ಚಟುವಟಿಕೆ ನಡೆಸಲು ಅವಕಾಶ ನೀಡಿಲ್ಲ.
ಮುಂದಿನ ಎರಡು ವಾರವೂ ವಿಮಾನಯಾನ, ರೈಲ್ವೆ ಮತ್ತು ಸಾರಿಗೆಯ ಅಂತಾರಾಜ್ಯ ಸಂಚಾರವನ್ನು ನಿರ್ಬಂಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ಶಿಕ್ಷಣ ಸಂಸ್ಥೆಗಳು, ಹೋಟೆಲ್, ಮಾಲ್ ಗಳು ಮತ್ತು ರೆಸ್ಟೋರೆಂಟ್ ಗಳು ಈ ಅವಧಿಯಲ್ಲಿ ಎಲ್ಲಾ ವಲಯಗಳಲ್ಲೂ ತೆರೆಯುವಂತಿಲ್ಲ.
ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸಲು ನಿರ್ಬಂಧ ಹೇರಲಾಗಿದೆ. ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಅಧೇಶದಲ್ಲಿ ಹೇಳಿದೆ.
ಕೆಂಪು ವಲಯದಲ್ಲಿ ಮನೆಯಿಂದ ಯಾರೂ ಅನಗತ್ಯವಾಗಿ ಹೊರಬರುವಂತಿಲ್ಲ ಮತ್ತು 65 ವರ್ಷದ ನಾಗರಿಕರು ಗರ್ಭಿಣಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲೇ ಇರುವುದು ಕಡ್ಡಾಯ ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲ ಕಟ್ಟಡ ನಿರ್ಮಾಣ, ನವೀಕರಣ ಮೊದಲಾದ ಅನಗತ್ಯ ಕೆಲಸಗಳನ್ನು ನಿರ್ಬಂಧಿಸಲಾಗಿದೆ.
ಕಿತ್ತಳೆ ಮತ್ತು ಹಸಿರುವ ವಲಯದಲ್ಲಿ ಟ್ಯಾಕ್ಸಿ ಸಂಚಾರ ಇದ್ದು ಒಬ್ಬ ಪ್ರಯಾಣಿಕ ಪ್ರಯಾಣ ಮಾಡಬಹುದು. ಬೈಕ್ ಮತ್ತು ಕಾರುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ದಿನಸಿ ಅಂಗಡಿಗಳು ಸೇರಿದಂತೆ ಇತರೆ ಚಟುವಟಿಕೆಗಳು ಮುಂದುವರಿಯಲಿವೆ. ಹಸಿರು ವಲಯದಲ್ಲಿ ಸಾಕಷ್ಟು ಸಡಿಲಿಕೆಯನ್ನು ಮಾಡಲಾಗಿದೆ.