ಆಗಸ್ಟ್ 30 ರಂದು ಮಧ್ಯಪ್ರದೇಶದ ಭೋಪಾಲ್ನ ಇಂದೋರ್ನಲ್ಲಿ ಮೊಹರಂ ಮೆರವಣಿಗೆ ನಡೆಸಿದ್ದಕ್ಕಾಗಿ ಐದು ಜನರ ಮೇಲೆ ಇಂದೋರ್ ಜಿಲ್ಲಾಧಿಕಾರಿ ವಿಧಿಸಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಪ್ರಕರಣಗಳನ್ನು ಮಧ್ಯಪ್ರದೇಶ ಹೈಕೋರ್ಟ್ ಕೈಬಿಟ್ಟಿದೆ.
ಪ್ರಕರಣ ಸಂಬಂಧದ ಅರ್ಜಿಗಳನ್ನು ಪರಿಶೀಲಿಸಿದ ಮಧ್ಯಪ್ರದೇಶದ ಹೈಕೋರ್ಟ್ನ ಇಂದೋರ್ ನ್ಯಾಯಪೀಠವು, ಇಂದೋರ್ ಜಿಲ್ಲಾಧಿಕಾರಿ ಐವರ ಮೇಲೆ ವಿಧಿಸಿರುವ NSA ಕಾಯ್ದೆ “ಮಾಧ್ಯಮ ವಿಚಾರಣೆ”ಯನ್ನು ಆಧರಿಸಿದೆ ಎಂದಿದೆ.
ಇದನ್ನೂ ಓದಿ: ಬಂಧನ ಕೇಂದ್ರವಾಗಿ SC/ST ಹಾಸ್ಟೆಲ್: ಯೋಜನೆ ಕೈಬಿಟ್ಟ ಯುಪಿ ಸರ್ಕಾರ
12 ಪುಟಗಳ ತೀರ್ಪು ನೀಡಿರುವ ನ್ಯಾಯಮೂರ್ತಿಗಳಾದ ಎಸ್.ಸಿ.ಶರ್ಮಾ ಮತ್ತು ಶೈಲೇಂದ್ರ ಶುಕ್ಲಾ ಅವರ ವಿಭಾಗೀಯ ಪೀಠವು, ಮಾಜಿ ಕಾರ್ಪೋರೇಟರ್ ಉಸ್ಮಾನ್ ಪಟೇಲ್ (60) ಇಸ್ಮಾಯಿಲ್ ಪಟೇಲ್ (45), ಅನ್ಸರ್ ಪಟೇಲ್ (38) , ಮೊಹಮ್ಮದ್ ಅಲಿ ಪಟೇಲ್ (65) ಶಹಜಾದ್ ಪಟೇಲ್ (28) ಅವರ ಮೇಲಿದ್ದ NSA ಆರೋಪವನ್ನೂ ನ್ಯಾಯಾಲಯ ಕೈಬಿಟ್ಟು, ಜಾಮೀನು ನೀಡಿದೆ.
ಉಸ್ಮಾನ್ ಪಟೇಲ್ ಇಂದೋರ್ನ ವಾರ್ಡ್ ನಂಬರ 38 ರ ಮಾಜಿ ಕಾರ್ಪೊರೇಟರ್ ಆಗಿದ್ದವರು. ಈ ವರ್ಷದ ಫೆಬ್ರವರಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ನೀಡಿದ್ದರು ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ನಿಲುವು ತೆಗೆದುಕೊಂಡು ಕಾಂಗ್ರೆಸ್ ಸೇರಿದ್ದರು.
ಇಂದೋರ್ ನಗರದ ಖಜ್ರಾನಾ ಪ್ರದೇಶದಲ್ಲಿ ನಿಷೇಧದ ಹೊರತಾಗಿಯೂ ಮೊಹರಂ ಮೆರವಣಿಗೆ ಆಯೋಜಿಸಿದ್ದಕ್ಕಾಗಿ ಮುಸ್ಲಿಂ ಸಮುದಾಯದ 28 ಜನರ ವಿರುದ್ಧ ಇಂದೋರ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಮಸೂದೆ ವಿರೋಧಿಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ: ಪ್ರಧಾನಿ ಮೋದಿ
ಎಫ್ಐಆರ್ ದಾಖಲಿಸಿದ ಕೆಲವು ಗಂಟೆಗಳ ಬಳಿಕ ಜಿಲ್ಲಾಧಿಕಾರಿ ಈ ಐದು ಜನರ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ವಿಧಿಸಿದರೆ, 23 ಜನರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188, 269, 270 ಮತ್ತು 151ರ ಅಡಿಯಲ್ಲಿ ಬಂಧಿಸಲಾಗಿತ್ತು.
ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಇಂದೋರ್ ಜಿಲ್ಲಾ ಮ್ಯಾಜಿಸ್ಟ್ರೇಟ್ “ಮಾಧ್ಯಮ ವಿಚಾರಣೆಯ” ಆಧಾರದ ಮೇಲೆ ತನ್ನ ಅಭಿಪ್ರಾಯವನ್ನು ರೂಪಿಸಿಕೊಂಡು, ಐದು ಜನರ ವಿರುದ್ಧ NSA ಚಾರ್ಜ್ ವಿಧಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶವು ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳನ್ನೇ ಉಲ್ಲೇಖಿಸಿದೆ ಎಂದು ಹೇಳಿದೆ.
ಈ ದಿನಗಳಲ್ಲಿ ಮಾಧ್ಯಮ ವಿಚಾರಣೆ ಬಹಳ ಸಾಮಾನ್ಯವಾಗಿದೆ ಮತ್ತು ಈಗ ತೀರ್ಪು ನೀಡುವ ಅಧಿಕಾರಿಗಳು ಮಾಧ್ಯಮ ಪ್ರಯೋಗಗಳ ಆಧಾರದ ಮೇಲೆ ತಮ್ಮ ತೀರ್ಪುಗಳನ್ನು ನೀಡುತ್ತಿದ್ದಾರೆ ಎಂದು ನ್ಯಾಯಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.