ರಾಜ್ಯದಲ್ಲಿ “ಪ್ಲಾಸ್ಮಾ ಥೆರಪಿ” ಪ್ರಯೋಗ ಯಶಸ್ವಿಯಾಗಿರುವುದರಿಂದ ಅದನ್ನು ಮುಂದುವರೆಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ “ಕೊರೊನಾ ರೋಗಿಗಳು ಪ್ಲಾಸ್ಮಾ ಥೆರಪಿಯಿಂದ ಗುಣಮುಖರಾಗುತ್ತಿದ್ದಾರೆ. ಇದರ ಸಾಧಕ, ಬಾಧಕ ಗಮನಿಸಿ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು” ಎಂದರು.
“ಕೊರೊನಾ ಪರೀಕ್ಷೆಯನ್ನು ಸರಳವಾಗಿ ನಡೆಸಲು ವೈದ್ಯಕೀಯ ಸಿಬ್ಬಂದಿಯೊಂದಿಗೆ ಆಂಬುಲೆನ್ಸ್ನಲ್ಲಿ ಶಂಕಿತರ ಮನೆಗೆ ತೆರಳಿ ಗಂಟಲು ದ್ರವ ಮಾದರಿ ಸಂಗ್ರಹಿಸಿಕೊಂಡು ಬರುವ ವ್ಯವಸ್ಥೆ ಮಾಡುವ ಬಗ್ಗೆ ತಜ್ಞರು ಸಲಹೆ ನೀಡಿದ್ದರು, ಅದನ್ನು ಕಾರ್ಯಗತಗೊಳಿಸಲಾಗುವುದು” ಎಂದು ಸಚಿವರು ಹೇಳಿದರು.
“ರಾಜ್ಯದ ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಖಾಲಿಯಾಗಿರುವ ಕಾರಣ ರಕ್ತ ಸಂಗ್ರಹಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ದಾನಿಗಳಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಟೋಲ್ ಫ್ರೀ ನಂಬರ್ಗೆ ಕರೆ ಮಾಡಿದರೆ, ವಾಹನದಲ್ಲಿ ಕರೆತಂದು ವಾಪಸ್ ಬಿಡುವ ವ್ಯವಸ್ಥೆಯನ್ನು ಜಿಲ್ಲಾಡಳಿತವೇ ಮಾಡಲಿದೆ” ಎಂದರು.
ರಾಜ್ಯದಲ್ಲಿ ಮೊದಲ ಭಾರಿಗೆ ಪ್ಲಾಸ್ಮಾ ಥೆರಪಿ ಎಪ್ರಿಲ್ 26 ರಂದು ಪ್ರಾರಂಭಿಸಲಾಗಿತ್ತು. ದೇಶದ ಮೊದಲ ಪ್ಲಾಸ್ಮಾ ಥೆರಪಿ ದೆಹಲಿಯ ಗಂಭೀರ ಸ್ಥಿತಿಯಲ್ಲಿರುವ ನಾಲ್ಕು ಕೊರೊನಾ ರೋಗಿಗಳ ಮೇಲೆ ನಡೆಸಿದ್ದರಿಂದ ಚಿಕಿತ್ಸೆಯು ಫಲ ನೀಡಿ ಅವರು ಗುಣಮುಖರಾಗಿದ್ದಾರೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೆಂದರ್ ಜೈನ್ ಈ ಹಿಂದೆ ತಿಳಿಸಿದ್ದರು.
ಏನಿದು ಪ್ಲಾಸ್ಮಾಥೆರಪಿ?
ಈಗಾಗಲೇ ಕೊರೊನಾ ಸೋಂಕು ತಗುಲಿ ಗುಣಮುಖರಾದವರ (ಅವರ ದೇಹದಲ್ಲಿ ಕೊರೊನಾ ವೈರಸ್ ಇಲ್ಲ ಎಂಬುದು ಎರಡು ಸಾರಿ ಖಾತ್ರಿಯಾದ ನಂತರ) ರಕ್ತದಲ್ಲಿನ ರೋಗನಿರೋಧಕ ಪ್ಲಾಸ್ಮಾ ಕಣಗಳನ್ನು ತೆಗೆದುಕೊಂಡು ಹಾಲಿ ಸೋಂಕಿತರಿಗೆ ನೀಡುವುದೇ ಪ್ಲಾಸ್ಮಾ ಥೆರಪಿಯಾಗಿದೆ. ಕೊರೊನಾದಿಂದ ಗುಣಮುಖರಾದವರಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಬೆಳೆದಿರುವುದರಿಂದ ಸೋಂಕಿತರಿಗೆ ಅದನ್ನು ಬಳಸುವ ಪ್ರಯೋಗ ಈಗ ಆರಂಭಗೊಂಡಿದೆ.
ಐಸಿಎಂಆರ್ ಈ ರೀತಿಯ ಪ್ಲಾಸ್ಮಾಥೆರಪಿಯನ್ನು ಹಲವು ಆಸ್ಪತ್ರೆಗಳು ಮಾಡಬಹುದು ಎಂದು ಕರೆ ನೀಡಿದೆ. ಈ ಪ್ರಯೋಗವನ್ನು ತುಂಬಾ ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರ ಮೇಲೆ ನಡೆಸಲಾಗುತ್ತದೆ. ಇದು ಈಗಾಗಲೇ ಚೈನಾ ಮತ್ತು ಅಮೆರಿಕಾದಲ್ಲಿ ನಡೆದಿದ್ದು ಭಾರತದಲ್ಲಿ ಇತ್ತೀಚೆಗೆ ಆರಂಭಗೊಂಡಿದೆ.
ವಿಡಿಯೋ ನೋಡಿ: ಏನಿದು ಪ್ಲಾಸ್ಮಾ ಚಿಕಿತ್ಸೆ? ಕೊರೊನಾಗೆ ಇದು ಚಿಕಿತ್ಸೆಯೆ?
ಇದನ್ನೂ ಓದಿ: ಕೊರೊನಾ ಚಿಕಿತ್ಸೆಗೆ ಪ್ಲಾಸ್ಮಾ ನೀಡಲು ಮುಂದಾದ ತಬ್ಲೀಘಿ ಜಮಾಅತ್ ಸದಸ್ಯರು