ಮಹಾರಾಷ್ಟ್ರದ ನಾಸಿಕ್ನ ಜಾಕೀರ್ ಹುಸೇನ್ ಆಸ್ಪತ್ರೆ ಹೊರಗೆ ಆಮ್ಲಜನಕ ಟ್ಯಾಂಕರ್ ಸೋರಿಕೆಯಾಗಿ, ಕೊರೊನಾ ಸೋಂಕಿತರಿಗೆ ಆಮ್ಲಜನಕ ವ್ಯತ್ಯಯವಾಗಿ 22 ಸಾವುಗಳು ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಅವರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ನಾಸಿಕ್ ನಗರದ ಜಾಕಿರ್ ಹುಸೇನ್ ಆಸ್ಪತ್ರೆ ಕೊರೊನಾ ಸೋಂಕಿತ ರೋಗಿಗಳಿಗೆ ಮೀಸಲಾಗಿದೆ. ಸುಮಾರು 150 ರೋಗಿಗಳಿಗೆ ಆಮ್ಲಜನಕದ ಅಗತ್ಯವಿತ್ತು, ಅವರೆಲ್ಲರೂ ವೆಂಟಿಲೇಟರ್ಗಳಲ್ಲಿದ್ದರು. ಅದರಲ್ಲಿ 22 ಕೊರೊನಾ ಸೋಂಕಿತರು ಆಮ್ಲಜನಕ ಸ್ಥಗಿತದಿಂದ ಸಾವನ್ನಪ್ಪಿದ್ದರು.
’ನಾಸಿಕ್ ಆಸ್ಪತ್ರೆಯಲ್ಲಿ 22 ಕೊರೊನಾ ಸೋಂಕಿತ ರೋಗಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಗುರುವಾರ ಎಫ್ಐಆರ್ ದಾಖಲಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ನಾಸಿಕ್ನ ಆಸ್ಪತ್ರೆ ಹೊರಗೆ ಆಮ್ಲಜನಕ ಟ್ಯಾಂಕರ್ ಸೋರಿಕೆ, 22 ಮಂದಿ ಸಾವು
ಭಾರತೀಯ ದಂಡ ಸಂಹಿತೆ ಸೆಕ್ಷನ್ 304-ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಮಹಾರಾಷ್ಟ್ರದ ನಾಸಿಕ್ ನಗರದ ಭದ್ರಾಕಳಿ ಪೊಲೀಸ್ ಠಾಣೆಯಲ್ಲಿ ಗುರುವಾರ ಮುಂಜಾನೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆ ನಡೆದಾಗ ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ 150 ಹಾಸಿಗೆಗಳ ಆಸ್ಪತ್ರೆಯಲ್ಲಿ ಒಟ್ಟು 157 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು ಆಮ್ಲಜನಕ ಅಗತ್ಯವಿದ್ದ 80 ರಲ್ಲಿ 31 ರೋಗಿಗಳನ್ನು ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು. ಮೃತರಲ್ಲಿ 10 ಮಂದಿ ಮಹಿಳೆಯರು ಸೇರಿದಂತೆ 33 ರಿಂದ 74 ವರ್ಷದೊಳಗಿನವರು ಇದ್ದರು ಎಂದು ನಾಸಿಕ್ ಮುನ್ಸಿಪಲ್ ಕಾರ್ಪೊರೇಶನ್ ಹೇಳಿದೆ.
ಟ್ಯಾಂಕರ್ನಿಂದ ಟ್ಯಾಂಕ್ಗಳಲ್ಲಿ ಆಮ್ಲಜನಕವನ್ನು ತುಂಬುತ್ತಿರುವಾಗ ಈ ಘಟನೆ ಸಂಭವಿಸಿತ್ತು. ಇದರಿಂದ ವೆಂಟಿಲೇಟರ್ಗಳಲ್ಲಿದ್ದ ರೋಗಿಗಳಿಗೆ, ಮತ್ತು ಉಸಿರಾಟಕ್ಕಾಗಿ ಆಮ್ಲಜನಕವನ್ನು ಅವಲಂಬಿಸಿರುವವರಿಗೆ 30 ನಿಮಿಷ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು.
ಘಟನೆಯ ಬಗ್ಗೆ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರ ಬುಧವಾರ ಏಳು ಸದಸ್ಯರ ಸಮಿತಿಯೊಂದನ್ನು ಪ್ರಕಟಿಸಿದೆ. ಪ್ರತಿ ಸಂತ್ರಸ್ತರ ಕುಟುಂಬಗಳಿಗೆ 5 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆ: ಸರ್ಕಾರ ಮಾಡುತ್ತಿರುವುದೇನು? ಮಾಡಬೇಕಾದುದ್ದೇನು?