ಮಹಾರಾಷ್ಟ್ರದ ನಾಂದೇಡ್ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 72 ಗಂಟೆಗಳಲ್ಲಿ 31 ರೋಗಿಗಳ ಸರಣಿ ಸಾವುಗಳು ಸಂಭವಿಸಿದ ಹಿನ್ನೆಲೆ ಡೀನ್ ವಿರುದ್ಧ ನರಹತ್ಯೆಯ ಪ್ರಕರಣವನ್ನು ದಾಖಲಿಸಲಾಗಿದೆ.
ಎಫ್ಐಆರ್ನಲ್ಲಿ ಡೀನ್ ಅಲ್ಲದೆ ಮತ್ತೋರ್ವ ವೈದ್ಯನನ್ನು ಕೂಡ ಆರೋಪಿ ಎಂದು ಹೆಸರಿಸಲಾಗಿದೆ.
ಆಸ್ಪತ್ರೆಯಲ್ಲಿ ಮೃತಪಟ್ಟ ನವಜಾತ ಶಿಶುವಿನ ಸಂಬಂಧಿಕರೋರ್ವರ ದೂರಿನ ಮೇರೆಗೆ ಹಂಗಾಮಿ ಡೀನ್ ಡಾ.ಎಸ್.ಆರ್.ವಕೋಡೆ ಮತ್ತು ಮತ್ತೊಬ್ಬ ವೈದ್ಯರ ವಿರುದ್ಧ ನಾಂದೇಡ್ ಗ್ರಾಮಾಂತರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಡೀನ್ ಮತ್ತು ಮಕ್ಕಳ ತಜ್ಞರ ನಿರ್ಲಕ್ಷ್ಯದಿಂದ ನವಜಾತ ಶಿಶು ಸಾವನ್ನಪ್ಪಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಶಿಶುವಿನ ಕುಟುಂಬದವರು ಆಸ್ಪತ್ರೆಯ ಹೊರಗಿನಿಂದ ಔಷಧಿಗಳನ್ನು ಖರೀದಿಸಿ ಕಾಯುತ್ತಿದ್ದರು. ಆದರೆ ನವಜಾತ ಶಿಶುವನ್ನು ವೈದ್ಯರು ಪರಿಶೀಲಿಸಿಲ್ಲ. ಸಹಾಯಕ್ಕಾಗಿ ಡೀನ್ ಕಚೇರಿಗೆ ಹೋದಾಗ ಅವರನ್ನು ಬೆನ್ನಟ್ಟಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಮಂಗಳವಾರ ಆಸ್ಪತ್ರೆಯಲ್ಲಿ ಡೀನ್ಗೆ ಕೊಳಕು ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಬಲವಂತ ಮಾಡಿದ ಆಡಳಿತಾರೂಢ ಶಿವಸೇನೆಯ ಸಂಸದರ ವಿರುದ್ಧ ಡೀನ್ ಪೊಲೀಸರಿಗೆ ದೂರು ನೀಡಿದ ಒಂದು ದಿನದ ನಂತರ ಡೀನ್ ವಿರುದ್ಧ ಈ ಪ್ರಕರಣ ದಾಖಲಾಗಿದೆ.
72 ಗಂಟೆಗಳಲ್ಲಿ 31 ಸಾವುಗಳ ವರದಿ ಬೆನ್ನಲ್ಲೇ ನಾಂದೇಡ್ನ ಲೋಕಸಭಾ ಸಂಸದರಾದ ಹೇಮಂತ್ ಪಾಟೀಲ್ ಅವರು ಮಂಗಳವಾರ ಡಾ.ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿ ಶೌಚಾಲಯದ ದುಸ್ಥಿತಿ ಕಂಡು ಡೀನ್ ಕೈಯಲ್ಲೇ ಅದನ್ನೇ ಶುಚಿಗೊಳಿಸಿದ್ದರು. ಇದರ ಬೆನ್ನಲ್ಲೇ ಸಂಸದರ ವಿರುದ್ಧ ಪೊಲೀಸರಿಗೆ ದೂರನ್ನು ನೀಡಿದ್ದರು.
ಸಂಸದರು ತಮ್ಮ ಭೇಟಿಯ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡುತ್ತದೆ, ಆದರೆ ಇಲ್ಲಿನ ಪರಿಸ್ಥಿತಿ ನೋಡಿ ನನಗೆ ನೋವಾಗಿದೆ. ತಿಂಗಳಿನಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸಿಲ್ಲ. ಆಸ್ಪತ್ರೆಯ ವಾರ್ಡ್ಗಳಲ್ಲಿನ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಶೌಚಾಲಯದಲ್ಲಿ ನೀರು ಕೂಡ ಇರಲಿಲ್ಲ ಎಂದು ಪಾಟೀಲ್ ಹೇಳಿದ್ದರು.
ಇದನ್ನು ಓದಿ: ಗುಜರಾತ್: ಮುಸ್ಲಿಂ ಯುವಕರಿಗೆ ಛಡಿಯೇಟು ಪ್ರಕರಣ; ಪೊಲೀಸರ ವಿರುದ್ಧ ದೋಷಾರೋಪ