ಜ್ಯೂನಿಯರ್ ಇಂದಿರಾ, ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಪ್ರಚಾರ ನಡೆಸಲಿಲ್ಲ. ಲೋಕಸಭೆ ಚುನಾವಣೆ ವೇಳೆ ದೇಶದ ವಿವಿಧ ಭಾಗಗಳಲ್ಲಿ ಪ್ರಚಾರ ಮತ್ತು ಪಕ್ಷ ಸಂಘಟನೆ ಮಾಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ, ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಯಾಕೆ ಮಹತ್ವ ನೀಡಲಿಲ್ಲ ಎಂಬ ಪ್ರಶ್ನೆ ಬಲವಾಗಿ ಕೇಳಿ ಬಂದಿತ್ತು. ಇದಕ್ಕೀಗ ಕಾಂಗ್ರೆಸ್ ಮುಖಂಡರು ಉತ್ತರ ನೀಡಿದ್ದಾರೆ.
‘ಉತ್ತರ ಪ್ರದೇಶದಲ್ಲಿ ಕಳೆದು ಹೋಗಿರುವ ಪಕ್ಷದ ಜನಪ್ರಿಯತೆಯನ್ನು ಹೆಚ್ಚಿಸಲು, ಮತ್ತೆ ರಾಜ್ಯವನ್ನು ತಮ್ಮ ಪಕ್ಷದ ಸುಪರ್ದಿಗೆ ತೆಗೆದುಕೊಳ್ಳಲು, ಬೂತ್ ಮಟ್ಟದಿಂದ ಸಂಘಟನೆ ಮಾಡುತ್ತಿದ್ದಾರೆ. ಪಕ್ಷವನ್ನು ಪುನರುಜ್ಜೀವನಗೊಳಿಸಲು ಉತ್ಸುಕತೆಯಿಂದ ಕೆಲಸದಲ್ಲಿ ನಿರತರಾಗಿದ್ದಾರೆ’. ಹೀಗಾಗಿ ಅವರಿಗೆ ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸೈಡ್ಲೈನ್ ಆಗುತ್ತಿದೆ. ಕೆಲ ವರ್ಷಗಳಲ್ಲಿ ಬಿಜೆಪಿ, ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಮುನ್ನೆಲೆಗೆ ಬಂದಿವೆ. ಹೀಗಾಗಿ ಕಾಂಗ್ರೆಸ್ ಸ್ವಕ್ಷೇತ್ರದಲ್ಲಿ ಕ್ಷೀಣಿಸುತ್ತಿದೆ. ಹೀಗಾಗಿ ಪಕ್ಷದ ಸಂಘಟನೆ ಬಹುಮುಖ್ಯವಾಗಿದೆ. ಆದ್ದರಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶದಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ ಮತ್ತು ಅಲ್ಲಿನ ಬೆಳವಣಿಗೆಗಳನ್ನು ನೋಡಿಕೊಳ್ಳುವುದರಲ್ಲಿ ಪ್ರಿಯಾಂಕಾ ಬ್ಯುಸಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
1989 ರ ನಂತರ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜನಪ್ರಿಯತೆ ರಾಜಕೀಯವಾಗಿ ಕುಗ್ಗುತ್ತಾ ಹೋಯಿತು. ಇಲ್ಲಿ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷಗಳ ಪ್ರಾಬಲ್ಯ ಹೆಚ್ಚಿತು. 2019ರ ಲೋಕಸಭೆ ಚುನಾವಣೆ ವೇಳೆ ಉತ್ತರ ಪ್ರದೇಶದ ಅಮೇಠಿಯಲ್ಲಿ ರಾಹುಲ್ ಗಾಂಧಿ 50 ಸಾವಿರ ವೋಟ್ ಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ವಿರುದ್ಧ ಸೋತರು. ರಾಯ್ಬರೇಲಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯ ಗಾಂಧಿ ಗೆಲುವು ಸಾಧಿಸಿ, ಪಕ್ಷದ ಮರ್ಯಾದೆ ಉಳಿಸಿದ್ದರು.
ಕಳೆದ ಲೋಕಸಭಾ ಚುನಾವಣೆ ವೇಳೆ ಉತ್ತರ ಪ್ರದೇಶ, ಗುಜರಾತ್, ಅಸ್ಸಾಂ, ಪಂಜಾಬ್, ಹರ್ಯಾಣ, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಜ್ಯೂನಿಯರ್ ಇಂದಿರಾ ಬೃಹತ್ ಕ್ಯಾಂಪೇನ್ ನಡೆಸಿದ್ದರು. ಜನವರಿ 23ರಲ್ಲಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿದ ಪ್ರಿಯಾಂಕಾ, ಪಕ್ಷವನ್ನು ಕಟ್ಟುವಲ್ಲಿ ನಿರತರಾಗಿದ್ದಾರೆ. ನಿಶ್ಚಿತ ಗುರಿಯತ್ತ ದೃಷ್ಟಿ ನೆಟ್ಟಿರುವ ಪ್ರಿಯಾಂಕಾ ಪ್ರಮುಖ ಕಾರ್ಯಚಟುವಟಿಕೆಗಳನ್ನು ನಡೆಸಿ, ಪಕ್ಷವನ್ನು ಸದೃಢವಾಗಿಸುತ್ತಾರೆ. ನಶಿಸುತ್ತಿರುವ ಕಾಂಗ್ರೆಸ್ಗೆ ಪ್ರಿಯಾಂಕಾ ಬೂಸ್ಟ್ ನಂತೆ ಕೆಲಸ ಮಾಡುತ್ತಾರೆ ಎಂಬ ಮಾತುಗಳು, ಚರ್ಚೆಗಳು ನಡೆದಿದ್ದವು.
ಅದಾಗ್ಯೂ ಹರ್ಯಾಣದಲ್ಲಿ ಮಾತ್ರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಚಾರಕ್ಕೆ ಅಣಿಯಾಗಿದ್ದರು. ಆದರೆ ಪ್ರಿಯಾಂಕ ಮಾತ್ರ ಮಹಾರಾಷ್ಟ್ರದಲ್ಲಿ ಪ್ರಚಾರಕ್ಕೆ ಕನಿಷ್ಠ ತಯಾರಿಯನ್ನೂ ಮಾಡಲಿಲ್ಲ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈಗ ಅದಕ್ಕೆ ಉತ್ತರ ಸಿಕ್ಕಿದೆ.