Homeಮುಖಪುಟಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು!

ಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು!

ಇವತ್ತಿನ ನಿಯಮ ಏನು? ನಿನ್ನೆಯದು ಏನು? ನಾಳೆಯದು ಏನು ಅಂತ ಯಾರಿಗೂ ಸರಿಯಾಗಿ ಗೊತ್ತೇ ಆಗೋದಿಲ್ಲ. ಆ ಸಂಶಯ, ಅಸ್ಪಷ್ಟತೆ, ಸಂದೇಹ, ಅಪಾರದರ್ಶಕತೆಗಳ ವಾತಾವರಣದಲ್ಲಿಯೇ ಜೀವನ ಮುಂದುವರೆಯುತ್ತದೆ.

- Advertisement -
- Advertisement -

ಕೊರೋನಾ ಪುರಾಣ, ವರ್ಣಕಾರಣ ಕಾಂಡ

ನಾವು ಸಣ್ಣವರಿದ್ದಾಗ ಭಾರತದ ಸ್ವರೂಪದ ಬಗ್ಗೆ ಒಂದು ಹಾಡು ಹೇಳತಿದ್ದೆವಿ- ಕೇಸರಿ -ಬಿಳಿ – ಹಸಿರು ಬಣ್ಣ ನಡುವೆ ಚಕ್ರವು ಅಂತ ಅದರಾಗ ಒಂದು ಸಾಲು ಇತ್ತು.

ಈ ಬಣ್ಣಗಳ ನಡುವೆ ರಾಜಕೀಯ ಹುಟ್ಟತದ ಅಂತ ನಮಗ ಗೊತ್ತಿರಲಿಲ್ಲ. ಇದರ ಬಗ್ಗೆ ಸ್ವಲ್ಪ ತಿಳಕೊಳ್ಳೋಣ.

ಮೊಟ್ಟ ಮೊದಲಿಗೆ, ಅಂದರ ಲಕ್ಷಾಂತರ ಮಂದಿಗೆ ಕೊರೋನಾ ಬಂದು, ಸಾವಿರಾರು ಜನ ಸತ್ತ ಮ್ಯಾಲೆ, ಭಾರತ ಸರಕಾರದ ಕಣ್ಣು ತೆರದು ಲಾಕಡೌನು (ಕೀಲಿ ಕಿಟಕ್) ಘೋಷಿಸಿತು. ಆಮ್ಯಾಲೆ ದೇಶದ 700 ಜಿಲ್ಲೆಗಳನ್ನ ಕೆಂಪು, ಕಿತ್ತಳೆ ಹಾಗೂ ಹಸಿರು ಅಂತ ಹೇಳಿ ವಿಭಜನೆ ಮಾಡಿತು.

ಅದರ ಹಿಂದಿನ ಕಾರಣ ಅಂದರೆ 1. ಯಾವುದೇ ಜಿಲ್ಲೆಯೊಳಗ ಒಂದು ಕೊರೊನಾ ಪ್ರಕರಣ ಇದ್ದರೂ ಅದು ಕೆಂಪು. 2. ಯಾವುದೇ ಪ್ರಕರಣ ಇರದಿದ್ದರ ಅದು ಹಸಿರು ಹಾಗೂ 3. ಕಳೆದ 14 ದಿನದಲ್ಲಿ ಒಂದೂ ಹೊಸ ಪ್ರಕರಣ ಇರಲಿಲ್ಲ ಅಂದರ ಅದು ಕಿತ್ತಳೆ.

ಕೆಂಪು ಜಿಲ್ಲೆಯೊಳಗ ಯಾವುದೇ ಆರ್ಥಿಕ ಚಟುವಟಿಕೆ ಇಲ್ಲ, ಓಡಾಟ ಇಲ್ಲ. ಕಿತ್ತಳೆಯೊಳಗ ಬಹಳ ಮಟ್ಟಿಗೆ ಪ್ರತಿಬಂಧ ಹಾಗೂ ಹಸಿರಿನೊಳಗ ಎಲ್ಲ ರೀತಿಯ ಚಟುವಟಿಕೆ ಹಾಗೂ ಓಡಾಟ ಮುಕ್ತ.

ಆದರ ಸಮಸ್ಯಾ ಏನಪಾ ಅಂದರ ಎಂದಿನಂತೆ ಕೇಂದ್ರ ಸರಕಾರ ಕೀಲಿ ಕಿಟಕ್ ಆಗಲಿ, ಇತರ ಪರಿಹಾರ ಕ್ರಮಗಳನ್ನಾಗಲೀ ಸಾರಾಸಾರ ವಿಚಾರ ಮಾಡಿ ಮಾಡಿರಲಿಲ್ಲ.

ಇದರಿಂದ ದೊಡ್ಡ ಆಭಾಸ ಆತು. ಒಂದು ಸಾವಿರ ಕೇಸು ಇರೋ ಮುಂಬೈ ಕಿತ್ತಳೆ ವಲಯದಾಗ ಬಂದು, ಕರ್ನಾಟದ 14 ಜಿಲ್ಲೆ ಗಳು ಕೆಂಪು ವಲಯದಾಗ ಬಂದವು.

ಕೇಂದ್ರದ ಆಳುವ ಪಕ್ಷಕ್ಕೆ ಅತಿ ಹೆಚ್ಚು ದೇಣಿಗೆ ಕೊಟ್ಟ ಖಾಸಗಿ ಕಂಪನಿಗಳು ಸರಕಾರದ ಮೇಲೆ ಒತ್ತಡ ಹಾಕಿದರು. ಮುಂಬೈ- ಅಹಮದಾಬಾದು- ಸುರತ ಮುಂತಾದ ಕಡೆ ಕಾರಖಾನೆ- ಅಂಗಡಿ ತೆಗೆಯಬಹುದಾದರೆ ನಮ್ಮಲ್ಲೆ ಯಾಕೆ ಬೇಡ ಅಂತ ತಕರಾರು ಮಾಡಿದರು. ಅವರು ತಮ್ಮ ತಮ್ಮ ನೌಕರರಿಗೆ ಸಂಬಳ ಕೊಟ್ಟಿದ್ದರೋ ಇಲ್ಲೋ, ಆದರೆ ಪಿಎಂ ಕೇರ್ಸ ಅನ್ನೋ ಹುಂಡಿಗೆ ರೊಕ್ಕ ಹಾಕಿ ಭಕ್ತಿಯಿಂದ ಕೈ ಮುಗದಿದ್ದರು.

ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದ್ದಕ್ಕ ಜನರಿಗೆ ತೊಂದರೆ ಆಗಿತ್ತು. ಸರಕಾರಕ್ಕೆ ತೆರಿಗೆ ಸಿಗಲಾರದ ಹಂಗ ಆಗಿತ್ತು. ಸರಕಾರಿ ನೌಕರರಿಗೆ ಸಂಬಳ ತಡಾ ಆಗಲಿಕ್ಕೆ ಸುರು ಆಗಿತ್ತು. ವಿಶ್ವಬ್ಯಾಂಕು, ಮೋಡಿ, ಮತ್ತು ಇತರ ಸಂಸ್ಥೆಗಳು ಭಾರತದ ನಿವ್ವಳ ಉತ್ಪನ್ನ ಶೇಕಡಾ 1-2 ರ ಒಳಗೆ ಇಳಿಯಲಿದೆ ಅಂತ ಭವಿಷ್ಯ ಹೇಳಲಿಕ್ಕೆ ಸುರು ಮಾಡಿದರು.

ಅಷ್ಟರೊಳಗೆ ಪಂತ ಪ್ರಧಾನ ನಮೋ ಅವರು ಮೂರನೇ ಕೀಲಿ ಕಿಟಕ್ ಘೋಷಣೆ ಮಾಡಿದ್ದರು. ಇನ್ನು ಅದನ್ನು ಹೆಂಗ ಸರಿ ಮಾಡಬೇಕು ಅಂತ ಯಾರಿಗೂ ಗೊತ್ತಿರಲಿಲ್ಲ.

ಎಪ್ರಿಲ 30 ರಂದು ಕೇಂದ್ರದ ಕೆಲವು ಅಧಿಕಾರಿಗಳು ಒಂದು ಸಭೆ ನಡೆಸಿದರು. ಅದರಾಗ ಈ ಹಿಂದೆ ಮಾಡಿದ ಕಲರ ಕೋಡಿಂಗ (ವರ್ಣಾಧಾರಿತ ವಿಭಜನೆ) ಸರಿ ಇಲ್ಲ. ಅದನ್ನ ಬದಲಾಯಿಸಬೇಕು. ಬರೇ ಪ್ರಕರಣ ಪತ್ತೆ ಆಗೋದು ಮುಖ್ಯ ಅಲ್ಲ. ಅದರ ಸಂಖ್ಯೆ ಎಷ್ಟು ದಿನದೊಳಗ ದುಪ್ಪಟ್ಟು ಆಗತಾವು, ಎಷ್ಟು ಜನ ಗುಣ ಆಗಿದ್ದಾರ, ರಾಜ್ಯ ಹಾಗೂ ಜಿಲ್ಲೆ ಆಡಳಿತ ಎಷ್ಟರ ಮಟ್ಟಿಗೆ ತಯಾರು ಆಗಿದಾರು ಮುಂತಾದ ವಿಷಯಗಳನ್ನ ಆಧರಿಸಿ ಕೆಂಪು ನಿರ್ಧರಿಸೋಣ. ಕಳೆದ 21 ದಿನದೊಳಗ ಪ್ರಕರಣ ಇಲ್ಲಾ ಅಂದರ ಅದು ಹಸಿರು ಅಂತ ಅನ್ನೋಣ. ಇವು ಎರಡೂ ಇಲ್ಲದವು ಕಿತ್ತಳೆ ಜಿಲ್ಲೆಗಳು ಅಂತ ಆಗಲಿ ಅಂತ ಹೇಳಿದರು.

ರಾಜ್ಯ ಸರಕಾರಗಳು ಕೆಂಪು- ಕಿತ್ತಳೆ ಇದ್ದದ್ದನ್ನು ಹಸಿರು ಮಾಡಬಹುದು. ಆದರೆ ಉಲ್ಟಾ ಮಾಡಲು ಬರೋದಿಲ್ಲ. ಪಟ್ಟಿ ಬದಲಾವಣೆ ಮಾಡೋದಾದರ ನಾವು ಮಾಡತೇವಿ ಅಂದರು. ಕರ್ನಾಟಕದಲ್ಲಿ ಇದ್ದ 14 ಕೆಂಪು ಜಿಲ್ಲೆಗಳ ಸಂಖ್ಯೆ ಮೂರಕ್ಕೆ ಇಳಿಯಿತು.

ಹಿಂಗಾಗಿ ಮೂರನೇ ಹಂತದ ಲಾಕ್ ಡೌನ ಇದ್ದರೂ ಕೂಡ ಕಾರ್ಖಾನೆ- ಅಂಗಡಿ ತೆರೆಯಲಾಯಿತು. ಅತಿ ಕಮ್ಮಿ ಪ್ರಕರಣ ಇದ್ದಾಗ ಬಂದು ಮಾಡಿದ ಅಂಗಡಿಗಳು ಅತಿ ಹೆಚ್ಚು ಪ್ರಕರಣಗಳು ದಾಖಲಾದ ಮೇಲೆ ತೆರೆದುಕೊಂಡವು. ಇದೇ ನಿರ್ಧಾರ ತೊಗೊಳ್ಳೋದು ಆಗಿದ್ದರ ಇಷ್ಟೆಲ್ಲಾ ಸರ್ಕಸ್ಸು ಯಾಕ ಮಾಡಬೇಕಾಗಿತ್ತು. ಮೊದಲನೇ ದಿವಸವೇ ಈ ನಿರ್ಧಾರ ತೊಗೊಂಡಿದ್ದರ ಅಷ್ಟೊಂದು ಆರ್ಥಿಕ ಹಿನ್ನಡೆ ಆಗತಿರಲಿಲ್ಲ.

ಈ ಬಣ್ಣಗಳ ರಾಜಕಾರಣಕ್ಕೆ ವರ್ಣಕಾರಣ ಅನ್ನಬಹುದು. ಯಾಕ ಹಿಂಗಂದರ, ಸರಕಾರದ ನಿರ್ಧಾರಗಳು ವಿಜ್ಞಾನಿಗಳ ಮಾತು ಕೇಳಿ ನಡೆಯುತ್ತಿಲ್ಲ. ಅವು ಕೆಲವು ಐಎಎಸ್ಸು ಅಧಿಕಾರಿಗಳು ಹಾಗೂ ಕೆಲವೇ ಕೆಲವು ರಾಜಕಾರಣಿಗಳ ಮನಸೋಇಚ್ಛಿ ನಿರ್ಧಾರಗಳು. ಇವುಗಳಿಂದ ಯಾರಿಗೂ ಸ್ಪಷ್ಟತೆ ಇಲ್ಲ. ಯಾರಿಗೂ ಇವು ಸರಿಯಾಗಿ ಅರ್ಥವಾಗಿಲ್ಲ. ಇವುಗಳ ಬಗ್ಗೆ ಯಾರೂ ವೈಯಕ್ತಿಯ ಜವಾಬುದಾರಿ ತೊಗೊಳ್ಳೋದಿಲ್ಲ. ಸಧ್ಯಕ್ಕಂತೂ ಈ ಮುಖ ಇಲ್ಲದ ನಿರ್ಧಾರಗಳಿಂದ ನಮಗ ಮುಕ್ತಿ ಇಲ್ಲವೇನೋ.

ದೂರದರ್ಶಿ ಸಾಹಿತಿ ಭವಿಷ್ಯದಲ್ಲಿ ನಡಿಯೋದನ್ನು ಇಂದೇ ನಡೆದಂತೆ ಚಿತ್ರಿಸಿದ ಜಾರ್ಜ್ ಆರ್ವೆಲ್ ಅವರ ಅತಿ ಜನಪ್ರಿಯ ಕಾದಂಬರಿಯ ಹೆಸರು ʻ1984ʼ. ಅದರೊಳಗೆ ಕೆಲವು ಜನ ತಮ್ಮ ದೇಶದ ಜನರನ್ನ ಕತ್ತಲೆಯೊಳಗೆ ಇಟ್ಟು ಸರಕಾರ ನಡೆಸತಾರ. ಕಾಲ್ಪನಿಕ ʻಹಿರಿಯ ಅಣ್ಣʼನ ಹೆದರಿಕೆಯಿಂದ ಜನರ ಮೇಲೆ ದಬ್ಬಾಳಿಕೆ ನಡಸತಾರ.

ಅದೇ ಲೇಖಕನ ಇನ್ನೊಂದು ಕಾದಂಬರಿ ʻಎನಿಮಲ್ ಫಾರ್ಮʼ.

ರೈತನೊಬ್ಬನ ಮನೆಯ ಹಿತ್ತಲದಲ್ಲಿ ನಡೆಯುವ ಕತೆ ಇದು. ಬರೀ ತಿಂದುಂಡು ಹಾಯಾಗಿ ಮಲಗುವ ಚಾಲಾಕಿ ಹಂದಿಗಳು ಸರಕಾರ ರಚಿಸಿ ತಾವೇ ರಾಜರಾಗಿ ಬಿಡತಾರ. ರೈತನ ಹೊಲದಲ್ಲಿ ಕಷ್ಟಪಟ್ಟು ದುಡಿಯುವ ಕುದುರೆಗಳನ್ನು ಕಾರ್ಮಿಕರನ್ನಾಗಿ ಮಾಡಿಕೊಳ್ಳತಾವು. ಆ ತೋಟದ ಮನೆಯಲ್ಲಿ ಒಂದು ಫಲಕ ಇರತೈತಿ. ಅದರ ಮೇಲೆ ಇವತ್ತಿನ ನೀತಿ- ನಿಯಮಗಳು ಅಂತ ಬರದಿರತಾವು. ಅದನ್ನ ಯಾರು ಬರದಿತಾರ ಅಂತ ಯಾರಿಗೂ ಗೊತ್ತಿರೋದಿಲ್ಲ. ಅದರಾಗ ಒಂದು – ಎರಡು ಅಂತ ಹೇಳಿ ನಿಯಮಗಳ ಪಟ್ಟಿನ ಇರತೈತಿ. ಅವನ್ನ ಎಲ್ಲ ಪ್ರಾಣಿಗಳು ಭಕ್ತಿಯಿಂದ ಪಾಲಿಸತಿರತಾವು.

ಆದರ ಅವರ ಮೇಲೆ ದ್ವೇಷ ಸಾಧಿಸೋ ದೃಷ್ಟಿಯಿಂದ ಆ ಹಂದಿಗಳು ಒಂದು ಸಂಚು ರೂಪಿಸತಾವು. ರಾತ್ರಿ ಎಲ್ಲರೂ ಮಲಗಿದಾಗ ಎದ್ದು ಬಂದು ಆ ಪಟ್ಟಿಯ ಕೊನೆಯ ನಿಯಮಗಳನ್ನ ಅಳಿಸಿ ಸಂಪೂರ್ಣ ತದ್ವಿರುದ್ಧ ವಾದ ನಿಯಮಗಳನ್ನ ಬರದು ಬಿಡತಾವು. ಮರು ದಿನ ಬೆಳಿಗ್ಗೆ ಎದ್ದು ನಿನ್ನೆ ಎಲ್ಲರೂ ನಿಯಮ ಉಲ್ಲಂಘಿಸಿದ್ದೀರಿ ಅಂತ ಹೇಳಿ ಶಿಕ್ಷೆ ಕೊಡತಾವು. ಉಳಿದ ಪ್ರಾಣಿಗಳು ʻಇಲ್ಲ. ನಾವು ಇದರಲ್ಲಿ ಬರೆದ ನಿಯಮಗಳನ್ನೇ ಪಾಲನೆ ಮಾಡಿದ್ದೇವೆʼ ಅಂತ ತಿರುಗಿ ವಾದ ಮಾಡಿದರೆ, ಎಲ್ಲಿದೆ ನೋಡಿ? ಇಲ್ಲಿರುವ ನಿಯಮವೇ ಬೇರೆ, ನೀವು ಮಾಡಿದ್ದೇ ಬೇರೆ ಅಂತ ಅವರನ್ನು ಹೆದರಿಸುತ್ತವೆʼ.

ಕೊನೆಗೂ ಇವತ್ತಿನ ನಿಯಮ ಏನು? ನಿನ್ನೆಯದು ಏನು? ನಾಳೆಯದು ಏನು ಅಂತ ಯಾರಿಗೂ ಸರಿಯಾಗಿ ಗೊತ್ತೇ ಆಗೋದಿಲ್ಲ. ಆ ಸಂಶಯ, ಅಸ್ಪಷ್ಟತೆ, ಸಂದೇಹ, ಅಪಾರದರ್ಶಕತೆಗಳ ವಾತಾವರಣದಲ್ಲಿಯೇ ಜೀವನ ಮುಂದುವರೆಯುತ್ತದೆ. ನಿಯಮ ಪಾಲಿಸುವರಿಗೂ, ಆರಕ್ಷಕರಿಗೂ, ನಿಯಮ ಮುರಿಯುವವರಿಗೂ, ಜನಸಾಮಾನ್ಯರಿಗೂ ಎಲ್ಲರಿಗೂ ಭಯದ ವಾತಾವರಣ ಇರುತ್ತದೆ.

ಇವತ್ತಿನ ಆಗುಹೋಗುಗಳು ನಮಗ ಎನಿಮಲ್ ಫಾರ್ಮಿನ ನೆನಪು ಮಾಡಿಕೊಡತಾವು. ಅಚ್ಛೇ ದಿನ್ ಹೋಗಲಿ, ಬೊಹುತ ಬೂರೆ ದಿನ ಆನೆವಾಲೆ ಹೈಂ ಅಂತ ಅನ್ನಿಸತೈತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...