ಸಂಸತ್ತಿನ ಮೇಲೆ ಭಯೋತ್ಪಾದಕರ ದಾಳಿ ನಡೆದ 22ನೇ ವರ್ಷದ ದಿನವಾದ ಇಂದು (ಡಿ.13) ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದೆ.
ಲೋಕಸಭೆಯ ಚಳಿಗಾಲದ ಅಧಿವೇಶನದ ವೇಳೆ ಇಬ್ಬರು ಅಪರಿಚಿತರು ವೀಕ್ಷಕರ ಗ್ಯಾಲರಿಯಿಂದ ಹಠಾತ್ ಆಗಿ ಸಂಸದರು ಕುಳಿತುಕೊಳ್ಳುವ ಆಸನದ ಕಡೆಗೆ ನುಗ್ಗಿ, ಸುತ್ತಲೂ ಓಡಾಡಿದ್ದಾರೆ. ಇದರಿಂದ ಆತಂಕಗೊಂಡ ಸಂಸದರು ಲೋಕಸಭೆಯಿಂದ ಹೊರ ಓಡಿ ಬಂದಿದ್ದು, ಕಲಾಪವನ್ನು ಸ್ಥಗಿತಗೊಳಿಸಲಾಗಿದೆ.
#WATCH | An unidentified man jumps from the visitor's gallery of Lok Sabha after which there was a slight commotion and the House was adjourned. pic.twitter.com/Fas1LQyaO4
— ANI (@ANI) December 13, 2023
ವರದಿಗಳ ಪ್ರಕಾರ, ನೀಲಿ ಬಣ್ಣದ ಜಾಕೆಟ್ ತೊಟ್ಟ ಇಬ್ಬರು ವ್ಯಕ್ತಿಗಳು ಸಂಸದರ ಆಸನದ ಕಡೆಗೆ ನುಗ್ಗಿದ್ದಾರೆ. ಭದ್ರತಾ ಸಿಬ್ಬಂದಿ ಇಬ್ಬರನ್ನೂ ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಅಪರಿಚಿತರು ಸಂಸದರ ಮೇಲೆ ಒಂದು ರೀತಿಯ ಗ್ಯಾಸ್ ಸಿಂಪಡಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಖಗೇನ್ ಮುರ್ಮು ಲೋಕಸಭೆಯಲ್ಲಿ ಮಾತನಾಡುತ್ತಿದ್ದಾಗ ಅಪರಿಚಿತರು ಒಳನುಗ್ಗಿದ್ದಾರೆ. ಗೊಂದಲದ ಹಿನ್ನೆಲೆ ಮಧ್ಯಾಹ್ನ 2 ಗಂಟೆಯವರೆಗೆ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ.
“ಸುಮಾರು 20 ವರ್ಷ ವಯಸ್ಸಿನ ಇಬ್ಬರು ವ್ಯಕ್ತಿಗಳು ಕೈಯಲ್ಲಿ ಡಬ್ಬಗಳನ್ನು ಹಿಡಿದಿದ್ದರು. ಆ ಡಬ್ಬಗಳಿಂದ ಹಳದಿ ಬಣ್ಣ ಹೊಗೆ ಬರುತಿತ್ತು. ಅವರಲ್ಲಿ ಒಬ್ಬರು ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸುತ್ತಿದ್ದರು. ಕೆಲ ಘೋಷಣೆಗಳನ್ನು ಕೂಗುತ್ತಿದ್ದರು. ಹೊಗೆ ವಿಷಕಾರಿಯಾಗಿರಬಹುದು. ಇದು ವಿಶೇಷವಾಗಿ ಡಿಸೆಂಬರ್ 13 ರಂದು, 2001 ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆದ ದಿನದಂದು ಸಂಭವಿಸಿರುವುದು ಗಂಭೀರವಾದ ಭದ್ರತಾ ಉಲ್ಲಂಘನೆ” ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ.
ಇದನ್ನೂ ಓದಿ : ಅಕ್ರಮ ವಲಸಿಗರ ನಿಖರ ಮಾಹಿತಿ ಸಂಗ್ರಹ ಅಸಾಧ್ಯ: ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಹೇಳಿಕೆ