ಬಿಹಾರದ ಮುಜಾಫರ್ಪುರದಲ್ಲಿ ಪೊಲೀಸ್ ದಾಳಿಯ ವೇಳೆ ಬಾಲಕ ಮೃತಪಟ್ಟಿದ್ದು, ಆಕ್ರೋಶಿತ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರಾಂಪುರ ಜೈನ್ಪಾಲ್ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಪೊಲೀಸರು ದಾಳಿ ನಡೆಸಿದ್ದು, ದಾಳಿಗೆ ಬಂದ ಪೊಲೀಸರನ್ನು ಕಂಡು ಬಾಲಕ ಓಡಲಾರಂಭಿಸಿದ್ದಾನೆ. ಪೊಲೀಸರಿಂದ ಓಡಿ ಹೋಗುವಾಗ ಹೊಂಡಕ್ಕೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ಇದರಿಂದ ಕೋಪಗೊಂಡ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದೆ.
ಅ. 4ರಂದು ರಾತ್ರಿ ಈ ಘಟನೆ ಸಂಭವಿಸಿದ್ದು, ಬಾಲಕ ಮೃತಪಟ್ಟಿದ್ದಾನೆ. ಇದರಿಂದ ಕೋಪಗೊಂಡ ಗ್ರಾಮಸ್ಥರ ಗುಂಪು ಬಾಲಕನ ಶವವನ್ನು ಠಾಣೆಗೆ ಕೊಂಡೊಯ್ದು ಪೊಲೀಸ್ ಠಾಣೆಯೊಳಗೆ ಶವ ಇಟ್ಟು ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ಠಾಣೆಯ ಹೊರಗೆ ನಿಲ್ಲಿಸಿದ್ದ ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ.
ಗರ್ಹಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪುರ ಜೈನ್ಪಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಿಹಾರದಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ. ಮೃತ ಬಾಲಕನಿಗೆ ಪಿಂಟು ಯಾದವ್ ಎಂದು ಗುರುತಿಸಲಾಗಿದೆ. ಪೊಲೀಸರು ಬೆನ್ನಟ್ಟಿದಾಗ ಓಡಿ ನೀರು ತುಂಬಿದ ಹೊಂಡಕ್ಕೆ ಬಿದ್ದು ಪಿಂಟು ಯಾದವ್ ಸಾವನ್ನಪ್ಪಿದ್ದಾನೆ. ಆದರೆ ಅಪ್ರಾಪ್ತ ಬಾಲಕನನ್ನು ಉದ್ದೇಶಪೂರ್ವಕವಾಗಿ ಪೊಲೀಸರು ಹತ್ಯೆಗೈದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನು ಓದಿ: ಗುಜರಾತ್: ಮುಸ್ಲಿಂ ಯುವಕರಿಗೆ ಛಡಿಯೇಟು ಪ್ರಕರಣ; ಪೊಲೀಸರ ವಿರುದ್ಧ ದೋಷಾರೋಪ