ಕೊರೊನ ರೋಗದಿಂದ ರಾಜ್ಯದಲ್ಲಿ ಒಬ್ಬೊಬ್ಬರೇ ಬಲಿಯಾಗುತ್ತಿರುವ ಚಿಂತಾಜನಕ ಸ್ಥಿತಿ ನಮ್ಮ ಕಣ್ಣ ಮುಂದಿದೆ. ಇಂಥ ಸ್ಥಿತಿಯಲ್ಲಿ ಸಾವಿಗೆ ಮರುಗುವ ಮತ್ತು ರೋಗ ನಿವಾರಣೆಗೆ ಪರಿಹಾರ ಕಂಡುಕೊಳ್ಳುವ ಬದಲು ರಾಜಕೀಯ ಮಾಡುತ್ತಿರುವ ಪ್ರಕರಣಗಳು ಅಲ್ಲಲ್ಲಿ ನಡೆಯುತ್ರಿರುವುದು ವರದಿಯಾಗುತ್ತಲೇ ಇವೆ. ವಿಶೇಷವಾಗಿ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಜನರ ನಡುವಿನ ಸಾಮರಸ್ಯ ಹಾಳುಗೆಡವುವ ಯತ್ನ ನಿರಂತರವಾಗಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಜನಮಾನಸದಲ್ಲಿ ಮುಸ್ಲಿಮರ ಕುರಿತು ಕೆಟ್ಟ ಆಲೋಚನೆಗಳನ್ನು ಬಿತ್ತಲಾಗಿದ್ದು, ಬೇರೆಬೇರೆ ಸಮುದಾಯಗಳಿಂದ ವ್ಯಕ್ತವಾಗುತ್ತಿರುವ ಮಾತುಗಳು ಪುಷ್ಟೀಕರಿಸುತ್ತವೆ. ಇದು ಸಹಬಾಳ್ವೆ ಮುರಿದುಬಿದ್ದಿರುವಂಥ ಸಂಗತಿಯನ್ನು ತಿಳಿಸುತ್ತದೆ. ಬಲಪಂಥೀಯ ಸಂಘಟನೆಗಳು, ಕೆಲ ಕೊರೊನ ವಾರಿಯರ್ ಗಳು ಹರಡುತ್ತಿರುವ ಸುಳ್ಳುಸುದ್ದಿಗಳಿಗೆ ಬಿಜೆಪಿ ಮುಖಂಡರು ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಮುಸ್ಲಿಮ್ ಸಮುದಾಯದ ಬಗ್ಗೆ ಸುಳ್ಳುಸುದ್ದಿ ಹರಡಬಾರದೆಂದು ಮನವಿ ಮಾಡಿದರೂ ಅವರ ಮಾತುಗಳು ಲೆಕ್ಕಕ್ಕೆ ಇಲ್ಲವಾಗಿದೆ.
ಇಂಥದ್ದೇ ಒಂದು ಘಟನೆ ತುಮಕೂರಿನಲ್ಲಿ ನಡೆದಿದೆ. ಬಿಜೆಪಿಯ ಮಾಜಿ ಶಾಸಕ ಬಿ.ಸುರೇಶ್ ಗೌಡ, ತಾನು ಸ್ಪರ್ಧಿಸುತ್ತಿದ್ದ ಗ್ರಾಮಾಂತರ ಕ್ಷೇತ್ರದಲ್ಲಿ ಕೊರೊನ ಸೋಂಕಿತ ವ್ಯಕ್ತಿಯ ಮೃತದೇಹ ದಫನ್ ಮಾಡಿದ್ದನ್ನೇ ರಾಜಕೀಯಕ್ಕೆ ಎಳೆದುತಂದಿದ್ದಾರೆ. ಪ್ರಬಲರ ಒತ್ತಡದಿಂದ ಮೃತದೇಹದ ಪರೀಕ್ಷೆ ನಡೆಸದೆ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಪ್ರಧಾನಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಅಮಾನವೀಯತೆ ಪ್ರದರ್ಶಿಸಿದ್ದಾರೆ. ಎರಡು ಬಾರಿ ಶಾಸಕರಾಗಿದ್ದ ಸುರೇಶ್ ಗೌಡರಿಗೆ ಜವಾಬ್ದಾರಿ ಇರಬೇಕಾಗಿತ್ತು. ಆದರೆ ತನ್ನ ಪಕ್ಷದ ನಾಯಕರನ್ನ ತೃಪ್ತಿಪಡಿಸಲು ಬಾಯಿ ಹರಿಬಿಟ್ಟಿದ್ದಾರೆ.
ತುಮಕೂರಿನ ಜಯಪುರದ ಹೌಸಿಂಗ್ ಬೋರ್ಡ್ ಕಾಲೋನಿಯ 70 ವರ್ಷದ ವೃದ್ದರೊಬ್ಬರು ಏಪ್ರಿಲ್ 26 ರಂದು ಮೃತಪಟ್ಟರು. ಅವರ ಕೊರೊನಾ ಪರೀಕ್ಷೆ ನೆಗೆಟಿವ್ ವರದಿ ಬಂದಿತ್ತು. ಸರಿ ಆರೋಗ್ಯ ಇಲಾಖೆ ಸಂಬಂಧಿಕರಿಗೆ ಅಂದೇ ಮೃತದೇಹ ಹಸ್ತಾಂತರಿಸಿತು. ನಾಗವಲ್ಲಿ ಸಮೀಪದ ರಿಸಾಲದಲ್ಲಿ ಮೃತದೇಹ ದಫನ್ ಮಾಡಿದರು. ಅದಾದ ಮೂರು ದಿನಗಳ ನಂತರ ಅಂದರೆ ಏಪ್ರಿಲ್ 29 ರಂದು ಪರೀಕ್ಷೆಯಲ್ಲಿ ಮೃತವ್ಯಕ್ತಿಗೆ ಕೊರೊನ ಪಾಸೀಟಿವ್ ವರದಿ ಬಂತು. ಮೊದಲು ನೆಗೆಟಿವ್ ಇದ್ದುದು ನಂತರ ಪಾಸಿಟಿವ್ ಹೇಗೆ ಬಂತು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಬಳಿ ಉತ್ತರವಿಲ್ಲ. ಜಿಲ್ಲಾಡಳಿತ ಎಡವಟ್ಟು ಮಾಡಿತೋ? ಇಲ್ಲವೇ ಮತ್ತೆ ಜಿಲ್ಲಾಡಳಿತದ ಮೇಲೆ ಒತ್ತಡ ಹೇರಲಾಯಿತೋ ತಿಳಿದುಬಂದಿಲ್ಲ. ಅಂತೂ ಗೊಂದಲ ಸೃಷ್ಟಿಸಿದರು.. ಜನರ ಮನದಲ್ಲೂ ಕೆಟ್ಟ ಬಾವನೆ ಬರುವಂತೆ ನೋಡಿಕೊಂಡರು. ಒಂದು ಸಮುದಾಯ ಮಾನಸಿಕವಾಗಿ ನಲುಗುವಂತೆ ಮಾಡಿದರು.
ನಂತರ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಹಾಲಿ ಶಾಸಕ ಗೌರಿಶಂಕರ ಮತ್ತು ಬಿಜೆಪಿಯ ಮಾಜಿ ಶಾಸಕ ಬಿ.ಸುರೇಶ್ ಗೌಡ ನಡುವೆ ವಾಕ್ಸಮರ ನಡೆಯಿತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೃತದೇಹ ದಫನ್ ಮಾಡಿ ಕ್ಷೇತ್ರದ ಹೆಸರನ್ನು ಕೆಡಿಸಿದರು ಎಂದು ಗೌರಿಶಂಕರ್ ಹೇಳಿದರೆ, ಪ್ರಬಲರ ಒತ್ತಡದಿಂದ ಇದೆಲ್ಲವೂ ನಡೆದಿದೆ. ತನಿಖೆ ನಡೆಯಲಿ ಎಂದು ಸುರೇಶ್ ಗೌಡ ಒತ್ತಡ ಹೇರಿದ್ದಾರೆ. ಚುನಾವಣೆಯಲ್ಲಿ ಮತಗಳಿಗೆ ಧರ್ಮ ಅಂಟಿಕೊಳ್ಳುವುದಿಲ್ಲ. ಯಾರು ಬೇಕಾದರೂ ಓಟು ಹಾಕಬಹುದು. ಕೊರೊನ ಸೋಂಕು ಬಂದು ಜನ ಸತ್ತರೆ ಸಾವಿನಲ್ಲೂ ಇಂಥ ನಾಚಿಗೇಡಿನ ಮುಖಂಡರು ರಾಜಕೀಯ ಮಾಡುತ್ತಾರೆ. ಅನುಕಂಪ, ಮಾನವೀಯತೆ, ಸಹಬಾಳ್ವೆ, ಭ್ರಾತೃತ್ವ, ಸೋದರತೆ ಇದ್ಯಾವುದೂ ಇವರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಇಂಥ ಬೇಜವಾಬ್ದಾರಿ ಮಾಜಿ-ಹಾಲಿ ಶಾಸಕರಿಗೆ ಜನರೇ ತಕ್ಕ ಬುದ್ದಿ ಕಲಿಸಬೇಕು.