ಕಾಂಗ್ರೆಸ್ ಶಾಸಕಿ, ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್ ಅವರಿಗೆ ಎಂಟು ವರ್ಷಗಳ ಹಿಂದೆ ಪೊಲೀಸ್ ಕಾನ್ಸ್ಟೆಬಲ್ ಒಬ್ಬರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯ ಮೂರು ತಿಂಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷೆಯೂ ಆಗಿರುವ ಶಾಸಕಿ ಯಶೋಮತಿ ಅವರಿಗೆ ಶಿಕ್ಷೆ ಆಗಿರುವುದು ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್–ಎನ್ಸಿಪಿ-ಶಿವಸೇನಾ ಮೈತ್ರಿ ಸರ್ಕಾರವನ್ನು ತೀವ್ರ ಮುಜುಗರಕ್ಕೀಡುಮಾಡಿದೆ.
ಇದನ್ನೂ ಓದಿ: ಬಿಜೆಪಿ ಸೇರಿರುವ ಈ ಶೂಟರ್ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಪುತ್ರಿ ಅಲ್ಲ; ಯಾರಿವರು?
ಘಟನೆಯು ಅಮರಾವತಿ ಜಿಲ್ಲೆಯ ರಾಜಾಪೇಠ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬಾದೇವಿ ದೇವಸ್ಥಾನದ ಸಮೀಪ 2012 ರ ಮಾರ್ಚ್ 24 ರ ಸಂಜೆ ನಡೆದಿದ್ದು, ಈ ವೇಳೆ ಯಶೋಮತಿ ಹಾಗೂ ಅವರ ಬೆಂಬಲಿಗರು ಕರ್ತವ್ಯದಲ್ಲಿದ್ದ ಉಲ್ಲಾಸ್ ರೊರಳೆ ಎಂಬ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಮಾಡಲಾಗಿತ್ತು. ಏಕಮುಖ ರಸ್ತೆಯಲ್ಲಿ ವಿರುದ್ಧವಾಗಿ ಸಂಚರಿಸದಂತೆ ಯಶೋಮತಿ ಅವರಿದ್ದ ಕಾರನ್ನು ಕಾನ್ಸ್ಟೆಬಲ್ ತಡೆದಿದ್ದು ಈ ಹಲ್ಲೆಗೆ ಕಾರಣ ಎನ್ನಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಅಮರಾವತಿ ಜಿಲ್ಲಾ ನ್ಯಾಯಾಧೀಶರಾದ ಉರ್ಮಿಳಾ ಜೋಶಿ, ಯಶೋಮತಿ ಸೇರಿದಂತೆ ಅವರ ಚಾಲಕ ಸಾಗರ್ ಸುರೇಶ್ ಖಂಡೇಕರ್, ಬೆಂಬಲಿಗರಾದ ಶರದ್ ಕಾಶಿರಾವ್ ಜವಾನ್ಲಾಲ್ ಮತ್ತು ರಾಜು ಕಿಸಾನ್ ಇನ್ಗಲ್ಗೆ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ ತಲಾ ₹15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಈ ಬಗ್ಗೆ ಅಮರಾವತಿ ಜಿಲ್ಲೆಯ ಉಸ್ತುವಾರಿ ಸಚಿವೆಯೂ ಆಗಿರುವ ಯಶೋಮತಿ, “ನಾನು ವಕೀಲೆಯಾಗಿದ್ದು, ನ್ಯಾಯಾಂಗವನ್ನು ಯಾವಾಗಲೂ ಗೌರವಿಸುತ್ತೇನೆ. ತೀರ್ಪಿನ ವಿರುದ್ಧ ಬಾಂಬೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇನೆ, ಸತ್ಯ ಯಾವತ್ತೂ ಗೆಲ್ಲಲಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: UDF ತೊರೆದು ಕಮ್ಯುನಿಷ್ಟ್ ಒಕ್ಕೂಟ ಸೇರಿದ ಕೇರಳ ಕಾಂಗ್ರೆಸ್ (ಎಂ)!