ಛತ್ತೀಸಗಢ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಹಾದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಭಾರೀ ಸದ್ದು ಮಾಡಿತ್ತು. ಇದೀಗ ಈ ಸಂಸ್ಥೆಯ ಇಬ್ಬರು ಮಾಲೀಕರಲ್ಲಿ ಒಬ್ಬರಾದ ರವಿ ಉಪ್ಪಲ್ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಆದೇಶದ ಮೇರೆಗೆ ದುಬೈನಲ್ಲಿ ಬಂಧಿಸಲಾಗಿದೆ. ಇಂಟರ್ಪೋಲ್ ನೀಡಿದ ‘ರೆಡ್ ಕಾರ್ನರ್ ನೋಟಿಸ್’ ಆಧಾರದ ಮೇಲೆ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
43 ವರ್ಷದ ರವಿ ಉಪ್ಪಲ್ ಅವರನ್ನು ಕಳೆದ ವಾರವೇ ಬಂಧಿಸಲಾಗಿದ್ದು, ಅವರನ್ನು ಭಾರತಕ್ಕೆ ಗಡೀಪಾರು ಮಾಡಲು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದುಬೈ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಛತ್ತೀಸ್ಗಢ ಪೊಲೀಸರು ಮತ್ತು ಮುಂಬೈ ಪೊಲೀಸರನ್ನು ಹೊರತುಪಡಿಸಿ, ಅಕ್ರಮ ಬೆಟ್ಟಿಂಗ್ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಉಪ್ಪಲ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಯು ಉಪ್ಪಲ್ ಮತ್ತು ಮತ್ತೊಬ್ಬ ಆನ್ಲೈನ್ ಬೆಟ್ಟಿಂಗ್ ಸಂಸ್ಥೆಯ ಪ್ರವರ್ತಕ ಸೌರಭ್ ಚಂದ್ರಕರ್ ವಿರುದ್ಧ ಛತ್ತೀಸ್ಗಢದ ರಾಯ್ಪುರದ ವಿಶೇಷ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್ಎ) ನ್ಯಾಯಾಲಯದ ಮುಂದೆ ಅಕ್ಟೋಬರ್ನಲ್ಲಿ ಮನಿ ಲಾಂಡರಿಂಗ್ ಚಾರ್ಜ್ ಶೀಟ್ ಸಲ್ಲಿಸಿತ್ತು.
ಇಡಿ ಮನವಿಯ ಆಧಾರದ ಮೇಲೆ ಇಂಟರ್ಪೋಲ್ ಇಲಾಖೆಯು ‘ರೆಡ್ ಕಾರ್ನರ್ ನೋಟಿಸ್’ ಜಾರಿ ಮಾಡಿತ್ತು.
ಉಪ್ಪಲ್ ಅವರು ಭಾರತೀಯ ಪೌರತ್ವವನ್ನು ತ್ಯಜಿಸಿ, ಪೆಸಿಫಿಕ್ ಮಹಾಸಾಗರದ ದ್ವೀಪ ರಾಷ್ಟ್ರವಾದ ವನವಾಟು ಪಾಸ್ಪೋರ್ಟ್ ಪಡೆದುಕೊಂಡಿದ್ದಾರೆ ಎಂದು ಇಡಿ ತನ್ನ ಚಾರ್ಜ್ ಶೀಟ್ನಲ್ಲಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಇಡಿ ಪ್ರಕಾರ ಈ ಪ್ರಕರಣದಲ್ಲಿ ಆರೋಪಿಗಳು ಸುಮಾರು ₹6 ಸಾವಿರ ಕೋಟಿ ಆದಾಯ ಮಾಡಿದ್ದಾರೆ ಎನ್ನಲಾಗಿದ್ದು, ಆದಾಯ ಮರೆಮಾಚುವುದಕ್ಕಾಗಿ ಅವರು ಮನಿ ಲಾಂಡರಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಛತ್ತೀಸ್ಗಢದ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಹಣ ತಲುಪಿಸುವುದನ್ನು ಚಂದ್ರಭೂಷಣ ವರ್ಮಾ, ಪೋಲೀಸ್ ಮತ್ತು ಇತರರಿಗೆ ಹಣ ತಲುಪಿಸುವುದನ್ನು ಉಪ್ಪಲ್ ನೋಡಿಕೊಳ್ಳುತ್ತಿದ್ದರು’ ಎಂದು ಆರೋಪಿಸಿತ್ತು.
ಛತ್ತೀಸ್ಗಢ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಮುನ್ನ ನವೆಂಬರ್ನಲ್ಲಿ ಆಸಿಮ್ ದಾಸ್ ಎಂಬ ವ್ಯಕ್ತಿ ಮೂಲಕ ಮಹಾದೇವ್ ಬೆಟ್ಟಿಂಗ್ ಆಪ್ ಪ್ರವರ್ತಕರು ಸುಮಾರು ₹508 ಕೋಟಿ ರೂ.ಗಳನ್ನು ಅಂದಿನ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಪಾವತಿಸಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದ್ದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ; ಗುರ್ಜರ್ ಜಮೀನಿಗೆ ನುಗ್ಗಿದ ಮೇಕೆಗಳು: ದಲಿತ ಮಹಿಳೆಯರಿಗೆ ಅಮಾನವೀಯವಾಗಿ ಥಳಿಸಿದ ಭೂ ಮಾಲೀಕ!