ಮಧ್ಯಪ್ರದೇಶದ ಬಿಜೆಪಿ ಸಚಿವ ನರೇಂದ್ರ ಶಿವಾಜಿ ಪಟೇಲ್ ಪುತ್ರ ಮತ್ತು ಬೆಂಬಲಿಗರು ಬೈಕ್ ಸವಾರ ಸೇರಿ ಮೂವರ ಮೇಲೆ ಹಲ್ಲೆ ನಡೆಸಿದ್ದು, ಇದೀಗ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಭೋಪಾಲ್ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ನಗರದ ರೆಸ್ಟೋರೆಂಟ್ವೊಂದರ ಬಳಿ ಬಿಜೆಪಿ ಸಚಿವರ ಪುತ್ರ ಅಭಿಜ್ಞಾನ್ ಪಟೇಲ್ ಮತ್ತು ಅವರ ಸ್ನೇಹಿತರು ಬೈಕ್ ಸವಾರನೋರ್ವನ ಮೋಟಾರ್ ಸೈಕಲ್ಗೆ ಹಿಂದಿನಿಂದ ಡಿಕ್ಕಿ ಹೊಡೆದು ಬಳಿಕ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರೆಸ್ಟೋರೆಂಟ್ ಮಾಲಕರು ನೀಡಿದ ದೂರಿನ ಪ್ರಕಾರ, ಅಭಿಜ್ಞಾನ್ ಪಟೇಲ್ ಮತ್ತು ಅವರ ಸ್ನೇಹಿತರು ತಮ್ಮ ಕಾರಿನಿಂದ ಇಳಿದು ಮೋಟಾರ್ ಸೈಕಲ್ ಸವಾರನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಮಾಲಕರು ಮತ್ತು ಅವರ ಪತ್ನಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ದಾಳಿಕೋರರು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದೆ. ದಾಳಿಕೋರರು ಇಟ್ಟಿಗೆ ಮತ್ತು ರಾಡ್ಗಳಿಂದ ಹೊಡೆದಿದ್ದರಿಂದ ರೆಸ್ಟೋರೆಂಟ್ ಮಾಲೀಕರ ತಲೆಗೆ ತೀವ್ರ ಗಾಯವಾಗಿದೆ.
ಈ ಕುರಿತು ಮೂರು ಎಫ್ಐಆರ್ಗಳು ದಾಖಲಾಗಿದೆ. ಅಭಿಜ್ಞಾನ್ ಪಟೇಲ್ ನೀಡಿದ ಪ್ರತಿ ದೂರಿನ ಆಧಾರದ ಮೇಲೆ ಕೂಡ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಶಹಾಪುರ ಠಾಣೆಗೆ ದೂರು ನೀಡಲು ತೆರಳಿದ ನಾಲ್ವರು ಸಂತ್ರಸ್ತರನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ಕರೆದುಕೊಂಡು ಹೋಗುತ್ತಿದ್ದಾಗ ಅಭಿಜ್ಞಾನ್ ಮತ್ತು ಆತನ ಬೆಂಬಲಿಗರು ಮತ್ತೆ ದಾಳಿ ಮಾಡಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಮಧ್ಯಪ್ರವೇಶಿಸಿದ್ದಾರೆ ಮತ್ತು ದಾಳಿ ಹಿನ್ನೆಲೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಅಭಿಜ್ಞಾನ್ ಮತ್ತು ಬೆಂಬಲಿಗರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.
ತಡರಾತ್ರಿ ಸಚಿವ ನರೇಂದ್ರ ಶಿವಾಜಿ ಪಟೇಲ್ ತಮ್ಮ ಬೆಂಬಲಿಗರೊಂದಿಗೆ ಶಹಾಪುರ ಪೊಲೀಸ್ ಠಾಣೆಗೆ ಆಗಮಿಸಿ, ಪೊಲೀಸರು ತಮ್ಮ ಪುತ್ರ ಹಾಗೂ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಒಂದು ಗಂಟೆಯ ನಂತರ ಸಚಿವರು ತಮ್ಮ ಪುತ್ರನೊಂದಿಗೆ ಠಾಣೆಯಿಂದ ಹೊರಟಿದ್ದರು. ಸಚಿವರ ಆರೋಪದ ಹಿನ್ನೆಲೆಯಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಕಂಡು ಬಂದಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಯೂರ್ ಖಂಡೇಲ್ವಾಲ್, ಪೊಲೀಸ್ ಸಿಬ್ಬಂದಿ ದುರ್ವರ್ತನೆ ತೋರಿದ್ದಾರೆ ಎನ್ನುವುದನ್ನು ದೃಢಪಡಿಸಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ, ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಭಾನುವಾರ ಮಧ್ಯಾಹ್ನ ಸಂತ್ರಸ್ತರೊಂದಿಗೆ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ದಾಳಿಯ ವೇಳೆ ರೆಸ್ಟೋರೆಂಟ್ ಮಾಲಕನ ತಲೆಗೆ ಗಂಭೀರ ಗಾಯಗಳಾಗಿದ್ದರೆ ಕೊಲೆ ಯತ್ನ ಪ್ರಕರಣವನ್ನು ಏಕೆ ದಾಖಲಿಸಿಲ್ಲ ಎಂದು ಪಟ್ವಾರಿ ಪ್ರಶ್ನಿಸಿದ್ದಾರೆ. ಪೊಲೀಸರನ್ನು ಅಮಾನತುಗೊಳಿಸಿರುವ ಬಗ್ಗೆ ಆಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಪ್ರತಿಪಕ್ಷಗಳ ಒಗ್ಗಟ್ಟನ್ನು ಬಲಪಡಿಸಿದ ‘ಲೋಕತಂತ್ರ ಬಚಾವೋ’ ರ್ಯಾಲಿ: ಯಾವ್ಯಾವ ನಾಯಕರು ಏನೇನು ಹೇಳಿದ್ರು?